58. Al Mujadilah

58. ಅಲ್ ಮುಜಾದಿಲಃ (ವಾದಿಸಿದಾಕೆ)

ವಚನಗಳು – 22, ಮದೀನಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. (ದೂತರೇ,) ತನ್ನ ಪತಿಯ ವಿಷಯದಲ್ಲಿ ನಿಮ್ಮೊಡನೆ ವಾದಿಸಿದ ಮತ್ತು ಅಲ್ಲಾಹನ ಬಳಿ ದೂರು ಸಲ್ಲಿಸಿದ ಮಹಿಳೆಯ ಮಾತನ್ನು ಅಲ್ಲಾಹನು ಕೇಳಿರುವನು. ಅಲ್ಲಾಹನು ನಿಮ್ಮಿಬ್ಬರ ಸಂಭಾಷಣೆಯನ್ನು ಕೇಳುತ್ತಿದ್ದನು.ಅಲ್ಲಾಹನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ.

2. ನಿಮ್ಮ ಪೈಕಿ ‘ಝಿಹಾರ್’ ಮಾಡಿದವರ (ತಮ್ಮ ಪತ್ನಿಯನ್ನು ತಾಯಿ ಎಂದು ಕರೆದವರ) ಪತ್ನಿಯರು ಅವರ ತಾಯಂದಿರಲ್ಲ. ಅವರನ್ನು ಹೆತ್ತವರು ಮಾತ್ರ ಅವರ ತಾಯಂದಿರು. ಅವರು ತೀರಾ ಕೆಟ್ಟ ಮಾತನ್ನು ಹಾಗೂ ಸುಳ್ಳನ್ನು ಹೇಳುತ್ತಿದ್ದಾರೆ. ಆದರೆ ಅಲ್ಲಾಹನು ಖಂಡಿತ ಮನ್ನಿಸುವವನೂ ಕ್ಷಮಿಸುವವನೂ ಆಗಿದ್ದಾನೆ.

3. ಇನ್ನು ತಮ್ಮ ಪತ್ನಿಯರನ್ನು ತಾಯಿ ಎಂದು ಘೋಷಿಸಿದವರು, ಆ ಬಳಿಕ ತಮ್ಮ ಮಾತನ್ನು ಹಿಂದೆಗೆದುಕೊಂಡರೆ ಅವರು ಪರಸ್ಪರ ಮುಟ್ಟುವ ಮುನ್ನ ಒಬ್ಬ ದಾಸನನ್ನು ಸ್ವತಂತ್ರಗೊಳಿಸಬೇಕು. ಇದು ನಿಮಗೆ ನೀಡಲಾಗುತ್ತಿರುವ ಉಪದೇಶ. ನೀವು ಮಾಡುವ ಎಲ್ಲ ಕೃತ್ಯಗಳ ಕುರಿತು ಅಲ್ಲಾಹನು ಅರಿವು ಉಳ್ಳವನಾಗಿದ್ದಾನೆ.

4. ದಾಸರಿಲ್ಲದವರು ಪರಸ್ಪರ ಮುಟ್ಟುವ ಮುನ್ನ ಸತತ ಎರಡು ತಿಂಗಳು ಉಪವಾಸ ಆಚರಿಸಬೇಕು. ಇದನ್ನೂ ಮಾಡಲಾಗದವರು – ಅರುವತ್ತು ಮಂದಿ ಬಡ ಜನರಿಗೆ ಉಣಿಸಬೇಕು. ನೀವು ಅಲ್ಲಾಹ್ ಮತ್ತು ಅವನ ರಸೂಲರಲ್ಲಿ ನಂಬಿಕೆ ಉಳ್ಳವರಾಗಬೇಕೆಂದು (ಇದನ್ನು ವಿಧಿಸಲಾಗಿದೆ). ಇವು ಅಲ್ಲಾಹನು ನಿಶ್ಚಯಿಸಿರುವ ಮಿತಿಗಳು. ಮತ್ತು ಧಿಕ್ಕಾರಿಗಳಿಗೆ ಕಠಿಣ ಶಿಕ್ಷೆ ಸಿಗಲಿದೆ.

5. ಅಲ್ಲಾಹ್ ಮತ್ತವನ ದೂತರ ಆಜ್ಞೆ ಮೀರುವವರು, ತಮ್ಮ ಹಿಂದಿನವರು ಅಪಮಾನಿತರಾದಂತೆ ಅಪಮಾನಿತರಾಗುವರು. ನಾವು ಬಹಳ ಸ್ಪಷ್ಟವಾದ ವಚನಗಳನ್ನು ಇಳಿಸಿರುವೆವು. ಧಿಕ್ಕಾರಿಗಳಿಗೆ ಅಪಮಾನಕಾರಿ ಶಿಕ್ಷೆ ಕಾದಿದೆ.

6. ಅಲ್ಲಾಹನು ಅವರೆಲ್ಲರನ್ನೂ (ಮತ್ತೆ) ಜೀವಂತ ಗೊಳಿಸುವ ದಿನ ಅವರು ಏನೆಲ್ಲಾ ಮಾಡಿದ್ದರೆಂದು ಅವನು ಅವರಿಗೆ ತಿಳಿಸುವನು. ಅಲ್ಲಾಹನು ಅದೆಲ್ಲವನ್ನೂ ಸುರಕ್ಷಿತವಾಗಿಟ್ಟಿರುವನು ಮತ್ತು ಅವರು ಅದನ್ನು ಮರೆತಿರುವರು. ಅಲ್ಲಾಹನು ಎಲ್ಲ ವಿಷಯಗಳಿಗೆ ಸಾಕ್ಷಿಯಾಗಿದ್ದಾನೆ.

7. ನೀವು ಕಂಡಿಲ್ಲವೇ, ಅಲ್ಲಾಹನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವನ್ನೂ ಬಲ್ಲನು. ಮೂರು ಮಂದಿ ಗುಪ್ತ ಸಮಾಲೋಚನೆ ನಡೆಸುವಾಗ ಅವರ ನಾಲ್ಕನೆಯವನಾಗಿ ಅವನು (ಅಲ್ಲಾಹನು) ಇಲ್ಲದಿರುವುದಿಲ್ಲ. ಹಾಗೆಯೇ ಐದು ಮಂದಿ ಇರುವಾಗ ಆರನೆಯವನಾಗಿ ಅವನಿಲ್ಲದೆ ಇರುವುದಿಲ್ಲ. ಇನ್ನು (ಜನರು) ಅದಕ್ಕಿಂತ ಕಡಿಮೆಯಿರಲಿ ಅಥವಾ ಹೆಚ್ಚಿರಲಿ, ಅವರೆಲ್ಲೇ ಇದ್ದರೂ ಅವನು ಅವರ ಜೊತೆ ಇಲ್ಲದಿರುವುದಿಲ್ಲ. ಕೊನೆಗೆ, ಅವರು ಏನೆಲ್ಲಾ ಮಾಡುತ್ತಿದ್ದರೆಂಬುದನ್ನು ಅವನು ಅವರಿಗೆ ತಿಳಿಸುವನು. ಅಲ್ಲಾಹನು ಖಂಡಿತ ಎಲ್ಲವನ್ನೂ ಬಲ್ಲವನಾಗಿದ್ದಾನೆ.

8. ಗುಪ್ತ ಸಮಾಲೋಚನೆ ನಡೆಸದಂತೆ ತಡೆಯಲ್ಪಟ್ಟವರನ್ನು ನೀವು ನೋಡಲಿಲ್ಲವೇ? ಯಾವುದರಿಂದ ಅವರನ್ನು ತಡೆಯಲಾಗಿತ್ತೋ ಅವರು ಮತ್ತೆ ಅದನ್ನೇ ಮಾಡುತ್ತಾರೆ. ಮತ್ತು ಅವರು ಪಾಪದ, ವಿದ್ರೋಹದ ಮತ್ತು ದೇವದೂತರಿಗೆ ಅವಿಧೇಯತೆ ತೋರುವ ವಿಷಯಗಳನ್ನು ಗುಪ್ತವಾಗಿ ಸಮಾಲೋಚಿಸುತ್ತಾರೆ. ಅವರು ನಿಮ್ಮ ಬಳಿಗೆ ಬಂದಾಗ ಅಲ್ಲಾಹನು ನಿಮಗೆ ಹಾರೈಸಿಲ್ಲದ ರೀತಿಯಲ್ಲಿ ಅವರು ನಿಮ್ಮನ್ನು ಹಾರೈಸುತ್ತಾರೆ. ಮತ್ತು ನಾವು ಆಡಿದ ಈ ಮಾತಿಗಾಗಿ ಅಲ್ಲಾಹನು ನಮ್ಮನ್ನೇಕೆ ಶಿಕ್ಷಿಸುವುದಿಲ್ಲ? ಎಂದು ತಮ್ಮ ಮನಸ್ಸುಗಳಲ್ಲೇ ಹೇಳಿ ಕೊಳ್ಳುತ್ತಾರೆ. ಅವರಿಗೆ ನರಕವೇ ಸಾಕು. ಅದರೊಳಕ್ಕೆ ಅವರನ್ನು ಎಸೆಯಲಾಗುವುದು. ಅದು ಬಹಳ ಕೆಟ್ಟ ನೆಲೆಯಾಗಿದೆ.

9. ವಿಶ್ವಾಸಿಗಳೇ, ನೀವು ಗುಪ್ತವಾಗಿ ಸಮಾಲೋಚಿಸುವಾಗ ಪಾಪದ, ವಿದ್ರೋಹದ ಮತ್ತು ದೇವದೂತರಿಗೆ ಅವಿಧೇಯತೆ ತೋರುವ ವಿಷಯಗಳನ್ನು ಚರ್ಚಿಸಬೇಡಿ. ಸತ್ಕಾರ್ಯ ಮತ್ತು ಧರ್ಮನಿಷ್ಠೆಯ ವಿಷಯಗಳನ್ನು ಚರ್ಚಿಸಿರಿ. ಮತ್ತು ಅಲ್ಲಾಹನಿಗೆ ಅಂಜಿರಿ. ಅವನ ಬಳಿಯೇ ನಿಮ್ಮನ್ನು ಒಟ್ಟು ಸೇರಿಸಲಾಗುವುದು.

10. ಗುಪ್ತ ಸಮಾಲೋಚನೆಯು ವಿಶ್ವಾಸಿಗಳನ್ನು ನೋಯಿಸಲಿಕ್ಕಾಗಿ ಶೈತಾನನಿಂದ ನಡೆಯುವ ಸಂಚಾಗಿದೆ. ಆದರೆ ಅಲ್ಲಾಹನ ಆದೇಶವಿಲ್ಲದೆ ಅವನು (ಶೈತಾನನು) ಅವರಿಗೆ ಯಾವ ಹಾನಿಯನ್ನೂ ಮಾಡಲಾರನು. ವಿಶ್ವಾಸಿಗಳು ಸಂಪೂರ್ಣವಾಗಿ ಅಲ್ಲಾಹನಲ್ಲೇ ಭರವಸೆ ಇಟ್ಟಿರಬೇಕು.

11. ವಿಶ್ವಾಸಿಗಳೇ, ನಿಮ್ಮ ಸಭೆಗಳಲ್ಲಿ ವೈಶಾಲ್ಯವನ್ನು ಪಾಲಿಸಿರೆಂದು ನಿಮ್ಮೊಡನೆ ಹೇಳಲಾದಾಗ ವೈಶಾಲ್ಯವನ್ನು ಪಾಲಿಸಿರಿ. ಅಲ್ಲಾಹನು ನಿಮಗೆ ವೈಶಾಲ್ಯವನ್ನು ದಯ ಪಾಲಿಸುವನು. ನಿಮ್ಮೊಡನೆ ಎದ್ದು ನಿಲ್ಲಲು ಹೇಳಲಾದಾಗ ಎದ್ದು ನಿಲ್ಲಿರಿ. ಅಲ್ಲಾಹನು ನಿಮ್ಮಲ್ಲಿನ ವಿಶ್ವಾಸಿಗಳಿಗೆ ಔನ್ನತ್ಯವನ್ನು ನೀಡುವನು ಮತ್ತು ಜ್ಞಾನಿಗಳಿಗೆ ಉನ್ನತ ಸ್ಥಾನಗಳನ್ನು ನೀಡುವನು. ಅಲ್ಲಾಹನಿಗೆ ನೀವು ಮಾಡುವ ಎಲ್ಲ ಕರ್ಮಗಳ ಅರಿವಿದೆ.

12. ವಿಶ್ವಾಸಿಗಳೇ, ನೀವು ದೇವ ದೂತರೊಡನೆ ಯಾವುದಾದರೂ ಗುಟ್ಟಿನ ಮಾತನ್ನಾಡುವ ಮುನ್ನ (ಬಡವರಿಗೆ) ಏನಾದರೂ ದಾನ ಮಾಡಿರಿ. ಇದು ನಿಮ್ಮ ಪಾಲಿಗೆ ಉತ್ತಮ ಹಾಗೂ ಪರಿಶುದ್ಧ ಕ್ರಮವಾಗಿದೆ. ಒಂದು ವೇಳೆ (ದಾನ ಮಾಡಲು) ನಿಮಗೇನೂ ಸಿಗದಿದ್ದರೆ ಅಲ್ಲಾಹನು ಕ್ಷಮಿಸುವವನೂ ಕರುಣಾಮಯಿಯೂ ಆಗಿರುವನು.

13. ನೀವೇನು, ದೇವದೂತರೊಡನೆ ಗುಟ್ಟಿನ ಮಾತನಾಡುವ ಮುನ್ನ (ಬಡವರಿಗೆ) ದಾನ ನೀಡಬೇಕೆಂಬ ಆದೇಶದಿಂದ ಅಂಜಿ ಬಿಟ್ಟಿರಾ? ನಿಮಗೆ ಅದು ಸಾಧ್ಯವಾಗದಿದ್ದಾಗ ಅಲ್ಲಾಹನು ನಿಮ್ಮನ್ನು ಕ್ಷಮಿಸಿದನು. ನೀವೀಗ ನಮಾಝನ್ನು ಸಲ್ಲಿಸಿರಿ, ಝಕಾತನ್ನು ಪಾವತಿಸಿರಿ ಮತ್ತು ಅಲ್ಲಾಹನ ಹಾಗೂ ಅವನ ದೂತರ ಆದೇಶವನ್ನು ಪಾಲಿಸಿರಿ. ನೀವು ಮಾಡುತ್ತಿರುವ ಎಲ್ಲ ಕರ್ಮಗಳ ಅರಿವು ಅಲ್ಲಾಹನಿಗಿದೆ.

14. ಅಲ್ಲಾಹನ ಕೋಪಕ್ಕೆ ತುತ್ತಾದವರನ್ನು ತಮ್ಮ ಆಪ್ತರಾಗಿಸಿ ಕೊಂಡವರನ್ನು ನೀವು ನೋಡಿಲ್ಲವೆ? ಅವರು ನಿಮ್ಮ ಕಡೆಯವರೂ ಅಲ್ಲ ಅವರ ಕಡೆಯವರೂ ಅಲ್ಲ. ಅವರು ತಿಳಿದೂ ತಿಳಿದೂ ಸುಳ್ಳಿನ ಪರವಾಗಿ ಪ್ರಮಾಣ ಮಾಡುತ್ತಾರೆ.

15. ಅಲ್ಲಾಹನು ಅವರಿಗಾಗಿ ಕಠಿಣ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿರುವನು. ನಿಜಕ್ಕೂ ಅವರು ತುಂಬಾ ಕೆಟ್ಟ ಕೃತ್ಯಗಳನ್ನು ಮಾಡುತ್ತಿರುವರು.

16. ಅವರು ತಮ್ಮ ಪ್ರತಿಜ್ಞೆಗಳನ್ನು ಗುರಾಣಿಗಳಾಗಿ ಬಳಸಿಕೊಂಡರು. ಮತ್ತು (ಜನರನ್ನು) ಅಲ್ಲಾಹನ ಮಾರ್ಗದಿಂದ ತಡೆದರು. ಅವರಿಗೆ ಅಪಮಾನಕಾರಿ ಶಿಕ್ಷೆ ಸಿಗಲಿದೆ.

17. ಅವರ ಸಂಪತ್ತುಗಳಾಗಲಿ, ಸಂತಾನಗಳಾಗಲಿ ಅವರನ್ನು ಅಲ್ಲಾಹನಿಂದ ಕಿಂಚಿತ್ತೂ ರಕ್ಷಿಸಲಾರವು. ಅವರು ನರಕದವರು. ಅವರು ಅದರಲ್ಲೇ ಸದಾಕಾಲ ಇರುವರು.

18. ಅಲ್ಲಾಹನು ಎಲ್ಲರನ್ನೂ ಮತ್ತೆ ಜೀವಂತ ಗೊಳಿಸುವಂದು ಅವರು ನಿಮ್ಮ ಮುಂದೆ ಪ್ರತಿಜ್ಞೆ ಮಾಡುವಂತೆ ಅವನ (ಅಲ್ಲಾಹನ) ಮುಂದೆಯೂ ಪ್ರತಿಜ್ಞೆ ಮಾಡುವರು. ಮತ್ತು ತಾವೇನೊ ವಿಜಯ ಸಾಧಿಸಿದೆವೆಂದು ಅವರು ಭಾವಿಸುವರು. ನಿಮಗೆ ತಿಳಿದಿರಲಿ, ಖಂಡಿತ ಅವರೇ ಸುಳ್ಳುಗಾರರು.

19. ಶೈತಾನನು ಅವರನ್ನು ನಿಯಂತ್ರಿಸಿ ಕೊಂಡಿರುವನು ಮತ್ತು ಅವರು ಅಲ್ಲಾಹನ ನೆನಪನ್ನೇ ಮರೆಯುವಂತೆ ಮಾಡಿರುವನು. ಅವರೇ ಶೈತಾನನ ಬಳಗದವರು. ನಿಮಗೆ ತಿಳಿದಿರಲಿ, ಶೈತಾನನ ಬಳಗದವರೇ ಸೋಲುಣ್ಣುವವರಾಗಿದ್ದಾರೆ.

20. ಅಲ್ಲಾಹ್ ಮತ್ತು ಅವನ ದೂತರನ್ನು ವಿರೋಧಿಸುವವರು – ಅವರೇ ಅತ್ಯಂತ ನೀಚರ ಸಾಲಿಗೆ ಸೇರಿದವರು.

21. ‘‘ನಾನು ಮತ್ತು ನನ್ನ ದೂತರು ಖಂಡಿತ ವಿಜಯಿಗಳಾಗುವೆವು’’ ಎಂದು ಅಲ್ಲಾಹನು ಬರೆದಿಟ್ಟಿರುವನು. ನಿಸ್ಸಂದೇಹವಾಗಿಯೂ ಅಲ್ಲಾಹನು ಅತ್ಯಂತ ಶಕ್ತಿಶಾಲಿಯೂ ಪ್ರಬಲನೂ ಆಗಿರುವನು.

22. ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಇರುವವರು ಅಲ್ಲಾಹ್ ಮತ್ತು ಅವನ ದೂತರ ಶತ್ರುಗಳೊಂದಿಗೆ ಸ್ನೇಹ ಬೆಳೆಸುವುದನ್ನು ನೀವೆಂದೂ ಕಾಣಲಾರಿರಿ – ಅವರು, ತಮ್ಮ ಹೆತ್ತವರು ಅಥವಾ ತಮ್ಮ ಪುತ್ರರು ಅಥವಾ ತಮ್ಮ ಸಹೋದರರು ಅಥವಾ ತಮ್ಮ ಬಂಧುಗಳಾಗಿದ್ದರೂ ಸರಿಯೇ. ಅಲ್ಲಾಹನು ಅವರ ಮನಸ್ಸುಗಳಲ್ಲಿ ವಿಶ್ವಾಸದ ಮುದ್ರೆಯೊತ್ತಿ ಬಿಟ್ಟಿರುವನು ಮತ್ತು ಅವನು ತನ್ನ ಕಡೆಯಿಂದ ವಿಶೇಷ ಚೈತನ್ಯವನ್ನೊದಗಿಸಿ ಅವರಿಗೆ ನೆರವಾಗಿರುವನು. ಮತ್ತು ಅವನು ಅವರನ್ನು, ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗ ತೋಟಗಳೊಳಗೆ ಸೇರಿಸುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. ಅಲ್ಲಾಹನು ಅವರಿಂದ ಸಂತುಷ್ಟನಾಗಿರುವನು ಮತ್ತು ಅವರು ಅವನಿಂದ ಸಂತುಷ್ಟರಾಗಿರುವರು. ಅವರೇ ಅಲ್ಲಾಹನ ಬಳಗದವರು. ನಿಮಗೆ ತಿಳಿದಿರಲಿ, ಅಲ್ಲಾಹನ ಬಳಗದವರೇ ವಿಜಯಿಗಳಾಗುವರು.