09. At Tawbah

9. ತ್ತೌಬಃ (ಪಶ್ಚಾತ್ತಾಪ)

ವಚನಗಳು – 129, ಮದೀನಃ

1. ನೀವು ಕರಾರು ಮಾಡಿಕೊಂಡಿರುವ ಬಹುದೇವಾರಾಧಕರ ವಿಷಯದಲ್ಲಿ, ಅಲ್ಲಾಹ್ ಮತ್ತು ಅವನ ದೂತರ ವತಿಯಿಂದ (ನಿಮಗೆ) ಹೊಣೆ ಮುಕ್ತಿಯನ್ನು ಘೋಷಿಸಲಾಗುತ್ತಿದೆ.

2. (ಬಹು ದೇವಾರಾಧಕರೇ,) ನಾಲ್ಕು ತಿಂಗಳ ಕಾಲ ನೀವು ಭೂಮಿಯಲ್ಲಿ ಧಾರಾಳ ತಿರುಗಾಡಿರಿ. ಆದರೆ ನಿಮಗೆ ತಿಳಿದಿರಲಿ – ಅಲ್ಲಾಹನನ್ನು ಸೋಲಿಸಲು ನಿಮ್ಮಿಂದಾಗದು. ನಿಜವಾಗಿ ಅಲ್ಲಾಹನೇ ಧಿಕ್ಕಾರಿಗಳನ್ನು ಅಪಮಾನಿತರಾಗಿಸಲಿದ್ದಾನೆ.

  3. ಮಹಾನ್ ಹಜ್ಜ್ ಯಾತ್ರೆಯ ದಿನ, ಅಲ್ಲಾಹ್ ಮತ್ತು ಅವನ ದೂತರ ಕಡೆಯಿಂದ, ಸಕಲ ಮಾನವರಿಗಾಗಿರುವ ಘೋಷಣೆ ಇದು; ಬಹುದೇವಾರಾಧಕರ ವಿಷಯದಲ್ಲಿ ಅಲ್ಲಾಹ್ ಮತ್ತು ಅವನ ದೂತರು ಹೊಣೆ ಮುಕ್ತರು. ನೀವೀಗ ಪಶ್ಚಾತ್ತಾಪ ಪಟ್ಟರೆ ಅದು ನಿಮ್ಮ ಪಾಲಿಗೆ ಉತ್ತಮ. ಇನ್ನು ನೀವು ಕಡೆಗಣಿಸುವಿರಾದರೆ, ನಿಮಗೆ ತಿಳಿದಿರಲಿ; ಅಲ್ಲಾಹನನ್ನು ಸೋಲಿಸಲು ನಿಮ್ಮಿಂದಾಗದು. ಧಿಕ್ಕಾರಿಗಳಿಗೆ ಕಠಿಣ ಶಿಕ್ಷೆಯ ಶುಭವಾರ್ತೆ ನೀಡಿರಿ.

 4. ಬಹುದೇವಾರಾಧಕರ ಪೈಕಿ ನೀವು ಕರಾರು ಮಾಡಿಕೊಂಡಿರುವ ಮತ್ತು ಆ ಬಳಿಕ ನಿಮಗೆ ಯಾವುದೇ ಹಕ್ಕುಚ್ಯುತಿ ಮಾಡಿಲ್ಲದ ಹಾಗೂ ನಿಮ್ಮ ವಿರುದ್ಧ ಯಾರಿಗೂ ನೆರವು ನೀಡಿಲ್ಲದ ಜನಾಂಗಗಳ ಕರಾರುಗಳನ್ನು ಅವುಗಳ ಅವಧಿಯ ತನಕ ಪೂರ್ತಿಗೊಳಿಸಿರಿ. ಖಂಡಿತವಾಗಿಯೂ ಅಲ್ಲಾಹನು ಧರ್ಮನಿಷ್ಠರನ್ನು ಪ್ರೀತಿಸುತ್ತಾನೆ.

5. (ನಾಲ್ಕು) ಪವಿತ್ರ ತಿಂಗಳುಗಳು ಮುಗಿದಾಗ, ಆ ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ, ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಪ್ರತಿಯೊಂದು ಆಯಕಟ್ಟಿನ ಸ್ಥಳದಲ್ಲಿ ಅವರಿಗಾಗಿ ಹೊಂಚಿನಲ್ಲಿರಿ. ತರುವಾಯ, ಅವರು ಪಶ್ಚಾತ್ತಾಪ ಪಟ್ಟರೆ, ನಮಾಝ್‌ಅನ್ನು ಪಾಲಿಸುವವರಾದರೆ ಮತ್ತು ಝಕಾತ್‌ಅನ್ನು ಪಾವತಿಸಿದರೆ, ಅವರಿಗೆ ಅವರ ದಾರಿಯನ್ನು ಬಿಟ್ಟು ಕೊಡಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.

  6. ಇನ್ನು ಬಹುದೇವಾರಾಧಕರ ಪೈಕಿ ಯಾರಾದರೂ ನಿಮ್ಮ ಆಶ್ರಯ ಬಯಸಿದರೆ, ಅವನು ಅಲ್ಲಾಹನ ವಾಣಿಯನ್ನು ಕೇಳುವ ತನಕ ಅವನಿಗೆ ಆಶ್ರಯ ನೀಡಿರಿ. ಆ ಬಳಿಕ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿರಿ. ಇದೇಕೆಂದರೆ, ಅವರು ಅರಿವಿಲ್ಲದವರು.

  7. ನೀವು ‘ಮಸ್ಜಿದುಲ್ ಹರಾಮ್’ನಲ್ಲಿ ಕರಾರು ಮಾಡಿಕೊಂಡಿರುವವರ ಹೊರತು (ಇತರ) ಬಹುದೇವಾರಾಧಕರಿಗೆ ಅಲ್ಲಾಹನ ಜೊತೆಗಾಗಲಿ ಅವನ ದೂತರ ಜೊತೆಗಾಗಲಿ ಯಾವುದೇ ಕರಾರು ಇರಲು ಹೇಗೆ ತಾನೇ ಸಾಧ್ಯ? ಅವರು ನಿಮ್ಮ ಜೊತೆ ನೇರವಾಗಿರುವ ತನಕ ನೀವು ಅವರ ಜೊತೆ ನೇರವಾಗಿರಿ. ಖಂಡಿತವಾಗಿಯೂ ಅಲ್ಲಾಹನು, ಸತ್ಯನಿಷ್ಠರನ್ನು ಪ್ರೀತಿಸುತ್ತಾನೆ.

8. ಹೇಗಿದೆ (ಅವರ ಈ ಧೋರಣೆ)? ಅವರಿಗೆ ನಿಮ್ಮ ಮೇಲೆ ಪ್ರಾಬಲ್ಯ ಸಿಕ್ಕಿದರೆ ಅವರು ನಿಮ್ಮ ಜೊತೆಗಿನ ಬಾಂಧವ್ಯವನ್ನಾಗಲಿ, ಕರಾರನ್ನಾಗಲಿ ಲೆಕ್ಕಿಸುವವರಲ್ಲ. ಅವರು ಕೇವಲ ತಮ್ಮ ಮಾತುಗಳಿಂದ ನಿಮ್ಮನ್ನು ಒಲಿಸಿಕೊಳ್ಳುತ್ತಾರೆ. ಆದರೆ ಅವರ ಮನಸ್ಸುಗಳು ಒಪ್ಪುವುದಿಲ್ಲ. ಅವರಲ್ಲಿ ಹೆಚ್ಚಿನವರು ವಚನ ಭ್ರಷ್ಟರಾಗಿದ್ದಾರೆ.

 9. ಅವರು ಅಲ್ಲಾಹನ ವಚನಗಳನ್ನು ತೀರಾ ಸಣ್ಣ ಬೆಲೆಗೆ ಮಾರುತ್ತಾರೆ ಮತ್ತು (ಜನರನ್ನು) ಅವನ ಮಾರ್ಗದಿಂದ ತಡೆಯುತ್ತಾರೆ. ಖಂಡಿತವಾಗಿಯೂ ಅವರು ಮಾಡುತ್ತಿರುವುದೆಲ್ಲವೂ ತೀರಾ ಕೆಟ್ಟದಾಗಿದೆ.

 10. ಯಾವುದೇ ವಿಶ್ವಾಸಿಯ ವಿಷಯದಲ್ಲಿ ಅವರು ಬಾಂಧವ್ಯವನ್ನಾಗಲಿ ಕರಾರನ್ನಾಗಲಿ ಲೆಕ್ಕಿಸುವುದಿಲ್ಲ. ಅವರೇ ನಿಜವಾಗಿ ಎಲ್ಲೆ ಮೀರುವವರು.

11. ಇಷ್ಟಾಗಿಯೂ, ಅವರು ಪಶ್ಚಾತ್ತಾಪ ಪಟ್ಟರೆ, ನಮಾಝ್‌ಅನ್ನು ಪಾಲಿಸಿದರೆ ಮತ್ತು ಝಕಾತ್ ಅನ್ನು ಪಾವತಿಸಿದರೆ, ಅವರು ಧರ್ಮದಲ್ಲಿ ನಿಮ್ಮ ಸಹೋದರರು. ನಾವಂತು, ಅರಿಯುವವರಿಗಾಗಿ ನಮ್ಮ ವಚನಗಳನ್ನು ವಿವರಿಸುತ್ತೇವೆ.

 12. ಇನ್ನು ಅವರು, ಕರಾರು ಮಾಡಿಕೊಂಡ ಬಳಿಕ ತಮ್ಮ ಪ್ರತಿಜ್ಞೆಗಳನ್ನು ಮುರಿದರೆ ಮತ್ತು ಧರ್ಮದ ವಿಷಯದಲ್ಲಿ ನಿಮ್ಮನ್ನು ನಿಂದಿಸಿದರೆ, ಸತ್ಯಧಿಕ್ಕಾರದ ನೇತಾರರ ವಿರುದ್ಧ ಸಮರ ಹೂಡಿರಿ. ಅವರ ಪ್ರತಿಜ್ಞೆಗಳಂತು ಖಂಡಿತ ನಂಬಲರ್ಹವಲ್ಲ. (ಯುದ್ಧಕ್ಕೆ ಅಂಜಿ) ಅವರು ದೂರ ಉಳಿಯಬಹುದು.

 13. ನೀವೇನು, ತಮ್ಮ ಕರಾರನ್ನು ಮುರಿದ ಹಾಗೂ ದೇವದೂತರನ್ನು (ನಾಡಿನಿಂದ) ಹೊರ ಹಾಕಲು ನಿರ್ಧರಿಸಿದ ಹಾಗೂ ನಿಮಗಿಂತ ಮೊದಲು ತಾವೇ (ಆಕ್ರಮಣ) ಆರಂಭಿಸಿದ ಜನರ ವಿರುದ್ಧ ಯುದ್ಧ ಮಾಡುವುದಿಲ್ಲವೇ? ನೀವೇನು ಅವರಿಗೆ ಅಂಜುವಿರಾ? ನಿಜವಾಗಿ, ನೀವು ವಿಶ್ವಾಸಿಗಳಾಗಿದ್ದರೆ, ನಿಮ್ಮ ಅಂಜಿಕೆಗೆ ಅಲ್ಲಾಹನೇ ಹೆಚ್ಚು ಅರ್ಹನು.

  14. ನೀವು ಅವರ (ಶತ್ರು ಪಡೆಗಳ) ವಿರುದ್ಧ ಹೋರಾಡಿರಿ. ಅಲ್ಲಾಹನು ನಿಮ್ಮ ಕೈಗಳಿಂದ ಅವರನ್ನು ಶಿಕ್ಷಿಸುವನು ಮತ್ತು ಅವರನ್ನು ಅಪಮಾನಿಸುವನು. ಹಾಗೆಯೇ ಅವನು ಅವರ ವಿರುದ್ಧ ನಿಮಗೆ ನೆರವಾಗುವನು ಮತ್ತು ವಿಶ್ವಾಸಿಗಳ ಮನಸ್ಸುಗಳನ್ನು ತಣಿಸಿಬಿಡುವನು.

15. ಅವನು ಅವರ ಮನಸ್ಸುಗಳಲ್ಲಿರುವ ಕ್ರೋಧವನ್ನು ನಿವಾರಿಸುವನು. ಇನ್ನು, ಅಲ್ಲಾಹನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹನು ಅರಿವುಳ್ಳವನೂ ಯುಕ್ತಿವಂತನೂ ಆಗಿರುತ್ತಾನೆ.

16. ಅಲ್ಲಾಹನು, ನಿಮ್ಮ ಪೈಕಿ ಹೋರಾಡುವವರು ಯಾರು ಮತ್ತು ಅಲ್ಲಾಹ್, ಅವನ ದೂತ ಹಾಗೂ ವಿಶ್ವಾಸಿಗಳ ಹೊರತು ಯಾರನ್ನೂ ತಮ್ಮ ಪೋಷಕರಾಗಿಸಿಕೊಳ್ಳದವರು ಯಾರು, ಎಂಬುದನ್ನು ಅರಿಯದೆಯೇ ನಿಮ್ಮನ್ನು ಬಿಟ್ಟು ಬಿಡಲಾಗುವುದೆಂದು ನೀವು ನಂಬಿರುವಿರಾ? ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಚೆನ್ನಾಗಿ ಬಲ್ಲನು.

17. ಬಹುದೇವಾರಾಧಕರು, ತಾವು ದೇವ ಧಿಕ್ಕಾರಿಗಳೆಂಬುದಕ್ಕೆ ತಾವೇ ಸಾಕ್ಷಿಗಳಾಗಿರುವಾಗ, ಅಲ್ಲಾಹನ ಭವನಗಳ (ಮಸೀದಿಗಳ) ಅಧಿಕಾರಿಗಳಾಗಲು ಅವರು ಅರ್ಹರಲ್ಲ. ಅವರ ಕರ್ಮಗಳೆಲ್ಲಾ ವ್ಯರ್ಥವಾದವು. ಅವರು ನರಕಾಗ್ನಿಯಲ್ಲಿ ಸದಾಕಾಲ ಇರುವರು.

 18. ಅಲ್ಲಾಹನಲ್ಲಿ ಹಾಗೂ ಅಂತಿಮ ದಿನದಲ್ಲಿ ನಂಬಿಕೆ ಉಳ್ಳವರು, ನಮಾಝ್‌ಅನ್ನು ಪಾಲಿಸುವವರು, ಝಕಾತ್‌ಅನ್ನು ಪಾವತಿಸುವವರು ಮತ್ತು ಅಲ್ಲಾಹನ ಹೊರತು ಇನ್ನಾರನ್ನೂ ಅಂಜದವರು ಮಾತ್ರ ಅಲ್ಲಾಹನ ಭವನಗಳ ಅಧಿಕಾರಿಗಳಾಗಬಲ್ಲರು. ಅಂಥವರು ಸರಿದಾರಿಯಲ್ಲಿರುವರೆಂದು ನಿರೀಕ್ಷಿಸಬಹುದು.

  19. ನೀವೇನು, ಹಜ್ಜ್ ಯಾತ್ರಿಕರಿಗೆ ನೀರು ಕುಡಿಸುವುದು ಮತ್ತು ‘ಮಸ್ಜಿದುಲ್ ಹರಾಮ್’ನ ಅಧಿಕಾರಿಗಳಾಗಿರುವುದು (ಇಷ್ಟನ್ನು ಮಾಡಿದವನು)- ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ವಿಶ್ವಾಸ ವಿಟ್ಟಾತನಿಗೆ ಹಾಗೂ ಅಲ್ಲಾಹನ ಮಾರ್ಗದಲ್ಲಿ ಹೋರಾಡಿದಾತನಿಗೆ ಸಮಾನನೆಂದು ನಂಬಿರುವಿರಾ? ಅಲ್ಲಾಹನ ದೃಷ್ಟಿಯಲ್ಲಿ ಅವು ಸಮಾನವಾಗಲಾರವು. ಅಲ್ಲಾಹನಂತು, ಅಕ್ರಮಿಗಳಿಗೆ ಮಾರ್ಗದರ್ಶನ ನೀಡುವುದಿಲ್ಲ.

20. ವಿಶ್ವಾಸವಿಟ್ಟವರು, ವಲಸೆ ಹೋದವರು ಮತ್ತು ತಮ್ಮ ಸಂಪತ್ತು ಹಾಗೂ ಜೀವಗಳೊಂದಿಗೆ ಅಲ್ಲಾಹನ ಮಾರ್ಗದಲ್ಲಿ ಹೋರಾಡಿದವರು – ಅವರಿಗೆ ಅಲ್ಲಾಹನ ಬಳಿ ಉನ್ನತ ಸ್ಥಾನವಿದೆ. ಅವರೇ ನಿಜವಾಗಿ ವಿಜಯಿಗಳು.

 21. ಅವರ ಒಡೆಯನು ಅವರಿಗೆ ತನ್ನ ವತಿಯಿಂದ ಅನುಗ್ರಹದ, ಮೆಚ್ಚುಗೆಯ ಹಾಗೂ ಸ್ವರ್ಗೋದ್ಯಾನಗಳ ಶುಭವಾರ್ತೆ ನೀಡುತ್ತಾನೆ. ಅಲ್ಲಿ ಅವರಿಗೆ ಶಾಶ್ವತ ಕೊಡುಗೆಗಳಿವೆ.

22. ಅವರು ಸದಾಕಾಲ ಅದರಲ್ಲಿರುವರು. ಖಂಡಿತವಾಗಿಯೂ ಅಲ್ಲಾಹನ ಬಳಿ ಮಹಾನ್ ಪ್ರತಿಫಲವಿದೆ.

 23. ವಿಶ್ವಾಸಿಗಳೇ, ನಿಮ್ಮ ತಂದೆ – ತಾತಂದಿರು ಮತ್ತು ನಿಮ್ಮ ಸಹೋದರರು, ವಿಶ್ವಾಸಕ್ಕೆದುರಾಗಿ ಧಿಕ್ಕಾರವನ್ನೇ ಪ್ರೀತಿಸುವವರಾಗಿದ್ದರೆ, ಅವರನ್ನು ನೀವು ನಿಮ್ಮ ಪೋಷಕರಾಗಿ ಪರಿಗಣಿಸಬೇಡಿ. ನಿಮ್ಮ ಪೈಕಿ, ಅವರನ್ನು ಪರಮ ಆಪ್ತರಾಗಿಸಿಕೊಂಡವರೇ ಅಕ್ರಮಿಗಳು.

24. ಒಂದು ವೇಳೆ ನಿಮ್ಮ ತಂದೆ – ತಾತಂದಿರು, ನಿಮ್ಮ ಪುತ್ರರು, ನಿಮ್ಮ ಸಹೋದರರು, ನಿಮ್ಮ ಪತ್ನಿಯರು, ನಿಮ್ಮ ಬಂಧುಗಳು, ನೀವು ಸಂಪಾದಿಸಿರುವ ಸಂಪತ್ತು, ನಷ್ಟವಾದೀತೆಂದು ನೀವು ಅಂಜುವ ವ್ಯಾಪಾರ ಮತ್ತು ನೀವು ಪ್ರೀತಿಸುವ ನಿವಾಸಗಳು – ನಿಮಗೆ ಅಲ್ಲಾಹನಿಗಿಂತ, ಅವನ ದೂತರಿಗಿಂತ ಮತ್ತು ಅವನ ಮಾರ್ಗದಲ್ಲಿನ ಹೋರಾಟಕ್ಕಿಂತ ಪ್ರಿಯವಾಗಿದ್ದರೆ – ಅಲ್ಲಾಹನು ತನ್ನ ಆದೇಶವನ್ನು ಪ್ರಕಟಿಸುವ ತನಕ ಕಾಯಿರಿ. ಅಲ್ಲಾಹನು ಭ್ರಷ್ಟ ಜನರಿಗೆ ಸರಿದಾರಿ ತೋರುವುದಿಲ್ಲ.

25. ಈ ಹಿಂದೆ ಹಲವು ರಣರಂಗಗಳಲ್ಲಿ ಅಲ್ಲಾಹನು ನಿಮಗೆ ನೆರವಾಗಿರುವನು. ‘ಹುನೈನ್’ನ ದಿನ-ನೀವು ನಿಮ್ಮ ಸಂಖ್ಯಾಬಲದ ಕುರಿತು ಸಂತುಷ್ಟರಾಗಿದ್ದಿರಿ. ಆದರೆ ಅದು (ಸಂಖ್ಯಾಬಲ) ನಿಮಗೆ ಯಾವ ಹಿತವನ್ನೂ ಮಾಡಲಿಲ್ಲ ಮತ್ತು ಭೂಮಿಯು ತನ್ನೆಲ್ಲಾ ವೈಶಾಲ್ಯದ ಹೊರತಾಗಿಯೂ ನಿಮ್ಮ ಪಾಲಿಗೆ ತೀರಾ ಸೀಮಿತವಾಗಿ ಬಿಟ್ಟಿತು. ಕೊನೆಗೆ ನೀವು ಬೆನ್ನು ತೋರಿಸಿ ಪಲಾಯನ ಮಾಡಿದಿರಿ.

  26. ಕೊನೆಗೆ ಅಲ್ಲಾಹನು ತನ್ನ ದೂತರಿಗೆ ಹಾಗೂ ವಿಶ್ವಾಸಿಗಳಿಗೆ ತನ್ನ ಕಡೆಯಿಂದ ಸಾಂತ್ವನವನ್ನು ಇಳಿಸಿಕೊಟ್ಟನು ಮತ್ತು ನೀವು ಕಾಣದ ಪಡೆಗಳನ್ನು ಇಳಿಸಿ ಧಿಕ್ಕಾರಿಗಳನ್ನು ಶಿಕ್ಷಿಸಿದನು. ಇದುವೇ ಧಿಕ್ಕಾರಿಗಳಿಗಿರುವ ಪ್ರತಿಫಲ.

27. ತರುವಾಯ ಅಲ್ಲಾಹನು ತಾನಿಚ್ಛಿಸಿದವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.

28. ವಿಶ್ವಾಸಿಗಳೇ, ಬಹುದೇವಾರಾಧಕರು ಮಲಿನರು. ಈ ವರ್ಷದ ಬಳಿಕ ಅವರು ‘ಮಸ್ಜಿದುಲ್ ಹರಾಮ್’ನ ಹತ್ತಿರ ಬರಬಾರದು. ನಿಮಗೆ ದಾರಿದ್ರದ ಭಯವಿದ್ದರೆ, ಅಲ್ಲಾಹನಿಚ್ಛಿಸಿದರೆ, ಅವನು ತನ್ನ ಅನುಗ್ರಹದಿಂದ ನಿಮ್ಮನ್ನು ಸಂಪನ್ನರಾಗಿಸುವನು. ಖಂಡಿತವಾಗಿಯೂ ಅವನು ಎಲ್ಲವನ್ನೂ ಅರಿತಿರುವವನೂ ಯುಕ್ತಿವಂತನೂ ಆಗಿರುವನು.

 29. ಅಲ್ಲಾಹನಲ್ಲಿ ಹಾಗೂ ಅಂತಿಮ ದಿನದಲ್ಲಿ ವಿಶ್ವಾಸವಿಡದ ಮತ್ತು ಅಲ್ಲಾಹ್ ಮತ್ತವನ ದೂತರು ನಿಷೇಧಿಸಿರುವುದನ್ನು ನಿಷಿದ್ಧವೆಂದು ಪರಿಗಣಿಸದವರ ವಿರುದ್ಧ ಹಾಗೂ ಗ್ರಂಥನೀಡಲ್ಪಟ್ಟವರ ಪೈಕಿ, ಸತ್ಯ ಧರ್ಮವನ್ನು ಸ್ವೀಕರಿಸದವರ ವಿರುದ್ಧ ಯುದ್ಧ ಸಾರಿರಿ – ಅವರು ತಮ್ಮ ಕೈಯಿಂದ ‘ಜಿಝಿಯಾ’ (ದಂಡ) ಪಾವತಿಸಿ, ಅಧೀನರಾಗಿ ಬಿಡುವ ತನಕ.

  30. ಯಹೂದಿಗಳು, ಉಝೈರ್ ಅಲ್ಲಾಹನ ಪುತ್ರರೆಂದು ಹೇಳುತ್ತಾರೆ ಮತ್ತು ಕ್ರೈಸ್ತರು ಮಸೀಹರು ಅಲ್ಲಾಹನ ಪುತ್ರರೆಂದು ಹೇಳುತ್ತಾರೆ. ಇದು ಕೇವಲ ಅವರ ಬಾಯಿ ಮಾತು. ಅವರು ಗತಕಾಲದ ಧಿಕ್ಕಾರಿಗಳ ಮಾತನ್ನೇ ಅನುಕರಿಸುತ್ತಿದ್ದಾರೆ. ಅವರ ಮೇಲೆ ಅಲ್ಲಾಹನ ಪ್ರಹಾರವಿದೆ. ಅವರು ದಾರಿಗೆಟ್ಟು ಅದೆಲ್ಲಿ ಅಲೆಯುತ್ತಿದ್ದಾರೆ?

31. ಅವರು ಅಲ್ಲಾಹನ ಹೊರತಾಗಿ, ತಮ್ಮ ವಿದ್ವಾಂಸರನ್ನು, ಸನ್ಯಾಸಿಗಳನ್ನು ಮತ್ತು ಮರ್ಯಮರ ಪುತ್ರ ಮಸೀಹರನ್ನು ದೇವರಾಗಿಸಿಕೊಂಡಿದ್ದಾರೆ. ನಿಜವಾಗಿ ಅವರಿಗೆ, ಒಬ್ಬ ದೇವರ ಹೊರತು ಬೇರೆ ಯಾರನ್ನೂ ಪೂಜಿಸಬಾರದೆಂದು ಆದೇಶಿಸಲಾಗಿದೆ. ಅವನ ಹೊರತು ಬೇರೆ ಯಾರೂ ಪೂಜಾರ್ಹರಲ್ಲ. ಅವರು ಪಾಲುಗೊಳಿಸುವ ಎಲ್ಲದರಿಂದ ಅವನು ಸಂಪೂರ್ಣ ಮುಕ್ತನು.

32. ಅವರು ಅಲ್ಲಾಹನ ಪ್ರಕಾಶವನ್ನು ತಮ್ಮ ಬಾಯಿಯಿಂದ ಊದಿ ನಂದಿಸ ಬಯಸುತ್ತಾರೆ. ಅಲ್ಲಾಹನು ಮಾತ್ರ ತನ್ನ ಪ್ರಕಾಶವನ್ನು ಪರಿಪೂರ್ಣವಾಗಿ ವ್ಯಾಪಿಸದೆ ಬಿಡಲಾರನು – ಧಿಕ್ಕಾರಿಗಳಿಗೆ ಅದು ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ.

33. ಅವನೇ, ತನ್ನ ದೂತನನ್ನು ಮಾರ್ಗದರ್ಶನದೊಂದಿಗೆ ಹಾಗೂ ಎಲ್ಲ ಧರ್ಮಗಳಿಗೆದುರಾಗಿ ಬೆಳಗಲು ಸತ್ಯ ಧರ್ಮದೊಂದಿಗೆ ಕಳುಹಿಸಿದವನು. ಬಹುದೇವಾರಾಧಕರಿಗೆ ಅದು ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ.

 34. ವಿಶ್ವಾಸಿಗಳೇ, ಖಂಡಿತವಾಗಿಯೂ ಧರ್ಮಗುರುಗಳು ಮತ್ತು ಸನ್ಯಾಸಿಗಳಲ್ಲಿ ಹೆಚ್ಚಿನವರು ಜನರ ಸಂಪತ್ತನ್ನು ಅಕ್ರಮ ವಿಧಾನಗಳಿಂದ ಕಬಳಿಸುತ್ತಾರೆ ಮತ್ತು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. (ಅವರಿಗೂ) ಚಿನ್ನ ಹಾಗೂ ಬೆಳ್ಳಿಯನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚುಮಾಡದೆ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವವರಿಗೂ ಕಠಿಣ ಶಿಕ್ಷೆಯ ಶುಭವಾರ್ತೆ ನೀಡಿರಿ.

35. ಅವುಗಳನ್ನು (ಆ ಚಿನ್ನ, ಬೆಳ್ಳಿಗಳನ್ನು) ನರಕಾಗ್ನಿಯಲ್ಲಿ ಉರಿಸಲಾಗುವ ದಿನ, ಅದರಿಂದ ಅವರ ಹಣೆಗಳಿಗೆ, ಮಗ್ಗುಲುಗಳಿಗೆ ಮತ್ತು ಬೆನ್ನುಗಳಿಗೆ ಬರೆ ಎಳೆಯಲಾಗುವುದು – ಇದುವೇ ನೀವು ನಿಮಗಾಗಿ ಸಂಗ್ರಹಿಸಿಟ್ಟ ಸಂಪತ್ತು . ಇದೀಗ ಸವಿಯಿರಿ ನೀವು ಸಂಗ್ರಹಿಸಿದ್ದನ್ನು.

36. ಖಂಡಿತವಾಗಿಯೂ ಅಲ್ಲಾಹನ ಬಳಿ, (ವರ್ಷದಲ್ಲಿ) ತಿಂಗಳುಗಳ ಸಂಖ್ಯೆ ಹನ್ನೆರಡು. ಅವನು, ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದ ದಿನವೇ ಹಾಗೆಂದು ವಿಧಿಸಿರುವನು. ಅವುಗಳಲ್ಲಿ ನಾಲ್ಕು, ಪಾವನ ತಿಂಗಳುಗಳು. ಇದುವೇ ಸರಿಯಾದ ಧರ್ಮ. ಆ ತಿಂಗಳುಗಳಲ್ಲಿ ನೀವು ಸ್ವತಃ ನಿಮ್ಮ ಮೇಲೆ ಅಕ್ರಮವೆಸಗಬೇಡಿ. ಮತ್ತು ಬಹುದೇವಾರಾಧಕರೆಲ್ಲ ಒಂದಾಗಿ ನಿಮ್ಮ ವಿರುದ್ಧ ಹೋರಾಡುವಂತೆ, ನೀವೆಲ್ಲ ಒಂದಾಗಿ ಅವರ ವಿರುದ್ಧ ಹೋರಾಡಿರಿ. ನಿಮಗೆ ತಿಳಿದಿರಲಿ, ಅಲ್ಲಾಹನು ಧರ್ಮನಿಷ್ಠರ ಜೊತೆಗಿದ್ದಾನೆ.

 37. ಪವಿತ್ರ ತಿಂಗಳ ಮುಂದೂಡಿಕೆಯು, ಧಿಕ್ಕಾರದ (ಧೋರಣೆಯ) ಮೇಲಿನ ಇನ್ನೊಂದು ಹೆಚ್ಚಳವಾಗಿದೆ. ಅಲ್ಲಾಹನು ನಿಷಿದ್ಧ ಗೊಳಿಸಿರುವ ತಿಂಗಳುಗಳ ಎಣಿಕೆ ಪೂರ್ತಿಗೊಳಿಸಲಿಕ್ಕಾಗಿ, ಅವರು ಆ ತಿಂಗಳನ್ನು ಒಂದು ವರ್ಷ ಸಮ್ಮತವಾಗಿಸುತ್ತಾರೆ ಮತ್ತು ಇನ್ನೊಂದು ವರ್ಷ ಅದನ್ನು ನಿಷಿದ್ಧವಾಗಿಸುತ್ತಾರೆ – ಈ ರೀತಿ ಅವರು ಅಲ್ಲಾಹನು ನಿಷೇಧಿಸಿರುವುದನ್ನು ಸಮ್ಮತವಾಗಿಸುತ್ತಾರೆ. ಅವರ ಪಾಲಿಗೆ ಅವರ ಕೆಟ್ಟ ಕರ್ಮಗಳನ್ನು ಚಂದಗಾಣಿಸಲಾಗಿದೆ. ಅಲ್ಲಾಹನು ಧಿಕ್ಕಾರಿಗಳಿಗೆ ಸರಿ ದಾರಿಯನ್ನು ತೋರಿಸುವುದಿಲ್ಲ.

38. ವಿಶ್ವಾಸಿಗಳೇ, ನಿಮಗೇನಾಗಿದೆ? ಅಲ್ಲಾಹನ ಮಾರ್ಗದಲ್ಲಿ ಹೊರಡಿರಿ ಎಂದು ನಿಮ್ಮೊಡನೆ ಹೇಳಲಾದಾಗ ನೀವು ನೆಲಕ್ಕೆ ಅಂಟಿರುತ್ತೀರಿ. ನೀವೇನು ಪರಲೋಕದೆದುರು, ಇಹಲೋಕದ ಜೀವನವನ್ನೇ ಮೆಚ್ಚಿಕೊಂಡಿರುವಿರಾ? ನಿಜವಾಗಿ ಪರಲೋಕಕ್ಕೆ ಹೋಲಿಸಿದರೆ ಇಹಲೋಕದ ಬದುಕು ತೀರಾ ಕ್ಷುಲ್ಲಕ.

 39. ನೀವು (ಅಲ್ಲಾಹನ ಮಾರ್ಗದಲ್ಲಿ) ಹೊರಡದಿದ್ದರೆ, ಅವನು ನಿಮಗೆ ಯಾತನಾಮಯ ಶಿಕ್ಷೆಯನ್ನು ನೀಡುವನು ಮತ್ತು ನಿಮ್ಮ ಬದಲಿಗೆ ಬೇರೊಂದು ಜನಾಂಗವನ್ನು ಮುಂದೆ ತರುವನು. ಅವನಿಗೆ ಯಾವ ನಷ್ಟವನ್ನುಂಟುಮಾಡಲಿಕ್ಕೂ ನಿಮ್ಮಿಂದಾಗದು. ಅಲ್ಲಾಹನಂತು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.

 40. ನೀವು ಅವರಿಗೆ (ದೇವದೂತರಿಗೆ) ನೆರವಾಗದಿದ್ದರೆ, (ನಿಮಗೆ ತಿಳಿದಿರಲಿ,) ಧಿಕ್ಕಾರಿಗಳು ಅವರನ್ನು (ನಾಡಿನಿಂದ) ಹೊರಹಾಕಿದಾಗ ಅಲ್ಲಾಹನು ಅವರಿಗೆ ನೆರವಾಗಿರುವನು. (ಅಂದು) ಅವರು (ದೂತರು) ಇಬ್ಬರಲ್ಲಿ ಎರಡನೆಯವರಾಗಿದ್ದರು. ಅವರಿಬ್ಬರೂ ಗುಹೆಯಲ್ಲಿದ್ದಾಗ, ಅವರು (ದೂತರು) ತಮ್ಮ ಸಂಗಾತಿಯೊಡನೆ, ‘‘ಅಂಜಬೇಡ, ಖಂಡಿತವಾಗಿಯೂ ಅಲ್ಲಾಹನು ನಮ್ಮ ಜೊತೆಗಿದ್ದಾನೆ.’’ಎಂದಿದ್ದರು. ಕೊನೆಗೆ ಅಲ್ಲಾಹನು ಅವರಿಗೆ ಮನಃಶಾಂತಿಯನ್ನು ಇಳಿಸಿಕೊಟ್ಟನು ಮತ್ತು ನಿಮಗೆ ಕಾಣಿಸದ ಪಡೆಗಳ ಮೂಲಕ ಅವರಿಗೆ ಬಲ ಒದಗಿಸಿದನು. ಅಲ್ಲದೆ ಅವನು ಧಿಕ್ಕಾರಿಗಳ ಮಾತನ್ನು ಸೋಲಿಸಿದನು, ಅಲ್ಲಾಹನ ಮಾತೇ ಮೇಲಾಯಿತು. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.

  41. ಹಗುರವಾಗಿ ಅಥವಾ ಭಾರವಾಗಿ ನೀವು ಹೊರಡಿರಿ, ಮತ್ತು ನಿಮ್ಮ ಸಂಪತ್ತುಗಳನ್ನೂ ಜೀವಗಳನ್ನೂ ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ. ನೀವು ಅರಿಯುವವರಾಗಿದ್ದರೆ, ಇದುವೇ ನಿಮ್ಮ ಪಾಲಿಗೆ ಉತ್ತಮವಾಗಿದೆ.

 42. ಲಾಭವು ತಕ್ಷಣದ್ದಾಗಿದ್ದರೆ ಮತ್ತು ಪ್ರಯಾಣವು ಸುಲಭದ್ದಾಗಿದ್ದರೆ ಅವರು ಖಂಡಿತ ನಿಮ್ಮ ಜೊತೆ ಬರುತ್ತಿದ್ದರು. ಆದರೆ ಅವರ ಪಾಲಿಗೆ ದಾರಿಯು ತುಂಬಾ ಉದ್ದವಾಯಿತು. ಇದೀಗ ಅವರು ಅಲ್ಲಾಹನ ಹೆಸರಲ್ಲಿ ಆಣೆ ಹಾಕಿ ‘‘ನಮಗೆ ಸಾಧ್ಯವಿದ್ದಿದ್ದರೆ ನಾವು ಖಂಡಿತ ನಿಮ್ಮ ಜೊತೆ ಬರುತ್ತಿದ್ದೆವು’’ ಎಂದು ಹೇಳುವರು, ನಿಜವಾಗಿ ಅವರು ತಮ್ಮನ್ನು ತಾವೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಅವರು ಸುಳ್ಳು ಹೇಳುವವರೆಂಬುದು ಅಲ್ಲಾಹನಿಗೆ ತಿಳಿದಿದೆ.

 43. (ದೂತರೇ,) ಅಲ್ಲಾಹನು ನಿಮ್ಮನ್ನು ಕ್ಷಮಿಸಲಿ. (ಅವರಲ್ಲಿ) ಸತ್ಯವಂತರು ಯಾರು ಎಂಬುದು ನಿಮಗೆ ಸ್ಪಷ್ಟವಾಗುವ ಮುನ್ನ ಹಾಗೂ ಸುಳ್ಳರನ್ನು ನೀವು ಅರಿಯುವ ಮುನ್ನ ನೀವು ಅವರಿಗೆ ಅನುಮತಿ ನೀಡಿದ್ದೇಕೆ?

  44. ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಉಳ್ಳವರು ತಮ್ಮ ಸಂಪತ್ತುಗಳನ್ನೂ ಜೀವಗಳನ್ನೂ ತೊಡಗಿಸಿ ಹೋರಾಡುವ ವಿಷಯದಲ್ಲಿ ನಿಮ್ಮ ಬಳಿ ವಿನಾಯಿತಿ ಕೇಳುವುದಿಲ್ಲ. ಧರ್ಮನಿಷ್ಠರನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.

45. ನಿಮ್ಮ ಬಳಿ ವಿನಾಯಿತಿಯನ್ನು ಅಪೇಕ್ಷಿಸುವವರು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಇಲ್ಲದವರಾಗಿದ್ದಾರೆ. ಅವರ ಮನಸ್ಸುಗಳು ಸಂಶಯ ಪೀಡಿತವಾಗಿದೆ. ಅವರು ತಮ್ಮ ಸಂಶಯದಲ್ಲೇ ದಾರಿತಪ್ಪಿ ಅಲೆಯುತ್ತಿದ್ದಾರೆ.

 46. ಅವರು ನಿಜಕ್ಕೂ ಹೊರಡ ಬಯಸಿದ್ದರೆ, ಅದಕ್ಕಾಗಿ ಏನಾದರೂ ಸಾಧನ ಸಿದ್ಧ ಪಡಿಸುತ್ತಿದ್ದರು. ಅವರು ಎದ್ದೇಳುವುದು ಅಲ್ಲಾಹನಿಗೆ ಅಪ್ರಿಯವಾಗಿತ್ತು. ಅವನು ಅವರನ್ನು ತಡೆದನು ಮತ್ತು ಕುಳಿತಿರುವವರ ಜೊತೆ ಕುಳಿತಿರಿ ಎಂದನು.

 47. ಒಂದು ವೇಳೆ ಅವರು ನಿಮ್ಮ ಜೊತೆಗೆ ಹೊರಟಿದ್ದರೂ, ಅವರು ನಿಮ್ಮ ಪಾಲಿಗೆ ಗೊಂದಲವನ್ನಷ್ಟೇ ಹೆಚ್ಚಿಸುತ್ತಿದ್ದರು ಮತ್ತು ನಿಮ್ಮ ನಡುವೆ ಹತಾಶೆಯನ್ನು ಬಿತ್ತಲಿಕ್ಕೆಂದೇ ಆಚೀಚೆ ಓಡಾಡುತ್ತಿದ್ದರು. ನಿಮ್ಮಲ್ಲಿ, ಅವರಿಗಾಗಿ ಕೇಳುವವರು (ಅವರ ಗೂಢಚರರು) ಇದ್ದಾರೆ. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.

48. ಈ ಹಿಂದೆಯೂ ಅವರು ಗೊಂದಲ ಉಂಟುಮಾಡಲು ಮತ್ತು ನಿಮಗಾಗಿ ಬಿಕ್ಕಟ್ಟುಗಳನ್ನು ಸೃಷ್ಟಿಸಲು ಶ್ರಮಿಸಿದ್ದರು. ಕೊನೆಗೆ ಸತ್ಯವು ಬಂದು ಬಿಟ್ಟಿತು, ಅಲ್ಲಾಹನ ಆದೇಶವು ಸ್ಪಷ್ಟವಾಗಿ ಪ್ರಕಟವಾಯಿತು ಮತ್ತು ಅವರು ತೀರಾ ಅತೃಪ್ತರಾದರು.

49. ಅವರಲ್ಲಿ (ಒಬ್ಬನು), ನನಗೆ ಅನುಮತಿ ನೀಡಿರಿ ಮತ್ತು ನನ್ನನ್ನು ಪರೀಕ್ಷಿಸಬೇಡಿ ಎನ್ನುತ್ತಾನೆ. ಅವರೇನು ಈಗಾಗಲೇ ಪರೀಕ್ಷೆಗೆ ಗುರಿಯಾಗಿಲ್ಲವೇ? ಖಂಡಿತವಾಗಿಯೂ ನರಕವು ಧಿಕ್ಕಾರಿಗಳನ್ನು ಸುತ್ತು ವರಿದಿದೆ.

50. ನಿಮಗೇನಾದರೂ ಹಿತವಾದರೆ ಅವರಿಗೆ ಅದು ಅಪ್ರಿಯವೆನಿಸುತ್ತದೆ. ಇನ್ನು ನಿಮಗೇನಾದರೂ ಸಂಕಟ ಉಂಟಾದರೆ ಅವರು, ‘ನಾವು ಈ ಮೊದಲೇ ನಮಗೆ ಬೇಕಾದ ಮುಂಜಾಗ್ರತೆ ಮಾಡಿಕೊಂಡಿದ್ದೆವು’ ಎಂದು ಸಂಭ್ರಮಿಸುತ್ತಾ ಮರಳಿ ಹೋಗುತ್ತಾರೆ.

51. ಹೇಳಿರಿ; ‘‘ಅಲ್ಲಾಹನು ನಮಗಾಗಿ ಬರೆದಿಟ್ಟಿರುವುದರ ಹೊರತು ಬೇರಾವ ಸಂಕಟವೂ ನಮಗೆ ಎದುರಾಗುವುದಿಲ್ಲ. ಅವನೇ ನಮ್ಮ ರಕ್ಷಕನು. ಧರ್ಮ ವಿಶ್ವಾಸಿಗಳು ಅಲ್ಲಾಹನಲ್ಲೇ ಸಂಪೂರ್ಣ ಭರವಸೆ ಇಟ್ಟಿರುತ್ತಾರೆ’’.

52. ಹೇಳಿರಿ; ನಮ್ಮ ಕುರಿತಂತೆ ನೀವು ಎರಡು ಒಳಿತುಗಳ ಪೈಕಿ ಒಂದನ್ನಲ್ಲದೆ ಬೇರೇನನ್ನಾದರೂ ನಿರೀಕ್ಷಿಸಬಲ್ಲಿರಾ? ನಿಮ್ಮ ಕುರಿತಂತೆ ನಮ್ಮ ನಿರೀಕ್ಷೆ ಇಷ್ಟೇ; ಒಂದೋ ಅಲ್ಲಾಹನು ತನ್ನ ಕಡೆಯಿಂದ ಶಿಕ್ಷೆ ನೀಡುವ ಮೂಲಕ ನಿಮ್ಮನ್ನು ಪೀಡಿಸುವನು, ಅಥವಾ, ಅವನು ನಮ್ಮ ಕೈಗಳಿಂದ ನಿಮ್ಮನ್ನು ದಂಡಿಸುವನು. ನೀವೀಗ ಕಾಯಿರಿ. ನಿಮ್ಮ ಜೊತೆ ನಾವೂ ಕಾಯುವೆವು.

53. ಹೇಳಿರಿ; ನೀವು ಮನಸಾರೆ ಖರ್ಚು ಮಾಡಿದರೂ, ಒಲ್ಲದ ಮನಸ್ಸಿನಿಂದ ಖರ್ಚು ಮಾಡಿದರೂ ಅದನ್ನು ನಿಮ್ಮಿಂದ ಸ್ವೀಕರಿಸಲಾಗದು. ಏಕೆಂದರೆ ನೀವು ಅವಿಧೇಯರು.

  54. ಅವರು ಮಾಡಿದ ಖರ್ಚು ಅವರಿಂದ ಸ್ವೀಕೃತವಾಗದೆ ಇರುವುದಕ್ಕೆ ಕಾರಣವಿಷ್ಟೇ; ಅವರು ಅಲ್ಲಾಹ್ ಮತ್ತು ಅವನ ರಸೂಲರನ್ನು ಧಿಕ್ಕರಿಸುತ್ತಾರೆ, ತೀರಾ ಆಲಸ್ಯದೊಂದಿಗೆ ನಮಾಝ್‌ಗೆ ಬರುತ್ತಾರೆ ಮತ್ತು ತೀರಾ ಒಲ್ಲದ ಮನಸ್ಸಿನಿಂದ ಖರ್ಚು ಮಾಡುತ್ತಾರೆ.

55. ಅವರ ಸಂಪತ್ತುಗಳು ಮತ್ತು ಅವರ ಸಂತಾನಗಳು ನಿಮ್ಮನ್ನು ಬೆರಗುಗೊಳಿಸದಿರಲಿ. ಅಲ್ಲಾಹನು ಆ ಮೂಲಕ ಇಹಲೋಕ ಜೀವನದಲ್ಲಿ ಅವರನ್ನು ಶಿಕ್ಷಿಸ ಬಯಸುತ್ತಾನೆ. ಮತ್ತು ಅವರು ಧಿಕ್ಕಾರಿಗಳಾಗಿರುವ ಸ್ಥಿತಿಯಲ್ಲೇ ಅವರ ಪ್ರಾಣಗಳು ಹೊರಟು ಹೋಗಬೇಕೆಂದು ಬಯಸುತ್ತಾನೆ.

56. ಅವರು, ತಾವು ನಿಸ್ಸಂದೇಹವಾಗಿಯೂ ನಿಮ್ಮವರೆಂದು ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ಆದರೆ ಅವರು ನಿಮ್ಮವರಲ್ಲ. ನಿಜವಾಗಿ ಅವರು ಭೀತರಾಗಿದ್ದಾರೆ.

 57. ಅವರಿಗೆ ಒಂದು ಅಭಯ ಸ್ಥಾನವಾಗಲಿ, ಗುಹೆಯಾಗಲಿ, ಅಡಗುದಾಣವಾಗಲಿ ದೊರೆತರೆ ಅವರೆಲ್ಲಾ ಒಂದಾಗಿ ಅದರೆಡೆಗೆ ಧಾವಿಸುವರು.

 58.(ದೂತರೇ,) ಅವರಲ್ಲೊಬ್ಬನು, ದಾನಗಳ ವಿಷಯದಲ್ಲಿ ನಿಮ್ಮನ್ನು ಮೂದಲಿಸುತ್ತಾನೆ. ಅದರಲ್ಲಿ ಅವರಿಗೊಂದು ಪಾಲು ಸಿಕ್ಕಿದರೆ ಅವರು ಸಂತುಷ್ಟರಾಗುತ್ತಾರೆ. ಇನ್ನು, ಅದರಿಂದ ಅವರಿಗೇನೂ ಸಿಗದಿದ್ದರೆ ಅವರು ಕೋಪಗೊಳ್ಳುತ್ತಾರೆ.

 59. ಅವರು, ತಮಗೆ ಅಲ್ಲಾಹನು ಮತ್ತವನ ದೂತರು ನೀಡಿದ್ದರಲ್ಲಿ ತೃಪ್ತರಾಗಿ, ‘‘ನಮಗೆ ಅಲ್ಲಾಹನೇ ಸಾಕು. ಮುಂದೆಯೂ ಅಲ್ಲಾಹನು ತನ್ನ ಅನುಗ್ರಹದಿಂದ ನಮಗೆ ನೀಡುವನು ಮತ್ತು ಅವನ ದೂತರೂ ನೀಡುವರು. ನಾವು ಖಂಡಿತ ಅಲ್ಲಾಹನಲ್ಲಿ ಒಲವು ಉಳ್ಳವರಾಗಿದ್ದೇವೆ’’-ಎಂದಿದ್ದರೆ ಎಷ್ಟು ಚೆನ್ನಾಗಿತ್ತು.

60. ನಿಜವಾಗಿ ದಾನಗಳು (ಝಕಾತ್) ಇರುವುದು – ಬಡವರಿಗಾಗಿ, ದೀನರಿಗಾಗಿ, ಅದರ ವಿತರಕರಿಗಾಗಿ, ಯಾರ ಮನ ಒಲಿಸಬೇಕಾಗಿದೆಯೋ ಅವರಿಗಾಗಿ, ಕೊರಳು ಬಿಡಿಸುವುದಕ್ಕಾಗಿ (ದಾಸ್ಯ ವಿಮೋಚನೆಗಾಗಿ), ಸಾಲಗಾರರಿಗಾಗಿ, ಅಲ್ಲಾಹನ ಮಾರ್ಗದಲ್ಲಿ ವ್ಯಯಿಸುವುದಕ್ಕಾಗಿ ಮತ್ತು ಪ್ರಯಾಣಿಕರಿಗಾಗಿ. ಇದು ಅಲ್ಲಾಹನು ವಿಧಿಸಿರುವ ಕಡ್ಡಾಯ ನಿಯಮ. ಅಲ್ಲಾಹನು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ.

 61. ಅವರಲ್ಲಿ ಕೆಲವರು ದೂತರನ್ನು ಪೀಡಿಸುತ್ತಾರೆ. ಅವರು ‘‘ಇವರು ದುರ್ಬಲ ಕಿವಿಯ ವ್ಯಕ್ತಿ’’ ಎನ್ನುತ್ತಾರೆ. ಹೇಳಿರಿ; (ಅವರ) ಕಿವಿ ದುರ್ಬಲವಾಗಿರುವುದು ನಿಮ್ಮ ಹಿತಕ್ಕಾಗಿ ಮಾತ್ರ. ಅವರು (ದೂತರು) ಅಲ್ಲಾಹನಲ್ಲಿ ನಂಬಿಕೆ ಉಳ್ಳವರು ಹಾಗೂ ಸತ್ಯವಿಶ್ವಾಸಿಗಳಲ್ಲೂ ನಂಬಿಕೆ ಉಳ್ಳವರು. ನಿಮ್ಮ ಪೈಕಿ ವಿಶ್ವಾಸಿಗಳಾಗಿರುವವರ ಪಾಲಿಗೆ ಅವರು ಅನುಗ್ರಹವಾಗಿದ್ದಾರೆ. ಅಲ್ಲಾಹನ ದೂತರನ್ನು ಪೀಡಿಸುವವರಿಗೆ ಕಠಿಣ ಶಿಕ್ಷೆ ಕಾದಿದೆ.

62. ಅವರು ನಿಮ್ಮನ್ನು (ಮುಸ್ಲಿಮರನ್ನು) ಮೆಚ್ಚಿಸಲಿಕ್ಕಾಗಿ ಅಲ್ಲಾಹನ ಆಣೆ ಹಾಕುತ್ತಲಿರುತ್ತಾರೆ. ನಿಜವಾಗಿ, ಅವರು ವಿಶ್ವಾಸಿಗಳಾಗಿದ್ದರೆ (ಅವರಿಗೆ ತಿಳಿದಿರಲಿ;) ಅಲ್ಲಾಹ್ ಮತ್ತು ಅವನ ದೂತರು ಮೆಚ್ಚಿಸಲ್ಪಡುವುದಕ್ಕೆ ಹೆಚ್ಚು ಅರ್ಹರಾಗಿದ್ದಾರೆ.

  63. ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಘರ್ಷಣೆಗೆ ಇಳಿಯುವವನಿಗಾಗಿ ನರಕಾಗ್ನಿಯು ಖಂಡಿತ ಸಿದ್ಧವಾಗಿದೆ ಮತ್ತು ಅವನು ಅದರಲ್ಲಿ ಸದಾಕಾಲ ಇರುವನೆಂದು ಅವರಿಗೆ ತಿಳಿಯದೇ? ಅದು ನಿಜಕ್ಕೂ ಮಹಾ ಅಪಮಾನವಾಗಿದೆ.

  64. ತಮ್ಮ ಮನದೊಳಗಿರುವುದನ್ನೆಲ್ಲಾ ಅವರಿಗೆ (ವಿಶ್ವಾಸಿಗಳಿಗೆ)ತಿಳಿಸಿ ಬಿಡುವ ಅಧ್ಯಾಯವೇನಾದರೂ ಇಳಿದು ಬಂದೀತೆಂಬ ಭಯ ಕಪಟಿಗಳಿಗೆ ಇದೆ. ಹೇಳಿರಿ; ನೀವು ಅಪಹಾಸ್ಯ ಮಾಡುತ್ತಲಿರಿ. ನೀವು ಅಂಜುತ್ತಿರುವುದನ್ನು ಅಲ್ಲಾಹನು ಖಂಡಿತ ಬಹಿರಂಗ ಪಡಿಸುವನು.

65. ನೀವು ಅವರೊಡನೆ ಈ ಕುರಿತು ಕೇಳಿದರೆ, ನಾವಂತು ಕೇವಲ ತಮಾಷೆಮಾಡುತ್ತಿದ್ದೆವು ಹಾಗೂ ಆಟವಾಡುತ್ತಿದ್ದೆವು ಎಂದು ಅವರು ಹೇಳುತ್ತಾರೆ. ಹೇಳಿರಿ; ನೀವೇನು ಅಲ್ಲಾಹ್ ಮತ್ತವನ ವಚನಗಳ ಜೊತೆ ಹಾಗೂ ದೂತರ ಜೊತೆ ಅಪಹಾಸ್ಯ ಮಾಡುತ್ತೀರಾ?

  66. ನೀವಿನ್ನು ನೆಪಗಳನ್ನು ಹುಡುಕಬೇಡಿ. ನೀವು ವಿಶ್ವಾಸಿಗಳಾದ ಬಳಿಕ ಧಿಕ್ಕಾರಿಗಳಾಗಿರುವಿರಿ. ನಾವೀಗ ನಿಮ್ಮಲ್ಲಿನ ಒಂದು ಗುಂಪನ್ನು ಕ್ಷಮಿಸಿದರೂ ಇನ್ನೊಂದು ಗುಂಪನ್ನು ಖಂಡಿತ ಶಿಕ್ಷಿಸುವೆವು – ಏಕೆಂದರೆ ಅವರು ಅಪರಾಧಿಗಳಾಗಿರುವರು.

67. ಕಪಟಿ ಪುರುಷರು ಮತ್ತು ಕಪಟಿ ಸ್ತ್ರೀಯರು ಪರಸ್ಪರ ತುಂಬಾ ಆಪ್ತರು. ಅವರು ಕೆಡುಕನ್ನು ಆದೇಶಿಸುತ್ತಾರೆ ಮತ್ತು ಒಳಿತಿನಿಂದ ತಡೆಯುತ್ತಾರೆ. ಹಾಗೆಯೇ ಅವರು ತಮ್ಮ ಕೈಗಳನ್ನು ಕಟ್ಟಿರುತ್ತಾರೆ (ತೀರಾ ಜಿಪುಣರಾಗಿರುತ್ತಾರೆ). ಅವರು ಅಲ್ಲಾಹನನ್ನು ಮರೆತಿದ್ದಾರೆ ಮತ್ತು ಅಲ್ಲಾಹನು ಅವರನ್ನು ಮರೆತಿದ್ದಾನೆ. ಖಂಡಿತವಾಗಿಯೂ ಕಪಟಿಗಳೇ ನಿಜವಾದ ಅವಿಧೇಯರಾಗಿದ್ದಾರೆ.

68. ಅಲ್ಲಾಹನು ಕಪಟಿ ಪುರುಷರಿಗೆ, ಕಪಟಿ ಸ್ತ್ರೀಯರಿಗೆ ಮತ್ತು ಧರ್ಮ ಧಿಕ್ಕಾರಿಗಳಿಗೆ ನರಕಾಗ್ನಿಯ ವಾಗ್ದಾನ ನೀಡಿರುತ್ತಾನೆ. ಅವರು ಸದಾಕಾಲ ಅದರಲ್ಲೇ ಇರುವರು. ಅವರಿಗೆ ಅದುವೇ ಸಾಕು. ಅವರ ಮೇಲೆ ಅಲ್ಲಾಹನ ಶಾಪವಿದೆ ಮತ್ತು ಅವರಿಗೆ ಶಾಶ್ವತ ಶಿಕ್ಷೆ ಇದೆ.

69. ನಿಮ್ಮ ಹಿಂದಿನವರಂತೆ – ಅವರು ನಿಮಗಿಂತ ಹೆಚ್ಚು ಶಕ್ತಿಶಾಲಿಗಳಾಗಿದ್ದರು ಮತ್ತು ನಿಮಗಿಂತ ಹೆಚ್ಚು ಸಂಪತ್ತು ಹಾಗೂ ಸಂತಾನಗಳು ಅವರ ಬಳಿ ಇದ್ದವು. ಅವರು ತಮ್ಮ ಪಾಲನ್ನು ಭೋಗಿಸಿದರು. ಆ ನಿಮ್ಮ ಹಿಂದಿನವರು ತಮ್ಮ ಪಾಲನ್ನು ಭೋಗಿಸಿದಂತೆ, ನೀವು ನಿಮ್ಮ ಪಾಲನ್ನು ಭೋಗಿಸಿದಿರಿ ಮತ್ತು ಅವರಂತೆ ನೀವೂ ವ್ಯರ್ಥ ಚಟುವಟಿಕೆಗಳಲ್ಲಿ ನಿರತರಾಗಿ ಬಿಟ್ಟಿರಿ. ಅವರ ಕರ್ಮಗಳೆಲ್ಲಾ ಇಹಲೋಕದಲ್ಲೂ ಪರಲೋಕದಲ್ಲೂ ವ್ಯರ್ಥವಾದವು. ಅವರೇ ನಿಜವಾಗಿ ನಷ್ಟ ಅನುಭವಿಸುವವರು.

70. ಅವರ ಹಿಂದಿನ, ನೂಹರ ಜನಾಂಗ, ಆದ್ ಹಾಗೂ ಸಮೂದ್ ಜನಾಂಗ, ಇಬ್ರಾಹೀಮರ ಜನಾಂಗ, ಮದ್‌ಯನ್‌ನವರು ಮತ್ತು ಪಲ್ಲಟಗೊಳಿಸಲಾದ ನಾಡುಗಳ ಸುದ್ದಿಯು ಅವರಿಗೆ ತಲುಪಿಲ್ಲವೇ? ಅವರ ಬಳಿಗೆ ಅವರ ದೇವದೂತರು ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಅಲ್ಲಾಹನು ಅವರ ಮೇಲೆ ಅಕ್ರಮವೆಸಗಿರಲಿಲ್ಲ. ಅವರು ತಾವೇ ತಮ್ಮ ಮೇಲೆ ಅಕ್ರಮವೆಸಗಿಕೊಂಡರು.

71. ವಿಶ್ವಾಸಿ ಪುರುಷರು ಮತ್ತು ವಿಶ್ವಾಸಿ ಸ್ತ್ರೀಯರು ಪರಸ್ಪರ ಪೋಷಕರಾಗಿರುತ್ತಾರೆ. ಅವರು ಒಳಿತನ್ನು ಆದೇಶಿಸುತ್ತಾರೆ ಹಾಗೂ ಕೆಡುಕಿನಿಂದ ತಡೆಯುತ್ತಾರೆ ಮತ್ತು ಅವರು ನಮಾಝ್‌ಅನ್ನು ಪಾಲಿಸುತ್ತಾರೆ ಹಾಗೂ ಝಕಾತ್‌ಅನ್ನು ಪಾವತಿಸುತ್ತಾರೆ. ಹಾಗೆಯೇ ಅವರು ಅಲ್ಲಾಹ್ ಹಾಗೂ ಅವರ ದೂತರ ಆಜ್ಞಾಪಾಲನೆ ಮಾಡುತ್ತಾರೆ. ಅವರ ಮೇಲೆ ಅಲ್ಲಾಹನು ಕರುಣೆ ತೋರುವನು.ಖಂಡಿತವಾಗಿಯೂ ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿರುತ್ತಾನೆ.

 72. ಅಲ್ಲಾಹನು ವಿಶ್ವಾಸಿ ಪುರುಷರು ಮತ್ತು ವಿಶ್ವಾಸಿ ಸ್ತ್ರೀಯರಿಗೆ, ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗ ತೋಟಗಳ ವಾಗ್ದಾನ ನೀಡಿರುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. (ಹಾಗೆಯೇ, ಅವರಿಗಾಗಿ) ಶಾಶ್ವತ ತೋಟಗಳಲ್ಲಿ ನಿರ್ಮಲ ನಿವಾಸಗಳಿವೆ. ಇದೆಲ್ಲಕ್ಕಿಂತ ಮಿಗಿಲಾಗಿ – ಅಲ್ಲಾಹನ ಮೆಚ್ಚುಗೆ. ಇದು ನಿಜಕ್ಕೂ ಮಹಾ ವಿಜಯವಾಗಿದೆ.

73. ದೂತರೇ, ಧಿಕ್ಕಾರಿಗಳು ಮತ್ತು ಕಪಟಿಗಳ ವಿರುದ್ಧ ಹೋರಾಡಿರಿ ಹಾಗೂ ಅವರ ಪಾಲಿಗೆ ಕಠಿಣರಾಗಿರಿ. ನರಕವೇ ಅವರ ನೆಲೆಯಾಗಿದೆ. ಅದು, ತುಂಬಾ ಕೆಟ್ಟ ನೆಲೆಯಾಗಿದೆ.

 74. ತಾವು ಹೇಳಿಲ್ಲವೆಂದು ಅವರು ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ನಿಜವಾಗಿ ಅವರು ಧಿಕ್ಕಾರದ ಮಾತನ್ನು ಹೇಳಿದ್ದಾರೆ ಹಾಗೂ ಅವರು ಮುಸ್ಲಿಮರಾದ ಬಳಿಕ ಧಿಕ್ಕಾರಿಗಳಾಗಿದ್ದಾರೆ. ಅವರು, ತಮಗೆ ಸಾಧಿಸಲಾಗದ್ದನ್ನು (ದೂತರ ಹತ್ಯೆಯನ್ನು) ಯೋಜಿಸಿದ್ದರು. ನಿಜವಾಗಿ ಅವರು, ಅಲ್ಲಾಹ್ ಮತ್ತು ಅವನ ದೂತರು ತಮ್ಮ ಔದಾರ್ಯದಿಂದ ಅವರನ್ನು ಸಂಪನ್ನಗೊಳಿಸಿದ್ದಕ್ಕಾಗಿಯಷ್ಟೇ ಪ್ರತೀಕಾರವೆಸಗಿರುವರು. ಇದೀಗ ಅವರು ಪಶ್ಚಾತ್ತಾಪ ಪಟ್ಟರೆ ಅವರಿಗೆ ಹಿತವಾದೀತು. ಅವರು ತಿರುಗಿನಿಂತರೆ ಅಲ್ಲಾಹನು ಅವರಿಗೆ ಈ ಲೋಕದಲ್ಲೂ ಪರಲೋಕದಲ್ಲೂ ಬಹಳ ಕಠಿಣ ಶಿಕ್ಷೆ ನೀಡುವನು. ಭೂಮಿಯಲ್ಲಿ ಅವರಿಗೆ ರಕ್ಷಕನಾಗಿ ಹಾಗೂ ಸಹಾಯಕನಾಗಿ ಯಾರೂ ಸಿಗಲಾರರು.

75. ಅವರಲ್ಲಿ ಕೆಲವರು – ಅವನು (ಅಲ್ಲಾಹನು) ತನ್ನ ಅನುಗ್ರಹದಿಂದ ನಮಗೆ ದಯಪಾಲಿಸಿದರೆ ನಾವು ಖಂಡಿತ ದಾನ ಮಾಡುವೆವು ಮತ್ತು ಖಂಡಿತ ನಾವು ಸಜ್ಜನರ ಸಾಲಿಗೆ ಸೇರುವೆವು ಎಂದು ಅಲ್ಲಾಹನೊಡನೆ ಕರಾರು ಮಾಡಿರುವರು.

76. ಆದರೆ ಅಲ್ಲಾಹನು ತನ್ನ ಅನುಗ್ರಹದಿಂದ ಅವರಿಗೆ ದಯಪಾಲಿಸಿದಾಗ, ಅವರು ಅದರಲ್ಲಿ ಜಿಪುಣತೆ ತೋರಿದರು. ಅವರು ತಿರುಗಿ ನಿಂತರು ಮತ್ತು ವಿಮುಖರಾದರು.

77. ಕೊನೆಗೆ ಅಲ್ಲಾಹನು, ಅವರು ತನ್ನನ್ನು ಭೇಟಿಯಾಗುವ ದಿನದ ತನಕ ಅವರ ಮನಸ್ಸುಗಳಲ್ಲಿ ಕಾಪಟ್ಯವನ್ನು ತುಂಬಿ ಬಿಟ್ಟನು – ಅವರು ಅಲ್ಲಾಹನ ಜೊತೆ ತಾವು ಮಾಡಿದ ವಾಗ್ದಾನಗಳನ್ನು ಉಲ್ಲಂಘಿಸಿದ್ದರ ಮತ್ತು ಸುಳ್ಳು ಹೇಳುತ್ತಿದ್ದುದರ ಫಲಿತಾಂಶವಿದು.

 78. ಅಲ್ಲಾಹನು ಅವರ ಗುಟ್ಟುಗಳನ್ನೂ ಗುಪ್ತ ಮಾತುಕತೆಗಳನ್ನೂ ಬಲ್ಲನೆಂಬುದು ಮತ್ತು ಅಲ್ಲಾಹನು ಎಲ್ಲ ಗುಪ್ತ ವಿಚಾರಗಳನ್ನೂ ಚೆನ್ನಾಗಿ ಬಲ್ಲವನೆಂಬುದು ಅವರಿಗೆ ತಿಳಿಯದೇ?

 79. ತಮ್ಮ ಸ್ವಂತ ಇಚ್ಛೆಯಿಂದ ದಾನ ನೀಡುವ ವಿಶ್ವಾಸಿಗಳನ್ನು ದೂಷಿಸುವವರು ಮತ್ತು (ದಾನ ಮಾಡುವುದಕ್ಕೆ) ತಮ್ಮ ಶ್ರಮದ ಫಲದ ಹೊರತು ಬೇರೇನೂ ಇಲ್ಲದವರನ್ನು ಗೇಲಿ ಮಾಡುವವರು – ಅವರನ್ನು ಅಲ್ಲಾಹನು ಗೇಲಿಮಾಡುವನು ಮತ್ತು ಅವರಿಗೆ ಕಠಿಣ ಶಿಕ್ಷೆ ಕಾದಿದೆ.

80. ನೀವು ಅವರನ್ನು ಕ್ಷವಿಸಬೇಕೆಂದು ಪ್ರಾರ್ಥಿಸಿದರೂ ಪ್ರಾರ್ಥಿಸದಿದ್ದರೂ (ಪರಿಣಾಮ ಒಂದೇ). ಅವರನ್ನು ಕ್ಷಮಿಸಬೇಕೆಂದು ನೀವು ಎಪ್ಪತ್ತು ಬಾರಿ ಪ್ರಾರ್ಥಿಸಿದರೂ ಅಲ್ಲಾಹನು ಅವರನ್ನು ಖಂಡಿತ ಕ್ಷಮಿಸಲಾರನು. ಏಕೆಂದರೆ ಅವರು ಅಲ್ಲಾಹ್ ಮತ್ತು ಅವನ ದೂತರನ್ನು ಧಿಕ್ಕರಿಸಿದವರಾಗಿದ್ದಾರೆ. ಅಲ್ಲಾಹನು ಅವಿಧೇಯರಿಗೆ ಸನ್ಮಾರ್ಗವನ್ನು ತೋರಿಸುವುದಿಲ್ಲ.

 81. (ಯುದ್ಧದಿಂದ ತಪ್ಪಿಸಿಕೊಳ್ಳಲು) ಹಿಂದೆ ಉಳಿದುಕೊಂಡವರು, ತಾವು ಅಲ್ಲಾಹನ ದೂತರ ಹಿಂದೆ, ತಮ್ಮ ನೆಲೆಗಳಲ್ಲೇ ಉಳಿದಿರುವೆವೆಂದು ಸಂಭ್ರಮಿಸಿದರು. ಅವರಿಗೆ ತಮ್ಮ ಸಂಪತ್ತುಗಳನ್ನು ಹಾಗೂ ತಮ್ಮ ಜೀವಗಳನ್ನು ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಹೋರಾಡುವುದು ಅಪ್ರಿಯವಾಯಿತು ಮತ್ತು ಅವರು ‘‘ಬಿಸಿಲಲ್ಲಿ ಹೊರಡಬೇಡಿ’’ ಎಂದರು. ಹೇಳಿರಿ; ನರಕದ ಬೆಂಕಿಯು ಅದಕ್ಕಿಂತಲೂ ಬಿಸಿಯಾಗಿರುವುದು. ಅವರು ಅರ್ಥಮಾಡಿಕೊಂಡಿದ್ದರೆ ಎಷ್ಟು ಚೆನ್ನಾಗಿತ್ತು!

82.ಅವರು ಕಡಿಮೆ ನಗಬೇಕು ಮತ್ತು ಹೆಚ್ಚು ಅಳಬೇಕು. ಹಾಗಿದೆ, ಅವರ ಗಳಿಕೆಯ ಫಲ.

83. ಒಂದು ವೇಳೆ ಅಲ್ಲಾಹನು ನಿಮ್ಮನ್ನು ಅವರಲ್ಲಿನ ಒಂದು ಗುಂಪಿನೆಡೆಗೆ ಮರಳಿಸಿದರೆ, ಅವರು (ಹೋರಾಟಕ್ಕೆ) ಹೊರಡಲು ನಿಮ್ಮ ಅನುಮತಿ ಕೇಳುವರು. ಹೇಳಿರಿ; ನೀವೆಂದೂ ನನ್ನ ಜೊತೆ ಹೊರಡುವಂತಿಲ್ಲ ಮತ್ತು ನೀವೆಂದೂ ನನ್ನ ಜೊತೆ ಸೇರಿ ಶತ್ರುವಿನ ವಿರುದ್ಧ ಹೋರಾಡುವಂತಿಲ್ಲ. ನೀವು ಮೊದಲ ಬಾರಿ ಕುಳಿತಿರಲು ಇಷ್ಟ ಪಟ್ಟವರು. ಇದೀಗ ನೀವು ಹಿಂದೆ ಉಳಿದಿರುವವರ ಜೊತೆಗೇ ಕುಳಿತಿರಿ.

 84. ಅವರ ಪೈಕಿ ಯಾವುದೇ ಮೃತನ ಅಂತಿಮ ನಮಾಝ್‌ಅನ್ನು ನೀವು ಎಂದೂ ಸಲ್ಲಿಸಬೇಡಿ ಮತ್ತು ಅವನ ಗೋರಿಯ ಬಳಿಯೂ ನಿಲ್ಲಬೇಡಿ. ಅವರು ಅಲ್ಲಾಹ್ ಮತ್ತು ಅವನ ದೂತನನ್ನು ಧಿಕ್ಕರಿಸಿದವರಾಗಿದ್ದಾರೆ ಮತ್ತು ಅವರು ಅವಿಧೇಯರಾಗಿಯೇ ಮೃತರಾಗಿದ್ದಾರೆ.

85. ಅವರ ಸಂಪತ್ತುಗಳಾಗಲಿ, ಸಂತಾನಗಳಾಗಲಿ ನಿಮ್ಮನ್ನು ಬೆರಗು ಗೊಳಿಸದಿರಲಿ. ಅಲ್ಲಾಹನು ಆ ಮೂಲಕ ಇಹಲೋಕ ಜೀವನದಲ್ಲಿ ಅವರನ್ನು ಶಿಕ್ಷಿಸ ಬಯಸುತ್ತಾನೆ ಮತ್ತು ಅವನು ಧರ್ಮ ಧಿಕ್ಕಾರಿಗಳಾಗಿರುವ ಸ್ಥಿತಿಯಲ್ಲಿ ಅವರ ಜೀವಗಳು ಹೊರಟು ಹೋಗಬೇಕೆಂದು ಬಯಸುತ್ತಾನೆ.

86. ಅಲ್ಲಾಹನಲ್ಲಿ ವಿಶ್ವಾಸವಿಡಿರಿ ಮತ್ತು ಅವನ ದೂತರ ಜೊತೆ ಸೇರಿ ಹೋರಾಡಿರಿ ಎಂದು ಹೇಳುವ ಅಧ್ಯಾಯವೊಂದನ್ನು ಇಳಿಸಲಾದಾಗ ಅವರಲ್ಲಿನ ಸ್ಥಿತಿವಂತರು ನಿಮ್ಮೊಡನೆ ಅನುಮತಿ ಕೇಳುತ್ತಾರೆ ಮತ್ತು ಕುಳಿತಿರುವವರ ಜೊತೆಗಿರಲು ನಮ್ಮನ್ನು ಬಿಟ್ಟು ಬಿಡಿ ಎನ್ನುತ್ತಾರೆ.

87. ಅವರು ಹಿಂದೆ ಉಳಿದಿರುವವರ ಜೊತೆ ಇರುವುದನ್ನು ಮೆಚ್ಚಿಕೊಂಡರು. ಅವರ ಮನಸ್ಸುಗಳಿಗೆ ಮುದ್ರೆ ಒತ್ತಲಾಯಿತು. ಅವರು ಏನನ್ನೂ ಅರಿಯುವವರಲ್ಲ.

88. ಆದರೆ ದೇವ ದೂತರು ಹಾಗೂ ಅವರ ಜೊತೆಗಿರುವ ವಿಶ್ವಾಸಿಗಳು ತಮ್ಮ ಸಂಪತ್ತು ಹಾಗೂ ತಮ್ಮ ಜೀವಗಳನ್ನು ತೊಡಗಿಸಿ ಹೋರಾಡಿದರು. ಒಳಿತುಗಳು ಅವರಿಗೇ ಸೇರಿವೆ ಮತ್ತು ಅವರೇ ವಿಜಯಿಗಳು.

89. ಅಲ್ಲಾಹನು ಅವರಿಗಾಗಿ, ತಳದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಸಿದ್ಧಗೊಳಿಸಿರುವನು. ಅವರು ಅವುಗಳಲ್ಲಿ ಸದಾ ಕಾಲ ಇರುವರು. ನಿಜಕ್ಕೂ ಇದುವೇ ಮಹಾ ವಿಜಯವಾಗಿದೆ.

 90. ತಮಗೆ ಅನುಮತಿ ನೀಡಬೇಕೆಂದು ಕೋರಿ ನೆಪ ಹೂಡುವ ಕೆಲವು ಹಳ್ಳಿಗರು ಬಂದರು ಮತ್ತು ಅಲ್ಲಾಹನೊಡನೆ ಹಾಗೂ ಆತನ ದೂತನೊಡನೆ ಸುಳ್ಳು ಹೇಳಿದವರು (ಯುದ್ಧದಿಂದ ತಪ್ಪಿಸಿ) ಕುಳಿತಿದ್ದರು. ಅವರಲ್ಲಿನ ಧಿಕ್ಕಾರಿಗಳಿಗೆ ಬಹುಬೇಗನೇ ಭಾರೀ ಕಠಿಣ ಶಿಕ್ಷೆ ಎದುರಾಗಲಿದೆ.

 91. ದುರ್ಬಲರು, ರೋಗಿಗಳು ಹಾಗೂ ಖರ್ಚುಮಾಡಲಿಕ್ಕೇನೂ ಇಲ್ಲದವರು ಅಲ್ಲಾಹನ ಹಾಗೂ ಅವನ ದೂತನ ಹಿತೈಷಿಗಳಾಗಿದ್ದರೆ (ಅವರು ಹೋರಾಟದಿಂದ ದೂರ ಉಳಿದರೆ) ಅವರ ಮೇಲೇನೂ ದೋಷವಿಲ್ಲ. ಹಾಗೆಯೇ ಸತ್ಕರ್ಮಿಗಳ ಮೇಲೂ ದೋಷವೇನಿಲ್ಲ. ಅಲ್ಲಾಹನು ಖಂಡಿತ ಕ್ಷಮಿಸುವವನೂ ಕರಣಾಳುವೂ ಆಗಿದ್ದಾನೆ.

 92. ಹಾಗೆಯೇ, ತಮಗೆ ಸವಾರಿ ಬೇಕೆಂದು ನಿಮ್ಮ ಬಳಿಗೆ ಕೆಲವರು ಬಂದಿದ್ದರು. ನಿಮ್ಮನ್ನು (ಹೊತ್ತು ಸಾಗಿಸಲು) ಸವಾರಿಗೊಳಿಸಲು ನನಗೇನೂ ಸಿಗುತ್ತಿಲ್ಲ ಎಂದು ನೀವು ಅವರೊಡನೆ ಹೇಳಿದ್ದಿರಿ. ಅವರ ಮೇಲೂ ಯಾವುದೇ ದೋಷವಿಲ್ಲ. ಅವರು ಮರಳಿ ಹೋಗುತ್ತಿದ್ದಾಗ (ಅಲ್ಲಾಹನ ಮಾರ್ಗದಲ್ಲಿ) ಖರ್ಚುಮಾಡಲು ತಮ್ಮ ಬಳಿ ಏನೂ ಇಲ್ಲ ಎಂಬ ದುಃಖದಿಂದ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿತ್ತು.

93. ನಿಜವಾಗಿ ದೋಷವಿರುವುದು, ತಾವು ಸಾಕಷ್ಟು ಸಂಪನ್ನರಾಗಿದ್ದರೂ ನಿಮ್ಮೊಡನೆ ಅನುಮತಿ ಕೇಳಿದವರ ಮೇಲೆ. ಅವರು ಹಿಂದುಳಿಯುವವರ ಜೊತೆಗೆ ಇರುವುದನ್ನೇ ಮೆಚ್ಚಿಕೊಂಡರು. ಅಲ್ಲಾಹನು ಅವರ ಮನಸ್ಸುಗಳ ಮೇಲೆ ಮುದ್ರೆ ಒತ್ತಿರುವನು. ಅವರು ಏನನ್ನೂ ಅರಿಯುವುದಿಲ್ಲ.

ಕಾಂಡ-11

 94. ನೀವು ಅವರೆಡೆಗೆ ಮರಳಿದಾಗ, ಅವರು ವಿವಿಧ ನೆಪಗಳೊಂದಿಗೆ ನಿಮ್ಮ ಬಳಿಗೆ ಬರುವರು. ಹೇಳಿರಿ; ನೀವು ನೆಪಗಳನ್ನೊಡ್ಡಬೇಡಿ. ನಾವು ನಿಮ್ಮನ್ನು ನಂಬುವುದಿಲ್ಲ. ಏಕೆಂದರೆ ನಿಮ್ಮ ವಿಷಯವನ್ನು ಅಲ್ಲಾಹನು ನಮಗೆ ತಿಳಿಸಿರುವನು. ಅಲ್ಲಾಹನು ಮತ್ತು ಅವನ ದೂತರು ನಿಮ್ಮ ಕರ್ಮಗಳನ್ನು ನೋಡುವರು. ಕೊನೆಗೆ, ಗುಪ್ತವಾಗಿರುವ ಹಾಗೂ ಬಹಿರಂಗವಾಗಿರುವ ಎಲ್ಲವನ್ನೂ ಬಲ್ಲವನ ಕಡೆಗೆ ನಿಮ್ಮನ್ನು ಮರಳಿಸಲಾಗುವುದು. ನೀವು ಏನೆಲ್ಲಾ ಮಾಡುತ್ತಿದ್ದಿರಿ ಎಂಬುದನ್ನು ಅವನು ನಿಮಗೆ ತಿಳಿಸುವನು.

 95. ನೀವು ಅವರೆಡೆಗೆ ಮರಳಿದಾಗ, ಅವರನ್ನು ಬಿಟ್ಟು ಬಿಡಬೇಕೆಂದು ಅವರು ನಿಮ್ಮ ಬಳಿ ಅಲ್ಲಾಹನ ಹೆಸರಲ್ಲಿ ಆಣೆಗಳನ್ನು ಹಾಕಿ ಬೇಡುವರು. ನೀವು ಅವರನ್ನು ಬಿಟ್ಟು ಬಿಡಿರಿ. ಅವರು ಮಲಿನರು. ನರಕವೇ ಅವರ ನೆಲೆ. ಅದುವೇ ಅವರು ಸಂಪಾದಿಸಿದ್ದರ ಫಲ.

96. ಅವರ ಕುರಿತು ನೀವು ಸಂತುಷ್ಟರಾಗಬೇಕೆಂದು ಅವರು ನಿಮ್ಮೆದುರು ಆಣೆಗಳನ್ನು ಹಾಕುತ್ತಾರೆ. ಒಂದು ವೇಳೆ ನೀವು ಅವರ ಕುರಿತು ಸಂತುಷ್ಟರಾಗಿ ಬಿಟ್ಟರೂ ಅಲ್ಲಾಹನು ಮಾತ್ರ ಅವಿಧೇಯರ ಕುರಿತು ಖಂಡಿತ ಸಂತುಷ್ಟನಾಗುವುದಿಲ್ಲ.

97. ಅಲೆಮಾರಿ ಅರಬರು ಧಿಕ್ಕಾರ ಹಾಗೂ ಕಾಪಟ್ಯದಲ್ಲಿ ಹೆಚ್ಚು ಕಠೋರರಾಗಿರುತ್ತಾರೆ. ಅಲ್ಲಾಹನು ತನ್ನ ದೂತರಿಗೆ ಇಳಿಸಿಕೊಟ್ಟಿರುವ, ಆದೇಶಗಳ ಕುರಿತು ಅವರಿಗೆ ತಿಳಿಯದೆ ಇರುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲಾಹನಂತು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ.

 98. ಅಲೆಮಾರಿಗಳಲ್ಲಿ ಕೆಲವರು, ತಾವು (ಅಲ್ಲಾಹನ ಮಾರ್ಗದಲ್ಲಿ) ಮಾಡುವ ಖರ್ಚನ್ನು ದಂಡವೆಂದು ಪರಿಗಣಿಸುತ್ತಾರೆ ಮತ್ತು ಅವರು ನಿಮ್ಮ ಮೇಲೆ ವಿಪತ್ತುಗಳು ಬಂದೆರಗುವುದಕ್ಕಾಗಿ ಕಾಯುತ್ತಿದ್ದಾರೆ. ಕೆಟ್ಟ ವಿಪತ್ತುಗಳೆಲ್ಲಾ ಅವರ ಮೇಲೆಯೇ ಎರಗಲಿವೆ. ಅಲ್ಲಾಹನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ.

 99. ಹಾಗೆಯೇ, ಅಲೆಮಾರಿಗಳಲ್ಲಿ, ಅಲ್ಲಾಹ್ ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವರೂ ಇದ್ದಾರೆ. ಅವರು ತಾವು ಮಾಡುವ ಖರ್ಚನ್ನು ಅಲ್ಲಾಹನ ಸಾಮೀಪ್ಯವನ್ನು ಸಂಪಾದಿಸುವುದಕ್ಕೆ ಹಾಗೂ ದೇವದೂತರ ಪ್ರಾರ್ಥನೆಯನ್ನು ಪಡೆಯುವುದಕ್ಕೆ ಸಾಧನವೆಂದು ಪರಿಗಣಿಸುತ್ತಾರೆ. ತಿಳಿದಿರಲಿ! ಖಂಡಿತವಾಗಿಯೂ ಅದು ಅವರ ಪಾಲಿಗೆ ಸಾಮೀಪ್ಯದ ಸಾಧನವಾಗಿದೆ. ಅಲ್ಲಾಹನು ಅವರನ್ನು ತನ್ನ ಅನುಗ್ರಹದೊಳಗೆ ಸೇರಿಸುವನು. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ.

 100. ಮುಹಾಜಿರ್ ಮತ್ತು ಅನ್ಸಾರ್‌ಗಳ ಪೈಕಿ (ಸತ್ಯ ಸ್ವೀಕಾರದಲ್ಲಿ) ಇತರೆಲ್ಲರಿಗಿಂತ ಮೊದಲಿಗರಾದವರು ಮತ್ತು ಅತ್ಯುತ್ತಮ ರೀತಿಯಲ್ಲಿ ಅವರನ್ನು ಅನುಸರಿಸಿದವರು – ಅವರಿಂದ ಅಲ್ಲಾಹನು ಸಂತುಷ್ಟನಾದನು ಮತ್ತು ಅವರು ಅಲ್ಲಾಹನಿಂದ ಸಂತುಷ್ಟರಾದರು. ಅವನು ಅವರಿಗಾಗಿ, ತಳಭಾಗದಲ್ಲಿ ನದಿಗಳು ಹರಿಯುತ್ತಿರುವಂತಹ ಸ್ವರ್ಗ ತೋಟಗಳನ್ನು ಸಿಧ್ಧಗೊಳಿಸಿಟ್ಟಿರುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. ಇದು ನಿಜಕ್ಕೂ ಮಹಾ ವಿಜಯವಾಗಿದೆ.

101. ನಿಮ್ಮ ಸುತ್ತ ಮುತ್ತಲಿರುವ ಅಲೆಮಾರಿಗಳ ಪೈಕಿ ಕೆಲವರು ಕಪಟಿಗಳು. ಹಾಗೆಯೇ ಮದೀನಾದವರಲ್ಲೂ ಕೆಲವರು ಕಾಪಟ್ಯಕ್ಕೆ ಅಂಟಿಕೊಂಡಿರುವರು. ನೀವು ಅವರನ್ನು ಬಲ್ಲವರಲ್ಲ. ನಾವು ಅವರನ್ನು ಬಲ್ಲೆವು. ನಾವು ಅವರನ್ನು ಎರಡೆರಡು ಬಾರಿ ಶಿಕ್ಷಿಸುವೆವು ಮತ್ತು ಕೊನೆಗೆ ಅವರನ್ನು ಮಹಾ ಶಿಕ್ಷೆಯೆಡೆಗೆ ಮರಳಿಸಲಾಗುವುದು.

102. (ಅವರಲ್ಲಿ) ಮತ್ತೆ ಕೆಲವರಿದ್ದಾರೆ – ತಮ್ಮ ಪಾಪಗಳನ್ನು ಒಪ್ಪಿಕೊಳ್ಳುವವರು. ಅವರು ಸತ್ಕರ್ಮದ ಜೊತೆ ಪಾಪ ಕರ್ಮವನ್ನು ಬೆರೆಸಿಕೊಂಡಿರುವರು. ಅಲ್ಲಾಹನು ಅವರನ್ನು ಕ್ಷಮಿಸುವ ನಿರೀಕ್ಷೆ ಇದೆ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ.

103 (ದೂತರೇ,) ನೀವು ಅವರ ಸಂಪತ್ತುಗಳಿಂದ (ಕಡ್ಡಾಯ) ದಾನವನ್ನು ಸಂಗ್ರಹಿಸಿರಿ ಮತ್ತು ಆ ಮೂಲಕ ಅವರನ್ನು ನಿರ್ಮಲಗೊಳಿಸಿರಿ ಹಾಗೂ ಶುದ್ಧೀಕರಿಸಿರಿ ಮತ್ತು ಅವರ ಪರವಾಗಿ ಪ್ರಾರ್ಥಿಸಿರಿ. ನಿಮ್ಮ ಪ್ರಾರ್ಥನೆಯು ಅವರ ಪಾಲಿಗೆ ಶಾಂತಿದಾಯಕವಾಗಿರುತ್ತದೆ. ಅಲ್ಲಾಹನಂತು ಎಲ್ಲವನ್ನೂ ಕೇಳುವವನು ಹಾಗೂ ಬಲ್ಲವನಾಗಿದ್ದಾನೆ.

 104. ಅವರಿಗೆ ತಿಳಿದಿಲ್ಲವೇ, ಅಲ್ಲಾಹನೇ ತನ್ನ ದಾಸರಿಂದ ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಅವರ ದಾನಗಳಿಗೆ ಮನ್ನಣೆ ನೀಡುವವನೆಂದು? ನಿಜಕ್ಕೂ ಅಲ್ಲಾಹನೇ ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣಾಳುವಾಗಿದ್ದಾನೆ.

 105. ಹೇಳಿರಿ; ನೀವು ಕರ್ಮ ಮಾಡಿರಿ. ಅಲ್ಲಾಹ್, ಅವನ ದೂತರು ಮತ್ತು ವಿಶ್ವಾಸಿಗಳು ನಿಮ್ಮ ಕರ್ಮವನ್ನು ನೋಡುವರು. ಕೊನೆಗೆ ನಿಮ್ಮನ್ನು, ಗುಪ್ತವಾಗಿರುವ ಹಾಗೂ ಬಹಿರಂಗವಾಗಿರುವ ಎಲ್ಲವನ್ನೂ ಬಲ್ಲವನ ಬಳಿಗೆ ಮರಳಿಸಲಾಗುವುದು. ಆಗ ನೀವು ಏನೆಲ್ಲಾ ಮಾಡುತ್ತಿದ್ದಿರಿ ಎಂಬುದನ್ನು ಅವನು ನಿಮಗೆ ತಿಳಿಸುವನು.

106. ಮತ್ತೆ ಕೆಲವರಿದ್ದಾರೆ. ಅವರು, ಅಲ್ಲಾಹನು ತಮ್ಮನ್ನು ಶಿಕ್ಷಿಸುವನೋ ಅಥವಾ ತಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸುವನೋ ಎಂದು ಅವನ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಅಲ್ಲಾಹನೇ ಬಲ್ಲವನು ಮತ್ತು ಯುಕ್ತಿವಂತನು.

107. ಹಾನಿಮಾಡುವುದಕ್ಕಾಗಿ, ಧಿಕ್ಕಾರಕ್ಕಾಗಿ ಮತ್ತು ವಿಶ್ವಾಸಿಗಳ ನಡುವೆ ಬಿಕ್ಕಟ್ಟು ಬೆಳೆಸಲಿಕ್ಕಾಗಿ ಹಾಗೂ ಈ ಹಿಂದೆ ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಯುಧ್ಧ ಸಾರಿದ್ದ ವ್ಯಕ್ತಿಗೆ ಹೊಂಚಿನ ಸ್ಥಳವಾಗಿ ಮಸೀದಿಯನ್ನು ಬಳಸಿಕೊಂಡವರು – ತಾವು ಒಳಿತನ್ನು ಮಾತ್ರ ಬಯಸಿದ್ದೆವೆಂದು ಆಣೆ ಹಾಕಿ ಹೇಳುವರು. ಆದರೆ ಖಂಡಿತವಾಗಿಯೂ ಅವರು ಸುಳ್ಳುಗಾರರೆಂದು ಅಲ್ಲಾಹನು ಸಾಕ್ಷಿ ಹೇಳುತ್ತಾನೆ.

 108. ನೀವು ಅದರಲ್ಲಿ (ಆ ಮಸೀದಿಯಲ್ಲಿ) ಖಂಡಿತ ನಿಲ್ಲಬೇಡಿ. ಪ್ರಥಮ ದಿನದಿಂದಲೇ ದೇವಭಯದ ಬುನಾದಿಯಲ್ಲಿ ನಿರ್ಮಿಸಲಾಗಿರುವ ಮಸೀದಿಯು, ನೀವು ನಿಲ್ಲುವುದಕ್ಕೆ ಹೆಚ್ಚು ಅರ್ಹವಾಗಿದೆ. ಅದರಲ್ಲಿರುವವರು, ತಾವು ಸದಾ ನಿರ್ಮಲರಾಗಿರಬೇಕೆಂದು ಅಪೇಕ್ಷಿಸುತ್ತಾರೆ ಮತ್ತು ಅಲ್ಲಾಹನು ನಿರ್ಮಲರಾಗಿ ಇರುವವರನ್ನು ಪ್ರೀತಿಸುತ್ತಾನೆ.

109. ತನ್ನ ಕಟ್ಟಡವನ್ನು ಅಲ್ಲಾಹನ ಭಯ ಹಾಗೂ ಅವನ ಮೆಚ್ಚುಗೆಯ ಬುನಾದಿಯ ಮೇಲೆ ಕಟ್ಟಿದವನು ಶ್ರೇಷ್ಠನೋ, ಅಥವಾ ಅವನನ್ನೂ ಹೊತ್ತು ನರಕಕ್ಕೆ ಕುಸಿದು ಬೀಳಲಿರುವ, ಭಾರೀ ಹೊಂಡವೊಂದರ ಅಸ್ಥಿರ ಅಂಚಿನಲ್ಲಿರುವ ಬುನಾದಿಯ ಮೇಲೆ ತನ್ನ ಕಟ್ಟಡವನ್ನು ಕಟ್ಟಿದವನು ಶ್ರೇಷ್ಠನೋ? ಅಕ್ರಮಿಗಳ ಪಂಗಡಕ್ಕೆ ಅಲ್ಲಾಹನು ಸರಿದಾರಿ ತೋರಿಸುವುದಿಲ್ಲ.

 110. ಅವರು ಕಟ್ಟಿರುವ ಕಟ್ಟಡವು, ಅವರ ಮನಸ್ಸುಗಳು ಛಿದ್ರವಾಗಿ ಬಿಡುವ ತನಕವೂ ಅವರ ಮನಸ್ಸುಗಳಲ್ಲಿ ಸಂಶಯವನ್ನು ಬಿತ್ತುತ್ತಲೇ ಇರುವುದು – ಅಲ್ಲಾಹನು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ.

 111. ಖಂಡಿತವಾಗಿಯೂ ಅಲ್ಲಾಹನು ವಿಶ್ವಾಸಿಗಳಿಂದ ಅವರ ಜೀವಗಳನ್ನು ಮತ್ತು ಅವರ ಸೊತ್ತುಗಳನ್ನು ಖರೀದಿಸಿರುವನು – ಅವರಿಗೆ ಸ್ವರ್ಗವನ್ನು ನೀಡಲಿಕ್ಕಾಗಿ. ಅವರು ಅಲ್ಲಾಹನ ಮಾರ್ಗದಲ್ಲೇ ಹೋರಾಡುತ್ತಾರೆ, ವಧಿಸುತ್ತಾರೆ ಮತ್ತು ವಧಿಸಲ್ಪಡುತ್ತಾರೆ. ತೌರಾತ್, ಇಂಜೀಲ್ ಮತ್ತು ಕುರ್‌ಆನ್‌ನಲ್ಲಿ ಅವರಿಗೆ ನೀಡಲಾಗಿರುವ ವಾಗ್ದಾನವು ಸತ್ಯವಾಗಿದೆ. ಅಲ್ಲಾಹನಿಗಿಂತ ಉತ್ತಮವಾಗಿ ತನ್ನ ಕರಾರನ್ನು ಪಾಲಿಸುವವನು ಯಾರಿದ್ದಾನೆ? ಆದ್ದರಿಂದ ಅವನ ಜೊತೆ ನೀವು ಮಾಡಿಕೊಂಡಿರುವ ವ್ಯವಹಾರಕ್ಕಾಗಿ ಸಂಭ್ರಮಿಸಿರಿ. ಇದು ನಿಜಕ್ಕೂ ಮಹಾ ವಿಜಯವಾಗಿದೆ.

112. ಪದೇ ಪದೇ ಪಶ್ಚಾತ್ತಾಪ ಪಡುವವರು, ಆರಾಧಿಸುತ್ತಿರುವವರು, (ಅಲ್ಲಾಹನ) ಗುಣಗಾನ ಮಾಡುತ್ತಿರುವವರು, (ಅಲ್ಲಾಹನ ಮಾರ್ಗದಲ್ಲಿ) ಉಪವಾಸ ಆಚರಿಸುತ್ತಿರುವವರು, (ಅಲ್ಲಾಹನಿಗೆ) ಬಾಗುತ್ತಿರುವವರು, ಸಾಷ್ಟಾಂಗ ವಂದಿಸುತ್ತಿರುವವರು, ಸತ್ಕಾರ್ಯವನ್ನು ಆದೇಶಿಸುತ್ತಿರುವವರು, ಕೆಡುಕಿನಿಂದ ತಡೆಯುತ್ತಿರುವವರು ಮತ್ತು ಅಲ್ಲಾಹನು ವಿಧಿಸಿರುವ ಮಿತಿ ಮೇರೆಗಳನ್ನು ಪಾಲಿಸುತ್ತಿರುವವರು – ಇಂತಹ ವಿಶ್ವಾಸಿಗಳಿಗೆ ಶುಭವಾರ್ತೆ ನೀಡಿರಿ.

113. ಬಹುದೇವಾರಾಧಕರು ತಮ್ಮ ಆಪ್ತ ಬಂಧುಗಳೇ ಆಗಿದ್ದರೂ, ಅವರು ನರಕದವರೆಂಬುದು ತಮಗೆ ಸ್ಪಷ್ಟವಾದ ಬಳಿಕ ಅವರ ಪರವಾಗಿ ಕ್ಷಮೆಯಾಚಿಸುವುದು ದೇವದೂತರಿಗಾಗಲಿ ವಿಶ್ವಾಸಿಗಳಿಗಾಗಲಿ ಭೂಷಣವಲ್ಲ.

 114. ಇಬ್ರಾಹೀಮರು ತಮ್ಮ ತಂದೆಯ ಪರವಾಗಿ ನಡೆಸಿದ ಕ್ಷಮಾಯಾಚನೆಯು, ಅವರು ಆತನಿಗೆ ನೀಡಿದ್ದ ಒಂದು ವಾಗ್ದಾನದ ಪಾಲನೆ ಮಾತ್ರವಾಗಿತ್ತು. ಕೊನೆಗೆ, ಆತನು ಅಲ್ಲಾಹನ ಶತ್ರುವೆಂಬುದು ಅವರಿಗೆ ಸ್ಪಷ್ಟವಾದಾಗ ಅವರು ಆತನಿಂದ ದೂರ ಉಳಿದರು. ಖಂಡಿತವಾಗಿಯೂ ಇಬ್ರಾಹೀಮರು ತುಂಬಾ ಮೃದು ಸ್ವಭಾವದವರು ಹಾಗೂ ಸಂಯಮಿಯಾಗಿದ್ದರು.

 115. ಅಲ್ಲಾಹನು ಯಾವುದೇ ಜನಾಂಗಕ್ಕೆ ಸರಿದಾರಿ ತೋರಿದ ಬಳಿಕ, ಅವರು ಯಾವುದರಿಂದ ದೂರವಿರಬೇಕು ಎಂಬುದನ್ನು ಅವರಿಗೆ ಸ್ಪಷ್ಟ ಪಡಿಸುವ ತನಕ ಅವರನ್ನು ದಾರಿಗೆಡಿಸುವುದಿಲ್ಲ. ಅಲ್ಲಾಹನು ಖಂಡಿತ ಎಲ್ಲವನ್ನೂ ಬಲ್ಲವನಾಗಿದ್ದಾನೆ.

116. ಖಂಡಿತವಾಗಿಯೂ ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅಲ್ಲಾಹನಿಗೇ ಸೇರಿದೆ. ಅವನೇ ಜೀವನ ನೀಡುವವನು ಮತ್ತು ಅವನೇ ಮರಣ ನೀಡುವವನು. ನಿಮಗೆ ಅಲ್ಲಾಹನ ಹೊರತು ಬೇರೆ ಯಾರೂ ಪೋಷಕರಾಗಲಿ, ಸಹಾಯಕರಾಗಲಿ ಇಲ್ಲ.

117. ಅಲ್ಲಾಹನು, ದೇವದೂತರೆಡೆಗೆ ಹಾಗೂ ತುಂಬಾ ಕಠಿಣ ಕಾಲದಲ್ಲಿ ಅವರನ್ನು ಅನುಸರಿಸಿದ ‘ಮುಹಾಜಿರ್’ ಮತ್ತು ‘ಅನ್ಸಾರ್’ ಗಳೆಡೆಗೆ ಒಲವು ತೋರಿದನು. ಅವರಲ್ಲಿನ ಒಂದು ಗುಂಪಿನ ಮನಸ್ಸುಗಳು ದಾರಿಗೆಡುವುದರಲ್ಲಿದ್ದುವು. ಆ ಬಳಿಕ ಅವನು ಅವರೆಡೆಗೆ ಒಲವು ತೋರಿದನು.ಅವನು ಅವರ ಪಾಲಿಗೆ ತುಂಬಾ ವಾತ್ಸಲ್ಯಮಯಿ ಹಾಗೂ ಕರುಣಾಳುವಾಗಿರುವನು.

 118. ಹಾಗೆಯೇ, ಯಾರ ಪ್ರಕರಣವನ್ನು ಮುಂದೂಡಲಾಗಿತ್ತೋ ಆ ಮೂವರು. ಭೂಮಿಯು ತನ್ನೆಲ್ಲಾ ವೈಶಾಲ್ಯದ ಹೊರತಾಗಿಯೂ ಅವರ ಪಾಲಿಗೆ ತೀರಾ ಸಂಕುಚಿತವಾಗಿ ಬಿಟ್ಟಿತ್ತು ಮತ್ತು ಅವರಿಗೆ ಸ್ವತಃ ತಮ್ಮ ಜೀವಗಳ ಕುರಿತು ಜಿಗುಪ್ಸೆ ಉಂಟಾಗಿತ್ತು. ಅಲ್ಲಾಹನೆಡೆಗೆ ಒಲಿಯುವುದನ್ನು ಬಿಟ್ಟರೆ, (ತಮಗೆ) ಅವನ ಕಡೆಯಿಂದ ಬೇರಾವುದೇ ಆಶ್ರಯ ಇಲ್ಲ ಎಂಬುದನ್ನು ಅವರು ಮನಗಂಡಿದ್ದರು. ಕೊನೆಗೆ, ಅವರು ಪಶ್ಚಾತ್ತಾಪ ಪಡಲೆಂದು ಅವನು ಅವರೆಡೆಗೆ ಒಲವು ತೋರಿದನು. ಖಂಡಿತವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣಾಳುವಾಗಿದ್ದಾನೆ.

119. ವಿಶ್ವಾಸಿಗಳೇ, ಸದಾ ಅಲ್ಲಾಹನಿಗೆ ಅಂಜಿರಿ ಮತ್ತು ನೀವು ಸತ್ಯವಂತರ ಜೊತೆಗಾರರಾಗಿರಿ.

 120. ಮದೀನಾದವರು ಹಾಗೂ ಅವರ ಸುತ್ತ ಮುತ್ತಲಿನ ಗ್ರಾಮೀಣ ಜನರು ಅಲ್ಲಾಹನ ದೂತರನ್ನು ಬಿಟ್ಟು ಹಿಂದುಳಿದುದು ಮತ್ತು ತಮ್ಮ ಜೀವಗಳನ್ನು ಅವರ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದು ಸರಿಯಲ್ಲ. ಏಕೆಂದರೆ, ಅಲ್ಲಾಹನ ಮಾರ್ಗದಲ್ಲಿ ಅವರು ಸಹಿಸುವ ಪ್ರತಿಯೊಂದು ದಾಹಕ್ಕೆ, ಪ್ರತಿಯೊಂದು ಸಂಕಷ್ಟಕ್ಕೆ, ಪ್ರತಿಯೊಂದು ಹಸಿವಿಗೆ, ಧಿಕ್ಕಾರಿಗಳ ಕೋಪಕ್ಕೆ ಕಾರಣವಾಗುವ ಅವರ ಪ್ರತಿಯೊಂದು ಹೆಜ್ಜೆಗೆ ಮತ್ತು ಶತ್ರುವಿನಿಂದ ಅವರು ಕಿತ್ತುಕೊಳ್ಳುವ ಪ್ರತಿಯೊಂದು ವಸ್ತುವಿಗೆ ಪ್ರತಿಯಾಗಿ ಅವರ ಪಾಲಿಗೆ ಒಂದು ಸತ್ಕರ್ಮವು ದಾಖಲಾಗದೆ ಇರುವುದಿಲ್ಲ. ಖಂಡಿತವಾಗಿಯೂ ಶ್ರೇಷ್ಠ ಕರ್ಮಗಳನ್ನು ಮಾಡುವವರ ಪ್ರತಿಫಲವನ್ನು ಅಲ್ಲಾಹನು ಖಂಡಿತ ವ್ಯರ್ಥ ಗೊಳಿಸುವುದಿಲ್ಲ.

121. ಸಣ್ಣದಿರಲಿ, ದೊಡ್ಡದಿರಲಿ ಅವರು ಮಾಡಿದ ಪ್ರತಿಯೊಂದು ಖರ್ಚನ್ನು ಹಾಗೂ ಅವರು ಪ್ರತಿಯೊಂದು ಕಣಿವೆ ದಾಟಿದ್ದನ್ನು ಅವರ ಪರವಾಗಿ ದಾಖಲಿಸಿಡಲಾಗುತ್ತದೆ – ಅಲ್ಲಾಹನು ಅವರಿಗೆ, ಅವರು ಮಾಡಿರುವ ಎಲ್ಲ ಸತ್ಕರ್ಮಗಳ ಪ್ರತಿಫಲ ನೀಡಲಿಕ್ಕಾಗಿ.

   122. ವಿಶ್ವಾಸಿಗಳೆಲ್ಲರೂ ಒಟ್ಟಾಗಿ (ಹೋರಾಟಕ್ಕೆ) ಹೊರಟು ಬಿಡುವುದು ಸರಿಯಲ್ಲ. (ಇದರ ಬದಲು) ಅವರ ಪ್ರತಿಯೊಂದು ವಿಭಾಗದಲ್ಲಿನ ಒಂದು ಪಂಗಡವು, ಧರ್ಮ ಜ್ಞಾನಗಳಿಸಲಿಕ್ಕಾಗಿ ಹೊರಟು, ಮರಳಿ ಬಂದು ತಮ್ಮ ಜನಾಂಗದವರನ್ನು ಎಚ್ಚರಿಸಬಹುದಾಗಿತ್ತು. ಈ ರೀತಿ ಅವರು ಜಾಗೃತರಾಗಬಹುದು.

 123. ವಿಶ್ವಾಸಿಗಳೇ, ಧಿಕ್ಕಾರಿಗಳ ಪೈಕಿ ನಿಮ್ಮ ಪಕ್ಕದಲ್ಲಿರುವವರ ವಿರುದ್ಧ (ಮೊದಲು) ಹೋರಾಡಿರಿ – ಅವರು ನಿಮ್ಮಲ್ಲಿ ಕಾಠಿಣ್ಯವನ್ನು ಕಾಣಲಿ. ನಿಮಗೆ ತಿಳಿದಿರಲಿ, ಖಂಡಿತವಾಗಿಯೂ ಅಲ್ಲಾಹನು ಸತ್ಯನಿಷ್ಠರ ಜೊತೆಗಿದ್ದಾನೆ.

124. (ಕುರ್‌ಆನಿನ) ಯಾವುದೇ (ಹೊಸ) ಅಧ್ಯಾಯವನ್ನು ಇಳಿಸಲಾದಾಗ ಅವರಲ್ಲಿನ ಕೆಲವರು, ಇದು ನಿಮ್ಮ ಪೈಕಿ ಯಾರ ವಿಶ್ವಾಸವನ್ನು ಹೆಚ್ಚಿಸಿತು? ಎಂದು ಪ್ರಶ್ನಿಸುತ್ತಾರೆ. ನಿಜವಾಗಿ, ಅದು ವಿಶ್ವಾಸಿಗಳ ವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ಅವರು ಅದರಿಂದ ಸಂತುಷ್ಟರಾಗಿದ್ದಾರೆ.

125. ಇನ್ನು, ಮನಸ್ಸುಗಳಲ್ಲಿ ರೋಗವಿರುವವರ ಮಾಲಿನ್ಯಕ್ಕೆ ಅದು ಮತ್ತಷ್ಟು ಮಾಲಿನ್ಯವನ್ನು ಸೇರಿಸಿದೆ ಮತ್ತು ಅವರು ಧಿಕ್ಕಾರಿಗಳಾಗಿರುವ ಸ್ಥಿತಿಯಲ್ಲೇ ಮೃತರಾಗಿದ್ದಾರೆ.

126. ಪ್ರತಿ ವರ್ಷವೂ ಒಂದು ಅಥವಾ ಎರಡು ಬಾರಿ ಅವರನ್ನು ಪರೀಕ್ಷೆಗೆ ಗುರಿಪಡಿಸಲಾಗುತ್ತಿರುವುದನ್ನು ಅವರು ಕಾಣಲಿಲ್ಲವೇ? ಇಷ್ಟಾಗಿಯೂ ಅವರು ಪಶ್ಚಾತ್ತಾಪ ಪಡುವುದಿಲ್ಲ ಮತ್ತು ಪಾಠ ಕಲಿಯುವುದಿಲ್ಲ.

127. ಯಾವುದೇ (ಹೊಸ) ಅಧ್ಯಾಯವನ್ನು ಇಳಿಸಲಾದಾಗ ಅವರು (ಕಪಟಿಗಳು) ಪರಸ್ಪರರೆಡೆಗೆ ನೋಡುತ್ತಾರೆ ಹಾಗೂ ‘‘ಯಾರಾದರೂ ನಿಮ್ಮನ್ನು ನೋಡುತ್ತಿದ್ದಾರೆಯೇ?’’ ಎನ್ನುತ್ತಾ ಹೊರಟು ಹೋಗುತ್ತಾರೆ. ನಿಜವಾಗಿ ಅಲ್ಲಾಹನು ಅವರ ಮನಸ್ಸುಗಳನ್ನು ತಿರುಚಿ ಬಿಟ್ಟಿದ್ದಾನೆ. ಏಕೆಂದರೆ ಅವರು ವಿವೇಕವಿಲ್ಲದವರು.

128. ನಿಮ್ಮ ಬಳಿಗೆ ನಿಮ್ಮೊಳಗಿಂದಲೇ ಒಬ್ಬ ದೇವದೂತರು ಬಂದಿದ್ದಾರೆ. ನಿಮಗೆ ಎದುರಾಗುವ ಪ್ರತಿಯೊಂದು ತೊಂದರೆಯು ಅವರ ಪಾಲಿಗೆ ಕಠಿಣವಾಗಿರುತ್ತದೆ. ಅವರು ನಿಮ್ಮ ಹಿತಕ್ಕಾಗಿ ಹಂಬಲಿಸುವವರಾಗಿದ್ದಾರೆ ಮತ್ತು ವಿಶ್ವಾಸಿಗಳ ಪಾಲಿಗೆ ತುಂಬಾ ವಾತ್ಸಲ್ಯಮಯಿ ಹಾಗೂ ಕರುಣಾಮಯಿಯಾಗಿದ್ದಾರೆ.

129. (ದೂತರೇ,) ಅವರು ಕಡೆಗಣಿಸಿದರೆ ನೀವು ಹೇಳಿರಿ; ‘‘ನನಗೆ ಅಲ್ಲಾಹನೇ ಸಾಕು. ಅವನ ಹೊರತು ಬೇರೆ ದೇವರಿಲ್ಲ. ನಾನು ಅವನ ಮೇಲೆಯೇ ಸಂಪೂರ್ಣ ಭರವಸೆ ಇಟ್ಟಿದ್ದೇನೆ. ಅವನು ಮಹಾ ವಿಶ್ವ ಸಿಂಹಾಸನದ ಒಡೆಯ.