20. Ta Ha

20. ತ್ವಾಹಾ

ವಚನಗಳು -135, ಮಕ್ಕಃ.

ಅಲ್ಲಾಹನ ಹೆಸರಿಂದ – ಅವನು ಪರಮ ದಯಾಳು, ಕರುಣಾಮಯಿ

1. ತ್ವಾಹಾ.

2. (ದೂತರೇ,) ನಾವು ಈ ಕುರ್‌ಆನನ್ನು ನಿಮಗೆ ಇಳಿಸಿ ಕೊಟ್ಟಿರುವುದು ನಿಮ್ಮನ್ನು ಕಷ್ಟದಲ್ಲಿ ಸಿಲುಕಿಸಲಿಕ್ಕಲ್ಲ.

3. ಇದು ಭಕ್ತಿಯುಳ್ಳವರಿಗಾಗಿ ಇರುವ ಉಪದೇಶವಾಗಿದೆ.

4. ಭೂಮಿಯನ್ನು ಹಾಗೂ ಎತ್ತರದ ಆಕಾಶಗಳನ್ನು ಸೃಷ್ಟಿಸಿದವನೇ ಇದನ್ನು ಇಳಿಸಿಕೊಟ್ಟಿರುವನು.

5. ಅವನು ಪರಮ ದಯಾಳು – ವಿಶ್ವಸಿಂಹಾಸನದಲ್ಲಿ ನೆಲೆಸಿರುವನು.

6. ಆಕಾಶಗಳಲ್ಲಿರುವ, ಭೂಮಿಯಲ್ಲಿರುವ, ಅವುಗಳ ನಡುವೆ ಇರುವ ಮತ್ತು ಭೂಮಿಯ ತಳದಲ್ಲಿರುವ ಎಲ್ಲವೂ ಅವನಿಗೇ ಸೇರಿದೆ.

7. ನೀವು ಅದೆಷ್ಟು ಧ್ವನಿ ಏರಿಸಿದರೂ, ಅವನಂತು ಅತ್ಯಂತ ಗುಟ್ಟಿನ ಹಾಗೂ ಗುಪ್ತವಾಗಿಡಲಾದ ವಿಷಯಗಳನ್ನೂ ಖಂಡಿತ ಬಲ್ಲವನಾಗಿದ್ದಾನೆ.

8. ಅಲ್ಲಾಹ್- ಅವನ ಹೊರತು ಬೇರೆ ದೇವರಿಲ್ಲ. ಅವನಿಗೆ ಅತ್ಯುತ್ತಮ ಹೆಸರುಗಳಿವೆ.

9. ಇನ್ನು ನಿಮಗೆ ಮೂಸಾರ ಸುದ್ದಿ ತಲುಪಿದೆಯೇ?

10. ಅವರು (ದೂರದಲ್ಲಿ) ಬೆಂಕಿಯನ್ನು ಕಂಡಾಗ, ತಮ್ಮ ಮನೆಯವರೊಡನೆ ಹೇಳಿದರು; ನೀವು ಇಲ್ಲೇ ಇರಿ. ನಾನು ಬೆಂಕಿಯನ್ನು ಕಂಡಿದ್ದೇನೆ. ಅಲ್ಲಿಂದ ನಿಮಗಾಗಿ ಕೆಂಡವನ್ನು ತರಲು ನನಗೆ ಸಾಧ್ಯವಾದೀತು ಅಥವಾ ಬೆಂಕಿಯ ಬಳಿ ನನಗೆ (ಮುಂದಿನ ದಾರಿಯ ಕುರಿತು) ಮಾರ್ಗದರ್ಶನ ಸಿಕ್ಕೀತು.

11. ಅವರು ಅದರ ಬಳಿಗೆ ತಲುಪಿದಾಗ ನಾವು ಕರೆದೆವು; ಓ ಮೂಸಾ!

12. ನಾನೇ ನಿಮ್ಮ ಒಡೆಯ. ನೀವು ನಿಮ್ಮ ಬೂಟುಗಳನ್ನು ಕಳಚಿರಿ. ನೀವು ಪವಿತ್ರವಾದ ‘ತುವಾ’ ಕಣಿವೆಯಲ್ಲಿದ್ದೀರಿ.

13. ನಾನು ನಿಮ್ಮನ್ನು ಆರಿಸಿಕೊಂಡಿರುವೆನು. ಇದೀಗ ನಿಮಗೆ ನೀಡಲಾಗುವ ದಿವ್ಯವಾಣಿಯನ್ನು ಕೇಳಿರಿ.

14. ಖಂಡಿತವಾಗಿಯೂ ನಾನೇ ಅಲ್ಲಾಹ್. ನನ್ನ ಹೊರತು ಬೇರೆ ದೇವರಿಲ್ಲ. ನನ್ನನ್ನೇ ಪೂಜಿಸಿರಿ ಮತ್ತು ನನ್ನ ನೆನಪನ್ನು ಉಳಿಸಿಕೊಳ್ಳಲು ನಮಾಝ್ ಅನ್ನು ಪಾಲಿಸಿರಿ.

15. ಆ ಅಂತಿಮ ಕ್ಷಣವು ಖಂಡಿತ ಬರಲಿದೆ. ಪ್ರತಿಯೊಬ್ಬನಿಗೂ ಅವನ ಶ್ರಮದ ಫಲ ನೀಡಲಿಕ್ಕಾಗಿ, ನಾನು ಅದನ್ನು (ಅದರ ಖಚಿತ ಸಮಯವನ್ನು) ಗುಟ್ಟಾಗಿಡ ಬಯಸುತ್ತೇನೆ.

16. ಅದರಲ್ಲಿ ನಂಬಿಕೆ ಇಲ್ಲದವನು ಮತ್ತು ತನ್ನ ಇಚ್ಛೆಯನ್ನು ಅನುಸರಿಸುವವನು ನಿಮ್ಮನ್ನು ಅದರಿಂದ ತಡೆಯದಿರಲಿ. ಅನ್ಯಥಾ ನೀವು ನಾಶವಾಗುವಿರಿ.

17. ಓ ಮೂಸಾ, ಆ ನಿಮ್ಮ ಬಲಗೈಯಲ್ಲಿ ಏನಿದೆ?

18. ಅವರು ಹೇಳಿದರು; ಇದು ನನ್ನ ಊರುಗೋಲು. ನಾನು ಇದನ್ನು ಆಧರಿಸಿ ನಿಲ್ಲುತ್ತೇನೆ ಮತ್ತು ನಾನು ಇದರಿಂದ ನನ್ನ ಆಡುಗಳಿಗಾಗಿ ಎಲೆಗಳನ್ನು ಉದುರಿಸುತ್ತೇನೆ. ನನಗೆ ಇದರಿಂದ ಇತರ ಹಲವು ಪ್ರಯೋಜನಗಳೂ ಇವೆ.

19. ಅವನು (ಅಲ್ಲಾಹನು) ಹೇಳಿದನು; ಓ ಮೂಸಾ, ನೀವು ಅದನ್ನು ಕೆಳಗಿಡಿರಿ.

20. ಅವರು ಅದನ್ನು ಕೆಳಗಿಟ್ಟರು. ಕೂಡಲೇ ಅದು ಓಡಾಡುವ ಸರ್ಪವಾಗಿ ಬಿಟ್ಟಿತ್ತು.

21. ಅವನು ಹೇಳಿದನು; ನೀವು ಅದನ್ನು ಹಿಡಿಯಿರಿ ಮತ್ತು ನೀವು ಅಂಜಬೇಡಿ. ನಾವು ಬಹು ಬೇಗನೇ ಅದನ್ನು ಮೊದಲಿನ ಸ್ಥಿತಿಗೆ ಮರಳಿಸುವೆವು.

22. ನೀವೀಗ ನಿಮ್ಮ ಕೈಯನ್ನು ನಿಮ್ಮ ತೋಳಿನಡಿಯಲ್ಲಿಡಿರಿ. ಅದು ಯಾವ ಕಷ್ಟವೂ ಇಲ್ಲದೆ ಉಜ್ವಲ ರೂಪದಲ್ಲಿ ಹೊರ ಬರುವುದು. ಇದು ಇನ್ನೊಂದು ಪುರಾವೆ.

23. ಇದೇಕೆಂದರೆ, ಮುಂದೆ ನಾವು ನಿಮಗೆ ನಮ್ಮ ದೊಡ್ಡ ಪುರಾವೆಗಳನ್ನು ತೋರಿಸಲಿರುವೆವು.

24. ನೀವು ಫಿರ್‌ಔನ್‌ನ ಬಳಿಗೆ ಹೋಗಿರಿ. ಅವನು ಭಾರೀ ವಿದ್ರೋಹಿಯಾಗಿ ಬಿಟ್ಟಿದ್ದಾನೆ.

25. ಅವರು (ಮೂಸಾ) ಪ್ರಾರ್ಥಿಸಿದರು; ನನ್ನೊಡೆಯಾ ನನಗಾಗಿ ನನ್ನ ಮನಸ್ಸನ್ನು ವಿಶಾಲ ಗೊಳಿಸಿಬಿಡು.

26. ನನ್ನ ಕೆಲಸವನ್ನು ನನ್ನ ಪಾಲಿಗೆ ಸುಲಭಗೊಳಿಸು.

27. ನನ್ನ ನಾಲಿಗೆಯಲ್ಲಿನ ಗಂಟನ್ನು ಬಿಚ್ಚು.

28. ಅವರೆಲ್ಲಾ ನನ್ನ ಮಾತನ್ನು ಅರ್ಥಯಿಸುವಂತಾಗಲಿ.

29. ನನ್ನ ಒಬ್ಬ ಬಂಧುವನ್ನೇ ನನ್ನ ಸಹಾಯಕನಾಗಿಸು.

30. (ಅದಕ್ಕಾಗಿ) ನನ್ನ ಸಹೋದರ ಹಾರೂನರಿದ್ದಾರೆ.

31. ಅವರ ಮೂಲಕ ನನ್ನ ಬಲವನ್ನು ಹೆಚ್ಚಿಸು.

32. ನನ್ನ ಕೆಲಸಗಳಲ್ಲಿ ಅವರನ್ನು ನನ್ನ ಪಾಲುದಾರನಾಗಿಸು.

33. ನಾವು ಪದೇ ಪದೇ ನಿನ್ನ ಗುಣಗಾನ ಮಾಡುವಂತಾಗಲಿ.

34. ಮತ್ತು ಪದೇ ಪದೇ ನಿನ್ನನ್ನು ನೆನಪಿಸುವಂತಾಗಲಿ.

35. ನೀನು ಸದಾ ನಮ್ಮನ್ನು ನೋಡುತ್ತಿರುವೆ.

36. ಅವನು (ಅಲ್ಲಾಹನು) ಹೇಳಿದನು; ಓ ಮೂಸಾ, ನೀವು ಕೇಳಿದ್ದನ್ನೆಲ್ಲಾ ಇದೋ ನಿಮಗೆ ನೀಡಲಾಯಿತು.

 37. ನಿಜವಾಗಿ ನಾವು ಇದೀಗ ಇನ್ನೊಂದು ಬಾರಿ ನಿಮಗೆ ಉಪಕರಿಸುತ್ತಿದ್ದೇವೆ.

38. (ಹಿಂದೆ) ನಾವು ನಿಮ್ಮ ತಾಯಿಗೆ ಹೀಗೆಂದು ದಿವ್ಯವಾಣಿಯನ್ನು ಕಳಿಸಿದ್ದೆವು;

39. ನೀನು ಅದನ್ನು (ಮಗುವನ್ನು) ಪೆಟ್ಟಿಗೆಯಲ್ಲಿಡು ಮತ್ತು ಪೆಟ್ಟಿಗೆಯನ್ನು ನದಿಯಲ್ಲಿ ಹಾಕಿ ಬಿಡು. ನದಿಯು ಅದನ್ನು ದಡಕ್ಕೆ ತಲುಪಿಸುವುದು. ಆ ಬಳಿಕ ನನ್ನ ಶತ್ರು ಹಾಗೂ ಅದರ (ಆ ಮಗುವಿನ) ಶತ್ರು ಅದನ್ನು ಎತ್ತಿಕೊಳ್ಳುವನು. ಮತ್ತು (ಕಂಡವರೆಲ್ಲಾ ಪ್ರೀತಿಸುವಂತೆ) ನಾವು ನಮ್ಮ ಕಡೆಯಿಂದ ನಿಮ್ಮ ಮೇಲೆ ವಾತ್ಸಲ್ಯವನ್ನು ಆವರಿಸಿ ಬಿಟ್ಟಿದ್ದೆವು. ಮತ್ತು ನನ್ನ ಕಣ್ಣ ಮುಂದೆಯೇ ನಿಮ್ಮ ಪೋಷಣೆ ನಡೆಯುವಂತಾಯಿತು.

 40. ನಿಮ್ಮ ಸಹೋದರಿಯು ನಡೆದು ಹೋಗುತ್ತಿದ್ದಳು ಮತ್ತು ಆಕೆ (ಫಿರ್‌ಔನ್‌ನೊಡನೆ) ‘‘ಈತನನ್ನು ಪೋಷಿಸಬಲ್ಲವರನ್ನು ನಾನು ನಿಮಗೆ ತೋರಿಸಲೇ?’’ ಎಂದು ಕೇಳಿದಳು. ಹೀಗೆ ನಾವು ಮತ್ತೆ ನಿಮ್ಮನ್ನು ನಿಮ್ಮ ತಾಯಿಯೆಡೆಗೆ ಮರಳಿಸಿದೆವು – ಆಕೆಯ ಕಣ್ಣು ತಂಪಾಗಲೆಂದು ಹಾಗೂ ಆಕೆ ದುಃಖಿಸದಿರಲೆಂದು. ಮುಂದೆ ನೀವು ಒಬ್ಬನ ಹತ್ಯೆ ನಡೆಸಿದಿರಿ. ಆಗ ನಾವು ನಿಮ್ಮನ್ನು ಸಂಕಟದಿಂದ ಪಾರುಗೊಳಿಸಿದೆವು ಮತ್ತು ನಿಮ್ಮನ್ನು ನಾವು ಹಲವು ಪರೀಕ್ಷೆಗಳಿಗೆ ಒಳಪಡಿಸಿದೆವು. ಆ ಬಳಿಕ ನೀವು ಹಲವು ವರ್ಷ ಮದ್‌ಯನ್‌ನವರ ಜೊತೆ ಇದ್ದಿರಿ. ಇದೀಗ ಓ ಮೂಸಾ, ನೀವು ನಿಶ್ಚಿತ ಸಮಯದಲ್ಲೇ ಬಂದಿರುವಿರಿ.

41. ನಾನು ನಿಮ್ಮನ್ನು ನನಗಾಗಿಯೇ ಆರಿಸಿಕೊಂಡಿರುವೆನು.

 42. ನೀವು ಮತ್ತು ನಿಮ್ಮ ಸಹೋದರ (ಹಾರೂನ್) ನನ್ನ ಪುರಾವೆಗಳೊಂದಿಗೆ ಹೋಗಿರಿ ಮತ್ತು ನನ್ನನ್ನು ಸ್ಮರಿಸುವ ವಿಷಯದಲ್ಲಿ ಆಲಸ್ಯ ತೋರಬೇಡಿ.

43. ನೀವಿಬ್ಬರೂ ಫಿರ್‌ಔನನ ಬಳಿಗೆ ಹೋಗಿರಿ. ಅವನು ಖಂಡಿತ ಬಂಡಾಯವೆದ್ದಿರುವನು.

 44. ನೀವಿಬ್ಬರೂ ಅವನೊಡನೆ ಸೌಮ್ಯವಾದ ಮಾತನ್ನೇ ಆಡಿರಿ. ಅವನು ಉಪದೇಶ ಸ್ವೀಕರಿಸಬಹುದು ಅಥವಾ ದೇವ ಭಯ ಉಳ್ಳವನಾಗಲೂ ಬಹುದು (ಎಂದು ನಿರೀಕ್ಷಿಸುತ್ತಾ).

45. ಅವರಿಬ್ಬರೂ ಹೇಳಿದರು; ನಮ್ಮೊಡೆಯಾ, ಅವನು ನಮ್ಮ ಮೇಲೆ ದೌರ್ಜನ್ಯವೆಸಗುವ ಅಥವಾ ಮತ್ತಷ್ಟು ವಿದ್ರೋಹಿಯಾಗುವ ಭಯ ನಮಗಿದೆ.

46. ಅವನು (ಅಲ್ಲಾಹನು) ಹೇಳಿದನು; ನೀವಿಬ್ಬರೂ ಅಂಜಬೇಡಿ. ನಾನು ಖಂಡಿತ ನಿಮ್ಮ ಜೊತೆಗಿದ್ದೇನೆ. ಎಲ್ಲವನ್ನೂ ಕೇಳುತ್ತಿರುತ್ತೇನೆ ಮತ್ತು ನೋಡುತ್ತಿರುತ್ತೇನೆ.

  47. ನೀವೀಗ ಅವನ ಬಳಿಗೆ ಹೋಗಿರಿ ಮತ್ತು ಹೇಳಿರಿ; ನಾವು ಖಂಡಿತ ನಿನ್ನ ಒಡೆಯನ ದೂತರು. ನೀನು ಇಸ್ರಾಈಲರ ಸಂತತಿಯನ್ನು ನಮ್ಮ ಜೊತೆ ಕಳಿಸಿಕೊಡು. ನೀನು ಅವರನ್ನು ಹಿಂಸಿಸಬೇಡ. ನಾವು ನಿನ್ನ ಒಡೆಯನ ಕಡೆಯಿಂದ, ಪುರಾವೆಯೊಂದಿಗೆ ನಿನ್ನ ಬಳಿಗೆ ಬಂದಿರುವೆವು. ಸನ್ಮಾರ್ಗವನ್ನು ಅನುಸರಿಸುವವರಿಗೆ ಶಾಂತಿ ಸಿಗಲಿ.

 48. ನಮಗೆ ದಿವ್ಯಸಂದೇಶವನ್ನು ನೀಡಲಾಗಿದೆ – (ಇದನ್ನು) ಸುಳ್ಳೆಂದವನು ಹಾಗೂ ಕಡೆಗಣಿಸಿದವನು ಶಿಕ್ಷೆಗೆ ಪಾತ್ರನಾಗುವನು.

49. ಅವನು (ಫಿರ್‌ಔನ್) ಕೇಳಿದನು; ಓ ಮೂಸಾ, ನಿಮ್ಮಿಬ್ಬರ ದೇವರು ಯಾರು?

50. ಅವರು (ಮೂಸಾ) ಹೇಳಿದರು; ಪ್ರತಿಯೊಂದು ವಸ್ತುವಿಗೆ ರೂಪ ಕೊಟ್ಟವನು ಮತ್ತು ಮಾರ್ಗದರ್ಶನ ನೀಡಿದವನೇ ನನ್ನ ದೇವರು.

51. ಅವನು ಹೇಳಿದನು; ಹಾಗಾದರೆ ಹಿಂದಿನ ಕಾಲಗಳ ಜನರ ಸ್ಥಿತಿಯೇನು?

52. ಅವರು ಹೇಳಿದರು; ಅವರ ಕುರಿತಾದ ಮಾಹಿತಿಯು ನನ್ನ ದೇವರ ಬಳಿ ಒಂದು ಗ್ರಂಥದಲ್ಲಿದೆ. ನನ್ನ ದೇವರು ಎಂದೂ ತಪ್ಪುವುದಿಲ್ಲ ಮತ್ತು ಎಂದೂ ಮರೆಯುವುದಿಲ್ಲ.

53. ಅವನೇ ನಿಮ್ಮ ಪಾಲಿಗೆ ಭೂಮಿಯನ್ನು ತೊಟ್ಟಿಲಾಗಿಸಿದವನು ಮತ್ತು ಅದರಲ್ಲಿ ನಿಮಗಾಗಿ ದಾರಿಗಳನ್ನು ತೆರೆದವನು ಮತ್ತು ಆಕಾಶದಿಂದ ನೀರನ್ನು ಸುರಿಸಿದವನು. ನಾವು ಅದರಿಂದ ವಿವಿಧ ಜಾತಿಯ ಸಸ್ಯಗಳ ಜೊತೆಗಳನ್ನು ಬೆಳೆಸಿದೆವು.

 54. ನೀವೂ ತಿನ್ನಿರಿ ಮತ್ತು ನಿಮ್ಮ ಜಾನುವಾರುಗಳನ್ನೂ ಮೇಯಿಸಿರಿ. ಖಂಡಿತವಾಗಿಯೂ ಬುದ್ಧಿ ಉಳ್ಳವರಿಗೆ ಇದರಲ್ಲಿ ಪುರಾವೆಗಳಿವೆ.

 55. ನಾವು ಅದರಿಂದಲೇ (ಮಣ್ಣಿನಿಂದಲೇ) ನಿಮ್ಮನ್ನು ಸೃಷ್ಟಿಸಿರುವೆವು. ಅದರೊಳಕ್ಕೇ ನಾವು ನಿಮ್ಮನ್ನು ಮರಳಿಸುವೆವು ಮತ್ತು ಇನ್ನೊಮ್ಮೆ ಅದರೊಳಗಿಂದಲೇ ನಿಮ್ಮನ್ನು ನಾವು ಹೊರತರುವೆವು.

56. ನಾವು ಆತನಿಗೆ (ಫಿರ್‌ಔನನಿಗೆ) ನಮ್ಮ ಎಲ್ಲ ಪುರಾವೆಗಳನ್ನು ತೋರಿಸಿದೆವು. ಆದರೆ ಅವನು ಅವೆಲ್ಲವನ್ನೂ ಸುಳ್ಳೆಂದು ತಿರಸ್ಕರಿಸಿದನು ಮತ್ತು ನಿರಾಕರಿಸಿದನು.

57. ಅವನು ಹೇಳಿದನು; ಓ ಮೂಸಾ, ನೀನೇನು, ನಿನ್ನ ಜಾದೂಗಾರಿಕೆಯ ಮೂಲಕ ನಮ್ಮನ್ನು ನಮ್ಮ ನಾಡಿನಿಂದ ಹೊರಹಾಕಲಿಕ್ಕಾಗಿ ನಮ್ಮ ಬಳಿಗೆ ಬಂದಿರುವೆಯಾ?

 58. ಹಾಗಾದರೆ ನಿನ್ನೆದುರಿಗೆ ನಾವು ಇಂತಹದೇ ಜಾದೂಗಾರಿಕೆಯನ್ನು ತರುವೆವು. ಅದಕ್ಕಾಗಿ ನಮ್ಮ ಹಾಗೂ ನಿನ್ನ ನಡುವೆ ಒಂದು ದಿನವನ್ನು ನಿಗದಿ ಪಡಿಸು. ನಾವಾಗಲಿ ನೀನಾಗಲಿ ಅದನ್ನು ಉಲ್ಲಂಘಿಸಬಾರದು. ಇದು ಒಂದು ತೆರೆದ ಬಯಲಲ್ಲಿ ನಡೆಯಲಿ.

59. ಅವರು (ಮೂಸಾ) ಹೇಳಿದರು; ಉತ್ಸವದ ದಿನವೇ ನಿಮ್ಮ ನಿಶ್ಚಿತ ದಿನವಾಗಲಿ. ಅಂದು ಮುಂಜಾನೆ ಜನರನ್ನು ಸೇರಿಸುವ ಕೆಲಸ ನಡೆಯಲಿ.

60. ಹಾಗೆ ಹೊರಟು ಹೋದ ಫಿರ್‌ಔನನು ತನ್ನೆಲ್ಲಾ ದಾಳಗಳನ್ನು ಸಂಗ್ರಹಿಸಿ ಮತ್ತೆ ಬಂದನು.

61. ಅವನೊಡನೆ (ಫಿರ್‌ಔನ್ ಮತ್ತವನ ಜಾದೂಗಾರರೊಡನೆ) ಮೂಸಾ ಹೇಳಿದರು; ನಿಮಗೆ ನಾಶವಿದೆ, ನೀವು ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸಬೇಡಿ. ಅವನು ನಿಮ್ಮನ್ನು ಶಿಕ್ಷಿಸಿ ನಾಶಗೊಳಿಸುವನು. ಸುಳ್ಳನ್ನು ಸೃಷ್ಟಿಸಿದವನು ಸೋಲುಣ್ಣುವನು.

62. ಅವರು (ಜಾದೂಗಾರರು) ತಾವೇನು ಮಾಡಬೇಕೆಂಬ ಕುರಿತು ಪರಸ್ಪರ ಜಗಳಾಡಿದರು ಮತ್ತು ಗುಟ್ಟಾಗಿ ಸಮಾಲೋಚಿಸಿದರು.

63. ಅವರು (ಜನರೊಡನೆ) ಹೇಳಿದರು; ಇವರಿಬ್ಬರು ಜಾದೂಗಾರರು ತಮ್ಮ ಜಾದುವಿನ ಮೂಲಕ ನಿಮ್ಮನ್ನು ನಿಮ್ಮ ನಾಡಿನಿಂದ ಹೊರ ಹಾಕಬಯಸುತ್ತಾರೆ ಮತ್ತು ನಿಮ್ಮ ಶ್ರೇಷ್ಠ ಪಂಥವನ್ನು ನಾಶ ಪಡಿಸಬಯಸುತ್ತಾರೆ.

64. ನೀವೀಗ ನಿಮ್ಮೆಲ್ಲ ಉಪಾಯಗಳನ್ನು ಒಟ್ಟು ಸೇರಿಸಿ ಸಾಲಾಗಿ ಬನ್ನಿರಿ. ಇಂದು ಮೇಲುಗೈ ಸಾಧಿಸುವವನೇ ವಿಜಯಿಯಾಗುವನು.

 65. ಅವರು (ಜಾದೂಗಾರರು) ಹೇಳಿದರು; ಓ ಮೂಸಾ, ನೀವು (ದಂಡವನ್ನು) ಎಸೆಯುವಿರಾ? ಅಥವಾ ಮೊದಲು ನಾವು ಎಸೆಯಬೇಕೇ?

 66. ಅವರು (ಮೂಸಾ), ‘‘ಮೊದಲು ನೀವೇ ಎಸೆಯಿರಿ’’ ಎಂದರು. ಅಷ್ಟರಲ್ಲೇ ಅವರಿಗೆ (ಮೂಸಾರಿಗೆ), ಅವರ (ಜಾದೂಗಾರರ) ಜಾದುವಿನಿಂದಾಗಿ ಅವರ ಹಗ್ಗಗಳು ಹಾಗೂ ದಂಡಗಳೆಲ್ಲಾ ಚಲಿಸುತ್ತಿರುವಂತೆ ತೋರಿದವು.

67. ಮೂಸಾ ತಮ್ಮ ಮನದೊಳಗೇ ಅಂಜಿದರು.

68. ನಾವು ಹೇಳಿದೆವು; ನೀವು ಅಂಜಬೇಡಿ. ಖಂಡಿತ ನೀವೇ ವಿಜಯಿಯಾಗುವಿರಿ.

69. ನೀವೀಗ ನಿಮ್ಮ ಬಲಗೈಯಲ್ಲಿರುವುದನ್ನು ಎಸೆದು ಬಿಡಿರಿ. ಅವರು ರಚಿಸಿ ತಂದಿರುವ ಎಲ್ಲವನ್ನೂ ಅದು ನುಂಗಿ ಬಿಡುವುದು. ಅವರು ರಚಿಸಿ ತಂದಿರುವುದೆಲ್ಲವೂ ಖಂಡಿತವಾಗಿಯೂ ಕೇವಲ ಜಾದೂಗಾರಿಕೆಯ ಮೋಸವಾಗಿದೆ. ಜಾದೂಗಾರನು ಎಲ್ಲಿಗೆ ಹೋದರೂ ವಿಜಯಿಯಾಗಲಾರನು.

70. ಕೊನೆಗೆ ಜಾದೂಗಾರರು ಸಾಷ್ಟಾಂಗವೆರಗಿಬಿಟ್ಟರು. ಅವರು ಹೇಳಿದರು; ನಾವು ಹಾರೂನ್ ಮತ್ತು ಮೂಸಾರ ದೇವರನ್ನು ನಂಬಿದೆವು.

71. ಅವನು (ಫಿರ್‌ಔನ್) ಹೇಳಿದನು; ನಾನು ನಿಮಗೆ ಅನುಮತಿ ನೀಡುವ ಮುನ್ನವೇ ನೀವು ನಂಬಿ ಬಿಟ್ಟಿರಲ್ಲಾ! ಖಂಡಿತವಾಗಿಯೂ ಅವನೇ (ಮೂಸಾ) ನಿಮಗೆ ಜಾದೂಗಾರಿಕೆ ಕಲಿಸಿದ ನಿಮ್ಮ ಹಿರಿಯನು. ನಾನೀಗ ನಿಮ್ಮ ಕೈಗಳನ್ನು ಮತ್ತು ನಿಮ್ಮ ಕಾಲುಗಳನ್ನು ವಿರುದ್ಧ ದಿಕ್ಕುಗಳಿಂದ ಕಡಿದು ಹಾಕುತ್ತೇನೆ ಮತ್ತು ಖರ್ಜೂರದ ಕಂಬಗಳ ಮೇಲೆ ನಿಮ್ಮನ್ನು ಶಿಲುಬೆಗೇರಿಸುತ್ತೇನೆ. ನಮ್ಮ ಪೈಕಿ, ಹೆಚ್ಚು ತೀವ್ರವಾಗಿರುವ ಮತ್ತು ಬಹುಕಾಲ ಉಳಿಯುವ ಶಿಕ್ಷೆಯನ್ನು ನೀಡಬಲ್ಲವರು ಯಾರು ಎಂಬುದು ಆಗ ನಿಮಗೆ ತಿಳಿಯುವುದು.

72. ಅವರು (ಜಾದೂಗಾರರು) ಹೇಳಿದರು; ನಮ್ಮ ಮುಂದೆ ಬಂದಿರುವ ಸ್ಪಷ್ಟ ಪುರಾವೆಗಳೆದುರು ಹಾಗೂ ನಮ್ಮನ್ನು ಸೃಷ್ಟಿಸಿದವನೆದುರು ನಾವು ಖಂಡಿತ ನಿನಗೆ ಪ್ರಾಶಸ್ತ್ಯ ನೀಡಲಾರೆವು. ನೀನೇನು ತೀರ್ಮಾನಿಸುವೆಯೋ ಅದನ್ನು ತೀರ್ಮಾನಿಸಿಬಿಡು. ನಿನಗೆ ಹೆಚ್ಚೆಂದರೆ ಈ ಲೋಕದ ಬದುಕಿನ ಕುರಿತು ಮಾತ್ರ ತೀರ್ಮಾನಿಸಲು ಸಾಧ್ಯ.

73. ನಾವಂತು ನಮ್ಮ ಒಡೆಯನಲ್ಲಿ ನಂಬಿಕೆ ಇಟ್ಟಿರುವೆವು – ನಮ್ಮ ತಪ್ಪುಗಳನ್ನು ಮತ್ತು ಜಾದುವಿನ ಹೆಸರಲ್ಲಿ ನೀನು ಬಲವಂತವಾಗಿ ನಮ್ಮಿಂದ ಮಾಡಿಸಿದ ಎಲ್ಲ ಕೃತ್ಯಗಳನ್ನು ಅವನು ಕ್ಷಮಿಸಬೇಕೆಂದು (ನಾವು ಈ ನಿರ್ಧಾರ ಮಾಡಿರುವೆವು). ಅಲ್ಲಾಹನು ಸರ್ವಶ್ರೇಷ್ಠನಾಗಿದ್ದಾನೆ ಮತ್ತು ಸದಾಕಾಲ ಇರುವವನಾಗಿದ್ದಾನೆ.

74. ತನ್ನ ಒಡೆಯನ ಬಳಿ ಅಪರಾಧಿಯಾಗಿ ಹಾಜರಾದವನಿಗೆ ಖಂಡಿತ ನರಕವೇ ಗತಿ. ಅಲ್ಲಿ ಅವನು ಸಾಯಲಾರನು ಮತ್ತು ಬದುಕಿಯೂ ಇರಲಾರನು.

75. ಇನ್ನು, ವಿಶ್ವಾಸಿಯಾಗಿ ಅವನ ಮುಂದೆ ಹಾಜರಾದವನು – ಅವನು ಸತ್ಕರ್ಮಗಳನ್ನೂ ಮಾಡಿದ್ದರೆ, ಅವರಿಗೆ ಉನ್ನತವಾದ ಸ್ಥಾನಗಳಿವೆ.

76. ಶಾಶ್ವತವಾದ ತೋಟಗಳಿವೆ. ಅವುಗಳ ತಳಭಾಗದಲ್ಲಿ ನದಿಗಳು ಹರಿಯುತ್ತಿರುವವು. ಅವರು ಅವುಗಳಲ್ಲಿ ಸದಾಕಾಲ ಇರುವರು. ಇದು ತನ್ನನ್ನು ಸಂಸ್ಕರಿಸಿಕೊಂಡವನಿಗೆ ಇರುವ ಪ್ರತಿಫಲ.

77. ಮುಂದೆ, ನಾವು ಮೂಸಾರಿಗೆ ದಿವ್ಯವಾಣಿಯನ್ನು ಕಳಿಸಿದೆವು; ನೀವು ರಾತ್ರಿ ಹೊತ್ತು ನನ್ನ ದಾಸರೊಂದಿಗೆ ಹೊರಡಿರಿ ಮತ್ತು ಅವರಿಗಾಗಿ ಸಮುದ್ರದಲ್ಲಿ ಒಣದಾರಿಗಳನ್ನು ನಿರ್ಮಿಸಿರಿ. ನಿಮಗೆ, ಬಂಧಿತನಾಗುವ ಭಯವೂ ಇರದು (ಮುಳುಗಿ ಬಿಡುವ) ಆಶಂಕೆಯೂ ಇರದು.

78. ಫಿರ್‌ಔನನು ತನ್ನ ಪಡೆಗಳೊಂದಿಗೆ ಅವರನ್ನು ಹಿಂಬಾಲಿಸಿ ಬಂದನು. ಕೊನೆಗೆ ಸಮುದ್ರವು ಅವರನ್ನು ಸಂಪೂರ್ಣವಾಗಿ ಮುತ್ತಿಕೊಂಡಿತು.

79. ಫಿರ್‌ಔನನು ತನ್ನ ಜನಾಂಗವನ್ನು ದಾರಿಗೆಡಿಸಿದ್ದನು – ಅವನು ಅವರನ್ನು ಸರಿದಾರಿಯಲ್ಲಿ ನಡೆಸಲಿಲ್ಲ.

80. ಇಸ್ರಾಈಲರ ಸಂತತಿಗಳೇ, ನಾವು ನಿಮ್ಮನ್ನು ನಿಮ್ಮ ಶತ್ರುವಿನಿಂದ ರಕ್ಷಿಸಿದೆವು ಹಾಗೂ ತೂರ್ ಪರ್ವತದ ಬಲ ಭಾಗದಲ್ಲಿ ನಾವು ನಿಮಗೆ ಮಾತು ಕೊಟ್ಟೆವು ಮತ್ತು ನಿಮಗಾಗಿ ಮನ್ನ್ ಹಾಗೂ ಸಲ್ವಾ (ಎಂಬ ವಿಶೇಷ ಆಹಾರ)ಗಳನ್ನು ಇಳಿಸಿಕೊಟ್ಟೆವು.

 81. ನಾವು ನಿಮಗೆ ಕೊಟ್ಟಿರುವುದರಲ್ಲಿ ನಿರ್ಮಲವಾಗಿರುವುದನ್ನು ತಿನ್ನಿರಿ ಮತ್ತು ಈ ವಿಷಯದಲ್ಲಿ ವಿದ್ರೋಹವೆಸಗಬೇಡಿ. ಅನ್ಯಥಾ ನನ್ನ ಕೋಪವು ನಿಮ್ಮ ಮೇಲೆರಗುವುದು. ನನ್ನ ಕೋಪವು ಯಾರ ಮೇಲೆರಗಿತೋ ಅವನು ನಾಶವಾದನು.

 

82. ಪಶ್ಚಾತ್ತಾಪ ಪಡುವವರು, ವಿಶ್ವಾಸಿಗಳಾಗಿರುವವರು, ಸತ್ಕರ್ಮ ಮಾಡುವವರು ಮತ್ತು ಸರಿದಾರಿಯಲ್ಲಿರುವವರ ಪಾಲಿಗೆ ನಾನು ಖಂಡಿತ ತುಂಬಾ ಕ್ಷಮಾಶೀಲನಾಗಿದ್ದೇನೆ.

83. (ಮುಂದೆ ಅಲ್ಲಾಹನು ಕೇಳಿದನು;) ಓ ಮೂಸಾ, ನೀವು ನಿಮ್ಮ ಜನಾಂಗದವರಿಗಿಂತ ಮೊದಲು ಬರಲು ಕಾರಣವೇನು?

84. ಅವರು ಹೇಳಿದರು; ಅವರು ನನ್ನ ಹಿಂದೆಯೇ ಬರುತ್ತಿದ್ದಾರೆ. ನನ್ನೊಡೆಯಾ, ನಾನು ನಿನ್ನನ್ನು ವೆುಚ್ಚಿಸಬೇಕೆಂದು ಆತುರವಾಗಿ ಬಂದೆ.

85. ಅವನು (ಅಲ್ಲಾಹನು) ಹೇಳಿದನು; ನೀವು ಹೊರಟ ಬಳಿಕ ನಾವು ನಿಮ್ಮ ಜನಾಂಗವನ್ನು ಪರೀಕ್ಷಿಸಿದೆವು ಮತ್ತು ಅವರನ್ನು ಸಾಮಿರೀ ದಾರಿ ತಪ್ಪಿಸಿದನು.

 86. ಮೂಸಾ ತುಂಬಾ ಕೋಪಗೊಂಡು ದುಃಖದೊಂದಿಗೆ ತಮ್ಮ ಜನಾಂಗದ ಬಳಿಗೆ ಮರಳಿದರು. ಅವರು ಹೇಳಿದರು; ನನ್ನ ಜನಾಂಗದವರೇ, ನಿಮ್ಮ ಒಡೆಯನು ನಿಮಗೆ ಬಹಳ ಶ್ರೇಷ್ಠ ವಾಗ್ದಾನವನ್ನು ನೀಡಿರಲಿಲ್ಲವೇ? ವಾಗ್ದಾನದ ಕಾಲಾವಧಿಯು ನಿಮಗೆ ತುಂಬಾ ದೀರ್ಘವೆನಿಸಿಬಿಟ್ಟಿತೇ? ಅಥವಾ ನೀವು ನಿಮ್ಮ ಒಡೆಯನ ಕೋಪವನ್ನು ಆಮಂತ್ರಿಸಲು ಬಯಸಿ ಅದಕ್ಕಾಗಿ ನನ್ನ ಜೊತೆಗಿನ ಕರಾರನ್ನು ಮುರಿದಿರಾ?

87. ಅವರು ಹೇಳಿದರು; ನಾವು ನಿಮ್ಮ ಜೊತೆಗಿನ ಕರಾರನ್ನು ಮುರಿದುದು ನಮ್ಮಿಷ್ಟದಿಂದಲ್ಲ. ಒಂದು ಜನಾಂಗದವರ ಆಭರಣಗಳನ್ನು ನಮ್ಮ ಮೇಲೆ ಹೇರಲಾಗಿತ್ತು. ನಾವು ಅದನ್ನು ಎಸೆದು ಬಿಟ್ಟೆವು. ಹಾಗೆಂದೇ ಸಾಮಿರೀ ನಮಗೆ ಸೂಚಿಸಿದ್ದನು.

88. ಅವನು (ಸಾಮಿರೀ) ಅವರಿಗಾಗಿ ಒಂದು ಕರುವಿನ ಆಕೃತಿಯನ್ನು ರಚಿಸಿದನು. ಅದರಿಂದ ಒಂದು ಕೂಗು ಹೊರಡುತ್ತಿತ್ತು. ಆಗ ಅವರು ‘‘ಇದುವೇ ನಿಮ್ಮ ದೇವರು ಹಾಗೂ ಮೂಸಾರ ದೇವರು. ಆದರೆ ಅವರು (ಮೂಸಾ) ಮರೆತಿದ್ದಾರೆ’’ ಎಂದು ಬಿಟ್ಟರು.

   89. ಅದು (ಕರುವಿನ ಆಕೃತಿ) ಅವರ ಯಾವ ಮಾತಿಗೂ ಉತ್ತರಿಸುವುದಿಲ್ಲ ಮತ್ತು ಅವರಿಗೆ ಯಾವುದೇ ನಷ್ಟ ಅಥವಾ ಲಾಭವನ್ನುಂಟು ಮಾಡುವ ಸಾಮರ್ಥ್ಯ ಅದಕ್ಕಿಲ್ಲ – ಎಂಬುದನ್ನು ಅವರು ಕಾಣುತ್ತಿಲ್ಲವೇ ?

 90. ಈ ಮೊದಲು ಹಾರೂನರು ಅವರೊಡನೆ ಹೇಳಿದರು; ನನ್ನ ಜನಾಂಗದವರೇ, ನಿಮ್ಮನ್ನು ಈ (ಕರುವಿನ ಆಕೃತಿಯ) ಮೂಲಕ ಪರೀಕ್ಷಿಸಲಾಗುತ್ತಿದೆ. ಖಂಡಿತವಾಗಿಯೂ ಆ ಪರಮ ದಯಾಳುವೇ ನಿಮ್ಮ ಒಡೆಯನು. ನೀವು ನನ್ನನ್ನು ಅನುಸರಿಸಿರಿ ಮತ್ತು ನನ್ನ ಆದೇಶವನ್ನು ಪಾಲಿಸಿರಿ.

91. ಅವರು (ಜನಾಂಗದವರು) ಹೇಳಿದರು; ಮೂಸಾರು ನಮ್ಮ ಬಳಿಗೆ ಮರಳಿ ಬರುವವರೆಗೂ ನಾವು ಇದನ್ನು ಅಗಲಿ ದೂರ ನಿಲ್ಲಲಾರೆವು.

92. ಅವರು (ಮೂಸಾ) ಹೇಳಿದರು; ಓ ಹಾರೂನರೇ, ಅವರು ದಾರಿಗೆಟ್ಟಾಗ (ಅವರನ್ನು ಸರಿಪಡಿಸದಂತೆ) ನಿಮ್ಮನ್ನೇನು ತಡೆದಿತ್ತು?

93. ನೀವೇಕೆ ನನ್ನನ್ನು ಅನುಸರಿಸಲಿಲ್ಲ? ನೀವು ನನ್ನ ಆದೇಶವನ್ನು ಉಲ್ಲಂಘಿಸಿ ಬಿಟ್ಟಿರಾ?

 94. ಅವರು (ಹಾರೂನ್) ಹೇಳಿದರು; ನನ್ನ ತಾಯಿಯ ಪುತ್ರರೇ, ನೀವು ನನ್ನ ಗಡ್ಡವನ್ನು ಮತ್ತು ನನ್ನ ತಲೆಯನ್ನು ಹಿಡಿಯಬೇಡಿ. ನಿಜವಾಗಿ, ‘‘ನೀನು ನನ್ನ ಹಾಗೂ ಇಸ್ರಾಈಲರ ಸಂತತಿಯ ನಡುವೆ ಭಿನ್ನತೆ ಮೂಡಿಸಿದೆ ಮತ್ತು ನನ್ನ ಆದೇಶಕ್ಕಾಗಿ ನೀನು ಕಾಯಲಿಲ್ಲ’’ ಎಂದು ನೀವು ಹೇಳುವಿರೆಂಬ ಭಯ ನನಗಿತ್ತು.

95. ಅವರು (ಮೂಸಾ) ಹೇಳಿದರು; ಸಾಮಿರೀ, ನಿನ್ನ ಸಂಗತಿ ಏನು?

96. ಅವನು ಹೇಳಿದನು; ಅವರು ಕಾಣದ್ದನ್ನು ನಾನು ಕಂಡಿದ್ದೇನೆ. ದೇವದೂತರ ಹೆಜ್ಜೆ ಗುರುತು ಇದ್ದಲ್ಲಿಂದ ನಾನು ಒಂದು ಹಿಡಿ ಮಣ್ಣು ಹೆಕ್ಕಿ ಅದರ (ಕರುವಿನ ಆಕೃತಿಯ) ಮೇಲೆ ಹಾಕಿ ಬಿಟ್ಟಿದ್ದೆ. ನನ್ನ ಚಿತ್ತವು ನನಗೆ ಹಾಗೆಯೇ ಮಾಡಲು ಸೂಚಿಸಿತು.

  97. ಅವರು (ಮೂಸಾ) ಹೇಳಿದರು; ನೀನು ತೊಲಗಿಬಿಡು. ಈ ಲೋಕದ ಬದುಕಿನಲ್ಲಿ ನಿನಗಿರುವ ಶಿಕ್ಷೆಯೇನೆಂದರೆ ‘‘ನನ್ನನ್ನು ಮುಟ್ಟಬೇಡಿ’’ ಎಂದು ನೀನು, ಹೇಳುತ್ತಿರಬೇಕು. ನಿನಗಾಗಿ ಒಂದು ಸಮಯ ನಿಗದಿಯಾಗಿದೆ. ಅದನ್ನು ಬದಲಿಸಲು ನಿನ್ನಿಂದಾಗದು. ನೀನು ಅಷ್ಟೊಂದು ನಿಷ್ಠೆಯಿಂದ ನಂಬಿಕೊಂಡಿದ್ದ ಆ ನಿನ್ನ ದೇವರನ್ನೊಮ್ಮೆ ನೋಡು. ನಾವೀಗ ಅದನ್ನು ಸುಟ್ಟು ಬಿಡುವೆವು ಮತ್ತು ಅದರ ಬೂದಿಯನ್ನು ನದಿಯಲ್ಲಿ ಹರಿಸಿಬಿಡುವೆವು.

98. ಖಂಡಿತ, ಅಲ್ಲಾಹನೇ ನಿಮ್ಮ ದೇವರು. ಅವನ ಹೊರತು ಬೇರೆ ದೇವರಿಲ್ಲ. ಅವನ ಜ್ಞಾನವು ಎಲ್ಲವನ್ನೂ ಆವರಿಸಿದೆ.

 99. (ದೂತರೇ,) ಈ ರೀತಿ ನಾವು ನಿಮಗೆ ಗತಕಾಲದ ಸಂಗತಿಗಳನ್ನು ತಿಳಿಸುತ್ತೇವೆ. ಖಂಡಿತವಾಗಿಯೂ ನಾವು ನಿಮಗೆ ನಮ್ಮ ಕಡೆಯಿಂದ ಉಪದೇಶವನ್ನು ನೀಡಿರುತ್ತೇವೆ.

100. ಅದನ್ನು ಕಡೆಗಣಿಸಿದವನು ಪುನರುತ್ಥಾನ ದಿನ ಭಾರೀ ಹೊರೆಯನ್ನು ಹೊರುವನು.

101. ಅವರು ಸದಾ ಅದೇ ಸ್ಥಿತಿಯಲ್ಲಿರುವರು. ಪುನರುತ್ಥಾನ ದಿನ ಆ ಹೊರೆಯು ಅವರ ಪಾಲಿಗೆ ತೀರಾ ಕೆಟ್ಟದಾಗಿರುವುದು.

102. ಕಹಳೆ ಊದುವ ಆ ದಿನ ನಾವು ಅಪರಾಧಿಗಳನ್ನು ಒಂದೆಡೆ ಸೇರಿಸುವೆವು. ಆಗ ಅವರ ಕಣ್ಣುಗಳು (ನಿಸ್ತೇಜವಾಗಿ) ನೀಲವಾಗಿರುವವು.

103. ಅವರು ಗುಟ್ಟಾಗಿ, ‘‘ನೀವು (ಇಹಲೋಕದಲ್ಲಿ) ಹತ್ತುದಿನ ಮಾತ್ರ ಇದ್ದಿರಿ’’ ಎಂದು ಪರಸ್ಪರ ಹೇಳಿಕೊಳ್ಳುವರು.

104. ಅವರು ಹೇಳುತ್ತಿರುವುದನ್ನೆಲ್ಲಾ ನಾವು ಚೆನ್ನಾಗಿ ಬಲ್ಲೆವು. ಅವರಲ್ಲಿನ ಅತ್ಯಂತ ಜಾಣನು, ‘‘ನೀವು ಬದುಕಿದ್ದುದು ಕೇವಲ ಒಂದು ದಿನ ಮಾತ್ರ’’ ಎನ್ನುವನು.

105. (ದೂತರೇ,) ಅವರು ನಿಮ್ಮೊಡನೆ ಪರ್ವತಗಳ ಕುರಿತು ಕೇಳುತ್ತಾರೆ. ನೀವು ಹೇಳಿರಿ; ನನ್ನ ಒಡೆಯನು ಅವುಗಳನ್ನು ಛಿದ್ರಗೊಳಿಸಿ ಹಾರಿಸಿ ಬಿಡುವನು.

106. ಆ ಬಳಿಕ ಅವನು ಇದನ್ನು (ಈ ನೆಲವನ್ನು) ಸಮತಟ್ಟಾಗಿಸಿ ಬಿಡುವನು.

107. ನೀವು ಇದರಲ್ಲಿ ಯಾವುದೇ ಏರು-ತಗ್ಗುಗಳನ್ನು ಕಾಣಲಾರಿರಿ.

108. ಅಂದು ಅವರೆಲ್ಲರೂ ಒಬ್ಬ ಕರೆಯುವಾತನ ಹಿಂದೆ ನಡೆಯುವರು ಮತ್ತು ಆತನ ಮಟ್ಟಿಗೆ ಯಾವ ಅಡೆತಡೆಯೂ ಇರದು. ಆ ಪರಮ ದಯಾಳುವಿನ ಮುಂದೆ ಎಲ್ಲ ಧ್ವನಿಗಳೂ ಅಡಗಿಬಿಡುವವು. ಅಂದು, ಹೆಜ್ಜೆಗಳ ಸಪ್ಪಳದ ಹೊರತು ನೀವು ಬೇರೇನನ್ನೂ ಕೇಳಲಾರಿರಿ.

109. ಅಂದು ಆ ಪರಮ ದಯಾಳುವಿನ ಅನುಮತಿ ಪಡೆದವರ ಹೊರತು ಬೇರೆ ಯಾರ ಶಿಫಾರಸ್ಸಿನಿಂದಲೂ ಯಾರಿಗೂ ಪ್ರಯೋಜನವಾಗದು.

110. ಅವರ ಮುಂದಿರುವುದನ್ನೂ, ಹಿಂದಿರುವುದನ್ನೂ. ಅವರಿಗೆ ತಮ್ಮ ಜ್ಞಾನದಿಂದ ಗ್ರಹಿಸಲು ಸಾಧ್ಯವಿಲ್ಲದ್ದನ್ನೂ ಅವನು ಬಲ್ಲನು.

111. ಅಂದು ಎಲ್ಲ ಮುಖಗಳೂ, ಸದಾ ಜೀವಂತನಾಗಿರುವ ಹಾಗೂ ಸದಾ ಸುಸ್ಥಿರನಾಗಿರುವಾತನ (ಅಲ್ಲಾಹನ) ಮುಂದೆ ಬಾಗಿರುವವು. ಅನ್ಯಾಯದ ಹೊರೆ ಹೊತ್ತವನು ಅಂದು ಸೋತು ಹೋಗುವನು.

112. ವಿಶ್ವಾಸಿಯಾಗಿದ್ದು ಸತ್ಕರ್ಮಗಳನ್ನು ಮಾಡುತ್ತಿದ್ದವನಿಗೆ ಅಂದು ಯಾವುದೇ ಅನ್ಯಾಯದ ಅಥವಾ ನಷ್ಟದ ಭಯ ಇರಲಾರದು.

113. ಈ ರೀತಿ ನಾವು ಅವರಿಗೆ (ದೂತರಿಗೆ) ಅರಬೀ ಭಾಷೆಯ ಕುರ್‌ಆನನ್ನು ಇಳಿಸಿಕೊಟ್ಟಿರುವೆವು ಮತ್ತು ಜನರು ಸತ್ಯನಿಷ್ಠರಾಗಬೇಕು ಅಥವಾ ಆ ಮೂಲಕ ಅವರು ಪಾಠಕಲಿಯಬೇಕೆಂದು ಅದರಲ್ಲಿ ನಾವು ವಿವಿಧ ಬಗೆಯಲ್ಲಿ ಎಚ್ಚರಿಕೆ ನೀಡಿರುವೆವು.

 114. (ದೂತರೇ,) ಅಲ್ಲಾಹನೇ ಮಹೋನ್ನತನು. ಅವನೇ ನೈಜ ದೊರೆ. ನೀವು ನಿಮ್ಮೆಡೆಗೆ ಕಳಿಸಲಾಗುವ ದಿವ್ಯವಾಣಿಯು ಪೂರ್ತಿಯಾಗುವ ಮುನ್ನ ಕುರ್‌ಆನ್‌ನ ವಿಷಯದಲ್ಲಿ ಆತುರ ಪಡಬೇಡಿ. ಮತ್ತು , ನನ್ನೊಡೆಯಾ, ನನಗೆ ಇನ್ನಷ್ಟು ಜ್ಞಾನವನ್ನು ನೀಡು ಎಂದು ಪ್ರಾರ್ಥಿಸಿರಿ.

115. ಈ ಹಿಂದೆ ನಾವು ಆದಮರ ಜೊತೆ ಒಂದು ಕರಾರನ್ನು ಮಾಡಿದ್ದೆವು. ಆದರೆ ಅವರು ಅದನ್ನು ಮರೆತು ಬಿಟ್ಟರು. ನಾವು ಅವರಲ್ಲಿ ಸ್ಥಿರತೆಯನ್ನು ಕಾಣಲಿಲ್ಲ.

116. ನಾವು ಮಲಕ್‌ಗಳೊಡನೆ, ನೀವು ಆದಮರಿಗೆ ಸಾಷ್ಟಾಂಗವೆರಗಿರಿ ಎಂದಾಗ ಅವರೆಲ್ಲಾ ಸಾಷ್ಟಾಂಗ ವೆರಗಿದರು. ಆದರೆ ಇಬ್ಲೀಸನ ಹೊರತು. ಅವನು ನಿರಾಕರಿಸಿದನು.

117. ನಾವು ಹೇಳಿದೆವು; ಆದಮರೇ, ಖಂಡಿತವಾಗಿಯೂ ಅವನು ನಿಮ್ಮ ಹಾಗೂ ನಿಮ್ಮ ಪತ್ನಿಯ ಶತ್ರುವಾಗಿದ್ದಾನೆ. ಅವನು ನಿಮ್ಮಿಬ್ಬರನ್ನೂ ಸ್ವರ್ಗದಿಂದ ಹೊರ ಹಾಕುವಂತಾಗಬಾರದು. ಹಾಗಾಗಿ ಬಿಟ್ಟರೆ ನೀವು ಭಾರೀ ಸಂಕಟಕ್ಕೆ ಸಿಲುಕುವಿರಿ.

118. ಇಲ್ಲಿ (ಸ್ವರ್ಗದಲ್ಲಿ) ನಿಮಗೆ ಖಂಡಿತ ಹಸಿವೂ ಬಾಧಿಸದು, ನಗ್ನತೆಯೂ ಇರದು.

119. ಇಲ್ಲಿ ಖಂಡಿತ ನಿಮಗೆ ದಾಹವೂ ಆಗದು, ಬಿಸಿಲಿನ ತಾಪವೂ ತಾಗದು.

120. ಆದರೆ ಶೈತಾನನು ಅವರನ್ನು ಗೊಂದಲಕ್ಕೆ ಸಿಲುಕಿಸಿದನು. ಅವನು ಹೇಳಿದನು; ಆದಮರೇ, ನಾನು ನಿಮಗೆ ಶಾಶ್ವತ ಬದುಕನ್ನು ಹಾಗೂ ಎಂದೂ ಪತನವಾಗದ ಸಾಮ್ರಾಜ್ಯವನ್ನು ನೀಡಬಲ್ಲ ಮರವನ್ನು ತೋರಿಸಲೇ?

121. ಕೊನೆಗೆ ಅವರಿಬ್ಬರೂ ಅದರಿಂದ (ಆ ಮರದಿಂದ) ತಿಂದರು. ಕೂಡಲೇ ಅವರ ಗುಪ್ತಾಂಗಗಳು ಅವರ ಮುಂದೆ ಪ್ರಕಟವಾದುವು ಮತ್ತು ಅವರು ಸ್ವರ್ಗದ ಎಲೆಗಳಿಂದ ತಮ್ಮನ್ನು ಮುಚ್ಚಿಕೊಳ್ಳತೊಡಗಿದರು. ಹೀಗೆ ಆದಮರು ತಮ್ಮ ಒಡೆಯನ ಆಜ್ಞೆಯನ್ನು ಮೀರಿ ನಡೆದಾಗ, ದಾರಿ ತಪ್ಪಿದರು.

122. ಮುಂದೆ ಅವರ ಒಡೆಯನು ಅವರನ್ನು ಆರಿಸಿಕೊಂಡು, ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿ ಅವರಿಗೆ ಮಾರ್ಗದರ್ಶನ ನೀಡಿದನು.

123. ಅವನು (ಅಲ್ಲಾಹ್) ಹೇಳಿದನು; ನೀವಿಬ್ಬರೂ ಜೊತೆಯಾಗಿ ಇಲ್ಲಿಂದ ಇಳಿದು ಹೋಗಿರಿ. ನಿಮ್ಮಲ್ಲಿ ಕೆಲವರು ಮತ್ತೆ ಕೆಲವರ ಶತ್ರುಗಳಾಗುವರು. ನಿಮ್ಮ ಬಳಿಗೆ ನನ್ನ ಕಡೆಯಿಂದ ಮಾರ್ಗದರ್ಶನವು ಬಂದಾಗ, ನನ್ನ ಮಾರ್ಗದರ್ಶನವನ್ನು ಅನುಸರಿಸುವವನು ಎಂದಿಗೂ ದಾರಿಗೆಡಲಾರನು ಮತ್ತು ಅವನೆಂದೂ ಭಾಗ್ಯಹೀನನಾಗಲಾರನು.

124.ಇನ್ನು, ನನ್ನನ್ನು ಸ್ಮರಿಸುವ ವಿಷಯದಲ್ಲಿ ಅಸಡ್ಡೆ ತೋರಿದವನ ಪಾಲಿಗೆ ಖಂಡಿತವಾಗಿಯೂ ಬದುಕಿನ ಸಾಧನಗಳು ತೀರಾ ಸಂಕುಚಿತವಾಗಿಬಿಡುವವು ಮತ್ತು ಪುನರುತ್ಥಾನ ದಿನ ನಾವು ಅವನನ್ನು ಕುರುಡನಾಗಿ ಎಬ್ಬಿಸುವೆವು.

125. ಅವನು, ‘‘ನನ್ನೊಡೆಯಾ! ನೀನು ನನ್ನನ್ನು ಕುರುಡನಾಗಿ ಎಬ್ಬಿಸಿರುವುದೇಕೆ? ಈ ಹಿಂದೆ ನಾನು (ಇಹಲೋಕದಲ್ಲಿ) ನೋಡಬಲ್ಲವನಾಗಿದ್ದೆನಲ್ಲಾ?‘‘ ಎನ್ನುವನು.

126. ಅವನು (ಅಲ್ಲಾಹನು) ಹೇಳುವನು; ನಿನ್ನ ಬಳಿಗೆ ನನ್ನ ವಚನಗಳು ಬಂದಿದ್ದುವು. ನೀನು ಅವುಗಳನ್ನು ಮರೆತು ಬಿಟ್ಟಿದ್ದೆ. ಆದ್ದರಿಂದ ಇಂದು ನಿನ್ನನ್ನು ಮರೆಯಲಾಗಿದೆ.

127. ಮಿತಿ ಮೀರಿ ನಡೆದವನಿಗೆ ಹಾಗೂ ತನ್ನ ಒಡೆಯನ ವಚನಗಳನ್ನು ನಂಬದವನಿಗೆ ನಾವು ಇಂತಹದೇ ಪ್ರತಿಫಲವನ್ನು ನೀಡುತ್ತೇವೆ. ಪರಲೋಕದ ಶಿಕ್ಷೆಯು ತುಂಬಾ ತೀವ್ರವಾಗಿರುತ್ತದೆ ಮತ್ತು ಬಹುಕಾಲ ಉಳಿಯುತ್ತದೆ.

128. ಅವರಿಗಿಂತ ಮುಂಚೆ ನಾವು ಅನೇಕ ಜನಾಂಗಗಳನ್ನು ನಾಶಪಡಿಸಿದ್ದೇವೆಂಬುದು ಅವರಿಗೆ ಮಾರ್ಗದರ್ಶಿಯಲ್ಲವೇ? ಅವರು, ಅವರ (ನಾಶವಾದವರ) ಆ ಪಾಳು ಬಿದ್ದ ನಿವಾಸಗಳಲ್ಲಿ ನಡೆದಾಡುತ್ತಿರುತ್ತಾರೆ. ನಿಜವಾಗಿ ಬುದ್ಧಿ ಉಳ್ಳವರಿಗೆ ಇದರಲ್ಲಿ ಹಲವು ಪಾಠಗಳಿವೆ.

129. ನಿಮ್ಮ ಒಡೆಯನ ಕಡೆಯಿಂದ ಒಂದು ವಿಷಯವು ಮೊದಲೇ ನಿಗದಿಯಾಗದೆ ಇದ್ದಿದ್ದರೆ ಮತ್ತು ಒಂದು ಅವಧಿ ನಿಶ್ಚಿತವಾಗದೆ ಇದ್ದಿದ್ದರೆ, (ಶಿಕ್ಷೆಯು) ಈಗಾಗಲೇ ಬಂದಿರುತ್ತಿತ್ತು.

130. (ದೂತರೇ,) ನೀವೀಗ ಅವರ ಎಲ್ಲ ಮಾತುಗಳನ್ನು ಸಹಿಸಿ ಕೊಳ್ಳಿರಿ ಮತ್ತು ಸೂರ್ಯೋದಯಕ್ಕೆ ಮುಂಚೆಯೂ ಸೂರ್ಯಾಸ್ತಮಾನಕ್ಕೆ ಮುಂಚೆಯೂ ರಾತ್ರಿಯ ಕೆಲವು ಕ್ಷಣಗಳಲ್ಲೂ ನಿಮ್ಮ ಒಡೆಯನ ಗುಣಗಾನ ಮಾಡುತ್ತಾ ಅವನ ಪಾವಿತ್ರವನ್ನು ಜಪಿಸಿರಿ ಮತ್ತು ಹಗಲಿನ ಗಡಿಭಾಗದಲ್ಲಿ (ಅಲ್ಲಾಹನ) ಪಾವಿತ್ರವನ್ನು ಜಪಿಸಿರಿ – ನೀವು ಸಂತೃಪ್ತರಾಗಬಹುದು.

 131. ಅವರಲ್ಲಿನ ಕೆಲವು ಗುಂಪುಗಳಿಗೆ, ಕೇವಲ ಇಹಲೋಕದ ಬದುಕಿನ ಶೋಭೆಯಾಗಿ ನಾವು ನೀಡಿರುವ ಬಳಕೆಯ ವಸ್ತುಗಳೆಡೆಗೆ ನೀವು ದೃಷ್ಟಿ ಹಾಯಿಸಬೇಡಿ. ನಾವು ಆ ಮೂಲಕ ಅವರನ್ನು ಪರೀಕ್ಷಿಸುತ್ತಿದ್ದೇವೆ. ನಿಜವಾಗಿ ನಿಮ್ಮ ಒಡೆಯನ ಕೊಡುಗೆಯೇ ಹೆಚ್ಚು ಶ್ರೇಷ್ಠವಾಗಿದೆ ಹಾಗೂ ಹೆಚ್ಚು ಕಾಲ ಉಳಿಯುತ್ತದೆ.

132. ನೀವು ನಿಮ್ಮ ಮನೆಯವರಿಗೆ ನಮಾಝ್‌ನ ಆದೇಶ ನೀಡಿರಿ ಮತ್ತು ಸ್ವತಃ ನೀವು ಅದನ್ನು ಪಾಲಿಸಿರಿ. ನಾವು ನಿಮ್ಮೊಡನೆ ಆಹಾರವನ್ನೇನೂ ಬೇಡುವುದಿಲ್ಲ. ನಿಜವಾಗಿ ನಾವೇ ನಿಮಗೆ ಆಹಾರ ನೀಡುತ್ತೇವೆ. ಅಂತಿಮ ಸಾಫಲ್ಯವು ಧರ್ಮನಿಷ್ಠೆಗೇ ಸಲ್ಲುವುದು.

133. ‘‘ಆತನು ತನ್ನ ಒಡೆಯನ ಕಡೆಯಿಂದ ನಮ್ಮ ಬಳಿಗೆ ಯಾವುದೇ ಪುರಾವೆಯನ್ನೇಕೆ ತಂದಿಲ್ಲ?’’ ಎಂದು ಅವರು ಕೇಳುತ್ತಾರೆ. ಗತಕಾಲದ ಗ್ರಂಥಗಳಲ್ಲಿರುವ ಸ್ಪಷ್ಟ ಪುರಾವೆಗಳು ಅವರ ಬಳಿಗೆ ಬಂದಿಲ್ಲವೇ?

  134. ಒಂದು ವೇಳೆ ನಾವು ಇದಕ್ಕೆ (ಕುರ್‌ಆನ್‌ನ ಆಗಮನಕ್ಕೆ) ಮುಂಚೆಯೇ ಅವರನ್ನು ಒಂದು ಶಿಕ್ಷೆಯ ಮೂಲಕ ನಾಶಮಾಡಿ ಬಿಟ್ಟಿದ್ದರೆ ಅವರು ‘‘ನಮ್ಮೊಡೆಯಾ, ನೀನು ನಮ್ಮೆಡೆಗೆ ಒಬ್ಬ ದೂತನನ್ನೇಕೆ ಕಳಿಸಲಿಲ್ಲ? (ಕಳಿಸಿದ್ದರೆ) ನಾವು, ಅಪಮಾನಿತರಾಗುವ ಹಾಗೂ ನಿಂದ್ಯರಾಗುವ ಮುನ್ನ ನಿನ್ನ ವಚನಗಳನ್ನು ಅನುಸರಿಸುತ್ತಿದ್ದವು’’ ಎನ್ನುತ್ತಿದ್ದರು.

135 ನೀವು ಹೇಳಿರಿ; ಎಲ್ಲರೂ ಕಾಯುತ್ತಿದ್ದಾರೆ, ನೀವೂ ಕಾಯಿರಿ. ನೇರಮಾರ್ಗದವರು ಯಾರು ಹಾಗೂ ಮಾರ್ಗದರ್ಶನ ಪಡೆದವರು ಯಾರು ಎಂಬುದು ನಿಮಗೆ ಬಹುಬೇಗನೇ ತಿಳಿಯಲಿದೆ.

ಕಾಂಡ – 17