04. An Nisa

4. ಅನ್ನಿಸಾ (ಮಹಿಳೆಯರು)

ವಚನಗಳು – 176, ಮದೀನಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಮಾನವರೇ, ನಿಮ್ಮನ್ನು ಒಂದೇ ಜೀವದಿಂದ ಸೃಷ್ಟಿಸಿದ ನಿಮ್ಮ ಒಡೆಯನಿಗೆ ನಿಷ್ಠರಾಗಿರಿ. ಅವನು ಅದೇ ಜೀವದಿಂದ ಅದರ ಜೊತೆಯನ್ನೂ ಸೃಷ್ಟಿಸಿದನು ಮತ್ತು ಅವರಿಬ್ಬರ ಮೂಲಕ ಅನೇಕಾರು ಪುರುಷರನ್ನೂ ಸ್ತ್ರೀಯರನ್ನೂ (ಲೋಕದಲ್ಲಿ) ಹಬ್ಬಿದನು. ಯಾವ ಅಲ್ಲಾಹನ ಹೆಸರಲ್ಲಿ ನೀವು ಹಕ್ಕುಗಳನ್ನು ಕೇಳುತ್ತೀರೋ ಅವನಿಗೆ ಸದಾ ಅಂಜಿರಿ ಮತ್ತು ಬಾಂಧವ್ಯಗಳನ್ನು ಕಾಪಾಡಿರಿ. ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಮೇಲೆ ಸದಾ ಕಣ್ಣಿಟ್ಟಿರುತ್ತಾನೆ.

2. ಅನಾಥರ ಸೊತ್ತನ್ನು ಅವರಿಗೇ ಕೊಟ್ಟು ಬಿಡಿರಿ ಹಾಗೂ ನಿರ್ಮಲವಾದುದಕ್ಕೆ ಪರ್ಯಾಯವಾಗಿ ಮಲಿನವಾದುದನ್ನು ಕೊಡಬೇಡಿ. ಅವರ ಸೊತ್ತನ್ನು ನಿಮ್ಮ ಸೊತ್ತಿನ ಜೊತೆ ಬೆರೆಸಿ ತಿನ್ನಬೇಡಿ. ಅದು ಖಂಡಿತ ಮಹಾ ಪಾಪ ಕೃತ್ಯವಾಗಿದೆ.

3. ಅನಾಥರ (ಅನಾಥ ಹೆಣ್ಣು ಮಕ್ಕಳ) ವಿಷಯದಲ್ಲಿ ನ್ಯಾಯ ಪಾಲಿಸಲು ನಿಮಗೆ ಸಾಧ್ಯವಾಗದು ಎಂಬ ಭಯ ನಿಮಗಿದ್ದರೆ (ಇತರ) ಮಹಿಳೆಯರ ಪೈಕಿ ನಿಮಗಿಷ್ಟವಿರುವ ಇಬ್ಬರು, ಮೂವರು ಅಥವಾ ನಾಲ್ವರನ್ನು ವಿವಾಹವಾಗಿರಿ. ಇನ್ನು (ಪತ್ನಿಯರ ವಿಷಯದಲ್ಲಿ) ನ್ಯಾಯ ಪಾಲಿಸಲು ಸಾಧ್ಯವಾಗದು ಎಂಬ ಭಯ ನಿಮಗಿದ್ದರೆ ಒಬ್ಬಳೇ ಪತ್ನಿಯಲ್ಲಿ ಅಥವಾ ನಿಮ್ಮ ಮಾಲಕತ್ವದಲ್ಲಿರುವ ದಾಸಿಯಲ್ಲಿ (ತೃಪ್ತಿ ಪಡಿರಿ). (ನಿಮ್ಮಿಂದ) ಯಾವುದೇ ಅತಿರೇಕ ಸಂಭವಿಸದೆ ಇರುವುದಕ್ಕೆ ಇದು ಹೆಚ್ಚು ಸಹಾಯಕವಾಗಿದೆ.

4. (ನೀವು ವಿವಾಹವಾಗುವ) ಮಹಿಳೆಯರ ‘ಮೆಹರ್’ ಅನ್ನು ಸಂತೋಷದಿಂದ ಪಾವತಿಸಿರಿ. ಅವರು ಅದರಿಂದ ಏನನ್ನಾದರೂ ಮನಸಾರೆ ನಿಮಗೆ ಬಿಟ್ಟುಕೊಟ್ಟರೆ ಮಾತ್ರ ನೀವು ಅದನ್ನು ಸುಖವಾಗಿ, ಸಂತೋಷದಿಂದ ತಿನ್ನಬಹುದು.

5. ಅಲ್ಲಾಹನು ನಿಮ್ಮ ಪಾಲಿಗೆ ಆದಾಯವಾಗಿಸಿರುವ ನಿಮ್ಮ ಸಂಪತ್ತನ್ನು ಮಂದಮತಿಗಳ ಕೈಗೆ ಒಪ್ಪಿಸಬೇಡಿ. ಆದರೆ, ಅದರಿಂದ ಅವರಿಗೆ ಉಣಿಸಿರಿ ಮತ್ತು ಉಡಿಸಿರಿ (ಆಹಾರ, ವಸ್ತ್ರ ಇತ್ಯಾದಿಯನ್ನು ಒದಗಿಸಿರಿ) ಮತ್ತು ಅವರೊಂದಿಗೆ ಸದಾ ಸೌಜನ್ಯದ ಮಾತನ್ನೇ ಆಡಿರಿ.

  6. ಅನಾಥರು ವಿವಾಹದ ವಯಸ್ಸಿನವರಾಗುವ ತನಕ ಅವರನ್ನು ಪರೀಕ್ಷಿಸುತ್ತಲಿರಿ. ನೀವು ಅವರಲ್ಲಿ ಪ್ರಬುದ್ಧತೆಯನ್ನು ಕಂಡಾಗ ಅವರ ಸಂಪತ್ತನ್ನು ಅವರಿಗೆ ಒಪ್ಪಿಸಿ ಬಿಡಿರಿ. ಅವರ ಸಂಪತ್ತನ್ನು ಅಪವ್ಯಯ ಮಾಡದಿರಿ ಹಾಗೂ ಅವರು ಬೆಳೆದು ಬಿಡುವರೆಂದು ಅದನ್ನು ಆತುರದಿಂದ ಕಬಳಿಸಬೇಡಿ. ಸಂಪನ್ನನಾಗಿರುವವನು (ಅನಾಥರ ಸೊತ್ತಿನಿಂದ) ದೂರ ಉಳಿದಿರಲಿ. ಬಡವನು ನಿಯಮಾನುಸಾರ ಮಾತ್ರ ಅದನ್ನು (ಸೀಮಿತವಾಗಿ) ಬಳಸಿಕೊಳ್ಳಲಿ. ನೀವು ಅವರ ಸಂಪತ್ತನ್ನು ಅವರ ವಶಕ್ಕೆ ಒಪ್ಪಿಸುವಾಗ, ಅದಕ್ಕೆ ಅವರ ಮುಂದೆ ಸಾಕ್ಷಿಗಳನ್ನು ನೇಮಿಸಿಕೊಳ್ಳಿರಿ. (ಅಂತಿಮ) ವಿಚಾರಣೆಗೆ ಅಲ್ಲಾಹನೇ ಸಾಕು.

7. ಪುರುಷರಿಗೆ, ಅವರ ತಂದೆ, ತಾಯಿ ಮತ್ತು ಬಂಧುಗಳು ಬಿಟ್ಟು ಹೋದುದರಲ್ಲಿ (ಸೊತ್ತಿನಲ್ಲಿ) ಪಾಲಿದೆ. ಹಾಗೆಯೇ ಸ್ತ್ರೀಯರಿಗೂ, ಅವರ ತಂದೆ, ತಾಯಿ ಮತ್ತು ಬಂಧುಗಳು ಬಿಟ್ಟು ಹೋದುದರಲ್ಲಿ ಪಾಲಿದೆ. ಸ್ವಲ್ಪವಿರಲಿ, ಬಹಳವಿರಲಿ – ಪಾಲು ಮಾತ್ರ ನಿಶ್ಚಿತವಾಗಿದೆ.

8. (ಆಸ್ತಿ) ವಿತರಿಸುವ ವೇಳೆ ಬಂಧುಗಳು, ಅನಾಥರು ಮತ್ತು ಬಡವರು ಹಾಜರಾದಾಗ, ಅವರಿಗೆ ಅದರಿಂದ ಉಣ್ಣಿಸಿರಿ ಮತ್ತು ಅವರ ಜೊತೆ ಸೌಜನ್ಯದ ಮಾತನ್ನಾಡಿರಿ.

9. ತಾವು ಸ್ವತಃ ತಮ್ಮ ದುರ್ಬಲ ಮಕ್ಕಳನ್ನೇ ತಮ್ಮ ಬೆನ್ನ ಹಿಂದೆ ಬಿಟ್ಟು ಹೋಗುವುದಾಗಿದ್ದರೆ (ಮೃತರಾಗುವುದಿದ್ದರೆ) ತಮಗೆ ಅವರ ಕುರಿತು ಎಷ್ಟು ಕಾಳಜಿ ಇರುತ್ತಿತ್ತು ಎಂಬುದನ್ನು ಯೋಚಿಸಿ ಜನರು (ಅನಾಥರ ಹಕ್ಕುಗಳ ಕುರಿತು) ಕಾಳಜಿ ವಹಿಸಬೇಕು. ಅವರು ಅಲ್ಲಾಹನ ಭಯವುಳ್ಳವರಾಗಿರಬೇಕು ಮತ್ತು ಸದಾ ನೇರವಾದ ಮಾತನ್ನೇ ಆಡಬೇಕು.

10. ಅನಾಥರ ಸಂಪತ್ತನ್ನು ಅಕ್ರಮವಾಗಿ ಕಬಳಿಸುತ್ತಿರುವವರು ಖಂಡಿತವಾಗಿಯೂ ತಮ್ಮ ಹೊಟ್ಟೆಗಳಿಗೆ ಬೆಂಕಿಯನ್ನು ತುಂಬುತ್ತಿದ್ದಾರೆ. ಬಹು ಬೇಗನೇ ಅವರನ್ನು ಉರಿಯುತ್ತಿರುವ ನರಕಾಗ್ನಿಗೆ ಎಸೆಯಲಾಗುವುದು.

11. ಅಲ್ಲಾಹನು ನಿಮ್ಮ ಮಕ್ಕಳ ಕುರಿತು ನಿಮಗೆ ಬೋಧಿಸುತ್ತಿದ್ದಾನೆ; ಒಬ್ಬ ಪುರುಷನಿಗೆ ಇಬ್ಬರು ಸ್ತ್ರೀಯರಷ್ಟು ಪಾಲು. ಇನ್ನು ಸ್ತ್ರೀಯರು (ಉತ್ತರಾಧಿಕಾರಿ ಪುತ್ರಿಯರು) ಇಬ್ಬರಿಗಿಂತ ಹೆಚ್ಚಿದ್ದರೆ, ಅವರಿಗೆ (ಮೃತನ ಸೊತ್ತಿನಲ್ಲಿ) ಮೂರನೇ ಎರಡು ಪಾಲು. ಒಬ್ಬಳೇ ಇದ್ದರೆ ಆಕೆಗೆ ಅರ್ಧ ಪಾಲು. ಅವನಿಗೆ (ಮೃತನಿಗೆ) ಮಕ್ಕಳಿದ್ದರೆ ಅವನ ತಂದೆ ತಾಯಿಯರಲ್ಲಿ ಪ್ರತಿಯೊಬ್ಬರಿಗೆ (ಮೃತನ) ಸೊತ್ತಿನಲ್ಲಿ ಆರನೇ ಒಂದಂಶ. ಆತನಿಗೆ ಮಕ್ಕಳಿಲ್ಲವಾದರೆ ಹಾಗೂ ಅವನ ತಂದೆ ತಾಯಿಯೇ ಅವನ ಉತ್ತರಾಧಿಕಾರಿಗಳಾಗಿದ್ದರೆ ತಾಯಿಗೆ ಮೂರನೇ ಒಂದು ಪಾಲು. ಆತನಿಗೆ ಸಹೋದರರು ಮತ್ತು ಸಹೋದರಿಯರಿದ್ದರೆ ಆತನ ತಾಯಿಗೆ ಆರನೇ ಒಂದು ಪಾಲು. ಇದೆಲ್ಲಾ ಆತನ ‘ವಸಿಯ್ಯತ್’ (ಉಯಿಲು ಅಥವಾ ಉಪದೇಶ) ಅನ್ನು ಅನುಷ್ಠಾನಿಸಿದ ಬಳಿಕ ಹಾಗೂ ಅವನ ಸಾಲವನ್ನು ತೀರಿಸಿದ ಬಳಿಕ. ನಿಮ್ಮ ಹೆತ್ತವರು ಮತ್ತು ನಿಮ್ಮ ಪುತ್ರರು (ಮಕ್ಕಳು) – ಇವರ ಪೈಕಿ ಲಾಭದ ದೃಷ್ಟಿಯಿಂದ ಯಾರು ನಿಮಗೆ ಹೆಚ್ಚು ನಿಕಟರೆಂಬುದು ನಿಮಗೆ ತಿಳಿಯದು. ಇವು ಅಲ್ಲಾಹನು ನಿಶ್ಚಯಿಸಿರುವ ಕಡ್ಡಾಯ ಪಾಲುಗಳು. ಅಲ್ಲಾಹನು ಎಲ್ಲವನ್ನೂ ಅರಿತಿರುವವನು ಮತ್ತು ಯುಕ್ತಿವಂತನಾಗಿದ್ದಾನೆ.

12. ನಿಮ್ಮ ಪತ್ನಿಯರಿಗೆ ಮಕ್ಕಳಿಲ್ಲದಿದ್ದರೆ ಅವರು ಬಿಟ್ಟು ಹೋದುದರಲ್ಲಿ ನಿಮಗೆ ಅರ್ಧ ಪಾಲಿದೆ ಹಾಗೂ ಅವರಿಗೆ ಮಕ್ಕಳಿದ್ದರೆ, ಅವರು ಬಿಟ್ಟು ಹೋದುದರಲ್ಲಿ ನಿಮಗೆ ಕಾಲು ಭಾಗದಷ್ಟು ಪಾಲು – ಅವರ ‘ವಸಿಯ್ಯತ್’ ಅನ್ನು ಅನುಷ್ಠಾನಿಸಿದ ಬಳಿಕ ಮತ್ತು ಅವರ ಸಾಲವನ್ನು ತೀರಿಸಿದ ಬಳಿಕ. ಇನ್ನು ನಿಮಗೆ ಮಕ್ಕಳಿಲ್ಲವಾದರೆ, ನೀವು ಬಿಟ್ಟು ಹೋದುದರಲ್ಲಿ ಅವರಿಗೆ ಕಾಲು ಭಾಗದ ಪಾಲಿದೆ ಹಾಗೂ ನಿಮಗೆ ಮಕ್ಕಳಿದ್ದರೆ, ನೀವು ಬಿಟ್ಟು ಹೋದುದರಲ್ಲಿ ಎಂಟನೆ ಒಂದು ಪಾಲು ಅವರಿಗೆ ಸೇರುವುದು – ನೀವು ಮಾಡಿದ ವಸಿಯ್ಯತ್ ಅನ್ನು ಅನುಷ್ಠಾನಿಸಿದ ಬಳಿಕ ಮತ್ತು ನಿಮ್ಮ ಸಾಲವನ್ನು ತೀರಿಸಿದ ಬಳಿಕ. ಒಂದು ವೇಳೆ ಸೊತ್ತು ಬಿಟ್ಟು ಮೃತನಾದ ಪುರುಷನು ಅಥವಾ ಅಂತಹ ಸ್ತ್ರೀಯು ಮಕ್ಕಳಿಲ್ಲದವರಾಗಿದ್ದರೆ ಮತ್ತು ಅವರಿಗೆ ಒಬ್ಬ ಸಹೋದರ ಅಥವಾ ಸಹೋದರಿ ಇದ್ದರೆ, ಅವರಲ್ಲಿ ಪ್ರತಿಯೊಬ್ಬರಿಗೆ ಆರನೆ ಒಂದು ಪಾಲು. ಇನ್ನು ಅವರು (ಸಹೋದರ ಸಹೋದರಿಯರು) ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಅವರಿಗೆಲ್ಲಾ ಒಟ್ಟು ಮೂರನೆ ಒಂದು ಪಾಲು – ಹಾನಿಕರವಲ್ಲದ ‘ವಸಿಯ್ಯತ್’ ಅನ್ನು ಪೂರ್ತಿಗೊಳಿಸಿದ ಬಳಿಕ ಮತ್ತು ಸಾಲವನ್ನು ತೀರಿಸಿದ ಬಳಿಕ. ಇದು ಅಲ್ಲಾಹನ ವತಿಯಿಂದ ಇರುವ ಆದೇಶ. ಅಲ್ಲಾಹನಂತು ಎಲ್ಲವನ್ನೂ ಬಲ್ಲವನು ಮತ್ತು ಸಂಯಮಿಯಾಗಿದ್ದಾನೆ.

13. ಇವು ಅಲ್ಲಾಹನು ನಿಶ್ಚಯಿಸಿರುವ ಮಿತಿಗಳು. ಅಲ್ಲಾಹನ ಹಾಗೂ ಅವನ ದೂತರ ಆಜ್ಞೆ ಪಾಲಿಸುವವನನ್ನು ಅವನು, ತಳದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳೊಳಗೆ ಸೇರಿಸುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. ಇದುವೇ ಭವ್ಯ ವಿಜಯವಾಗಿದೆ.

14. ಇನ್ನು ಅಲ್ಲಾಹನ ಮತ್ತು ಅವನ ದೂತರ ಆಜ್ಞೆಗಳನ್ನು ಉಲ್ಲಂಘಿಸುವವನನ್ನು ಮತ್ತು ಅವನು ನಿಶ್ಚಯಿಸಿದ ಮಿತಿಗಳನ್ನು ಮೀರಿ ನಡೆದವನನ್ನು ಅವನು ನರಕಾಗ್ನಿಯೊಳಗೆ ಸೇರಿಸುವನು. ಅವನು ಅದರಲ್ಲಿ ಸದಾಕಾಲ ಇರುವನು – ಅವನಿಗೆ ಅಪಮಾನಕಾರಿ ಶಿಕ್ಷೆ ಸಿಗಲಿದೆ.

 15. ನಿಮ್ಮ ಮಹಿಳೆಯರ ಪೈಕಿ ಅನ್ಯೆತಿಕ ಕೃತ್ಯವೆಸಗಿರುವವರ ವಿರುದ್ಧ ನಾಲ್ವರು ಸಾಕ್ಷಿಗಳನ್ನು ತನ್ನಿರಿ. ಅವರು ಸಾಕ್ಷಿ ಹೇಳಿದರೆ, ಅವರ ಮರಣದ ತನಕ ಅಥವಾ ಅವರಿಗೆ ಅಲ್ಲಾಹನು ಏನಾದರೂ ದಾರಿ ತೋರುವ ತನಕ ಅವರನ್ನು ಮನೆಗಳಲ್ಲಿ ಬಂಧನದಲ್ಲಿಡಿರಿ.

16. ನಿಮ್ಮ ಪೈಕಿ ಇಬ್ಬರು ಈ ಅಪರಾಧವನ್ನು ಮಾಡಿದ್ದರೆ ಅವರಿಬ್ಬರನ್ನೂ ಚೆನ್ನಾಗಿ ದಂಡಿಸಿರಿ. ತರುವಾಯ ಅವರು ಪಶ್ಚಾತ್ತಾಪ ಪಟ್ಟರೆ ಮತ್ತು ತಮ್ಮನ್ನು ಸರಿಪಡಿಸಿಕೊಂಡರೆ, ಅವರನ್ನು ಬಿಟ್ಟು ಬಿಡಿರಿ. ಖಂಡಿತವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣಾಳುವಾಗಿದ್ದಾನೆ.

17. ಅಜ್ಞಾನದಿಂದ ಪಾಪಕೃತ್ಯವನ್ನೆಸಗಿ ಆ ಬಳಿಕ ಬೇಗನೇ ಪಶ್ಚಾತ್ತಾಪ ಪಡುವವರ ಪಶ್ಚಾತ್ತಾಪವನ್ನು ಸ್ವೀಕರಿಸುವ ಹೊಣೆ ಅಲ್ಲಾಹನ ಮೇಲಿದೆ. ಅಂಥವರ ಪಶ್ಚಾತ್ತಾಪವನ್ನು ಅಲ್ಲಾಹನು ಸ್ವೀಕರಿಸುತ್ತಾನೆ. ಅಲ್ಲಾಹನಂತು ಎಲ್ಲವನ್ನೂ ಅರಿತಿರುವವನೂ ಯುಕ್ತಿವಂತನೂ ಆಗಿದ್ದಾನೆ.

 18. ಮರಣವು ತನ್ನ ಮುಂದೆ ಬಂದು ಬಿಡುವ ತನಕವೂ ಪಾಪಕೃತ್ಯಗಳನ್ನು ಮಾಡುತ್ತಲೇ ಇದ್ದು (ಮರಣವನ್ನು ಕಂಡಾಗ) ‘‘ನಾನೀಗ ಪಶ್ಚಾತ್ತಾಪ ಪಡುತ್ತೇನೆ’’ ಎನ್ನುವವರ ಹಾಗೂ ಧಿಕ್ಕಾರಿಗಳಾಗಿಯೇ ಮೃತರಾದವರ ಪಶ್ಚಾತ್ತಾಪವು ಸ್ವೀಕೃತವಾಗದು. ಅವರಿಗಾಗಿ ನಾವು ಕಠಿಣ ಶಿಕ್ಷೆಯನ್ನು ತಯಾರಿಸಿಟ್ಟಿರುವೆವು.

19. ವಿಶ್ವಾಸಿಗಳೇ, ನೀವು ಬಲವಂತದಿಂದ ಮಹಿಳೆಯರ ಉತ್ತರಾಧಿಕಾರಿಗಳಾಗುವುದು ನಿಮ್ಮ ಪಾಲಿಗೆ ಸಮ್ಮತವಲ್ಲ. ಹಾಗೆಯೇ, ನೀವು ಅವರಿಗೆ ಏನನ್ನು ಕೊಟ್ಟಿರುವಿರೋ ಅದರಿಂದ ಏನನ್ನಾದರೂ ಮರಳಿ ಪಡೆಯಲಿಕ್ಕಾಗಿ ಅವರನ್ನು (ಮನೆಯಲ್ಲಿ) ತಡೆದಿಟ್ಟುಕೊಳ್ಳ ಬಾರದು – ಅವರೇನಾದರೂ ವ್ಯಕ್ತ ಅನೈತಿಕ ಕೃತ್ಯ ಎಸಗಿರುವುದರ ಹೊರತು. ಅವರ ಜೊತೆ ನೀವು ನಿಯಮಾನುಸಾರ ಬದುಕು ಸಾಗಿಸಿರಿ. ಅವರು ನಿಮಗೆ ಅಪ್ರಿಯರಾಗಿದ್ದರೆ (ನಿಮಗೆ ತಿಳಿದಿರಲಿ;) ನಿಮಗೊಂದು ವಸ್ತು ಅಪ್ರಿಯವಾಗಿರಬಹುದು ಮತ್ತು ಅದರಲ್ಲೇ ಅಲ್ಲಾಹನು (ನಿಮಗೆ) ಬಹಳಷ್ಟು ಹಿತವನ್ನು ಇಟ್ಟಿರಬಹುದು.

 20. ನೀವು ಒಬ್ಬ ಪತ್ನಿಯ ಸ್ಥಾನಕ್ಕೆ (ಅವಳನ್ನು ಬಿಟ್ಟು) ಇನ್ನೊಬ್ಬ ಪತ್ನಿಯನ್ನು ತರಬಯಸಿದ್ದರೆ, ಅವರಲ್ಲೊಬ್ಬರಿಗೆ ನೀವು (ಈ ಹಿಂದೆ) ಒಂದು ದೊಡ್ಡ ಭಂಡಾರವನ್ನೇ ನೀಡಿದ್ದರೂ ಅವರಿಂದ ಕಿಂಚಿತ್ತನ್ನೂ ಮರಳಿ ಪಡೆಯಬಾರದು. ನೀವೇನು ಸುಳ್ಳಾರೋಪಗಳನ್ನು ಹೊರಿಸಿ ಹಾಗೂ ಸ್ಪಷ್ಟ ಪಾಪಕೃತ್ಯಗಳನ್ನೆಸಗಿ ಅದನ್ನು ಮರಳಿ ಪಡೆಯುವಿರಾ?

 21. ನೀವು ಪರಸ್ಪರರನ್ನು ಸವಿದ ಬಳಿಕ ಮತ್ತು ಅವರು ನಿಮ್ಮಿಂದ ಬಲಿಷ್ಠ ವಾಗ್ದಾನವನ್ನು ಪಡೆದ ಬಳಿಕ ನೀವು ಅದನ್ನು (ಮಹ್ರ್ ಅನ್ನು) ಹೇಗೆ ತಾನೇ ಮರಳಿ ಪಡೆಯುವಿರಿ?

 22. ನಿಮ್ಮ ತಂದೆ ವಿವಾಹವಾಗಿದ್ದ ಮಹಿಳೆಯರನ್ನು ನೀವು ವಿವಾಹವಾಗಬೇಡಿ – ಹಿಂದೆ ಗತಿಸಿದ್ದು ಇದಕ್ಕೆ ಹೊರತಾಗಿದೆ. ಖಂಡಿತವಾಗಿಯೂ ಅದು ನಾಚಿಕೆಗೇಡಿನ ಹೀನ ಕಾರ್ಯವಾಗಿತ್ತು ಮತ್ತು ತೀರಾ ದುಷ್ಟ ಮಾರ್ಗವಾಗಿತ್ತು.

 23. ನಿಮ್ಮ ಮಾತೆಯರನ್ನು, ನಿಮ್ಮ ಪುತ್ರಿಯರನ್ನು, ನಿಮ್ಮ ಸಹೋದರಿಯರನ್ನು, ನಿಮ್ಮ ತಂದೆಯ ಸಹೋದರಿಯರನ್ನು, ನಿಮ್ಮ ತಾಯಿಯ ಸಹೋದರಿಯರನ್ನು, ನಿಮ್ಮ ಸಹೋದರರ ಪುತ್ರಿಯರನ್ನು, ನಿಮ್ಮ ಸಹೋದರಿಯರ ಪುತ್ರಿಯರನ್ನು, ನಿಮಗೆ ಹಾಲುಣಿಸಿದ್ದ ನಿಮ್ಮ ಮಾತೆಯರನ್ನು, ನಿಮ್ಮ ಜೊತೆ ಹಾಲುಂಡ (ಕಾರಣಕ್ಕಾಗಿ) ನಿಮ್ಮ ಸಹೋದರಿಯರಾದವರನ್ನು, ನಿಮ್ಮ ಪತ್ನಿಯರ ಮಾತೆಯರನ್ನು ಮತ್ತು ನೀವು ಸಂಭೋಗಿಸಿರುವಂತಹ ನಿಮ್ಮ ಪತ್ನಿಯರು ಹೆತ್ತ ಮತ್ತು ನಿಮ್ಮ ಪೋಷಣೆಯಲ್ಲಿರುವ ನಿಮ್ಮ ಮಲ ಪುತ್ರಿಯರನ್ನು (ವಿವಾಹವಾಗುವುದನ್ನು) ನಿಮ್ಮ ಪಾಲಿಗೆ ನಿಷೇಧಿಸಲಾಗಿದೆ – ನೀವು ಆ ಪತ್ನಿಯರ ಜೊತೆ ಸಂಭೋಗಿಸಿಲ್ಲವಾದರೆ (ಅವರನ್ನು ಬಿಟ್ಟು ಅವರ ಆ ಪುತ್ರಿಯರನ್ನು ವಿವಾಹವಾಗುವುದಕ್ಕೆ) ಆಕ್ಷೇಪವಿಲ್ಲ. ಹಾಗೆಯೇ ನಿಮ್ಮ ಸ್ವಂತ ಪುತ್ರರ ಪತ್ನಿಯರಾಗಿದ್ದವರು (ನಿಮಗೆ ನಿಷಿದ್ಧರಾಗಿದ್ದಾರೆ). ಮತ್ತು ಏಕಕಾಲದಲ್ಲಿ ಇಬ್ಬರು ಸಹೋದರಿಯರನ್ನು ನೀವು ವಿವಾಹವಾಗುವುದು (ನಿಷಿದ್ಧವಾಗಿದೆ) – ಈ ಹಿಂದೆ ನಡೆದು ಹೋಗಿರುವುದರ ಹೊರತು. ಖಂಡಿತವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.

 

ಕಾಂಡ 5

24. ಮಹಿಳೆಯರ ಪೈಕಿ ಇನ್ನೊಬ್ಬರ ವಿವಾಹ ಬಂಧನದಲ್ಲಿರುವವರು ನಿಮಗೆ ನಿಷಿದ್ಧರಾಗಿದ್ದಾರೆ – (ಯುದ್ಧದಲ್ಲಿ) ದಾಸಿಯರಾಗಿ ನಿಮ್ಮ ವಶಕ್ಕೆ ಬಂದಿರುವವರ ಹೊರತು. ಇದು ನಿಮ್ಮ ಪಾಲಿಗೆ ಅಲ್ಲಾಹನ ಆದೇಶವಾಗಿದೆ. ಅವರ ಹೊರತು ಇತರ ಸ್ತ್ರೀಯರು ನಿಮ್ಮ ಪಾಲಿಗೆ ಸಮ್ಮತರಾಗಿರುವರು – ಆದರೆ ನೀವು ನಿಮ್ಮ ಸಂಪತ್ತನ್ನು ವ್ಯಯಿಸಿ (ನಿಯಮಾನುಸಾರ ಮಹ್ರ್ ಕೊಟ್ಟು) ಅವರನ್ನು ವಿವಾಹವಾಗಬೇಕು. ಸ್ವೇಚ್ಛಾಚಾರ ನಡೆಸಬಾರದು. ನಿಮ್ಮ ಪೈಕಿ, ಅವರಲ್ಲಿನ ಯಾರನ್ನಾದರೂ ಅನುಭವಿಸಿರುವವರು, ಅವರ ನಿರ್ದಿಷ್ಟ ಹಕ್ಕನ್ನು (ಮಹ್ರ್ ಅನ್ನು) ಅವರಿಗೆ ಪಾವತಿಸಬೇಕು. ಇನ್ನು ನೀವು ಅದನ್ನು ನಿಗದಿಪಡಿಸಿಕೊಂಡ ಬಳಿಕ (ಪಾವತಿಯ ಸಮಯದ ಕುರಿತು) ಪರಸ್ಪರ ಒಪ್ಪಿಕೊಂಡರೆ ತಪ್ಪಿಲ್ಲ. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ.

25. ನಿಮ್ಮ ಪೈಕಿ, ಸ್ವತಂತ್ರ ವಿಶ್ವಾಸಿ ಮಹಿಳೆಯರನ್ನು ವಿವಾಹವಾಗಲು ಸಮರ್ಥರಲ್ಲದವರು, ನಿಮ್ಮ ಮಾಲಕತ್ವದಲ್ಲಿರುವ ವಿಶ್ವಾಸಿ ದಾಸಿಯನ್ನು ವಿವಾಹವಾಗಲಿ. ನಿಮ್ಮ ವಿಶ್ವಾಸದ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು. ನೀವೆಲ್ಲಾ ಒಂದೇ ಮೂಲದವರು. ನೀವು ಅವರ (ದಾಸಿಯರ) ಪೋಷಕರ ಅನುಮತಿ ಪಡೆದು ಅವರನ್ನು ವಿವಾಹವಾಗಿರಿ. ಅವರಿಗೆ ಅವರ ಹಕ್ಕನ್ನು (ಮಹ್ರ್ ಅನ್ನು) ನ್ಯಾಯೋಚಿತವಾಗಿ ಪಾವತಿಸಿರಿ. ಅವರು ಕಟ್ಟು ನಿಟ್ಟಾಗಿ ಸುಶೀಲೆಯರಾಗಿರಬೇಕು. ಬಹಿರಂಗವಾಗಿ ಅನೈತಿಕತೆಯಲ್ಲಿ ನಿರತರಾಗಿರುವವರಾಗಲಿ ಗುಟ್ಟಾಗಿ ಅಕ್ರಮ ನಂಟುಗಳನ್ನು ಪೋಷಿಸುವವರಾಗಲಿ ಆಗಿರಬಾರದು. ವಿವಾಹ ವ್ಯಾಪ್ತಿಯೊಳಗೆ ಬಂದು ಬಿಟ್ಟ ಬಳಿಕ, ಅವರು ಏನಾದರೂ ಅನೈತಿಕ ವ್ಯವಹಾರ ನಡೆಸಿದರೆ, ಅವರು ಸ್ವತಂತ್ರ ಮಹಿಳೆಯರಿಗಿರುವ ಶಿಕ್ಷೆಯ ಅರ್ಧ ಭಾಗಕ್ಕೆ ಅರ್ಹರಾಗುವರು. ಇದು (ದಾಸಿಯರನ್ನು ವಿವಾಹವಾಗುವ ಅನುಮತಿ), ನಿಮ್ಮ ಪೈಕಿ ತಾನು (ಅವಿವಾಹಿತನಾಗಿದ್ದರೆ) ಪಾಪವೆಸಗಬಹುದೆಂಬ ಭಯವುಳ್ಳವರಿಗಾಗಿ ಇರುವ ಸವಲತ್ತಾಗಿದೆ. ಇನ್ನು ನೀವು ಸಹನಶೀಲರಾಗಿದ್ದರೆ ನಿಮ್ಮ ಪಾಲಿಗೆ ಅದುವೇ ಉತ್ತಮ. ಅಲ್ಲಾಹನಂತು ತುಂಬಾ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.

 26. ಅಲ್ಲಾಹನು ನಿಮಗೆ (ಸತ್ಯವನ್ನು) ವಿವರಿಸ ಬಯಸುತ್ತಾನೆ ಹಾಗೂ ನಿಮಗಿಂತ ಹಿಂದಿನವರು ನಡೆದ ದಾರಿಗಳ ಕುರಿತು ನಿಮಗೆ ಮಾರ್ಗದರ್ಶನ ನೀಡಬಯಸುತ್ತಾನೆ ಮತ್ತು ಅವನು ನಿಮ್ಮೆಡೆಗೆ ಒಲಿಯ ಬಯಸುತ್ತಾನೆ. ಅಲ್ಲಾಹನು ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ.

27. ಅಲ್ಲಾಹನು ನಿಮ್ಮೆಡೆಗೆ ಒಲಿಯಬಯಸುತ್ತಾನೆ. ಅತ್ತ ಸ್ವೇಚ್ಛೆಯ ಅನುಯಾಯಿಗಳು, ನೀವು (ಸರಿ ದಾರಿಯಿಂದ) ತೀರಾ ದೂರ ಸಾಗಿ ಬಿಡಬೇಕೆಂದು ಬಯಸುತ್ತಾರೆ.

28. ಅಲ್ಲಾಹನು ನಿಮ್ಮ ಮೇಲಿಂದ (ಹೊಣೆಗಳ) ಭಾರವನ್ನು ಹಗುರಗೊಳಿಸ ಬಯಸುತ್ತಾನೆ. ಮಾನವನಂತು ದುರ್ಬಲನಾಗಿಯೇ ಸೃಷ್ಟಿಸಲ್ಪಟ್ಟಿದ್ದಾನೆ.

29. ವಿಶ್ವಾಸಿಗಳೇ, ನೀವು ಪರಸ್ಪರರ ಸಂಪತ್ತನ್ನು ಅಕ್ರಮ ವಿಧಾನಗಳಿಂದ ಕಬಳಿಸಬೇಡಿ – ಪರಸ್ಪರ ಒಪ್ಪಿಗೆಯಿಂದ ವ್ಯವಹಾರ ನಡೆಸಿ ಆದಾಯ ಸಂಪಾದಿಸುವುದು ತಪ್ಪಲ್ಲ. ಪರಸ್ಪರ ಯಾರದೇ ಹತ್ಯೆ ನಡೆಸಬೇಡಿ – ಅಲ್ಲಾಹನಂತು ನಿಮ್ಮ ಪಾಲಿಗೆ ಸದಾ ಕರುಣಾಮಯಿಯಾಗಿದ್ದಾನೆ.

30. (ಆದಾಯಕ್ಕಾಗಿ) ಆ ರೀತಿ ಅತಿರೇಕ ಹಾಗೂ ಅನ್ಯಾಯ ಎಸಗಿದವರನ್ನು ನಾವು ಶೀಘ್ರವೇ ನರಕದ ಬೆಂಕಿಯೊಳಗೆ ಎಸೆಯಲಿದ್ದೇವೆ. ಅಲ್ಲಾಹನ ಮಟ್ಟಿಗೆ ಇದೆಲ್ಲಾ ಸುಲಭವಾಗಿದೆ.

 31. ನಿಮ್ಮ ಪಾಲಿಗೆ ನಿಷೇಧಿಸಲಾಗಿರುವ ಮಹಾ ಪಾತಕಗಳಿಂದ ನೀವು ದೂರ ಉಳಿದರೆ, ನಿಮ್ಮ ಸಣ್ಣ ಪುಟ್ಟ ಪಾಪಗಳನ್ನೆಲ್ಲಾ ನಾವು ನಿವಾರಿಸುವೆವು ಮತ್ತು ಬಹಳ ಗೌರವಾನ್ವಿತ ನೆಲೆಯೊಂದರೊಳಗೆ ನಿಮ್ಮನ್ನು ಸೇರಿಸುವೆವು.

32. ಅಲ್ಲಾಹನು ನಿಮ್ಮಲ್ಲಿನ ಕೆಲವರಿಗೆ ಮತ್ತೆ ಕೆಲವರಿಗಿಂತ ಹೆಚ್ಚಾಗಿ ದಯಪಾಲಿಸಿರುವ ಅನುಗ್ರಹಕ್ಕಾಗಿ ಆಶೆ ಪಡಬೇಡಿ. ಪುರುಷರು ಸಂಪಾದಿಸಿದ್ದು ಅವರಿಗೆ (ಪುರುಷರಿಗೆ) ಮತ್ತು ಸ್ತ್ರೀಯರು ಸಂಪಾದಿಸಿದ್ದು ಅವರಿಗೆ (ಸ್ತ್ರೀ ಯರಿಗೆ) ಸಲ್ಲುವುದು. ಅಲ್ಲಾಹನಲ್ಲಿ ಅವನ ಅನುಗ್ರಹವನ್ನು ಬೇಡಿರಿ. ಅಲ್ಲಾಹನು ಖಂಡಿತವಾಗಿಯೂ ಎಲ್ಲವನ್ನೂ ಚೆನ್ನಾಗಿ ಬಲ್ಲನು.

33. ನಾವು ಪ್ರತಿಯೊಬ್ಬರಿಗೂ ಅವರ ಹೆತ್ತವರು ಅಥವಾ ನಿಕಟ ಬಂಧುಗಳು ತೊರೆದು ಹೋಗುವ ಸೊತ್ತಿನಲ್ಲಿ ಉತ್ತರಾಧಿಕಾರವನ್ನು ನಿಗದಿ ಪಡಿಸಿದ್ದೇವೆ. ಇನ್ನು ಯಾರ ಜೊತೆ ನೀವು ಕರಾರು ಮಾಡಿಕೊಂಡಿರುವಿರೋ ಅವರಿಗೆ ಅವರ ಪಾಲನ್ನು ನೀಡಿರಿ. ಖಂಡಿತವಾಗಿಯೂ ಅಲ್ಲಾಹನು ಎಲ್ಲದಕ್ಕೂ ನೇರ ಸಾಕ್ಷಿಯಾಗಿದ್ದಾನೆ.

 34. ಪುರುಷರು ಸ್ತ್ರೀಯರ ಸಂರಕ್ಷಕರು. ಏಕೆಂದರೆ, ಅಲ್ಲಾಹನು ನಿಮ್ಮಲ್ಲಿ ಕೆಲವರಿಗೆ ಮತ್ತೆ ಕೆಲವರಿಗಿಂತ ಹಿರಿಮೆಯನ್ನು ದಯಪಾಲಿಸಿರುತ್ತಾನೆ ಮತ್ತು ಅವರು (ಪುರುಷರು) ತಮ್ಮ ಸಂಪತ್ತಿನಿಂದ (ಕುಟುಂಬಕ್ಕಾಗಿ) ಖರ್ಚು ಮಾಡುತ್ತಾರೆ. ಸಜ್ಜನ ಸ್ತ್ರೀಯರು ವಿಧೇಯರಾಗಿರುತ್ತಾರೆ ಮತ್ತು ಅಲ್ಲಾಹನು ರಕ್ಷಿಸಬೇಕೆಂದಿರುವುದನ್ನು (ತಮ್ಮ ಮಾನವನ್ನು ಹಾಗೂ ಪತಿಯ ಸೊತ್ತುಗಳನ್ನು) ಗುಪ್ತ ಸ್ಥಿತಿಯಲ್ಲೂ (ಪತಿಯ ಅನುಪಸ್ಥಿತಿಯಲ್ಲೂ) ರಕ್ಷಿಸುವವರಾಗಿರುತ್ತಾರೆ. ನಿಮಗೆ ವಿದ್ರೋಹದ ಆತಂಕವಿರುವಂತಹ ಮಹಿಳೆಯರಿಗೆ ಉಪದೇಶಿಸಿರಿ. (ಅವರು ತಿದ್ದಿಕೊಳ್ಳದಿದ್ದರೆ) ಆ ಬಳಿಕ ಮಲಗುವಲ್ಲಿ ಅವರನ್ನು ಒಂಟಿಯಾಗಿ ಬಿಡಿರಿ ಮತ್ತು (ಆಗಲೂ ಅವರು ತಮ್ಮನ್ನು ತಿದ್ದಿಕೊಳ್ಳದಿದ್ದರೆ,) ಅವರನ್ನು ದಂಡಿಸಿರಿ. ಇನ್ನು ಅವರು ನಿಮಗೆ ವಿಧೇಯರಾದರೆ, ಅವರ ವಿರುದ್ಧ (ಆರೋಪ ಅಥವಾ ಕಿರುಕುಳಕ್ಕೆ) ದಾರಿ ಹುಡುಕುತ್ತಿರಬೇಡಿ. ಅಲ್ಲಾಹನು ಖಂಡಿತವಾಗಿಯೂ ಉನ್ನತನೂ ಮಹಾನನೂ ಆಗಿರುತ್ತಾನೆ.

 35. ನಿಮಗಿನ್ನು ಅವರಿಬ್ಬರ (ದಂಪತಿಯರ) ನಡುವೆ ಬಿಕ್ಕಟ್ಟಿನ ಭಯವಿದ್ದರೆ ಆತನ ಕುಟುಂಬದಿಂದ ಒಬ್ಬ ಮಧ್ಯಸ್ಥನನ್ನು ಹಾಗೂ ಆಕೆಯ ಕುಟುಂಬದಿಂದಲೂ ಒಬ್ಬ ಮಧ್ಯಸ್ಥನನ್ನು ನೇಮಿಸಿರಿ. ಅವರಿಬ್ಬರೂ ಸುಧಾರಣೆಯನ್ನು ಬಯಸಿದ್ದರೆ, ಅಲ್ಲಾಹನು ಅವರ ನಡುವೆ ಸಾಮರಸ್ಯವನ್ನು ಬೆಳೆಸುವನು. ಅಲ್ಲಾಹನಂತು ಸರ್ವಜ್ಞನೂ ಎಲ್ಲ ವಿಷಯಗಳ ಕುರಿತು ಜಾಗೃತನೂ ಆಗಿರುವನು.

 36. ಅಲ್ಲಾಹನನ್ನೇ ಪೂಜಿಸಿರಿ ಮತ್ತು ಅವನ ಜೊತೆ ಏನನ್ನೂ ಸೇರಿಸಬೇಡಿ. ಹೆತ್ತವರ ವಿಷಯದಲ್ಲಿ ಹಾಗೂ ಆಪ್ತ ಬಂಧುಗಳು, ಅನಾಥರು, ಬಡವರು, ನೆರೆಯಲ್ಲಿರುವ ಬಂಧುಗಳು, ನೆರೆಯಲ್ಲಿರುವ ಅಪರಿಚಿತರು, ಜೊತೆಗಾರರು, ಪ್ರಯಾಣಿಕರು ಮತ್ತು ನಿಮ್ಮ ಮಾಲಕತ್ವದಲ್ಲಿ ಇರುವವರ ವಿಷಯದಲ್ಲಿ ಸೌಜನ್ಯ ತೋರಿರಿ. ಖಂಡಿತವಾಗಿಯೂ ಅಲ್ಲಾಹನು ಅಹಂಕಾರಿಗಳನ್ನು ಮತ್ತು ಸ್ವತಃ ತಮ್ಮನ್ನೇ ಹೊಗಳಿಕೊಳ್ಳುವವರನ್ನು ಪ್ರೀತಿಸುವುದಿಲ್ಲ.

37. (ಹಾಗೆಯೇ,) ಜಿಪುಣತೆ ತೋರುವವರನ್ನು, ಜನರಿಗೆ ಜಿಪುಣತೆ ಬೋಧಿಸುವವರನ್ನು ಮತ್ತು ಅಲ್ಲಾಹನು ತನ್ನ ಅನುಗ್ರಹದಿಂದ ತಮಗೆ ನೀಡಿರುವುದನ್ನು ಬಚ್ಚಿಡುವವರನ್ನು (ಅಲ್ಲಾಹನು ಪ್ರೀತಿಸುವುದಿಲ್ಲ). ಧಿಕ್ಕಾರಿಗಳಿಗಾಗಿ ನಾವು ಅಪಮಾನಕಾರಿ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದೇವೆ.

38. ತಮ್ಮ ಸಂಪತ್ತನ್ನು ಜನರಿಗೆ ತೋರಿಸಲಿಕ್ಕಾಗಿ ಖರ್ಚು ಮಾಡುವವರು ಹಾಗೂ ಅಲ್ಲಾಹನಲ್ಲಾಗಲಿ ಪರಲೋಕದಲ್ಲಾಗಲಿ ನಂಬಿಕೆ ಇಲ್ಲದವರು (ಶಿಕ್ಷಾರ್ಹರು). ಶೈತಾನನು ಯಾರ ಸಂಗಾತಿಯಾದನೋ (ಆತನು ತಿಳಿದಿರಲಿ) ಅವನು ತುಂಬಾ ಕೆಟ್ಟ ಸಂಗಾತಿ.

39. ಅವರು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಇಟ್ಟಿದ್ದರೆ ಮತ್ತು ಅಲ್ಲಾಹನು ಅವರಿಗೆ ನೀಡಿರುವುದರಿಂದ ಖರ್ಚು ಮಾಡಿದ್ದರೆ, ಅವರಿಗೇನಾಗುತ್ತಿತ್ತು? ಅಲ್ಲಾಹನಂತು ಅವರನ್ನು ಚೆನ್ನಾಗಿ ಬಲ್ಲನು.

40. ಖಂಡಿತವಾಗಿಯೂ ಅಲ್ಲಾಹನು ಕಿಂಚಿತ್ತೂ ಅನ್ಯಾಯವೆಸಗುವುದಿಲ್ಲ. ಒಂದು ಸತ್ಕರ್ಮವಿದ್ದರೆ, ಅವನು ಅದನ್ನು ಹಲವು ಪಟ್ಟು ಹೆಚ್ಚಿಸಿ, ತನ್ನ ವತಿಯಿಂದ ಭಾರೀ ಭವ್ಯ ಪ್ರತಿಫಲವನ್ನು ನೀಡುತ್ತಾನೆ.

 41. (ದೂತರೇ,) ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬ ಸಾಕ್ಷಿಯನ್ನು ಮುಂದೆ ತಂದಾಗ ಮತ್ತು ಅವರ (ಧಿಕ್ಕಾರಿಗಳ) ವಿಷಯದಲ್ಲಿ ನಿಮ್ಮನ್ನು ಸಾಕ್ಷಿಯಾಗಿ ಮುಂದೆ ತಂದಾಗ (ಅವರ ಸ್ಥಿತಿ) ಹೇಗಿದ್ದೀತು?

42. ಆ ದಿನ, ಧಿಕ್ಕಾರಿಗಳು ಮತ್ತು ದೇವದೂತರ ಆಜ್ಞೆ ಮೀರಿ ನಡೆದವರು, ತಾವು ನೆಲಸಮರಾಗಿದ್ದರೆ ಚೆನ್ನಾಗಿತ್ತೆಂದು ಹಂಬಲಿಸುವರು. ಏನನ್ನೂ ಅಲ್ಲಾಹನಿಂದ ಬಚ್ಚಿಡಲು ಅವರಿಗೆ ಸಾಧ್ಯವಾಗದು.

 43. ವಿಶ್ವಾಸಿಗಳೇ, ನೀವು (ಮದ್ಯದ) ಅಮಲಿನಲ್ಲಿರುವಾಗ – ನೀವೇನು ಹೇಳುತ್ತಿರುವಿರಿ ಎಂಬುದು ನಿಮಗೆ ತಿಳಿಯುವ ತನಕ – ನಮಾಝ್‌ನ ಹತ್ತಿರ ಹೋಗಬಾರದು. ಸಂಭೋಗಾನಂತರದ ಸ್ಥಿತಿಯಲ್ಲೂ – ನೀವು ಸ್ನಾನ ಮಾಡುವ ತನಕ (ನಮಾಝನ್ನು ಸಮೀಪಿಸಬಾರದು) – ನೀವು ಪ್ರಯಾಣಿಸುತ್ತಿರುವಾಗಿನ ಹೊರತು. ಇನ್ನು ನೀವು ರೋಗಿಗಳಾಗಿದ್ದರೆ, ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲೊಬ್ಬರು ಶೌಚಾಲಯದಿಂದ ಬಂದಿದ್ದರೆ ಅಥವಾ ನೀವು ಮಹಿಳೆಯರನ್ನು (ಲೈಂಗಿಕವಾಗಿ) ಸಂಪರ್ಕಿಸಿದ್ದರೆ ಮತ್ತು ಆ ಬಳಿಕ ನಿಮಗೆ ನೀರು ಸಿಗದಿದ್ದರೆ ನಿರ್ಮಲ ಮಣ್ಣಿನಿಂದ ‘ತಯಮ್ಮಮ್’ ಮಾಡಿರಿ – (ಅಂದರೆ) ಅದನ್ನು ಸ್ಪರ್ಶಿಸಿ ನಿಮ್ಮ ಮುಖ ಮತ್ತು ಕೈಗಳನ್ನು ಸವರಿಕೊಳ್ಳಿರಿ. ಅಲ್ಲಾಹನು ಖಂಡಿತವಾಗಿಯೂ (ಪ್ರಮಾದಗಳನ್ನು) ಕಡೆಗಣಿಸುವವನೂ (ಪಾಪಗಳನ್ನು) ಕ್ಷಮಿಸುವವನೂ ಆಗಿದ್ದಾನೆ.

44. ನೀವು ಕಾಣಲಿಲ್ಲವೆ, ದಿವ್ಯ ಗ್ರಂಥದಲ್ಲಿನ ಭಾಗವೊಂದನ್ನು ನೀಡಲಾಗಿದ್ದವರು ಸ್ವತಃ ದಾರಿಗೇಡಿತನವನ್ನು ಖರೀದಿಸಿಕೊಳ್ಳುತ್ತಿದ್ದಾರೆ ಮತ್ತು ನಿಮ್ಮನ್ನೂ ಸರಿದಾರಿಯಿಂದ ದೂರಗೊಳಿಸಬಯಸುತ್ತಾರೆ.

45. ನಿಮ್ಮ ಶತ್ರುಗಳನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. (ನಿಮಗೆ) ರಕ್ಷಕನಾಗಿ ಅಲ್ಲಾಹನೇ ಸಾಕು ಮತ್ತು ಸಹಾಯಕನಾಗಿಯೂ ಅಲ್ಲಾಹನೇ ಸಾಕು.

 46. ಯಹೂದಿಗಳ ಪೈಕಿ ಕೆಲವರು, ಮಾತನ್ನು ಅದರ ಮೂಲದಿಂದ ಸರಿಸಿ ವಿಕೃತಗೊಳಿಸಿಬಿಡುತ್ತಾರೆ ಮತ್ತು ಅವರು ‘‘ಸಮಿಅ್ನಾ ವಅಸೈನಾ’’ (ನಾವು ಕೇಳಿದೆವು ಮತ್ತು ಅವಿಧೇಯರಾದೆವು) ಎಂದೂ ‘‘ಇಸ್ಮಅ್ ಗೈರ ಮುಸ್ಮಇನ್’’ (ಕೇಳಿರಿ-ನೀವು ಕೇಳಿಸುವುದಕ್ಕೆ ಅರ್ಹರಲ್ಲ) ಎಂದೂ ‘‘ರಾಇನಾ’’ (ನಮ್ಮ ಕುರಿ ಕಾಯುವವನು) ಎಂದೂ ಹೇಳುತ್ತಾರೆ – ಅವರು ಈ ರೀತಿ ತಮ್ಮ ನಾಲಿಗೆಯನ್ನು ತಿರುಚಿ, ಧರ್ಮಕ್ಕೆ ಅಪಚಾರವೆಸಗುತ್ತಾರೆ. ನಿಜವಾಗಿ ಅವರು ‘ಸಮಿಅ್ನಾ ವಅತಅ್ನಾ’ (ನಾವು ಕೇಳಿದೆವು ಮತ್ತು ಅನುಸರಿಸಿದೆವು) ‘ವಸ್ಮಅ’ (ಕೇಳಿರಿ) ಮತ್ತು ಉಂಝುರ್ನಾ (ನಮ್ಮನ್ನು ನೋಡಿರಿ) ಎಂದಿದ್ದರೆ ಅದು ಅವರ ಪಾಲಿಗೇ ಉತ್ತಮವಾಗಿತ್ತು ಮತ್ತು ಅದು ಹೆಚ್ಚು ಪಕ್ವ ನಡವಳಿಕೆಯಾಗಿರುತ್ತಿತ್ತು. ಆದರೆ ಅವರ ಧಿಕ್ಕಾರಿ ಧೋರಣೆಯ ಕಾರಣ ಅಲ್ಲಾಹನು ಅವರನ್ನು ಶಪಿಸಿರುವನು – ಆದ್ದರಿಂದಲೇ ಅವರಲ್ಲಿ ತೀರಾ ಕಡಿಮೆ ಮಂದಿ ಮಾತ್ರ ನಂಬಿಕೆ ಉಳ್ಳವರಾಗಿದ್ದಾರೆ.

47. ಗ್ರಂಥ ನೀಡಲ್ಪಟ್ಟವರೇ, (ಇದೀಗ) ನಾವು ಇಳಿಸಿಕೊಟ್ಟಿರುವುದರಲ್ಲಿ (ಕುರ್‌ಆನ್‌ನಲ್ಲಿ) ನಂಬಿಕೆ ಇಡಿರಿ – ಅದು, ಹಿಂದಿನಿಂದಲೇ ನಿಮ್ಮ ಬಳಿ ಇರುವುದನ್ನು (ತೌರಾತ್ ಹಾಗೂ ಇಂಜೀಲ್ ಗ್ರಂಥಗಳನ್ನು) ಸಮರ್ಥಿಸುತ್ತದೆ. ನಾವು ಅವರ (ಧಿಕ್ಕಾರಿಗಳ) ಮುಖಗಳನ್ನು ವಿಕೃತಗೊಳಿಸಿ ಅವುಗಳನ್ನು ಹಿಂದಕ್ಕೆ ತಿರುಚಿ ಬಿಡುವ ಅಥವಾ (ಈ ಹಿಂದೆ) ‘ಶನಿವಾರದವರನ್ನು’ ಶಪಿಸಿದಂತೆ ಅವರನ್ನು ಶಪಿಸಿ ಬಿಡುವ ಮುನ್ನ (ಅವರು ನಂಬಿಕೆ ಇಡಲಿ). ಅಲ್ಲಾಹನ ಆದೇಶವಂತೂ ಖಂಡಿತ ಅನುಷ್ಠಾನವಾಗುತ್ತದೆ.

 48. ತನ್ನ ಜೊತೆ (ಯಾರನ್ನಾದರೂ) ಪಾಲುದಾರರಾಗಿಸುವುದನ್ನು ಅಲ್ಲಾಹನು ಖಂಡಿತ ಕ್ಷಮಿಸುವುದಿಲ್ಲ – ಅದರ ಹೊರತು ಬೇರಾವುದನ್ನೂ ಅವನು ತಾನಿಚ್ಛಿಸುವವರ ಪಾಲಿಗೆ ಕ್ಷಮಿಸಿ ಬಿಡುತ್ತಾನೆ. ಅಲ್ಲಾಹನ ಜೊತೆ ಪಾಲುದಾರರನ್ನು ಸೇರಿಸುವವನು ಮಹಾ ಸುಳ್ಳಾರೋಪವನ್ನು ಹೊರಿಸಿದನು.

49. ತಾವು ಭಾರೀ ಪರಿಶುದ್ಧರೆಂದು ಹೇಳಿಕೊಳ್ಳುತ್ತಿರುವವರನ್ನು ನೀವು ಕಂಡಿರಾ? ನಿಜವಾಗಿ ಅಲ್ಲಾಹನೇ ತಾನಿಚ್ಛಿಸಿದವರನ್ನು ಪರಿಶುದ್ಧರಾಗಿಸುತ್ತಾನೆ. (ಅವನ ಕಡೆಯಿಂದ) ಯಾರ ಮೇಲೂ ಎಳ್ಳಷ್ಟೂ ಅನ್ಯಾಯವಾಗದು.

50. ಅವರು ಅಲ್ಲಾಹನ ಮೇಲೆ ಎಂತೆಂತಹ ಸುಳ್ಳಾರೋಪಗಳನ್ನು ಹೊರಿಸುತ್ತಿದ್ದಾರೆಂದು ನೋಡಿರಿ! (ಅವರ ವಿನಾಶಕ್ಕೆ) ಈ ಸ್ಪಷ್ಟ ಸುಳ್ಳಾರೊಪಗಳೇ ಸಾಕು.

51. ಗ್ರಂಥದ ಒಂದು ಭಾಗವನ್ನು ನೀಡಲಾಗಿದ್ದವರನ್ನು ನೀವು ಕಂಡಿರಾ? ಅವರು ಜಿಬ್ತ್ (ಮಾಟ,ಮಂತ್ರ) ಮತ್ತು ತಾಗೂತ್ (ಶೈತಾನ)ನಲ್ಲಿ ನಂಬಿಕೆ ಇಡುತ್ತಾರೆ. ಅವರು ಧಿಕ್ಕಾರಿಗಳ ಕುರಿತು ‘‘ವಿಶ್ವಾಸಿಗಳಿಗಿಂತ ಇವರೇ ಹೆಚ್ಚು ಸರಿದಾರಿಯಲ್ಲಿದ್ದಾರೆ’’ ಎನ್ನುತ್ತಾರೆ.

52. ಅಲ್ಲಾಹನು ಶಪಿಸಿರುವುದು ಅವರನ್ನೇ. ಇನ್ನು ಅಲ್ಲಾಹನು ಯಾರನ್ನಾದರೂ ಶಪಿಸಿ ಬಿಟ್ಟರೆ, ಮತ್ತೆ ಅವನ ಪರವಾಗಿ ನಿಮಗೆ ಯಾವ ಸಹಾಯಕನೂ ಸಿಗಲಾರನು.

53. ಯಾವುದಾದರೂ ಸಾಮ್ರಾಜ್ಯದ ಭಾಗವು ಅವರ ಕೈಯಲ್ಲಿದೆಯೇ? ಹಾಗೆ ಇದ್ದಿದ್ದರೂ ಅವರು ಜನರಿಗೆ ಚಿಕ್ಕಾಸನ್ನೂ ನೀಡುತ್ತಿರಲಿಲ್ಲ.

54. ಅವರೇನು, ಅಲ್ಲಾಹನು ತನ್ನ ಅನುಗ್ರಹದಿಂದ ಜನರಿಗೆ ನೀಡಿರುವುದಕ್ಕಾಗಿ ಅವರ (ಜನರ) ಕುರಿತು ಅಸೂಯೆ ಪಡುತ್ತಿದ್ದಾರೆಯೆ? ನಾವು ಇಬ್ರಾಹೀಮರ ಸಂತತಿಗೆ (ದಿವ್ಯ) ಗ್ರಂಥವನ್ನು ಹಾಗೂ ಯುಕ್ತಿಯನ್ನು ನೀಡಿರುವೆವು ಮತ್ತು ಅವರಿಗೊಂದು ಭವ್ಯ ಸಾಮ್ರಾಜ್ಯವನ್ನೂ ನೀಡಿದ್ದೆವು.

55. ಅವರಲ್ಲಿ ಕೆಲವರು ಅದನ್ನು (ದಿವ್ಯ ಗ್ರಂಥವನ್ನು) ನಂಬಿದರು ಮತ್ತು ಕೆಲವರು ಅದರಿಂದ ದೂರ ಉಳಿದುಕೊಂಡರು. (ಅಂಥವರಿಗೆ) ಭುಗಿಲೆದ್ದು ಉರಿಯುವ ನರಕಾಗ್ನಿಯೇ ಸಾಕು.

 56. ನಮ್ಮ ವಚನಗಳನ್ನು ಧಿಕ್ಕರಿಸುವವರನ್ನು ಖಂಡಿತವಾಗಿಯೂ ನಾವು ಬಹುಬೇಗನೇ ನರಕಾಗ್ನಿಯೊಳಗೆ ಎಸೆಯಲಿದ್ದೇವೆ. (ಅಲ್ಲಿ) ಅವರು ಶಿಕ್ಷೆಯನ್ನು ಸವಿಯುತ್ತಲೇ ಇರಲೆಂದು, ಅವರ ಚರ್ಮವು ಬೆಂದು ಕರಗಿ ಹೋದಾಗ, ನಾವು ಅದರ ಬದಲಿಗೆ ಅವರಿಗೆ ಹೊಸ ಚರ್ಮವನ್ನು ತೊಡಿಸುವೆವು. ಖಂಡಿತವಾಗಿಯೂ ಅಲ್ಲಾಹನು ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ.

57. ಮತ್ತು ನಾವು, ವಿಶ್ವಾಸಿಗಳಾಗಿದ್ದವರು ಹಾಗೂ ಸತ್ಕರ್ಮಗಳನ್ನು ಮಾಡುತ್ತಿದ್ದವರನ್ನು, ತಳಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗ ತೋಟಗಳೊಳಗೆ ಸೇರಿಸುವೆವು. ಅಲ್ಲಿ ಅವರು ಸದಾಕಾಲ ಇರುವರು. ಅವರಿಗೆ ಅಲ್ಲಿ ಶುದ್ಧ ಪತ್ನಿಯರು ಇರುವರು ಮತ್ತು ನಾವು ಅವರನ್ನು ದಟ್ಟ ನೆರಳಿನೊಳಗೆ ಸೇರಿಸುವೆವು.

58. ನಿಮ್ಮನ್ನು ನಂಬಿ ನಿಮಗೊಪ್ಪಿಸಲಾದ ಸೊತ್ತನ್ನು ನೀವು ಅದರ ನೈಜ ಮಾಲಕರಿಗೆ ಮರಳಿಸಬೇಕೆಂದು ಹಾಗೂ ನೀವು ಜನರ ನಡುವೆ ತೀರ್ಪು ನೀಡುವಾಗ ನ್ಯಾಯೋಚಿತವಾಗಿ ತೀರ್ಪು ನೀಡಬೇಕೆಂದು ಅಲ್ಲಾಹನು ನಿಮಗೆ ಆದೇಶಿಸುತ್ತಿದ್ದಾನೆ. ಖಂಡಿತವಾಗಿಯೂ ಅಲ್ಲಾಹನು ಅತ್ಯುತ್ತಮ ಉಪದೇಶ ನೀಡುವವನಾಗಿದ್ದಾನೆ. ನಿಸ್ಸಂದೇಹವಾಗಿಯೂ ಅಲ್ಲಾಹನು ಎಲ್ಲವನ್ನೂ ಕೇಳುತ್ತಾನೆ, ಎಲ್ಲವನ್ನೂ ಕಾಣುತ್ತಾನೆ.

  59. ವಿಶ್ವಾಸಿಗಳೇ, ಅಲ್ಲಾಹನ ಆದೇಶ ಪಾಲಿಸಿರಿ ಮತ್ತು ಅಲ್ಲಾಹನ ದೂತರ ಹಾಗೂ ನಿಮ್ಮ ಪೈಕಿ ಅಧಿಕಾರ ಸ್ಥಾನದಲ್ಲಿರುವವರ ಆದೇಶ ಪಾಲಿಸಿರಿ. ನೀವು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಯಾವುದಾದರೂ ವಿಷಯದಲ್ಲಿ ನಿಮ್ಮ ನಡುವೆ ವಿವಾದ ಉಂಟಾದಾಗ, ಅದನ್ನು ಅಲ್ಲಾಹ್ ಮತ್ತವನ ದೂತರೆಡೆಗೆ ಮರಳಿಸಿರಿ. ಇದುವೇ ಅತ್ಯುತ್ತಮ ಧೋರಣೆಯಾಗಿದೆ ಹಾಗೂ ಇದರ ಪರಿಣಾಮವು ಉತ್ತಮವಾಗಿರುತ್ತದೆ.

60. ನಿಮ್ಮೆಡೆಗೆ ಇಳಿಸಲಾಗಿರುವುದನ್ನೂ (ಕುರ್‌ಆನ್‌ಅನ್ನೂ) ನಿಮಗಿಂತ ಹಿಂದೆ ಇಳಿಸಲಾಗಿರುವುದನ್ನೂ (ತೌರಾತ್ ಮತ್ತು ಇಂಜೀಲ್‌ಗಳನ್ನೂ) ತಾವು ನಂಬಿರುವುದಾಗಿ ಹೇಳಿಕೊಳ್ಳುತ್ತಿರುವವರನ್ನು ನೀವು ಕಂಡಿರಾ? ಅವರು ತಮ್ಮ ವಿವಾದಗಳ ತೀರ್ಪನ್ನು ಅಕ್ರಮ ಶಕ್ತಿಗಳಿಗೆ ಒಪ್ಪಿಸಬಯಸುತ್ತಾರೆ. ನಿಜವಾಗಿ ಆ ಶಕ್ತಿಗಳನ್ನು ಧಿಕ್ಕರಿಸಬೇಕೆಂದು ಅವರಿಗೆ ಆದೇಶಿಸಲಾಗಿದೆ. ಶೈತಾನನು ಅವರನ್ನು ದಾರಿಗೆಡಿಸಿ ದಾರಿಗೇಡಿತನದಲ್ಲಿ ಬಹಳ ದೂರ ಒಯ್ಯ ಬಯಸುತ್ತಾನೆ.

61. (ದೂತರೇ,) ‘‘ಅಲ್ಲಾಹನು ಇಳಿಸಿಕೊಟ್ಟಿರುವುದರ ಕಡೆಗೆ (ಕುರ್‌ಆನ್‌ನೆಡೆಗೆ) ಮತ್ತು (ಅವನ) ದೂತರೆಡೆಗೆ ಬನ್ನಿರಿ’’ ಎಂದು ಕಪಟಿಗಳೊಡನೆ ಹೇಳಿದಾಗ, ಅವರು ನಿಮ್ಮಿಂದ ಹಿಂಜರಿದು ದೂರ ಸರಿಯುವುದನ್ನು ನೀವು ಕಾಣುತ್ತೀರಿ.

62. ಹೇಗಿದೆ! ಸ್ವತಃ ಅವರದೇ ಕೈಗಳ ಗಳಿಕೆಯ ಕಾರಣ ಅವರಿಗೇನಾದರೂ ವಿಪತ್ತು ಎದುರಾದಾಗ ಅವರು ನಿಮ್ಮ ಬಳಿಗೆ ಬಂದು ಅಲ್ಲಾಹನ ಹೆಸರಲ್ಲಿ ಆಣೆ ಹಾಕಿ ‘‘ನಾವು ಕೇವಲ ಹಿತವನ್ನು ಮತ್ತು ಸಾಮರಸ್ಯವನ್ನು ಮಾತ್ರ ಬಯಸಿದ್ದೆವು’’ ಎನ್ನುತ್ತಾರೆ.

 

  63. ಅವರ ಮನಸ್ಸುಗಳೊಳಗೆ ಇರುವುದನ್ನೆಲ್ಲಾ ಅಲ್ಲಾಹನು ಬಲ್ಲನು. ಸದ್ಯ ನೀವು ಅವರನ್ನು ಕಡೆಗಣಿಸಿರಿ ಮತ್ತು (ಅದೇ ವೇಳೆ) ಅವರಿಗೆ ಉಪದೇಶಿಸಿರಿ ಹಾಗೂ ಅವರ ಜೊತೆ, ಅವರ ಅಂತರಾಳಕ್ಕೆ ನಾಟುವಂತಹ ಮಾತನ್ನಾಡಿರಿ.

64. ನಾವು ಪ್ರತಿಯೊಬ್ಬ ದೂತರನ್ನೂ ಅಲ್ಲಾಹನ ಆದೇಶ ಪ್ರಕಾರ (ಜನರು) ಅವರನ್ನು ಅನುಸರಿಸಬೇಕೆಂದೇ ಕಳುಹಿಸಿರುವೆವು. (ದೂತರೇ,) ಒಂದು ವೇಳೆ ಆ ಜನರು ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಾಗಲೇ ನಿಮ್ಮ ಬಳಿಗೆ ಬಂದು ಅಲ್ಲಾಹನ ಬಳಿ ಕ್ಷಮೆಯನ್ನು ಬೇಡಿದ್ದರೆ ಮತ್ತು (ಅಲ್ಲಾಹನ) ದೂತರು ಅವರ ಕ್ಷಮೆಗಾಗಿ ಪ್ರಾರ್ಥಿಸಿದ್ದರೆ – ಖಂಡಿತವಾಗಿಯೂ ಅವರು ಅಲ್ಲಾಹನನ್ನು, ಪಶ್ಚಾತ್ತಾಪ ಸ್ವೀಕರಿಸುವವನಾಗಿಯೂ ಕರುಣಾಮಯಿಯಾಗಿಯೂ ಕಾಣುತ್ತಿದ್ದರು.

 65. (ದೂತರೇ,) ನಿಮ್ಮೊಡೆಯನಾಣೆ! ಅವರು ತಮ್ಮ ನಡುವೆ ವಿವಾದವಿರುವ ವಿಷಯಗಳಲ್ಲಿ ನಿಮ್ಮನ್ನು ತೀರ್ಪುಗಾರರಾಗಿ ಒಪ್ಪುವ ತನಕ ಮತ್ತು ನಿಮ್ಮ ತೀರ್ಪಿನ ಕುರಿತು ತಮ್ಮ ಮನದಲ್ಲಿ ಯಾವುದೇ ಹಿಂಜರಿಕೆಯನ್ನು ಕಾಣದೆ ಅದನ್ನು ಮನಸಾರೆ ಒಪ್ಪಿಕೊಳ್ಳುವ ತನಕ – ಅವರು ವಿಶ್ವಾಸಿಗಳಾಗುವುದಿಲ್ಲ.

66. ಒಂದು ವೇಳೆ ನಾವು ಅವರಿಗೆ – ‘‘ನೀವು ನಿಮ್ಮನ್ನೇ ಕೊಂದು ಕೊಳ್ಳಿರಿ’’ ಅಥವಾ ‘‘ನಿಮ್ಮ ಮನೆಗಳನ್ನು ಬಿಟ್ಟು ಹೊರಟು ಹೋಗಿರಿ’’ ಎಂದು ವಿಧಿಸಿದ್ದರೆ, ಅವರಲ್ಲಿ ಕೆಲವೇ ಮಂದಿಯ ಹೊರತು ಬೇರಾರೂ ಅದನ್ನು ಪಾಲಿಸುತ್ತಿರಲಿಲ್ಲ. ನಿಜವಾಗಿ ಅವರು ತಮಗೆ ಉಪದೇಶಿಸಲಾದುದನ್ನು ಅನುಸರಿಸಿದ್ದರೆ, ಅದು ಅವರ ಪಾಲಿಗೆ ಉತ್ತಮವಾಗಿರುತ್ತಿತ್ತು ಮತ್ತು ಅದರಿಂದ ಅವರಿಗೆ ಸಾಕಷ್ಟು ಸ್ಥಿರತೆಯೂ ಒದಗುತ್ತಿತ್ತು.

67. ಮತ್ತು ಹಾಗಿರುತ್ತಿದ್ದರೆ ನಾವು, ನಮ್ಮ ಕಡೆಯಿಂದಲೂ ಅವರಿಗೆ ಭಾರೀ ಪ್ರತಿಫಲವನ್ನು ನೀಡುತ್ತಿದ್ದೆವು.

68. ಮತ್ತು ನಾವು ಅವರಿಗೆ ನೇರ ಮಾರ್ಗವನ್ನು ತೋರಿಸಿ ಕೊಡುತ್ತಿದ್ದೆವು.

69. ಅಲ್ಲಾಹನ ಹಾಗೂ ಅವನ ದೂತರ ಆಜ್ಞಾಪಾಲನೆ ಮಾಡುವವರು (ಸ್ವರ್ಗದಲ್ಲಿ), ಅಲ್ಲಾಹನಿಂದ ಪುರಸ್ಕೃತರಾದ ಪ್ರವಾದಿಗಳು, ಅವರ ನಿಷ್ಠಾವಂತ ಸಂಗಾತಿಗಳು, ಹುತಾತ್ಮರು ಮತ್ತು ಸಜ್ಜನರ ಜೊತೆಗಿರುವವರು – ಅವರೇ ಶ್ರೇಷ್ಠ ಸಂಗಾತಿಗಳು.

70. ಇದು ಅಲ್ಲಾಹನ ವತಿಯಿಂದ ಇರುವ ಅನುಗ್ರಹ. ಬಲ್ಲವನಾಗಿ ಅಲ್ಲಾಹನೇ ಸಾಕು.

71. ವಿಶ್ವಾಸಿಗಳೇ, ಸದಾ ಸನ್ನದ್ಧ ಸ್ಥಿತಿಯಲ್ಲಿರಿ. ತರುವಾಯ ನೀವು (ಯುದ್ಧಕ್ಕೆ) ಪ್ರತ್ಯೇಕ ದಂಡುಗಳಾಗಿ ಹೊರಡಿರಿ ಅಥವಾ ಎಲ್ಲರೂ ಜೊತೆಯಾಗಿ ಹೊರಡಿರಿ.

72. ನಿಮ್ಮಲ್ಲಿ (ಯುದ್ಧದ ವೇಳೆ) ಹಿಂದೆಯೇ ಉಳಿದುಕೊಳ್ಳುವ ಕೆಲವರಿದ್ದಾರೆ. ಅವರು ನಿಮ್ಮ ಮೇಲೇನಾದರೂ ವಿಪತ್ತು ಬಂದೆರಗಿದಾಗ ‘‘ಅಲ್ಲಾಹನು ನನ್ನ ಮೇಲೆ ಅನುಗ್ರಹ ತೋರಿದ್ದರಿಂದ, ಆ ವೇಳೆ ನಾನು ಅವರ ಜೊತೆಗಿರಲಿಲ್ಲ’’ ಎನ್ನುತ್ತಾರೆ

73. ಇನ್ನು, ಅಲ್ಲಾಹನು ನಿಮ್ಮ ಮೇಲೇನಾದರೂ ಅನುಗ್ರಹ ತೋರಿದಾಗ, ಅವನು, ನಿಮ್ಮ ಹಾಗೂ ಅವನ ನಡುವೆ ಎಂದೂ ಯಾವುದೇ ಸ್ನೇಹ ಸಂಬಂಧ ಇರಲೇ ಇಲ್ಲವೆಂಬಂತೆ ‘‘ಅಯ್ಯೋ, ನಾನು ಅವರ ಜೊತೆಗೆ ಇದ್ದಿದ್ದರೆ ನನಗೆ ಭಾರೀ ಸೌಭಾಗ್ಯ ಸಿಕ್ಕಿ ಬಿಡುತ್ತಿತ್ತು’’ ಎನ್ನುತ್ತಾನೆ.

74. ಪರಲೋಕಕ್ಕಾಗಿ ಇಹಲೋಕದ ಬದುಕನ್ನು ಮಾರಿಕೊಂಡವರು ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕು. ಅಲ್ಲಾಹನ ಮಾರ್ಗದಲ್ಲಿ ಹೋರಾಡಿದವನು, ಹತನಾದರೂ ವಿಜಯಿಯಾದರೂ ನಾವಂತು ಅವನಿಗೆ ಬಹು ಬೇಗನೇ ಭವ್ಯ ಪ್ರತಿಫಲ ನೀಡಲಿದ್ದೇವೆ.

 75. ನಿಮಗೇನಾಗಿದೆ? ಅಲ್ಲಾಹನ ಮಾರ್ಗದಲ್ಲಿ ಮತ್ತು – ‘‘ನಮ್ಮೊಡೆಯಾ, ಅಕ್ರಮಿಗಳ ಈ ನಾಡಿನಿಂದ ನಮ್ಮನ್ನು ವಿಮೋಚಿಸು ಹಾಗೂ ನಿನ್ನ ಕಡೆಯಿಂದ ನಮಗಾಗಿ ಒಬ್ಬ ರಕ್ಷಕನನ್ನು ಕಳಿಸು ಮತ್ತು ನಿನ್ನ ಕಡೆಯಿಂದ ನಮಗಾಗಿ ಒಬ್ಬ ಸಹಾಯಕನನ್ನು ಕಳಿಸು’’ ಎಂದು ಮೊರೆ ಇಡುತ್ತಿರುವ ಮರ್ದಿತ ಪುರುಷರು, ಸ್ತ್ರೀಯರು ಮತ್ತು ಮಕ್ಕಳ ಪರವಾಗಿ ನೀವೇಕೆ ಹೋರಾಡುವುದಿಲ್ಲ?

76. ವಿಶ್ವಾಸಿಗಳು ಅಲ್ಲಾಹನ ಮಾರ್ಗದಲ್ಲಿ ಹೋರಾಡುತ್ತಾರೆ ಮತ್ತು ಧಿಕ್ಕಾರಿಗಳು ಅಕ್ರಮ ಶಕ್ತಿಗಳ ಮಾರ್ಗದಲ್ಲಿ ಹೋರಾಡುತ್ತಾರೆ. ನೀವು ಶೈತಾನನ ಆಪ್ತರ ವಿರುದ್ಧ ಹೋರಾಡಿರಿ. ಖಂಡಿತವಾಗಿಯೂ ಶೈತಾನನ ಸಂಚು ದುರ್ಬಲವಾಗಿರುತ್ತದೆ.

 77. ನೀವು ಅವರನ್ನು ಕಂಡಿರಾ? ‘‘ನಿಮ್ಮ ಕೈಗಳನ್ನು ತಡೆದಿಟ್ಟುಕೊಳ್ಳಿರಿ (ಆಕ್ರಮಣಕ್ಕೆ ಇಳಿಯಬೇಡಿ), ನಮಾಝ್‌ಅನ್ನು ಪಾಲಿಸಿರಿ ಮತ್ತು ಝಕಾತ್‌ಅನ್ನು ಪಾವತಿಸಿರಿ’’ ಎಂದು (ಈ ಹಿಂದೆ) ಅವರಿಗೆ ಆದೇಶಿಸಲಾಗಿತ್ತು. ತರುವಾಯ, ಅವರ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಲಾದಾಗ ಅವರಲ್ಲೊಂದು ಗುಂಪು, ಅಲ್ಲಾಹನಿಗೆ ಅಂಜಬೇಕಾದ ರೀತಿಯಲ್ಲಿ ಅಥವಾ ಅದಕ್ಕಿಂತಲೂ ಹೆಚ್ಚಾಗಿ ಜನರಿಗೆ ಅಂಜ ತೊಡಗಿತು. ಅವರು ‘‘ನಮ್ಮೊಡೆಯಾ, ನೀನು ನಮ್ಮ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಿದ್ದೇಕೆ? ನಮಗೆ ನೀನು ಇನ್ನಷ್ಟು ಕಾಲಾವಕಾಶವನ್ನೇಕೆ ನೀಡಲಿಲ್ಲ?’’ ಎನ್ನುತ್ತಾರೆ. ಹೇಳಿರಿ; ‘‘ಇಹಲೋಕದ ಬಂಡವಾಳವೆಲ್ಲಾ ತೀರಾ ತಾತ್ಕಾಲಿಕ. ಧರ್ಮನಿಷ್ಠರ ಪಾಲಿಗೆ ಪರಲೋಕವೇ ಉತ್ತಮವಾಗಿದೆ. (ಅಲ್ಲಿ) ನಿಮ್ಮ ಮೇಲೆ ಕಿಂಚಿತ್ತೂ ಅನ್ಯಾಯ ನಡೆಯದು.’’

  78. ನೀವೆಲ್ಲೇ ಇದ್ದರೂ ಮರಣವಂತೂ ಖಂಡಿತ ಬಂದು ನಿಮ್ಮನ್ನು ಆವರಿಸಲಿದೆ – ನೀವು ಸಂಪೂರ್ಣ ಸುಭದ್ರವಾದ ಕೋಟೆಗಳ ಒಳಗಿದ್ದರೂ ಸರಿಯೇ. (ದೂತರೇ,) ಅವರು, ತಮಗೇನಾದರೂ ಹಿತವಾದಾಗ ‘‘ಇದು ಅಲ್ಲಾಹನ ಕಡೆಯಿಂದ ಬಂದಿದೆ’’- ಎನ್ನುತ್ತಾರೆ. ಅವರಿಗೇನಾದರೂ ಅಹಿತ ಸಂಭವಿಸಿದಾಗ ಮಾತ್ರ ‘‘ಇದು ನಿಮ್ಮಿಂದಾಗಿ ಸಂಭವಿಸಿದೆ’’ ಎನ್ನುತ್ತಾರೆ. ನೀವು ‘‘ಎಲ್ಲವೂ ಅಲ್ಲಾಹನಿಂದಲೇ ಬರುತ್ತದೆ’’ ಎಂದು ಬಿಡಿರಿ. ಆ ಜನರಿಗೇನಾಗಿದೆ? ಅವರು ಯಾವ ಮಾತನ್ನೂ ಅರ್ಥಯಿಸಿ ಕೊಳ್ಳುತ್ತಿಲ್ಲವಲ್ಲಾ!

 79. (ದೂತರೇ,) ನಿಮಗೆ ತಲುಪುವ ಹಿತವೆಲ್ಲವೂ ಅಲ್ಲಾಹನ ಕಡೆಯಿಂದಲೇ ಬಂದಿರುತ್ತದೆ ಹಾಗೂ ನಿಮಗೆ ತಲುಪುವ ಅಹಿತಕ್ಕೆ ನೀವೇ ಕಾರಣರಾಗಿರುತ್ತೀರಿ. ನಾವಂತೂ ನಿಮ್ಮನ್ನು ಎಲ್ಲ ಮಾನವರೆಡೆಗೆ ದೂತರಾಗಿ ಕಳುಹಿಸಿದ್ದೇವೆ. ಇದಕ್ಕೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು.

 80. ದೇವದೂತರ ಆಜ್ಞಾಪಾಲನೆ ಮಾಡಿದವನು ನಿಜವಾಗಿ ಅಲ್ಲಾಹನ ಆಜ್ಞಾಪಾಲನೆ ಮಾಡಿದನು ಮತ್ತು (ಅದನ್ನು) ಯಾರಾದರೂ ಕಡೆಗಣಿಸಿದರೆ (ನಿಮಗೆ ನೆನಪಿರಲಿ), ನಾವೇನೂ ನಿಮ್ಮನ್ನು ಅವರ ಕಾವಲುಗಾರರಾಗಿ ಕಳಿಸಿಲ್ಲ.

 81. ಅವರು (ನಿಮ್ಮ ಮುಂದೆ), ನಾವು ವಿಧೇಯರಾದೆವು ಎನ್ನುತ್ತಾರೆ. ತರುವಾಯ ನಿಮ್ಮಲ್ಲಿಂದ ಹೊರಟುಹೋದಾಗ ಅವರಲ್ಲಿನ ಒಂದು ಗುಂಪು, ನಿಮ್ಮೊಡನೆ ಹೇಳಿದ್ದಕ್ಕೆ ವಿರುದ್ಧವಾಗಿ ರಾತ್ರಿ ಸಮಾಲೋಚನೆಗಳನ್ನು ನಡೆಸುತ್ತದೆ. ಅವರು ನಡೆಸುತ್ತಿರುವ ಸಮಾಲೋಚನೆಗಳನ್ನೆಲ್ಲಾ ಅಲ್ಲಾಹನು ದಾಖಲಿಸಿಡುತ್ತಿದ್ದಾನೆ. ನೀವು ಅವರನ್ನು ಕಡೆಗಣಿಸಿರಿ ಮತ್ತು ಅಲ್ಲಾಹನಲ್ಲಿ ಭರವಸೆ ಇಡಿರಿ. ಕಾರ್ಯಸಾಧಕನಾಗಿ ಅಲ್ಲಾಹನೇ ಸಾಕು.

82. ಅವರೇನು, ಕುರ್‌ಆನ್‌ನ ಕುರಿತು ಚಿಂತನೆ ನಡೆಸುವುದಿಲ್ಲವೆ? ಒಂದು ವೇಳೆ ಇದು ಅಲ್ಲಾಹನ ಹೊರತು ಬೇರೆ ಯಾರ ಕಡೆಯಿಂದ ಬಂದಿದ್ದರೂ, ಅವರು ಇದರಲ್ಲಿ ಹಲವು ವಿರೋಧಾಭಾಸಗಳನ್ನು ಕಾಣುತ್ತಿದ್ದರು.

    83. ಅವರು, ಶಾಂತಿಯ ಅಥವಾ ಭೀತಿಯ ಯಾವುದಾದರೂ ಮಾಹಿತಿಯು ತಮ್ಮ ಬಳಿಗೆ ಬಂದೊಡನೆ ಅದನ್ನು ಎಲ್ಲೆಡೆ ಹಬ್ಬಿ ಬಿಡುತ್ತಾರೆ. (ಇದರ ಬದಲು) ಅವರು ಆ ಮಾಹಿತಿಯನ್ನು ದೇವದೂತರಿಗೆ ಅಥವಾ ತಮ್ಮಲ್ಲಿನ ಹೊಣೆಗಾರ ವ್ಯಕ್ತಿಗಳಿಗೆ ತಲುಪಿಸಿದ್ದರೆ ಅವರ ಪೈಕಿ ತನಿಖೆ ನಡೆಸುವವರು ಆ ಕುರಿತು (ವಾಸ್ತವವನ್ನು) ಅರಿಯುತ್ತಿದ್ದರು. ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಅವನ ಕೃಪೆ ಇಲ್ಲದಿರುತ್ತಿದ್ದರೆ ಕೆಲವರ ಹೊರತು, ನೀವೆಲ್ಲಾ ಶೈತಾನನನ್ನು ಅನುಸರಿಸುತ್ತಿದ್ದಿರಿ.

84. (ದೂತರೇ,) ನೀವು ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ. ನೀವು ಕೇವಲ ನಿಮ್ಮ ಕುರಿತು ಮಾತ್ರ ಹೊಣೆಗಾರರು. ಇನ್ನು ನೀವು ವಿಶ್ವಾಸಿಗಳನ್ನು (ಹೋರಾಟಕ್ಕೆ) ಸಜ್ಜುಗೊಳಿಸಿರಿ. ಶೀಘ್ರದಲ್ಲೇ ಅಲ್ಲಾಹನು ಧಿಕ್ಕಾರಿಗಳ ಶಕ್ತಿಯನ್ನು ಕುಂದಿಸಿ ಬಿಡಬಹುದು. ಅಲ್ಲಾಹನು ಭಾರೀ ಶಕ್ತಿಯುಳ್ಳವನು ಹಾಗೂ ಕಠೋರ ಶಿಕ್ಷೆ ನೀಡುವವನಾಗಿದ್ದಾನೆ.

85. ಒಂದು ಸತ್ಕಾರ್ಯದ ಪರವಾಗಿ ಶಿಫಾರಸು ಮಾಡಿದಾತನಿಗೆ ಅದರಲ್ಲಿ ಪಾಲು ಸಿಗಲಿದೆ. ಹಾಗೆಯೇ, ಒಂದು ಕೆಟ್ಟ ಕೃತ್ಯದ ಪರವಾಗಿ ಶಿಫಾರಸು ಮಾಡಿದವನಿಗೆ, ಅದರಲ್ಲಿ ಪಾಲು ಸಿಗಲಿದೆ. ಅಲ್ಲಾಹನಂತೂ ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.

 86. ಯಾರಾದರೂ ನಿಮ್ಮನ್ನು ಹರಸುವ ಮಾತುಗಳನ್ನು ಹೇಳಿದರೆ (ನಿಮಗೆ ಸಲಾಮ್ ಹೇಳಿದರೆ) ನೀವು ಅದಕ್ಕಿಂತ ಉತ್ತಮ ಮಾತುಗಳಲ್ಲಿ (ಆತನನ್ನು) ಹರಸಿರಿ ಅಥವಾ (ಕನಿಷ್ಠ ಪಕ್ಷ) ಅಷ್ಟೇ ಮಾತುಗಳನ್ನು ಮರಳಿ ಹೇಳಿರಿ. ಖಂಡಿತವಾಗಿಯೂ ಅಲ್ಲಾಹನು ಎಲ್ಲ ವಿಷಯಗಳ ವಿಚಾರಣೆ ನಡೆಸಲಿದ್ದಾನೆ.

 87. ಅಲ್ಲಾಹ್ – ಅವನ ಹೊರತು ಪೂಜಾರ್ಹರು ಬೇರಿಲ್ಲ. ನಿಸ್ಸಂದೇಹವಾಗಿ ಬರಲಿರುವ ಪುನರುತ್ಥಾನ ದಿನ ಅವನು ನಿಮ್ಮೆಲ್ಲರನ್ನೂ ಒಂದೆಡೆ ಸೇರಿಸಲಿರುವನು. ಮಾತಿನಲ್ಲಿ ಅಲ್ಲಾಹನಿಗಿಂತ ಹೆಚ್ಚು ಸತ್ಯವಂತನು ಯಾರಿದ್ದಾನೆ?

88. ಇದೇನಾಗಿದೆ ನಿಮಗೆ? ಕಪಟಿಗಳ ವಿಷಯದಲ್ಲಿ ನಿಮ್ಮೊಳಗೆ ಎರಡು ಪಂಗಡಗಳಿವೆ. ಅವರ ದುಷ್ಟ ಕೃತ್ಯಗಳ ಕಾರಣ ಅಲ್ಲಾಹನೇ ಅವರನ್ನು (ಧಿಕ್ಕಾರದೆಡೆಗೆ) ಹೊರಳಿಸಿ ಬಿಟ್ಟಿದ್ದಾನೆ. ನೀವೇನು, ಅಲ್ಲಾಹನೇ ದಾರಿಗೆಡಿಸಿ ಬಿಟ್ಟಾತನನ್ನು ಸರಿದಾರಿಗೆ ತರ ಬಯಸುವಿರಾ? ಅಲ್ಲಾಹನೇ ದಾರಿ ಗೆಡಿಸಿರುವಾತನಿಗಾಗಿ ನೀವು ಯಾವ ದಾರಿಯನ್ನೂ ಕಾಣಲಾರಿರಿ.

89. ಅವರಂತೂ, ತಾವು ಧಿಕ್ಕಾರಿಗಳಾದಂತೆ ನೀವೂ ಧಿಕ್ಕಾರಿಗಳಾಗಿ ತಮಗೆ ಸಮಾನರಾಗಿ ಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಹಂಬಲಿಸುತ್ತಿದ್ದಾರೆ. ಅವರು ಅಲ್ಲಾಹನ ಮಾರ್ಗದಲ್ಲಿ ‘ಹಿಜ್ರತ್’ ಮಾಡುವ (ವಲಸೆ ಹೋಗುವ) ತನಕ ನೀವು ಅವರಲ್ಲಿ ಯಾರನ್ನೂ ನಿಮ್ಮ ಆಪ್ತರಾಗಿಸಿಕೊಳ್ಳಬೇಡಿ. ಆ ಬಳಿಕ ಅವರು ಮತ್ತೆ ಮುಖ ತಿರುಗಿಸಿಕೊಂಡರೆ, ನೀವು ಅವರನ್ನು ಕಂಡಲ್ಲಿ ಹಿಡಿಯಿರಿ ಮತ್ತು ಅವರನ್ನು ವಧಿಸಿರಿ. ಅವರಲ್ಲಿ ಯಾರನ್ನೂ ನಿಮ್ಮ ಆಪ್ತ ಮಿತ್ರ ಅಥವಾ ಸಹಾಯಕನಾಗಿಸಿಕೊಳ್ಳಬೇಡಿ –

  90. – ನಿಮ್ಮ ಜೊತೆ ಸಂಧಾನ ಮಾಡಿಕೊಂಡಿರುವ ಜನಾಂಗಕ್ಕೆ ಸೇರಿದವರು ಅಥವಾ ನಿಮ್ಮ ವಿರುದ್ಧ ಹೋರಾಡುವುದಕ್ಕಾಗಲಿ ತಮ್ಮ ಜನಾಂಗದ ವಿರುದ್ಧ ಹೋರಾಡುವುದಕ್ಕಾಗಲಿ ತಮ್ಮ ಮನದಲ್ಲಿ ಒಲವಿಲ್ಲದೆ, ನಿಮ್ಮ ಬಳಿಗೆ ಬಂದಿರುವವರು ಇದಕ್ಕೆ ಹೊರತಾಗಿದ್ದಾರೆ. ಅಲ್ಲಾಹನು ಇಚ್ಛಿಸಿದ್ದರೆ ಅವರನ್ನು ನಿಮ್ಮ ಮೇಲೆ ಹೇರಿ ಬಿಡುತ್ತಿದ್ದನು ಮತ್ತು ಅವರು ನಿಮ್ಮ ವಿರುದ್ಧ ಖಂಡಿತ ಹೋರಾಡುತ್ತಿದ್ದರು. (ಇದೀಗ) ಅವರು ನಿಮ್ಮಿಂದ ದೂರ ಉಳಿದರೆ ಹಾಗೂ ನಿಮ್ಮ ವಿರುದ್ಧ ಹೋರಾಡದಿದ್ದರೆ ಮತ್ತು ಶಾಂತಿಯ ಪ್ರಸ್ತಾಪವನ್ನು ನಿಮ್ಮ ಮುಂದಿಟ್ಟರೆ – ಅಲ್ಲಾಹನು ಅವರ ವಿರುದ್ಧ (ಹೋರಾಡಲು) ನಿಮಗೆ ಯಾವ ಅವಕಾಶವನ್ನೂ ಇಟ್ಟಿಲ್ಲ.

91. ನೀವು ಮತ್ತೆ ಕೆಲವರನ್ನು ಕಾಣುವಿರಿ – ಅವರು (ತಮ್ಮ ಸ್ವಾರ್ಥಕ್ಕಾಗಿ) ನಿಮ್ಮಿಂದಲೂ ಸುರಕ್ಷಿತರಾಗಿ ಇರಬಯಸುತ್ತಾರೆ ಮತ್ತು ತಮ್ಮ ಜನಾಂಗದಿಂದಲೂ ಸುರಕ್ಷಿತರಾಗಿ ಇರಬಯಸುತ್ತಾರೆ. ಆದರೆ ಕಿಡಿಗೇಡಿತನದತ್ತ ಮರಳುವ ಸನ್ನಿವೇಶ ಬಂದಾಗಲೆಲ್ಲಾ ಅವರು ಅದರೆಡೆಗೆ (ಶತ್ರು ಪಾಳ್ಯದೆಡೆಗೆ) ಹೊರಳಿ ಬಿಡುತ್ತಾರೆ. ಅವರು ನಿಮ್ಮಿಂದ ದೂರ ಉಳಿಯದಿದ್ದರೆ ಹಾಗೂ ಶಾಂತಿಯ ಪ್ರಸ್ತಾಪವನ್ನು ನಿಮ್ಮ ಮುಂದಿಡದಿದ್ದರೆ ಮತ್ತು ತಮ್ಮ ಕೈಗಳನ್ನು ತಡೆದಿಟ್ಟುಕೊಳ್ಳದಿದ್ದರೆ ನೀವು ಅವರನ್ನು ಕಂಡಲ್ಲಿ ಹಿಡಿಯಿರಿ ಮತ್ತು ಅವರನ್ನು ವಧಿಸಿರಿ. ಅಂಥವರ ವಿರುದ್ಧ (ಕಾರ್ಯಾಚರಣೆಗೆ) ನಾವು ನಿಮಗೆ ಮುಕ್ತ ಪರವಾನಗಿಯನ್ನು ಒದಗಿಸಿದ್ದೇವೆ.

 92. ಒಬ್ಬ ವಿಶ್ವಾಸಿಯು ಇನ್ನೊಬ್ಬ ವಿಶ್ವಾಸಿಯನ್ನು ವಧಿಸಬಾರದು – ಪ್ರಮಾದದ ಹೊರತು. ಇನ್ನು, ಪ್ರಮಾದದಿಂದ ಒಬ್ಬ ವಿಶ್ವಾಸಿಯನ್ನು ವಧಿಸಿದವನು ಒಬ್ಬ ವಿಶ್ವಾಸಿ ದಾಸನನ್ನು ಮುಕ್ತಗೊಳಿಸಬೇಕು ಮತ್ತು ಆತನ (ಹತನ) ಬಂಧುಗಳಿಗೆ ಪರಿಹಾರ ಧನ ನೀಡಬೇಕು – ಅವರೇ (ಬಂಧುಗಳೇ) ಅದನ್ನು ಕ್ಷಮಿಸಿದ್ದರ ಹೊರತು. ಆತನು (ಹಂತಕನು) ನಿಮ್ಮ ಶತ್ರು ಜನಾಂಗದವನಾಗಿದ್ದರೆ ಮತ್ತು ವಿಶ್ವಾಸಿಯೂ ಆಗಿದ್ದರೆ, ಒಬ್ಬ ವಿಶ್ವಾಸಿ ದಾಸನನ್ನು ಮುಕ್ತಗೊಳಿಸಬೇಕು. ಒಂದು ವೇಳೆ ಆತನು, ನಿಮ್ಮ ಜೊತೆ ಸಂಧಾನ ಮಾಡಿಕೊಂಡಿರುವ ಜನಾಂಗದವನಾಗಿದ್ದರೆ, ಆತನ (ಹತನ) ಬಂಧುಗಳಿಗೆ ಕಡ್ಡಾಯವಾಗಿ ಪರಿಹಾರ ಧನ ನೀಡಬೇಕು ಮತ್ತು ಒಬ್ಬ ವಿಶ್ವಾಸಿ ದಾಸನನ್ನು ಮುಕ್ತಗೊಳಿಸಬೇಕು. (ದಾಸ) ಸಿಗದಿದ್ದವನು ಸತತ ಎರಡು ತಿಂಗಳು ಉಪವಾಸ ಆಚರಿಸಬೇಕು – ಇದು ಅಲ್ಲಾಹನು ವಿಧಿಸಿರುವ ಪಶ್ಚಾತ್ತಾಪ ವಿಧಾನ. ಅಲ್ಲಾಹನಂತೂ ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ.

93. ಇನ್ನು, ಉದ್ದೇಶಪೂರ್ವಕ ಒಬ್ಬ ವಿಶ್ವಾಸಿಯ ಹತ್ಯೆ ನಡೆಸಿದವನ ಪ್ರತಿಫಲವು ನರಕವೇ ಆಗಿದೆ. ಅವನು ಅದರಲ್ಲಿ ಸದಾಕಾಲ ಇರುವನು ಮತ್ತು ಅಲ್ಲಾಹನ ಕ್ರೋಧ ಹಾಗೂ ಶಾಪವು ಅವನ ಮೇಲಿರುವುದು ಮತ್ತು (ಅಲ್ಲಾಹನು) ಆತನಿಗಾಗಿ ಭಾರೀ ಶಿಕ್ಷೆಯನ್ನು ಸಿದ್ಧವಾಗಿಟ್ಟಿರುವನು.

94. ವಿಶ್ವಾಸಿಗಳೇ, ನೀವು ಅಲ್ಲಾಹನ ಮಾರ್ಗದಲ್ಲಿ ಹೋರಾಟಕ್ಕೆ ಹೊರಟಿರುವಾಗ (ಎಲ್ಲ ವಾಸ್ತವಗಳನ್ನು) ಖಚಿತ ಪಡಿಸಿಕೊಳ್ಳಿರಿ. ನಿಮಗೆ ‘ಸಲಾಮ್’ ಹೇಳಿ ಹರಸಿದಾತನಿಗೆ ‘‘ನೀನು ವಿಶ್ವಾಸಿಯಲ್ಲ’’ ಎನ್ನಬೇಡಿ. ನೀವು ಇಹಲೋಕದ ಸಾಧನಗಳನ್ನು ಹುಡುಕುತ್ತಿರುವಿರಿ – ನಿಜವಾಗಿ ಅಲ್ಲಾಹನ ಬಳಿ ಅಪಾರ ಸಂಪತ್ತುಗಳಿವೆ. ಹಿಂದೆ ನೀವೂ ಅವರಂತೆಯೇ ಇದ್ದಿರಿ. ಕೊನೆಗೆ ಅಲ್ಲಾಹನು ನಿಮ್ಮ ಮೇಲೆ ಔದಾರ್ಯ ತೋರಿದನು. ಆದ್ದರಿಂದ (ಎಲ್ಲ ವಾಸ್ತವಗಳನ್ನು) ಖಚಿತ ಪಡಿಸಿಕೊಳ್ಳಿರಿ. ಅಲ್ಲಾಹನು ಖಂಡಿತವಾಗಿಯೂ ನೀವು ಮಾಡುತ್ತಿರುವ ಎಲ್ಲವನ್ನೂ ಅರಿತಿರುತ್ತಾನೆ.

  95. ವಿಶ್ವಾಸಿಗಳ ಪೈಕಿ, ಸೂಕ್ತ ಕಾರಣವಿಲ್ಲದೆ (ಹೋರಾಟದಲ್ಲಿ ಭಾಗವಹಿಸದೆ) ಕುಳಿತಿರುವವರು ಮತ್ತು ತಮ್ಮ ಸಂಪತ್ತುಗಳನ್ನು ಹಾಗೂ ತಮ್ಮ ಜೀವಗಳನ್ನು ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಜಿಹಾದ್ (ಹೋರಾಟ) ನಡೆಸುವವರು ಸಮಾನರಲ್ಲ. ತಮ್ಮ ಸಂಪತ್ತುಗಳನ್ನು ಹಾಗೂ ತಮ್ಮ ಜೀವಗಳನ್ನು ತೊಡಗಿಸಿ ಜಿಹಾದ್ ಮಾಡುವವರಿಗೆ ಅಲ್ಲಾಹನು, ಕುಳಿತಿರುವವರಿಗಿಂತ ಹೆಚ್ಚಿನ ಹಿರಿಮೆಯನ್ನು ಅನುಗ್ರಹಿಸಿದ್ದಾನೆ. ಪ್ರತಿಯೊಬ್ಬರಿಗೂ ಅವನು ಸತ್ಫಲದ ವಾಗ್ದಾನವನ್ನೇ ಮಾಡಿರುತ್ತಾನೆ. ಮತ್ತು ಕುಳಿತವರಿಗೆ ಹೋಲಿಸಿದರೆ, ಅಲ್ಲಾಹನು ಹೋರಾಟಗಾರರಿಗೆ ಭಾರೀ ಪ್ರತಿಫಲವನ್ನು ಅನುಗ್ರಹಿಸಿದ್ದಾನೆ.

96. ಅವನ ಕಡೆಯಿಂದ (ಅವರಿಗೆ) ಉನ್ನತ ಸ್ಥಾನಗಳು, ಕ್ಷಮೆ ಮತ್ತು ಕಾರುಣ್ಯವು ಸಿಗಲಿದೆ. ಅಲ್ಲಾಹನಂತು ತುಂಬಾ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.

 97. ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಿದ್ದವರ ಜೀವಗಳನ್ನು ವಶಪಡಿಸಿಕೊಳ್ಳುವ ಮಲಕ್‌ಗಳು ಅವರೊಡನೆ ‘‘ನೀವು ಎಂತಹ ಸ್ಥಿತಿಯಲ್ಲಿದ್ದಿರಿ?’’ ಎಂದು ಕೇಳುವರು. ಅವರು ‘‘ನಾವು ಭೂಮಿಯಲ್ಲಿ ಮರ್ದಿತರಾಗಿದ್ದೆವು’’ಎನ್ನುವರು. ಆಗ ಅವರು (ಮಲಕ್‌ಗಳು) ‘‘ಅಲ್ಲಾಹನ ಭೂಮಿಯು ವಿಶಾಲವಾಗಿರಲಿಲ್ಲವೇ? ನೀವು (ಮರ್ದಕರ ನಾಡಿನಿಂದ) ವಲಸೆ ಹೋಗಬಹುದಿತ್ತಲ್ಲಾ?’’ ಎನ್ನುವರು. ನರಕವೇ ಅಂಥವರ ನೆಲೆಯಾಗಿದೆ. ಅದು ತುಂಬ ಕೆಟ್ಟ ನೆಲೆ.

98. ಯಾವ ಉಪಾಯವೂ ಇಲ್ಲದಿದ್ದ ಹಾಗೂ ಯಾವ ದಾರಿಯನ್ನೂ ಕಾಣದ, ಮರ್ದಿತ ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಇದಕ್ಕೆ ಹೊರತಾಗಿದ್ದಾರೆ.

99. ಅಲ್ಲಾಹನು ಅವರನ್ನು ಮನ್ನಿಸಬಹುದು. ಅಲ್ಲಾಹನು ತುಂಬಾ ಮನ್ನಿಸುವವನೂ ಕ್ಷಮಾಶೀಲನೂ ಆಗಿದ್ದಾನೆ.

100. ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದಾತನು ಭೂಮಿಯಲ್ಲಿ ಧಾರಾಳ ಆಶ್ರಯಗಳನ್ನು ಹಾಗೂ ಸಾಕಷ್ಟು ವೈಶಾಲ್ಯವನ್ನು ಕಾಣುವನು. ತನ್ನ ಮನೆಯಿಂದ, ಅಲ್ಲಾಹ್ ಮತ್ತವನ ದೂತರೆಡೆಗೆ ವಲಸಿಗನಾಗಿ ಹೊರಟವನು (ದಾರಿಯಲ್ಲಿ) ಮೃತನಾದರೆ, ಖಂಡಿತವಾಗಿಯೂ ಅವನ ಪ್ರತಿಫಲದ ಹೊಣೆ ಅಲ್ಲಾಹನ ಮೇಲಿದೆ. ಅಲ್ಲಾಹನಂತೂ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.

    101. ನೀವು ಭೂಮಿಯಲ್ಲಿ ಪ್ರಯಾಣಿಸುತ್ತಿರುವಾಗ, ನಿಮಗೆ ಧಿಕ್ಕಾರಿಗಳ ಕಿರುಕುಳದ ಭಯವಿದ್ದರೆ ನೀವು ನಮಾಝ್ ಅನ್ನು ‘ಕಸ್ರ್’ (ಸಂಕ್ಷಿಪ್ತ) ಗೊಳಿಸುವುದು ತಪ್ಪಲ್ಲ. ಧಿಕ್ಕಾರಿಗಳು ಖಂಡಿತ ನಿಮ್ಮ ಬಹಿರಂಗ ಶತ್ರುಗಳಾಗಿದ್ದಾರೆ.

102. (ದೂತರೇ, ಯುದ್ಧ ಸನ್ನಿವೇಶದಲ್ಲಿ) ನೀವು ಅವರ ನಡುವೆ ಇದ್ದು, ಅವರಿಗೆ ನಮಾಝ್ ಮಾಡಿಸುತ್ತಿರುವಾಗ, ಅವರ ಒಂದು ತಂಡವು ತನ್ನ ಆಯುಧಗಳ ಜೊತೆ ಸಜ್ಜಾಗಿ ನಿಮ್ಮ ಜೊತೆಗಿರಲಿ. ಅವರು ಸಾಷ್ಟಾಂಗವೆರಗಿದ ಬಳಿಕ, ನಿಮ್ಮ ಹಿಂದಕ್ಕೆ ಹೋಗಲಿ ಮತ್ತು ಆವರೆಗೆ ನಮಾಝ್ ಸಲ್ಲಿಸಿಲ್ಲದ ಇನ್ನೊಂದು ತಂಡವು ಜಾಗೃತವಾಗಿದ್ದು ತನ್ನ ಆಯುಧಗಳ ಜೊತೆ ಸಜ್ಜಾಗಿ ನಿಮ್ಮ ಜೊತೆ ನಮಾಝ್ ಸಲ್ಲಿಸಲಿ. ನೀವು ನಿಮ್ಮ ಆಯುಧಗಳ ಹಾಗೂ ಇತರ ಸಾಧನಗಳ ವಿಷಯದಲ್ಲಿ ತುಸು ನಿರ್ಲಕ್ಷ ತೋರಿದೊಡನೆ, ಹಠಾತ್ತಾಗಿ ಏಕಕಾಲದಲ್ಲಿ ನಿಮ್ಮ ಮೇಲೆ ಮುಗಿ ಬೀಳುವುದಕ್ಕಾಗಿ ಧಿಕ್ಕಾರಿಗಳು ಹೊಂಚು ಹಾಕುತ್ತಿದ್ದಾರೆ. ಇನ್ನು ಮಳೆಯಿಂದಾಗಿ ನೀವು ಸಂಕಟಕ್ಕೆ ಸಿಲುಕಿದ್ದರೆ ಅಥವಾ ನೀವು ಅನಾರೋಗ್ಯ ಪೀಡಿತರಾಗಿದ್ದರೆ, ನೀವು ನಿಮ್ಮ ಆಯುಧಗಳನ್ನು ಕಳಚಿಡುವುದು ತಪ್ಪಲ್ಲ. ಆದರೆ ಸದಾ ಜಾಗೃತರಾಗಿರಿ. ಖಂಡಿತವಾಗಿಯೂ ಅಲ್ಲಾಹನು ಧಿಕ್ಕಾರಿಗಳಿಗೆ ಅಪಮಾನಕಾರಿ ಶಿಕ್ಷೆಯನ್ನು ತಯಾರಿಸಿಟ್ಟಿದ್ದಾನೆ.

103. ನೀವು ನಮಾಝ್ ಅನ್ನು ಮುಗಿಸಿದ ಬಳಿಕವೂ ನಿಂತಲ್ಲೂ, ಕುಳಿತಲ್ಲೂ, ಮಲಗಿರುವಲ್ಲೂ ಅಲ್ಲಾಹನನ್ನು ಸ್ಮರಿಸುತ್ತಲಿರಿ. ತರುವಾಯ ನೀವು (ಭದ್ರತೆಯ ಕುರಿತು) ಸಂತೃಪ್ತರಾದಾಗ (ಪೂರ್ಣ) ನಮಾಝ್ ಅನ್ನು ಪಾಲಿಸಿರಿ. ನಿರ್ದಿಷ್ಟ ಸಮಯಗಳಲ್ಲಿ ನಮಾಝ್ ಅನ್ನು ವಿಶ್ವಾಸಿಗಳ ಮೇಲೆ ಕಡ್ಡಾಯಗೊಳಿಸಲಾಗಿದೆ.

 104. (ಶತ್ರುಗಳ) ಆ ಪಡೆಯನ್ನು ಬೆನ್ನಟ್ಟುವ ವಿಷಯದಲ್ಲಿ ಹಿಂಜರಿಯಬೇಡಿ. (ಇಂದು) ನೀವು ಪಾಡು ಪಡುತ್ತಿದ್ದರೆ, ನೀವು ಪಾಡು ಪಟ್ಟಂತೆಯೇ ಅವರೂ ಪಾಡು ಪಡುತ್ತಿದ್ದಾರೆ. ಆದರೆ ಅಲ್ಲಾಹನಿಂದ ಅವರಿಗಿಲ್ಲದ ಶುಭ ನಿರೀಕ್ಷೆ ನಿಮಗಿದೆ. ಅಲ್ಲಾಹನಂತು ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ.

105. ಅಲ್ಲಾಹನು ನಿಮಗೆ ತೋರಿಸಿಕೊಟ್ಟಿರುವ ರೀತಿಯಲ್ಲಿ ನೀವು ಜನರ ನಡುವೆ ನ್ಯಾಯ ತೀರ್ಮಾನ ಮಾಡಬೇಕೆಂದು ನಾವು ಈ ಗ್ರಂಥವನ್ನು ಸತ್ಯದೊಂದಿಗೆ ನಿಮಗೆ ಇಳಿಸಿ ಕೊಟ್ಟಿರುವೆವು. ನೀವೆಂದೂ ವಂಚಕರ ಪರವಾಗಿ ವಾದಿಸುವವರಾಗಬಾರದು.

106. ಅಲ್ಲಾಹನ ಬಳಿ ಕ್ಷಮೆ ಬೇಡಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನೂ ಕರುಣಾಮಯಿಯೂ ಆಗಿದ್ದಾನೆ.

107. ನೀವು ಆತ್ಮವಂಚಕರ ಪರವಾಗಿ ವಾದಕ್ಕೆ ಇಳಿಯಬೇಡಿ. ಖಂಡಿತವಾಗಿಯೂ ಅಲ್ಲಾಹನು ವಂಚಕ ಪಾಪಿಗಳನ್ನು ಮೆಚ್ಚುವುದಿಲ್ಲ.

 108. ಅವರು ಜನರಿಂದ ಅಡಗಿ ಕೊಂಡಿರುತ್ತಾರೆ ಆದರೆ ಅಲ್ಲಾಹನಿಂದ ಅಡಗಿರಲು ಅವರಿಗೆ ಸಾಧ್ಯವಿಲ್ಲ. ಅವರು ರಾತ್ರಿಯ ವೇಳೆ ಅನಪೇಕ್ಷಿತ ವಿಷಯಗಳನ್ನು ಚರ್ಚಿಸುತ್ತಿರುವಾಗ ಅವನು ಅವರ ಜೊತೆಗೇ ಇರುತ್ತಾನೆ. ಅಲ್ಲಾಹನಂತೂ ಅವರ ಎಲ್ಲ ಚಟುವಟಿಕೆಗಳನ್ನು ಆವರಿಸಿಕೊಂಡಿದ್ದಾನೆ.

109. ಸರಿ. ಇಹಲೋಕದ ಬದುಕಿನಲ್ಲಿ ನೀವು ಆ ಜನರ ಪರವಾಗಿ ವಾದಿಸಿದಿರಿ. ಆದರೆ ಪುನರುತ್ಥಾನದ ದಿನ ಅವರ ಪರವಾಗಿ ಅಲ್ಲಾಹನೊಂದಿಗೆ ಯಾರು ತಾನೇ ವಾದಿಸುವರು? ಅಥವಾ ಯಾರು ತಾನೇ (ಅಲ್ಲಿ) ಅವರ ರಕ್ಷಕರಾಗಿರುವರು?

110. ಯಾರಾದರೂ ಒಂದು ಪಾಪಕೃತ್ಯವನ್ನು ಮಾಡಿ ಅಥವಾ ತನ್ನ ಮೇಲೆ ಅಕ್ರಮವೆಸಗಿಕೊಂಡು ಆ ಬಳಿಕ ಅಲ್ಲಾಹನಲ್ಲಿ ಕ್ಷಮೆ ಯಾಚಿಸಿದರೆ ಅವನು ಅಲ್ಲಾಹನನ್ನು ಕ್ಷಮಾಶೀಲನಾಗಿಯೂ ಕರುಣಾಮಯಿಯಾಗಿಯೂ ಕಾಣುವನು.

111. ಪಾಪವನ್ನು ಸಂಪಾದಿಸುವವನು ನಿಜವಾಗಿ ಸ್ವತಃ ತನಗೆ ವಿರುದ್ಧವಾದುದನ್ನು ಸಂಪಾದಿಸುತ್ತಾನೆ. ಅಲ್ಲಾಹನಂತೂ ಎಲ್ಲವನ್ನೂ ಬಲ್ಲ ಯುಕ್ತಿವಂತನಾಗಿದ್ದಾನೆ.

112. ಇನ್ನು, ಸ್ವತಃ ಒಂದು ಪ್ರಮಾದವನ್ನು ಅಥವಾ ಒಂದು ಪಾಪಕೃತ್ಯವನ್ನು ಮಾಡಿ, ಆ ಬಳಿಕ ಅದರ ಹೊಣೆಯನ್ನು ಒಬ್ಬ ನಿರಪರಾಧಿಯ ಮೇಲೆ ಹೊರಿಸಿ ಬಿಟ್ಟವನು ಸುಳ್ಳಾರೋಪದ ಹಾಗೂ ಒಂದು ಸ್ಪಷ್ಟ ಪಾತಕದ ಹೊರೆಯನ್ನು ಹೊತ್ತನು.

113. (ದೂತರೇ,) ಒಂದು ವೇಳೆ ನಿಮ್ಮ ಮೇಲೆ ಅಲ್ಲಾಹನ ವಿಶೇಷ ಅನುಗ್ರಹ ಮತ್ತು ಕೃಪೆ ಇಲ್ಲದಿರುತ್ತಿದ್ದರೆ, ಅವರಲ್ಲಿನ ಒಂದು ಗುಂಪಂತೂ ನಿಮ್ಮನ್ನು ದಾರಿ ತಪ್ಪಿಸುವುದಾಗಿ ನಿರ್ಧರಿಸಿ ಬಿಟ್ಟಿತ್ತು. ನಿಜವಾಗಿ ಸ್ವತಃ ತಮ್ಮ ಹೊರತು ಬೇರಾರನ್ನೂ ದಾರಿಗೆಡಿಸಲು ಅವರಿಂದಾಗದು. ಹಾಗೆಯೇ, ನಿಮಗೆ ಯಾವುದೇ ಹಾನಿಯನ್ನು ಮಾಡಲು ಅವರಿಗೆ ಸಾಧ್ಯವಾಗದು. ಅಲ್ಲಾಹನು ನಿಮಗೆ (ದಿವ್ಯ) ಗ್ರಂಥವನ್ನು ಹಾಗೂ ಯುಕ್ತಿಯನ್ನು ಇಳಿಸಿಕೊಟ್ಟಿರುವನು. ನಿಮಗೆ ತಿಳಿಯದಿದ್ದ ವಿಷಯಗಳನ್ನು ನಿಮಗೆ ತಿಳಿಸಿರುವನು. ನಿಜಕ್ಕೂ ನಿಮ್ಮ ಮೇಲೆ ಅಲ್ಲಾಹನ ಭವ್ಯ ಅನುಗ್ರಹವಿದೆ.

114. ಅವರು ನಡೆಸುತ್ತಿರುವ ಹೆಚ್ಚಿನ ಗುಪ್ತ ಸಮಾಲೋಚನೆಗಳಲ್ಲಿ ಹಿತವೇನೂ ಇಲ್ಲ – ದಾನ ಧರ್ಮವನ್ನು ಆದೇಶಿಸುವ, ಒಳಿತನ್ನು ಬೋಧಿಸುವ ಅಥವಾ ಜನರ ನಡುವೆ ಸಂಧಾನ ಏರ್ಪಡಿಸಲಿಕ್ಕಾಗಿ ನಡೆಸುವ ಸಮಾಲೋಚನೆಗಳ ಹೊರತು. ಅಲ್ಲಾಹನ ಮೆಚ್ಚುಗೆಯನ್ನು ಸಂಪಾದಿಸಲಿಕ್ಕಾಗಿ ಈ ಕಾರ್ಯವನ್ನು (ಸಮಾಲೋಚನೆಗಳನ್ನು) ನಡೆಸುವವರಿಗೆ ನಾವು ಶೀಘ್ರದಲ್ಲೇ ಭಾರೀ ಪ್ರತಿಫಲ ನೀಡಲಿದ್ದೇವೆ.

115. ತನಗೆ ಸನ್ಮಾರ್ಗವು ಬಹಳ ಸ್ಪಷ್ಟವಾಗಿ ಮನವರಿಕೆಯಾದ ಬಳಿಕವೂ, (ಅಲ್ಲಾಹನ) ದೂತರನ್ನು ವಿರೋಧಿಸುವ ಹಾಗೂ ವಿಶ್ವಾಸಿಗಳ ಮಾರ್ಗದ ಬದಲು ಬೇರೇನನ್ನಾದರೂ ಅನುಸರಿಸುವ ವ್ಯಕ್ತಿಯನ್ನು ನಾವು, ಅವನು ಏನನ್ನು ಅವಲಂಬಿಸಿರುವನೋ ಅದರ ವಶಕ್ಕೇ ಒಪ್ಪಿಸಿ ಬಿಡುತ್ತೇವೆ ಮತ್ತು ನಾವು ಆತನನ್ನು ನರಕದೊಳಗೆ ಎಸೆಯಲಿದ್ದೇವೆ. ಅದು ಬಹಳ ಕೆಟ್ಟ ನೆಲೆ.

116. ಯಾರನ್ನಾದರೂ ತನ್ನ ಪಾಲುದಾರರಾಗಿಸುವುದನ್ನು ಅಲ್ಲಾಹನು ಖಂಡಿತ ಕ್ಷಮಿಸುವುದಿಲ್ಲ. ಅದರ ಹೊರತು ಬೇರೆಲ್ಲವನ್ನೂ ಅವನು ತಾನಿಚ್ಛಿಸುವವರ ಪಾಲಿಗೆ ಕ್ಷಮಿಸಿ ಬಿಡುವನು. ಅಲ್ಲಾಹನ ಜೊತೆ ಯಾರನ್ನಾದರೂ ಪಾಲುದಾರರಾಗಿಸಿದವನು, ದಾರಿ ತಪ್ಪಿ, ತಪ್ಪುದಾರಿಯಲ್ಲಿ ತುಂಬಾ ದೂರ ಸಾಗಿ ಬಿಟ್ಟನು.

117. ಅವರು ಅಲ್ಲಾಹನನ್ನು ಬಿಟ್ಟು ಕೆಲವು ಮಹಿಳೆಯರನ್ನು ಕರೆದು ಪ್ರಾರ್ಥಿಸುತ್ತಾರೆ ಮತ್ತು ವಿದ್ರೋಹಿ ಶೈತಾನನನ್ನು ಕರೆದು ಪ್ರಾರ್ಥಿಸುತ್ತಾರೆ.

118. ಅವನನ್ನು (ಶೈತಾನನನ್ನು) ಅಲ್ಲಾಹನು ಶಪಿಸಿರುವನು. ಅವನು (ಶೈತಾನನು) ‘‘ನಾನು ನಿನ್ನ ದಾಸರ ಪೈಕಿ ಒಂದು ನಿರ್ದಿಷ್ಟ ಪಾಲನ್ನು ಖಂಡಿತ ಪಡೆಯುವೆನು’’ ಎಂದು ಹೇಳಿದ್ದನು.

 119. (ಹಾಗೆಯೇ ಅವನು) ‘‘ನಾನು ಖಂಡಿತ ಅವರನ್ನು ದಾರಿಗೆಡಿಸುವೆನು, ಅವರಲ್ಲಿ ಆಶೆಗಳನ್ನು ಹುಟ್ಟಿಸುವೆನು ಮತ್ತು ಅವರಿಗೆ ಆದೇಶ ನೀಡುವೆನು – ಆಗ ಅವರು ಪ್ರಾಣಿಗಳ ಕಿವಿಗಳನ್ನು ಕತ್ತರಿಸುವರು. ಮತ್ತೆ ನಾನು ಅವರಿಗೆ ಆದೇಶ ನೀಡುವೆನು – ಆಗ ಅವರು ಅಲ್ಲಾಹನ ಸೃಷ್ಟಿಗಳ ರೂಪಗಳನ್ನು ವಿಕೃತಗೊಳಿಸುವರು’’ (ಎಂದಿದ್ದನು). ಅಲ್ಲಾಹನನ್ನು ಬಿಟ್ಟು ಶೈತಾನನನ್ನು ತನ್ನ ಪೋಷಕನಾಗಿಸಿಕೊಂಡವನು ನಿಜವಾಗಿ ಸ್ಪಷ್ಟವಾದ ನಷ್ಟಕ್ಕೆ ತುತ್ತಾದನು.

120. ಅವನು ಅವರಿಗೆ ವಾಗ್ದಾನ ಮಾಡುತ್ತಾನೆ ಮತ್ತು ಅವರಲ್ಲಿ ಆಶೆಗಳನ್ನು ಮೂಡಿಸುತ್ತಾನೆ – ಶೈತಾನನ ವಾಗ್ದಾನಗಳೆಲ್ಲಾ ಕೇವಲ ಮೋಸಗಳಾಗಿರುತ್ತವೆ.

121. ನರಕವೇ ಅವರ (ಶೈತಾನನ ಅನುಯಾಯಿಗಳ) ಅಂತಿಮ ನೆಲೆಯಾಗಿದೆ. ಅಲ್ಲಿಂದ ಪಲಾಯನಕ್ಕೆ ಅವರು ಯಾವ ದಾರಿಯನ್ನೂ ಕಾಣಲಾರರು.

 122. ವಿಶ್ವಾಸಿಗಳು ಮತ್ತು ಸತ್ಕರ್ಮಗಳನ್ನೆಸಗಿದವರು – ಅವರನ್ನು ನಾವು ತಳಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳೊಳಗೆ ಸೇರಿಸುವೆವು. ಅಲ್ಲಿ ಅವರು ಸದಾಕಾಲ ಇರುವರು. ಅಲ್ಲಾಹನ ವಾಗ್ದಾನವು ಸದಾ ಸತ್ಯವೇ ಆಗಿರುತ್ತದೆ. ಮಾತಿನಲ್ಲಿ ಅಲ್ಲಾಹನಿಗಿಂತ ಹೆಚ್ಚು ಸತ್ಯವಂತರು ಬೇರಾರಿದ್ದಾರೆ?

123. (ಅಂತಿಮ ಗತಿಯು) ನಿಮ್ಮ ಆಶೆಗಳನ್ನಾಗಲಿ, ಗ್ರಂಥದವರ ಆಶೆಗಳನ್ನಾಗಲಿ ಅವಲಂಬಿಸಿಲ್ಲ. ದುಷ್ಕರ್ಮಗಳನ್ನು ಮಾಡಿದವನು ಅದರ ಫಲವನ್ನು ಪಡೆದೇ ತೀರುವನು. ಅವನಿಗೆ ರಕ್ಷಕನಾಗಿ ಮತ್ತು ಸಹಾಯಕನಾಗಿ ಅಲ್ಲಾಹನ ಹೊರತು ಬೇರೆ ಯಾರೂ ಸಿಗಲಾರರು.

124. ಹಾಗೆಯೇ, ಸತ್ಕರ್ಮಗಳನ್ನು ಮಾಡಿದವರು ಪುರುಷರಿರಲಿ ಮಹಿಳೆಯರಿರಲಿ, ಅವರು ವಿಶ್ವಾಸಿಗಳಾಗಿದ್ದರೆ, ಅವರು ಸ್ವರ್ಗತೋಟಗಳನ್ನು ಪ್ರವೇಶಿಸುವರು ಮತ್ತು ಅವರ ಮೇಲೆ ಎಳ್ಳಷ್ಟೂ ಅನ್ಯಾಯವಾಗದು.

125. ಸಂಪೂರ್ಣ ನಿಷ್ಠೆಯೊಂದಿಗೆ ಅಲ್ಲಾಹನಿಗೆ ಶರಣಾಗಿರುವ, ಸತ್ಕರ್ಮಿಯಾಗಿರುವ ಹಾಗೂ ಏಕನಿಷ್ಠರಾಗಿದ್ದ ಇಬ್ರಾಹೀಮರ ದಾರಿಯನ್ನು ಅನುಸರಿಸಿದವನ ಧರ್ಮಕ್ಕಿಂತ ಶ್ರೇಷ್ಠ ಧರ್ಮ ಯಾರದ್ದಿದೆ? ಇಬ್ರಾಹೀಮರನ್ನು ಅಲ್ಲಾಹನು ತನ್ನ ಆಪ್ತ ಮಿತ್ರನಾಗಿಸಿ ಕೊಂಡಿದ್ದನು.

126. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ. ಅಲ್ಲಾಹನಂತು, ಪ್ರತಿಯೊಂದು ವಸ್ತುವನ್ನೂ ಆವರಿಸಿಕೊಂಡಿದ್ದಾನೆ.

127. (ದೂತರೇ,) ಅವರು ನಿಮ್ಮೊಡನೆ, ಮಹಿಳೆಯರ ಕುರಿತು ಆದೇಶ ಕೇಳುತ್ತಾರೆ. ಹೇಳಿರಿ; ‘‘ಅವರ ಕುರಿತು ಅಲ್ಲಾಹನು ನಿಮಗೆ ಆದೇಶ ನೀಡುತ್ತಾನೆ ಮತ್ತು ಗ್ರಂಥದಲ್ಲಿರುವುದನ್ನು ನಿಮಗೆ ಓದಿ ಕೇಳಿಸಲಾಗುತ್ತಿದೆ; ನೀವು ಕಡ್ಡಾಯವಾಗಿ ಪಾವತಿಸಬೇಕಾದುದನ್ನು ಪಾವತಿಸಿಲ್ಲದ ಹಾಗೂ ನೀವು ವಿವಾಹವಾಗಲಿಕ್ಕೂ ಹಿಂಜರಿಯುವ ಅನಾಥ ಮಹಿಳೆಯರು, ನಿರ್ಗತಿಕ ಮಕ್ಕಳು ಮತ್ತು ಅನಾಥರ ವಿಷಯದಲ್ಲಿ ನೀವು ನ್ಯಾಯವನ್ನೇ ಪಾಲಿಸಬೇಕು. ನೀವು ಮಾಡುವ ಪ್ರತಿಯೊಂದು ಸತ್ಕಾರ್ಯದ ಕುರಿತೂ ಅಲ್ಲಾಹನು ಚೆನ್ನಾಗಿ ಬಲ್ಲನು.

128. ಒಬ್ಬ ಮಹಿಳೆಗೆ ತನ್ನ ಪತಿಯ ಕಡೆಯಿಂದ ದೌರ್ಜನ್ಯದ ಅಥವಾ ನಿರ್ಲಕ್ಷದ ಭಯವಿದ್ದರೆ ಅವರಿಬ್ಬರೂ ತಮ್ಮ ನಡುವೆ ಸಂಧಾನ ಮಾಡಿಕೊಳ್ಳುವುದು ತಪ್ಪಲ್ಲ. ನಿಜವಾಗಿ, ಸಂಧಾನವೇ ಉತ್ತಮ. ಮನಸ್ಸುಗಳಲ್ಲಿ ಸ್ವಾರ್ಥವಿರುವುದು ಸ್ವಾಭಾವಿಕ. ಆದರೂ ನೀವು ಸೌಜನ್ಯ ತೋರಿದರೆ ಹಾಗೂ ಧರ್ಮನಿಷ್ಠರಾಗಿದ್ದರೆ (ನಿಮಗೆ ತಿಳಿದಿರಲಿ) – ಅಲ್ಲಾಹನಂತು ನೀವು ಮಾಡುವ ಎಲ್ಲವನ್ನೂ ಅರಿತಿರುತ್ತಾನೆ.

129. ನೀವೆಷ್ಟೇ ಬಯಸಿದರೂ ಪತ್ನಿಯರ ನಡುವೆ ಸಂಪೂರ್ಣ ನ್ಯಾಯ ಪಾಲಿಸಲು ನಿಮಗೆ ಸಾಧ್ಯವಾಗದು. ಆದರೆ (ಅವರಲ್ಲಿ ಯಾರ ಕಡೆಗೂ) ಸಂಪೂರ್ಣ ವಾಲಿ ಬಿಡಬೇಡಿ ಹಾಗೂ (ಯಾರನ್ನೂ) ಸಂಪೂರ್ಣವಾಗಿ ನಿರ್ಲಕ್ಷಿಸಿ ಜೋತಾಡುವ ಸ್ಥಿತಿಯಲ್ಲಿ ಬಿಟ್ಟು ಬಿಡಬೇಡಿ. ನೀವು ಸುಧಾರಿಸಿಕೊಂಡರೆ ಮತ್ತು ಧರ್ಮನಿಷ್ಠೆ ಪಾಲಿಸಿದರೆ (ನಿಮಗೆ ತಿಳಿದಿರಲಿ) – ಅಲ್ಲಾಹನು ಖಂಡಿತ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.

130. ಇನ್ನು, ಅವರಿಬ್ಬರು (ದಂಪತಿಯರು) ಬೇರ್ಪಟ್ಟರೆ, ಅಲ್ಲಾಹನು ತನ್ನ ವಿಶಾಲ ಸಾಮರ್ಥ್ಯದಿಂದ ಅವರಲ್ಲಿ ಪ್ರತಿಯೊಬ್ಬರನ್ನೂ (ಪರಸ್ಪರ ಅವಲಂಬನೆಯಿಂದ) ಮುಕ್ತ ಗೊಳಿಸುವನು. ಅಲ್ಲಾಹನಂತು ತುಂಬಾ ವೈಶಾಲ್ಯ ಉಳ್ಳವನೂ ಯುಕ್ತಿವಂತನೂ ಆಗಿದ್ದಾನೆ.

 131. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ. ‘‘ಅಲ್ಲಾಹನಿಗೆ ಅಂಜಿರಿ. ನೀವು ಧಿಕ್ಕಾರಿಗಳಾದರೆ, ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ (ಎಂಬುದನ್ನು ಮರೆಯಬೇಡಿ)’’ ಎಂದು ಈ ಹಿಂದೆ ಗ್ರಂಥ ನೀಡಲಾಗಿದ್ದವರಿಗೆ ನಾವು ಉಪದೇಶಿಸಿದ್ದೆವು ಮತ್ತು ನಿಮಗೂ ಉಪದೇಶಿಸುತ್ತಿದ್ದೇವೆ. ಅಲ್ಲಾಹನಂತೂ ಎಲ್ಲ ಅಗತ್ಯಗಳಿಂದ ಮುಕ್ತನೂ ಎಲ್ಲ ಪ್ರಶಂಸೆಗಳಿಗೆ ಅರ್ಹನೂ ಆಗಿರುವನು.

132. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ. (ಎಲ್ಲರ ಪಾಲಿಗೆ) ಕಾರ್ಯಸಾಧಕನಾಗಿ ಅವನೇ ಸಾಕು.

133. ಜನರೇ, ಅವನಿಚ್ಛಿಸಿದರೆ ನಿಮ್ಮನ್ನು ತೊಲಗಿಸಿ ಇತರರನ್ನು ತರಬಲ್ಲನು. ಹಾಗೆ ಮಾಡಲು ಅಲ್ಲಾಹನು ಖಂಡಿತ ಶಕ್ತನಾಗಿದ್ದಾನೆ.

134. ಕೇವಲ ಇಹಲೋಕದ ಪ್ರತಿಫಲವನ್ನು ಬಯಸುವಾತನು (ತಿಳಿದಿರಲಿ) – ಅಲ್ಲಾಹನ ಬಳಿ ಇಹಲೋಕದ ಪ್ರತಿಫಲವೂ ಇದೆ ಪರಲೋಕದ ಪ್ರತಿಫಲವೂ ಇದೆ. ಅಲ್ಲಾಹನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ.

135. ವಿಶ್ವಾಸಿಗಳೇ, ನೀವು ಕಟ್ಟುನಿಟ್ಟಾಗಿ ಸದಾ ನ್ಯಾಯವನ್ನು ಪಾಲಿಸುವವರಾಗಿರಿ ಹಾಗೂ ಅಲ್ಲಾಹನಿಗಾಗಿ (ಸತ್ಯದ ಪರ) ಸಾಕ್ಷಿ ಹೇಳುವವರಾಗಿರಿ – ಅದು ಸ್ವತಃ ನಿಮ್ಮ ವಿರುದ್ಧ ಅಥವಾ ನಿಮ್ಮ ತಂದೆ-ತಾಯಿಯ ಅಥವಾ ನಿಕಟ ಬಂಧುಗಳ ವಿರುದ್ಧವಾಗಿದ್ದರೂ ಸರಿಯೇ. ಶ್ರೀಮಂತನಿರಲಿ, ಬಡವನಿರಲಿ, ಅವರಿಬ್ಬರ ಪಾಲಿಗೂ ಇತರೆಲ್ಲರಿಗಿಂತ ಹೆಚ್ಚಾಗಿ ಅಲ್ಲಾಹನೇ ಹಿತೈಷಿಯಾಗಿದ್ದಾನೆ. ನೀವೆಂದೂ ನಿಮ್ಮ ಚಿತ್ತಾಕಾಂಕ್ಷೆಗಳನ್ನು ಅನುಸರಿಸಿ ನ್ಯಾಯಪಾಲನೆಯಲ್ಲಿ ತಪ್ಪಬೇಡಿ. (ನ್ಯಾಯ ಪ್ರಕ್ರಿಯೆಯಲ್ಲಿ) ನೀವು ನಾಲಿಗೆ ತಿರುಚಿದರೆ (ಸಾಕ್ಷವನ್ನು ಬದಲಿಸಿದರೆ) ಅಥವಾ ಜಾರಿಕೊಂಡರೆ, ಅಲ್ಲಾಹನು ನಿಮ್ಮೆಲ್ಲ ಕೃತ್ಯಗಳ ಕುರಿತು ಅರಿವು ಉಳ್ಳವನಾಗಿದ್ದಾನೆ (ಎಂಬುನ್ನು ಮರೆಯಬೇಡಿ).

136. ವಿಶ್ವಾಸಿಗಳೇ, ಅಲ್ಲಾಹನಲ್ಲಿ, ಅವನ ದೂತರಲ್ಲಿ, ಅವನ ದೂತರಿಗೆ ಇಳಿಸಿಕೊಡಲಾಗಿರುವ ಗ್ರಂಥದಲ್ಲಿ ಮತ್ತು ಈ ಹಿಂದೆ ಇಳಿಸಿಕೊಡಲಾಗಿದ್ದ ಗ್ರಂಥಗಳಲ್ಲಿ ನಂಬಿಕೆ ಇಡಿರಿ. ಅಲ್ಲಾಹನನ್ನು, ಅವನ ಮಲಕ್‌ಗಳನ್ನು, ಅವನ ದೂತರನ್ನು ಮತ್ತು ಅಂತಿಮ ದಿನವನ್ನು ಧಿಕ್ಕರಿಸಿದವನು ದಾರಿಗೆಟ್ಟು, ದಾರಿಗೇಡಿತನದಲ್ಲಿ ತುಂಬಾ ದೂರ ಹೋಗಿಬಿಟ್ಟನು.

137. (ಧರ್ಮದಲ್ಲಿ) ಒಮ್ಮೆ ವಿಶ್ವಾಸವಿರಿಸಿ ಆ ಬಳಿಕ ಧಿಕ್ಕಾರಿಗಳಾದವರು ಹಾಗೂ ಮತ್ತೆ ವಿಶ್ವಾಸವಿರಿಸಿ ಮತ್ತೆ ಧಿಕ್ಕಾರಿಗಳಾದವರು ಮತ್ತು ಧಿಕ್ಕಾರದಲ್ಲೇ ಮುಂದುವರಿದವರು (ತಿಳಿದಿರಲಿ;) ಅವರನ್ನು ಅಲ್ಲಾಹನು ಕ್ಷಮಿಸಲಾರನು ಮತ್ತು ಅವರಿಗೆ ಅವನು ಸರಿದಾರಿಯನ್ನೂ ತೋರಿಸಿಕೊಡಲಾರನು.

138. ಕಪಟಿಗಳಿಗೆ ತುಂಬಾ ಕಠಿಣ ಶಿಕ್ಷೆ ಸಿಗಲಿದೆ ಎಂಬ ಶುಭವಾರ್ತೆ ನೀಡಿರಿ.

139. ವಿಶ್ವಾಸಿಗಳನ್ನು ಬಿಟ್ಟು ಧಿಕ್ಕಾರಿಗಳನ್ನು ತಮ್ಮ ಪೋಷಕರಾಗಿಸಿಕೊಂಡವರು, ಅವರ (ಧಿಕ್ಕಾರಿಗಳ) ಬಳಿ ಗೌರವವನ್ನು ಹುಡುಕುತ್ತಿದ್ದಾರೆಯೇ? ಗೌರವವಂತೂ ಸಂಪೂರ್ಣವಾಗಿ ಅಲ್ಲಾಹನಿಗೇ ಸೇರಿದೆ.

140. (ವಿಶ್ವಾಸಿಗಳೇ,) ಅವನು (ಅಲ್ಲಾಹನು) ದಿವ್ಯ ಗ್ರಂಥದಲ್ಲಿ ನಿಮಗಾಗಿ ಒಂದು ಆದೇಶವನ್ನು ನೀಡಿದ್ದಾನೆ; ಜನರು ಅಲ್ಲಾಹನ ವಚನಗಳನ್ನು ಧಿಕ್ಕರಿಸುತ್ತಾ ಅದನ್ನು ಅಪಹಾಸ್ಯ ಮಾಡುತ್ತಿರುವುದನ್ನು ನೀವು ಕೇಳಿದಾಗ, ಮತ್ತೆ ಅವರು ಬೇರೆ ಮಾತುಕತೆಗಳಲ್ಲಿ ತಲ್ಲೀನರಾಗುವ ತನಕ ನೀವು ಅವರ ಜೊತೆ ಕೂತಿರಬೇಡಿ. ಅನ್ಯಥಾ ನೀವೂ ಅವರಂತೆಯೇ ಆಗಿ ಬಿಡುವಿರಿ. ಖಂಡಿತವಾಗಿಯೂ ಅಲ್ಲಾಹನು ಎಲ್ಲ ಕಪಟಿಗಳನ್ನು ಮತ್ತು ಧಿಕ್ಕಾರಿಗಳನ್ನು ನರಕದಲ್ಲಿ ಒಟ್ಟು ಸೇರಿಸಲಿರುವನು.

  141. (ನಿಮ್ಮ ಗತಿ ಏನಾಗುವುದೆಂದು) ಕಾತರದಿಂದ ನೋಡುತ್ತಿರುವವರು (ಕಪಟಿಗಳು) ಅಲ್ಲಾಹನ ಕಡೆಯಿಂದ ನಿಮಗೆ ವಿಜಯ ಪ್ರಾಪ್ತವಾದರೆ ‘‘ನಾವೇನು ನಿಮ್ಮ ಜೊತೆಗೇ ಇರಲಿಲ್ಲವೆ?’’ ಎನ್ನುತ್ತಾರೆ. ಇನ್ನು ವಿಜಯವು ಧಿಕ್ಕಾರಿಗಳ ಪಾಲಾದರೆ (ಅವರೊಡನೆ) ‘‘ನಮಗೆ ನಿಮ್ಮ ಮೇಲೆ ಪ್ರಾಬಲ್ಯ ದೊರೆತಿದ್ದಾಗ ನಾವೇನು ನಿಮ್ಮನ್ನು ವಿಶ್ವಾಸಿಗಳಿಂದ ರಕ್ಷಿಸಿರಲಿಲ್ಲವೇ?’’ ಎನ್ನುತ್ತಾರೆ. ಪುನರುತ್ಥಾನ ದಿನ ಅಲ್ಲಾಹನೇ ನಿಮ್ಮ ನಡುವೆ ನ್ಯಾಯ ತೀರ್ಮಾನ ಮಾಡುವನು. ಅಲ್ಲಾಹನು ವಿಶ್ವಾಸಿಗಳೆದುರು ವಿಜಯ ಸಾಧಿಸಲು ಧಿಕ್ಕಾರಿಗಳಿಗೆ ಯಾವ ಅವಕಾಶವನ್ನೂ ಬಿಟ್ಟಿಲ್ಲ.

142. ಕಪಟಿಗಳು ಅಲ್ಲಾಹನನ್ನು ವಂಚಿಸುತ್ತಿದ್ದಾರೆ. ಆದರೆ ನಿಜವಾಗಿ ಅವನು ಅವರನ್ನು ವಂಚಿಸುತ್ತಿದ್ದಾನೆ. ಅವರು ನಮಾಝಿಗೆ ನಿಲ್ಲುವಾಗ, ಕೇವಲ ಜನರಿಗೆ ತೋರಿಸುವುದಕ್ಕಾಗಿ, ತೀರಾ ಆಲಸಿಗಳಾಗಿ ನಿಲ್ಲುತ್ತಾರೆ. ಅವರು ಅಲ್ಲಾಹನನ್ನು ಸ್ಮರಿಸುವುದು ತೀರಾ ಕಡಿಮೆ.

143. ಅವರು (ಕಪಟಿಗಳು) ಸರಿಯಾಗಿ ಆ ಕಡೆಗೂ ಇಲ್ಲ, ಈ ಕಡೆಗೂ ಇಲ್ಲವೆಂಬಂತೆ, ಅವೆರಡರ (ಸತ್ಯ-ಮಿಥ್ಯಗಳ) ನಡುವೆ ಜೋತಾಡುತ್ತಿರುತ್ತಾರೆ. ಅಲ್ಲಾಹನೇ ದಾರಿಗೆಡಿಸಿ ಬಿಟ್ಟಾತನಿಗಾಗಿ ನೀವು ಯಾವ ದಾರಿಯನ್ನೂ ಕಾಣಲಾರಿರಿ.

144. ವಿಶ್ವಾಸಿಗಳೇ, ನೀವು ವಿಶ್ವಾಸಿಗಳನ್ನು ಬಿಟ್ಟು ಧಿಕ್ಕಾರಿಗಳನ್ನು ನಿಮ್ಮ ಪೋಷಕ ಮಿತ್ರರಾಗಿಸಿಕೊಳ್ಳಬೇಡಿರಿ. ನೀವೇನು, ನಿಮ್ಮ ವಿರುದ್ಧ ಅಲ್ಲಾಹನಿಗೆ ಒಂದು ಸ್ಪಷ್ಟ ಪುರಾವೆಯನ್ನು ಒದಗಿಸಬಯಸುವಿರಾ?

145. ಕಪಟಿಗಳು ನರಕದ ತೀರಾ ಕೆಳಗಿನ ಅಂತಸ್ತಿನಲ್ಲಿರುವರು. ಅವರಿಗೆ ನೀವು ಯಾವ ಸಹಾಯಕನನ್ನೂ ಕಾಣಲಾರಿರಿ.

146. ಪಶ್ಚಾತ್ತಾಪ ಪಟ್ಟು, ತಮ್ಮನ್ನು ಸುಧಾರಿಸಿಕೊಂಡವರು ಹಾಗೂ ಭದ್ರವಾಗಿ ಅಲ್ಲಾಹನನ್ನು ಅವಲಂಬಿಸಿ, ತಮ್ಮ ನಿಷ್ಠೆಯನ್ನು ಸಂಪೂರ್ಣವಾಗಿ ಅಲ್ಲಾಹನಿಗೆ ಮೀಸಲಾಗಿಟ್ಟವರ ಹೊರತು. ಅವರು (ಪರಲೋಕದಲ್ಲಿ) ವಿಶ್ವಾಸಿಗಳ ಜೊತೆಗಿರುವರು. ಅಲ್ಲಾಹನು ಶೀಘ್ರದಲ್ಲೇ ವಿಶ್ವಾಸಿಗಳಿಗೆ ಭಾರೀ ಪ್ರತಿಫಲ ನೀಡುವನು.

 147. ನೀವು ಕೃತಜ್ಞರಾದರೆ ಹಾಗೂ ವಿಶ್ವಾಸಿಗಳಾದರೆ, ನಿಮ್ಮನ್ನು ಶಿಕ್ಷಿಸಿ ಅಲ್ಲಾಹನಿಗೆ ಏನಾಗಬೇಕಾಗಿದೆ? ಅಲ್ಲಾಹನಂತೂ (ಒಳಿತಿನ) ಪ್ರಶಂಸಕನೂ ಎಲ್ಲವನ್ನೂ ಬಲ್ಲವನೂ ಆಗಿದ್ದಾನೆ.

ಕಾಂಡ – 6

148. ಬಹಿರಂಗವಾದ ಬಯ್ದಾಟವನ್ನು ಅಲ್ಲಾಹನು ಮೆಚ್ಚುವುದಿಲ್ಲ – ಆದರೆ ಮರ್ದಿತನ ಹೊರತು. ಅಲ್ಲಾಹನಂತು ಎಲ್ಲವನ್ನೂ ಕೇಳುವವನೂ ಬಲ್ಲವನೂ ಆಗಿದ್ದಾನೆ.

149. ನೀವು ಸತ್ಕಾರ್ಯವನ್ನು ಬಹಿರಂಗವಾಗಿ ಮಾಡಿದರೆ ಅಥವಾ ಗುಟ್ಟಾಗಿ ಮಾಡಿದರೆ ಅಥವಾ ನೀವು (ಇತರರ) ತಪ್ಪನ್ನು ಕ್ಷಮಿಸಿ ಬಿಟ್ಟರೆ – ಅಲ್ಲಾಹನಂತೂ ಸದಾ ಕ್ಷಮಿಸುವವನೂ ಸಮರ್ಥನೂ ಆಗಿದ್ದಾನೆ.

150. ಖಂಡಿತವಾಗಿಯೂ, ಅಲ್ಲಾಹನನ್ನು ಮತ್ತವನ ದೂತರನ್ನು ಧಿಕ್ಕರಿಸುವವರು ಹಾಗೂ ಅಲ್ಲಾಹನ ಮತ್ತವನ ದೂತರ ನಡುವೆ ತಾರತಮ್ಯ ಮಾಡುವವರು ಮತ್ತು ‘‘ನಾವು ಅವರಲ್ಲಿ (ದೂತರಲ್ಲಿ) ಕೆಲವರನ್ನು ನಂಬುತ್ತೇವೆ ಮತ್ತು ಕೆಲವರನ್ನು ತಿರಸ್ಕರಿಸುತ್ತೇವೆ’’ ಎನ್ನುವವರು ಮತ್ತು ಅವುಗಳ (ಸತ್ಯ-ಮಿಥ್ಯಗಳ) ನಡುವೆ ಬೇರೊಂದು ಮಾರ್ಗವನ್ನು ಹುಡುಕುತ್ತಿರುವವರು –

151. – ಅವರೇ ನಿಜವಾದ ಧಿಕ್ಕಾರಿಗಳು. (ಇಂತಹ) ಧಿಕ್ಕಾರಿಗಳಿಗಾಗಿ ನಾವು ತೀರಾ ಅಪಮಾನಕಾರಿ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದೇವೆ.

152. ಅಲ್ಲಾಹನಲ್ಲೂ ಅವನ ದೂತರಲ್ಲೂ ನಂಬಿಕೆ ಉಳ್ಳವರಿಗೆ ಹಾಗೂ ಅವರಲ್ಲಿ (ದೂತರಲ್ಲಿ) ಯಾರ ನಡುವೆಯೂ ತಾರತಮ್ಯ ಮಾಡದವರಿಗೆ (ಅಲ್ಲಾಹನು) ಶೀಘ್ರದಲ್ಲೇ ಅವರ ಪ್ರತಿಫಲವನ್ನು ನೀಡುವನು. ಅಲ್ಲಾಹನಂತು ತುಂಬಾ ಕ್ಷಮಿಸುವವನೂ ಕರುಣಾಮಯಿಯೂ ಆಗಿದ್ದಾನೆ.

153. (ದೂತರೇ,) ಗ್ರಂಥದವರು ನಿಮ್ಮೊಡನೆ, ತಮಗಾಗಿ ಆಕಾಶದಿಂದ ಒಂದು ಗ್ರಂಥವನ್ನು ಇಳಿಸಿಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಹಿಂದೆ ಅವರು ಮೂಸಾರ ಮುಂದೆ ಇದಕ್ಕಿಂತ ದೊಡ್ಡ ಆಗ್ರಹಗಳನ್ನು ಮಂಡಿಸಿದ್ದರು ಮತ್ತು ‘‘ನಮಗೆ ವ್ಯಕ್ತವಾಗಿ ಅಲ್ಲಾಹನನ್ನು ತೋರಿಸಿ ಕೊಡಿರಿ’’ ಎಂದಿದ್ದರು. ಕೊನೆಗೆ, ಅವರ ಅಕ್ರಮಗಳ ಕಾರಣ ಅವರ ಮೇಲೆ ಸಿಡಿಲೆರಗಿ ಬಿಟ್ಟಿತು. ಮುಂದೆ, ತಮ್ಮ ಬಳಿಗೆ ಬಹಳ ಸ್ಪಷ್ಟ ಪುರಾವೆಗಳು ಬಂದ ಬಳಿಕವೂ ಅವರು ಕರುವನ್ನು (ದೇವರಾಗಿ) ನೆಚ್ಚಿಕೊಂಡರು. ಇಷ್ಟಿದ್ದೂ ನಾವು ಅವರನ್ನು ಕ್ಷಮಿಸಿದೆವು ಮತ್ತು ಮೂಸಾರಿಗೆ ಬಹಳ ಸ್ಪಷ್ಟವಾದ ಪ್ರಾಬಲ್ಯವನ್ನು ನೀಡಿದೆವು.

154. ನಾವು ತೂರ್ ಪರ್ವತವನ್ನು ಅವರ ಮೇಲೆ ಎತ್ತಿ ಹಿಡಿದು (ಅದರ ತಪ್ಪಲಲ್ಲಿ) ಅವರಿಂದ ಪ್ರತಿಜ್ಞೆ ಮಾಡಿಸಿದೆವು ಮತ್ತು ನಾವು ಅವರೊಡನೆ ‘‘ಸಾಷ್ಟಾಂಗವೆರಗುತ್ತಾ (ನಗರದ) ಬಾಗಿಲೊಳಗೆ ಪ್ರವೇಶಿಸಿರಿ’’ ಎಂದೆವು. ಹಾಗೆಯೇ ನಾವು ‘‘ಶನಿವಾರ ದಿನದ ಯಾವ ನಿಯಮವನ್ನೂ ಉಲ್ಲಂಘಿಸಬಾರದು’’ ಎಂದು ಅವರಿಗೆ ಆದೇಶಿಸಿದೆವು. ಮತ್ತು (ಈ ಕುರಿತು) ನಾವು ಅವರಿಂದ ಪ್ರಬಲವಾದ ಪ್ರತಿಜ್ಞೆಯನ್ನು ಪಡೆದೆವು.

 155. ಅವರು ತಮ್ಮ ಪ್ರತಿಜ್ಞೆಯನ್ನು ಮುರಿದು, ಅಲ್ಲಾಹನ ವಚನಗಳನ್ನು ಧಿಕ್ಕರಿಸಿದ್ದರಿಂದ, ಅನ್ಯಾಯವಾಗಿ ಪ್ರವಾದಿಗಳನ್ನು ಕೊಂದದ್ದರಿಂದ ಮತ್ತು ‘‘ನಮ್ಮ ಮನಸ್ಸುಗಳು ಸುಭದ್ರವಾಗಿವೆ’’ ಎಂದು ಹೇಳಿದ್ದರಿಂದ (ಅವರನ್ನು ದಂಡಿಸಲಾಯಿತು). ನಿಜವಾಗಿ ಅವರ ಧಿಕ್ಕಾರದ ಕಾರಣ ಅಲ್ಲಾಹನು ಅವರ ಮನಸ್ಸುಗಳಿಗೆ ಮುದ್ರೆ ಒತ್ತಿ ಬಿಟ್ಟನು. ಆದ್ದರಿಂದ ಅವರು (ಸತ್ಯವನ್ನು) ನಂಬುವುದಿಲ್ಲ – ಕೇವಲ ಕೆಲವರ ಹೊರತು.

 156. ಹಾಗೆಯೇ, ಅವರ ಧಿಕ್ಕಾರದ ಕಾರಣ ಹಾಗೂ ಮರ್ಯಮರ ಮೇಲೆ ಅವರು ಹೊರಿಸಿದ ಘೋರ ಸುಳ್ಳಾರೋಪದ ಕಾರಣ (ಅವರನ್ನು ದಂಡಿಸಲಾಯಿತು).

 157. ಮತ್ತು ‘‘ಅಲ್ಲಾಹನ ದೂತರಾಗಿದ್ದ, ಮರ್ಯಮರ ಪುತ್ರ ಈಸಾ ಮಸೀಹರನ್ನು ನಾವು ಕೊಂದೆವು’’ ಎಂಬ ಅವರ ಹೇಳಿಕೆಯ ಕಾರಣ (ಅವರನ್ನು ದಂಡಿಸಲಾಯಿತು). ನಿಜವಾಗಿ ಅವರು ಅವರನ್ನು (ಈಸಾರನ್ನು) ಕೊಲ್ಲಲೂ ಇಲ್ಲ, ಶಿಲುಬೆಗೇರಿಸಲೂ ಇಲ್ಲ. ಅವರಿಗೆ ಅದನ್ನು ಆ ರೀತಿ ಕೇವಲ ಕಾಣಿಸಲಾಗಿತ್ತು. ಈ ವಿಷಯದಲ್ಲಿ ಭಿನ್ನತೆ ತಾಳಿರುವವರೆಲ್ಲಾ ಖಂಡಿತ ಈ ಕುರಿತು ಸಂಶಯದಲ್ಲಿದ್ದಾರೆ. ಅವರಿಗೆ ಈ ಕುರಿತು ಯಾವ ಜ್ಞಾನವೂ ಇಲ್ಲ. ಅವರು ಕೇವಲ ಊಹೆಯನ್ನಷ್ಟೇ ಅನುಸರಿಸುತ್ತಿದ್ದಾರೆ. ಅವರು ಆತನನ್ನು ಕೊಲ್ಲಲಿಲ್ಲ ಎಂಬುದಂತೂ ಖಚಿತ.

158. ನಿಜವಾಗಿ ಅಲ್ಲಾಹನು ಅವರನ್ನು (ಈಸಾರನ್ನು) ತನ್ನೆಡೆಗೆ ಎತ್ತಿಕೊಂಡನು. ಅಲ್ಲಾಹನಂತು ತುಂಬಾ ಪ್ರಚಂಡನೂ ಯುಕ್ತಿವಂತನೂ ಆಗಿರುವನು.

159. ಖಂಡಿತವಾಗಿಯೂ, ಗ್ರಂಥದವರಲ್ಲಿ ಯಾರೂ ತನ್ನ ಮರಣಕ್ಕೆ ಮುನ್ನ, ಅವರಲ್ಲಿ (ಈಸಾರಲ್ಲಿ) ನಂಬಿಕೆ ಇಡದೆ ಇರಲಾರನು ಮತ್ತು ಪುನರುತ್ಥಾನ ದಿನ ಅವರು (ಈಸಾ) ಅವರ (ಗ್ರಂಥದವರ) ವಿರುದ್ಧ ಸಾಕ್ಷಿಯಾಗುವರು.

160. ಯಹೂದಿಗಳಲ್ಲಿನ ಹಲವರ ಅಕ್ರಮಗಳ ಕಾರಣ, ಅವರ ಪಾಲಿಗೆ (ಹಿಂದೆ) ಧರ್ಮಸಮ್ಮತವಾಗಿದ್ದ ಹಲವು ನಿರ್ಮಲ ವಸ್ತುಗಳನ್ನು ನಾವು ನಿಷೇಧಿಸಿದೆವು. ಅವರು ಅನೇಕರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಿದ್ದುದೂ ಇದಕ್ಕೆ ಕಾರಣವಾಗಿತ್ತು.

161. ಹಾಗೆಯೇ, ಅವರು ತಮ್ಮ ಪಾಲಿಗೆ ನಿಷೇಧಿಸಲಾಗಿದ್ದ ಬಡ್ಡಿಯನ್ನು ತಿನ್ನುತ್ತಿದ್ದುದು ಮತ್ತು ಜನರ ಸಂಪತ್ತನ್ನು ಅಕ್ರಮವಾಗಿ ಕಬಳಿಸುತ್ತಿದ್ದುದು ಕೂಡಾ (ಈ ಶಿಕ್ಷೆಗೆ ಕಾರಣವಾಗಿತ್ತು). ಅವರ ಪೈಕಿ ಧಿಕ್ಕಾರಿಗಳಿಗಾಗಿ ನಾವು ಕಠಿಣ ಶಿಕ್ಷೆಯನ್ನು ತಯಾರಿಸಿಟ್ಟಿದ್ದೇವೆ.

162. ಅವರ ಪೈಕಿ ಪಕ್ವ ಜ್ಞಾನವುಳ್ಳವರು ಹಾಗೂ ವಿಶ್ವಾಸಿಗಳು ಮಾತ್ರ, ನಿಮಗೆ ಇಳಿಸಿಕೊಡಲಾಗಿರುವುದರಲ್ಲಿ (ಕುರ್‌ಆನ್‌ನಲ್ಲಿ) ಮತ್ತು ನಿಮಗಿಂತ ಹಿಂದೆ ಇಳಿಸಿಕೊಡಲಾಗಿದ್ದರಲ್ಲಿ (ದಿವ್ಯ ಸಂದೇಶದಲ್ಲಿ) ನಂಬಿಕೆ ಇಡುತ್ತಾರೆ. ನಮಾಝ್ ಅನ್ನು ಪಾಲಿಸುತ್ತಾರೆ, ಝಕಾತ್ ಅನ್ನು ಪಾವತಿಸುತ್ತಾರೆ ಮತ್ತು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಇಟ್ಟಿರುತ್ತಾರೆ. ಅವರಿಗೆ ನಾವು ಭವ್ಯ ಪ್ರತಿಫಲ ನೀಡಲಿದ್ದೇವೆ.

163. (ದೂತರೇ,) ನೂಹ್‌ರಿಗೆ ಮತ್ತು ಅವರ ಅನಂತರದ ದೇವದೂತರಿಗೆ ಇಳಿಸಿ ಕೊಟ್ಟಂತೆ (ಈ ಸಂದೇಶವನ್ನು) ನಾವೇ ನಿಮಗೆ ಇಳಿಸಿಕೊಟ್ಟಿರುವೆವು. (ಈ ಹಿಂದೆ) ನಾವು ಇಬ್ರಾಹೀಮ್, ಇಸ್ಮಾಈಲ್, ಇಸ್‌ಹಾಕ್, ಯಅ್ಕೂಬ್, ಯಅ್ಕೂಬರ ಸಂತತಿ, ಈಸಾ, ಅಯ್ಯೂಬ್, ಯೂನುಸ್, ಹಾರೂನ್ ಮತ್ತು ಸುಲೈಮಾನ್‌ರಿಗೆ (ದಿವ್ಯ ಸಂದೇಶವನ್ನು) ಇಳಿಸಿಕೊಟ್ಟಿದ್ದೆವು. ಹಾಗೆಯೇ, ದಾವೂದ್‌ರಿಗೆ ನಾವು ‘ಝಬೂರ್’ ಅನ್ನು ನೀಡಿದ್ದೆವು.

164. ಹಾಗೆಯೇ, ನಾವು ಈ ಹಿಂದೆ ನಿಮ್ಮ ಮುಂದೆ ಪ್ರಸ್ತಾಪಿಸಿರುವ ಹಾಗೂ ನಿಮ್ಮ ಮುಂದೆ ಪ್ರಸ್ತಾಪಿಸಿಲ್ಲದ ದೇವದೂತರಿಗೆಲ್ಲಾ (ಸಂದೇಶವನ್ನು ಕಳಿಸಲಾಗಿತ್ತು). ಮತ್ತು ಮೂಸಾರೊಡನೆ ಅಲ್ಲಾಹನು ನೇರವಾಗಿ ಮಾತನಾಡಿದ್ದನು.

165. ದೇವದೂತರು ಬಂದ ಬಳಿಕ ಅಲ್ಲಾಹನೆದುರು ಜನರ ಬಳಿ ಯಾವುದೇ ನೆಪ ಉಳಿಯಬಾರದೆಂದು, ಆ ದೇವದೂತರನ್ನು ಶುಭವಾರ್ತೆ ನೀಡುವವರು ಮತ್ತು ಎಚ್ಚರಿಸುವವರಾಗಿ ಕಳಿಸಲಾಗಿತ್ತು. ಅಲ್ಲಾಹನಂತೂ ಪ್ರಚಂಡನೂ, ಯುಕ್ತಿವಂತನೂ ಆಗಿದ್ದಾನೆ.

166. ಅಲ್ಲಾಹನು ನಿಮಗೆ ಏನನ್ನು ಇಳಿಸಿಕೊಟ್ಟಿರುವನೋ ಅದನ್ನು ಅವನು ತನ್ನ ಜ್ಞಾನದ ಆಧಾರದಲ್ಲಿ ಇಳಿಸಿ ಕೊಟ್ಟಿರುವನೆಂದು ಅವನೇ ಸಾಕ್ಷಿ ಹೇಳುತ್ತಾನೆ ಮತ್ತು ಮಲಕ್‌ಗಳೂ ಸಾಕ್ಷಿ ಹೇಳುತ್ತಾರೆ. ನಿಜವಾಗಿ ಸಾಕ್ಷಿಯಾಗಿ ಅಲ್ಲಾಹನೇ ಸಾಕು.

 167. (ಸತ್ಯವನ್ನು) ಧಿಕ್ಕರಿಸಿದವರು ಮತ್ತು (ಜನರನ್ನು) ಅಲ್ಲಾಹನ ಮಾರ್ಗದಿಂದ ತಡೆಯುವವರು ದಾರಿಗೇಡಿತನದಲ್ಲಿ ನಿಜಕ್ಕೂ ತುಂಬಾ ದೂರ ಸಾಗಿಬಿಟ್ಟಿದ್ದಾರೆ.

168. ಧಿಕ್ಕಾರಿಗಳಾದವರನ್ನು ಹಾಗೂ ಅಕ್ರಮವೆಸಗಿದವರನ್ನು ಅಲ್ಲಾಹನು ಕ್ಷಮಿಸಲಾರನು ಮತ್ತು ಅವರಿಗೆ ಯಾವುದೇ ದಾರಿಯನ್ನು ತೋರಲಾರನು –

169. – ನರಕದ ದಾರಿಯ ಹೊರತು. ಅದರಲ್ಲಿ ಅವರು ಸದಾಕಾಲ ಇರುವರು. ಇದೆಲ್ಲಾ ಅಲ್ಲಾಹನ ಪಾಲಿಗೆ ತೀರಾ ಸುಲಭವಾಗಿದೆ.

170. ಮಾನವರೇ, ನಿಮ್ಮೆಡೆಗೆ ನಿಮ್ಮೊಡೆಯನ ಕಡೆಯಿಂದ ಸತ್ಯದೊಂದಿಗೆ ಒಬ್ಬ ದೂತರು ಬಂದಿರುವರು. ಅವರಲ್ಲಿ ನಂಬಿಕೆ ಇಡಿರಿ. ಅದು ನಿಮ್ಮ ಪಾಲಿಗೆ ಒಳ್ಳೆಯದು. ಇನ್ನು ನೀವು ಧಿಕ್ಕರಿಸಿದರೆ, (ನಿಮಗೆ ತಿಳಿದಿರಲಿ), ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ ಮತ್ತು ಅಲ್ಲಾಹನು ಎಲ್ಲವನ್ನೂ ಬಲ್ಲವನು ಹಾಗೂ ಯುಕ್ತಿವಂತನಾಗಿದ್ದಾನೆ.

  171. ಗ್ರಂಥದವರೇ, ನಿಮ್ಮ ಧರ್ಮದಲ್ಲಿ ಅತಿಶಯವೆಸಗಬೇಡಿ ಮತ್ತು ಅಲ್ಲಾಹನ ಕುರಿತು, ಸತ್ಯವಲ್ಲದ ಏನನ್ನೂ ಹೇಳಬೇಡಿ. ಮರ್ಯಮರ ಪುತ್ರ ಈಸಾ ಮಸೀಹ್, ಅಲ್ಲಾಹನ ದೂತರಾಗಿದ್ದರು ಹಾಗೂ ಅವನು ಮರ್ಯಮರಿಗೆ ಕರುಣಿಸಿದ, ಅವನ ವಚನವಾಗಿದ್ದರು ಮತ್ತು ಅವನ ಕಡೆಯಿಂದ ಕಳಿಸಲಾಗಿದ್ದ ಒಂದು ಆತ್ಮವಾಗಿದ್ದರು. ನೀವು ‘‘(ದೇವರು) ಮೂವರಿದ್ದಾರೆ’’ ಎನ್ನಬೇಡಿ. ಹಾಗೆ ಹೇಳದಿರುವುದೇ ನಿಮ್ಮ ಪಾಲಿಗೆ ಉತ್ತಮ. ಅಲ್ಲಾಹನೊಬ್ಬನು ಮಾತ್ರ ಪೂಜಾರ್ಹನು. ಅವನಿಗೊಬ್ಬ ಪುತ್ರನಿರಲು, ಅವನಂತೂ ತುಂಬಾ ಪಾವನನಾಗಿದ್ದಾನೆ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅವನಿಗೇ ಸೇರಿವೆ. ಕಾರ್ಯ ಸಾಧನಕನಾಗಿ (ಎಲ್ಲರಿಗೂ) ಅಲ್ಲಾಹನೇ ಸಾಕು.

172. ಈಸಾ ತಾನು ಅಲ್ಲಾಹನ ದಾಸನಾಗಿರುವುದಕ್ಕೆ ಸಂಕೋಚ ಪಡುವುದಿಲ್ಲ. (ಅಲ್ಲಾಹನ) ಆಪ್ತ ಮಲಕ್‌ಗಳೂ ಅಷ್ಟೇ. ಅವನನ್ನು (ಅಲ್ಲಾಹನನ್ನು) ಪೂಜಿಸುವುದಕ್ಕೆ ಹಿಂಜರಿಯುವ ಹಾಗೂ ಅಹಂಕಾರ ತೋರುವ ಎಲ್ಲರನ್ನೂ ಅವನು (ವಿಚಾರಣೆಗಾಗಿ) ತನ್ನ ಬಳಿ ಸೇರಿಸಲಿದ್ದಾನೆ.

  173. ಧರ್ಮದಲ್ಲಿ ನಂಬಿಕೆ ಇಟ್ಟು ಸತ್ಕರ್ಮ ಮಾಡಿದವರಿಗೆ (ಅಲ್ಲಾಹನು) ಅವರ ಸಂಪೂರ್ಣ ಪ್ರತಿಫಲವನ್ನು ನೀಡುವನು, ಮಾತ್ರವಲ್ಲ, ಅವನು ತನ್ನ ಅನುಗ್ರಹದಿಂದ ಅವರಿಗೆ ಇನ್ನೂ ಹೆಚ್ಚಿನದನ್ನು ನೀಡುವನು. (ತಾವು ದೇವರ ದಾಸರೆನ್ನುವುದಕ್ಕೆ) ಸಂಕೋಚ ಪಟ್ಟವರನ್ನು ಹಾಗೂ ಅಹಂಕಾರ ತೋರಿದವರನ್ನು ಅವನು ಯಾತನಾಮಯ ಶಿಕ್ಷೆಗೆ ಗುರಿಪಡಿಸುವನು. ಅವರಿಗೆ ಅಲ್ಲಾಹನ ಹೊರತು ಬೇರಾರೂ ರಕ್ಷಕರಾಗಲಿ ಸಹಾಯಕರಾಗಲಿ ಸಿಗಲಾರರು.

 174. ಮಾನವರೇ, ಇದೋ ನಿಮ್ಮ ಬಳಿಗೆ ನಿಮ್ಮೊಡೆಯನ ಕಡೆಯಿಂದ ಬಹಳ ಸ್ಪಷ್ಟವಾದ ಪುರಾವೆಯೊಂದು ಬಂದಿದೆ ಮತ್ತು ನಾವು ಒಂದು ಉಜ್ವಲ ಪ್ರಕಾಶವನ್ನು ನಿಮಗೆ ಇಳಿಸಿ ಕೊಟ್ಟಿರುವೆವು.

175. ಅಲ್ಲಾಹನಲ್ಲಿ ನಂಬಿಕೆ ಇಟ್ಟು ಅವನನ್ನೇ ಭದ್ರವಾಗಿ ಅವಲಂಬಿಸಿರುವವರನ್ನು ಅವನು ತನ್ನ ಕೃಪೆ ಮತ್ತು ಅನುಗ್ರಹದೊಳಗೆ ಸೇರಿಸುವನು ಮತ್ತು ಅವನು ಅವರಿಗೆ ತನ್ನ ಕಡೆಗಿರುವ ನೇರ ದಾರಿಯನ್ನು ತೋರಿಸಿಕೊಡುವನು.

176. (ದೂತರೇ,) ಅವರು ನಿಮ್ಮೊಡನೆ ತೀರ್ಪು ಕೇಳುತ್ತಾರೆ. ಹೇಳಿರಿ; ‘‘ಕಲಾಲಃ (ಉತ್ತರಾಧಿಕಾರಿಗಳಾಗಿ ತಂದೆ-ತಾಯಿಯಾಗಲಿ, ಮಕ್ಕಳಾಗಲಿ ಇಲ್ಲದವರು)ಗಳ ಕುರಿತು ಅಲ್ಲಾಹನು ನಿಮಗೆ ತೀರ್ಪು ನೀಡಿರುವನು. ಒಬ್ಬ ಪುರುಷನು ಮೃತನಾಗಿದ್ದು, ಅವನಿಗೆ ಮಕ್ಕಳಿಲ್ಲದೆ, ಒಬ್ಬ ಸಹೋದರಿ ಇರುವಳೆಂದಾದರೆ ಅವನು ಬಿಟ್ಟು ಹೋದ ಸೊತ್ತಿನಲ್ಲಿ ಆಕೆಗೆ ಅರ್ಧ ಭಾಗ ಸಿಗುವುದು. ಇನ್ನು ಮೃತ ವ್ಯಕ್ತಿ ಮಹಿಳೆಯಾಗಿದ್ದು ಆಕೆಗೆ ಮಕ್ಕಳಿಲ್ಲವಾದರೆ ಅವನು (ಸಹೋದರನು) ಆಕೆಯ ಉತ್ತರಾಧಿಕಾರಿಯಾಗುವನು. ಒಂದು ವೇಳೆ ಮೃತ ವ್ಯಕ್ತಿಗೆ ಇಬ್ಬರು ಸಹೋದರಿಯರು ಇದ್ದರೆ ಆತನು ಬಿಟ್ಟು ಹೋದ ಸೊತ್ತಿನಲ್ಲಿ ಅವರಿಗೆ ಮೂರನೇ ಎರಡು ಪಾಲು ಸಿಗುವುದು. ಹಲವು ಸಹೋದರರು ಮತ್ತು ಹಲವು ಸಹೋದರಿಯರಿದ್ದರೆ, ಸ್ತ್ರೀಯರಿಗೆ (ಸಹೋದರಿಯರಿಗೆ) ಸಿಗುವುದರ ಇಮ್ಮಡಿ ಪಾಲು, ಪುರುಷರಿಗೆ (ಸಹೋದರರಿಗೆ) ಸಿಗುವುದು. ನೀವು ದಾರಿ ತಪ್ಪಬಾರದೆಂದು ಅಲ್ಲಾಹನು ನಿಮಗೆ (ಇದನ್ನೆಲ್ಲಾ) ವಿವರಿಸುತ್ತಿದ್ದಾನೆ. ಅಲ್ಲಾಹನಂತೂ ಎಲ್ಲವನ್ನೂ ಬಲ್ಲವನಾಗಿದ್ದಾನೆ.