42. Ash Shura

42. ಅಶ್ಶೂರಾ (ಸಮಾಲೋಚನೆ)

ವಚನಗಳು – 53, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ

1. ಹಾ ಮೀಮ್.

2. ಐನ್ ಸೀನ್ ಕ್ವಾಫ್.

3. ಇದೇ ರೀತಿ ನಿಮ್ಮೊಡೆಯನು ನಿಮಗೂ ನಿಮ್ಮ ಹಿಂದಿನವರಿಗೂ ದಿವ್ಯ ಸಂದೇಶವನ್ನು ಕಳಿಸಿರುವನು. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿರುವನು.

4. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಅವನಿಗೇ ಸೇರಿದೆ. ಅವನು ತುಂಬಾ ಉನ್ನತನೂ ಮಹಾನನೂ ಆಗಿರುವನು.

5. ಅವರ ಮೇಲಿಂದ ಆಕಾಶಗಳು ಸಿಡಿದು ಬೀಳುವ ಸಾಧ್ಯತೆ ಇದೆ. (ಅದರೆ) ಮಲಕ್‌ಗಳು ತಮ್ಮ ಒಡೆಯನ ಗುಣಗಾನ ಮಾಡುತ್ತಾ ಅವನ ಪಾವಿತ್ರವನ್ನು ಜಪಿಸುತ್ತಿದ್ದಾರೆ. ಮತ್ತು ಭೂಮಿಯಲ್ಲಿರುವವರ ಪರವಾಗಿ ಕ್ಷಮೆಯಾಚಿಸುತ್ತಿದ್ದಾರೆ. ನಿಮಗೆ ತಿಳಿದಿರಲಿ; ಅಲ್ಲಾಹನು ತುಂಬಾ ಕ್ಷಮಾಶೀಲನೂ ಕರುಣಾಳುವೂ ಆಗಿರುವನು.

6. (ದೂತರೇ,) ತನ್ನ (ಅಲ್ಲಾಹನ) ಹೊರತು ಇತರರನ್ನು ತಮ್ಮ ಪೋಷಕರಾಗಿಸಿಕೊಂಡವರ ಪಾಲಿಗೆ ಅಲ್ಲಾಹನೇ ಮೇಲ್ವಿಚಾರಕನಾಗಿದ್ದಾನೆ. ಅವರ ವಿಷಯದಲ್ಲಿ ನೀವೇನೂ ಹೊಣೆಗಾರರಲ್ಲ.

7. ಈ ರೀತಿ ನಾವು ನಿಮಗೆ ದಿವ್ಯವಾಣಿಯ ಮೂಲಕ ಅರಬೀ ಭಾಷೆಯ ಕುರ್‌ಆನ್‌ಅನ್ನು ನೀಡಿರುವೆವು. ನೀವು ಕೇಂದ್ರ ನಗರ (ಮಕ್ಕಾ)ದವರನ್ನು ಮತ್ತು ಅದರ ಸುತ್ತಮುತ್ತಲಿನವರನ್ನು ಎಚ್ಚರಿಸಬೇಕೆಂದು ಹಾಗೂ ನೀವು, ನಿಸ್ಸಂದೇಹವಾಗಿ ಬರಲಿರುವ ಸಮ್ಮೇಳನದ ದಿನ (ಪುನರುತ್ಥಾನ)ದ ಕುರಿತು ಮುನ್ನೆಚ್ಚರಿಕೆ ನೀಡಬೇಕೆಂದು. ಕೊನೆಗೆ ಒಂದು ಪಂಗಡವು ಸ್ವರ್ಗದಲ್ಲಿರುವುದು ಮತ್ತು ಇನ್ನೊಂದು ಪಂಗಡವು ನರಕದಲ್ಲಿರುವುದು.

8. ಅಲ್ಲಾಹನು ಬಯಸಿದ್ದರೆ ಅವರನ್ನೆಲ್ಲಾ ಒಂದೇ ಸಮುದಾಯವಾಗಿಸಿ ಬಿಡುತ್ತಿದ್ದನು. ಆದರೆ ಅವನು ತಾನಿಚ್ಛಿಸಿದವರನ್ನು ಮಾತ್ರ ತನ್ನ ಕೃಪಾಶ್ರಯದೊಳಗೆ ಸೇರಿಸುತ್ತಾನೆ. ಅಕ್ರಮಿಗಳಿಗೆ ಪೋಷಕರಾಗಲಿ ರಕ್ಷಕರಾಗಲಿ ಯಾರೂ ಇಲ್ಲ.

9. ಅವರೇನು, ಅಲ್ಲಾಹನ ಹೊರತು ಇತರರನ್ನು ತಮ್ಮ ಪೋಷಕರಾಗಿಸಿ ಕೊಂಡಿದ್ದಾರೆಯೇ? ನಿಜವಾಗಿ ಅಲ್ಲಾಹನೇ ಎಲ್ಲರ ಪೋಷಕನಾಗಿದ್ದಾನೆ ಮತ್ತು ಅವನೇ ಸತ್ತವರನ್ನು ಜೀವಂತಗೊಳಿಸುತ್ತಾನೆ. ಅವನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.

10. ನೀವು ಪರಸ್ಪರ ಭಿನ್ನತೆ ತಾಳಿರುವ ಪ್ರತಿಯೊಂದು ವಿಷಯದ ಅಂತಿಮ ತೀರ್ಪು ಅಲ್ಲಾಹನ ಬಳಿ ಇದೆ. ಆ ಅಲ್ಲಾಹನೇ ನನ್ನ ಒಡೆಯ. ನಾನು ಅವನಲ್ಲಿ ಭರವಸೆ ಇಟ್ಟಿರುತ್ತೇನೆ ಮತ್ತು ನಾನು ಅವನೆಡೆಗೇ ಮರಳುತ್ತೇನೆ.

11. ಆಕಾಶಗಳನ್ನು ಹಾಗೂ ಭೂಮಿಯನ್ನು ರೂಪಿಸಿದವನು ಅವನು. ನಿಮಗಾಗಿ ನಿಮ್ಮೊಳಗಿಂದಲೇ ಜೋಡಿಗಳನ್ನು ರಚಿಸಿಕೊಟ್ಟವನು ಮತ್ತು ಜಾನುವಾರುಗಳ ಜೊತೆಗಳನ್ನು ರಚಿಸಿದವನು ಅವನು. ಇದರಲ್ಲಿ (ಭೂಮಿಯಲ್ಲಿ) ನಿಮ್ಮನ್ನು ಹರಡಿದವನು ಅವನು. ಯಾವ ವಸ್ತುವೂ ಅವನಂತಿಲ್ಲ. ಅವನು ಎಲ್ಲವನ್ನೂ ಕೇಳುವವನು ಹಾಗೂ ನೋಡುವವನಾಗಿದ್ದಾನೆ.

12. ಆಕಾಶಗಳ ಹಾಗೂ ಭೂಮಿಯ ಚಾವಿಗಳು ಅವನ ಕೈಯಲ್ಲಿವೆ. ಅವನು ತಾನಿಚ್ಛಿಸಿದವರ ಪಾಲಿಗೆ ತನ್ನ ಕೊಡುಗೆಯನ್ನು ವಿಶಾಲಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರ ಪಾಲಿಗೆ ಅದನ್ನು ಸೀಮಿತಗೊಳಿಸಿ ಬಿಡುತ್ತಾನೆ. ಅವನು ಖಂಡಿತ ಎಲ್ಲವನ್ನೂ ಬಲ್ಲವನಾಗಿದ್ದಾನೆ.

13. ನೂಹರಿಗೆ ಉಪದೇಶಿಸಲಾಗಿದ್ದ ಹಾಗೂ ನಿಮಗೆ ನಾವು ದಿವ್ಯವಾಣಿಯ ಮೂಲಕ ತಲುಪಿಸಿರುವ ಮತ್ತು ನಾವು ಇಬ್ರಾಹೀಮ್, ಮೂಸಾ ಹಾಗೂ ಈಸಾರಿಗೆ ಬೋಧಿಸಿದ್ದ ಧರ್ಮವನ್ನೇ ಅವನು ನಿಮಗಾಗಿ ವಿಧಿಸಿದ್ದಾನೆ. ಧರ್ಮವನ್ನು ಸ್ಥಾಪಿಸಿರಿ ಮತ್ತು ಈ ವಿಷಯದಲ್ಲಿ ವಿಭಿನ್ನರಾಗಬೇಡಿ. ಬಹುದೇವಾರಾಧಕರಿಗೆ ನೀವು ನೀಡುತ್ತಿರುವ ಕರೆಯು ತೀರಾ ಅಪ್ರಿಯವಾಗಿದೆ. ಅಲ್ಲಾಹನು ತನ್ನೆಡೆಗೆ (ಬರುವುದಕ್ಕೆ) ತಾನಿಚ್ಛಿಸಿದವರನ್ನು ಆರಿಸಿಕೊಳ್ಳುತ್ತಾನೆ ಮತ್ತು ಅವನು (ತನ್ನತ್ತ) ಒಲಿಯುವವರಿಗೆ ತನ್ನೆಡೆಗೆ ಮಾರ್ಗದರ್ಶನ ನೀಡುತ್ತಾನೆ.

14. ತಮ್ಮ ಬಳಿಗೆ ಜ್ಞಾನವು ಬಂದ ಬಳಿಕವಷ್ಟೇ ಅವರು ಕೇವಲ ಪರಸ್ಪರ ಹಗೆತನದಿಂದಾಗಿ, ವಿಭಿನ್ನರಾದರು. ನಿಮ್ಮ ಒಡೆಯನ ಕಡೆಯಿಂದ, ಒಂದು ನಿರ್ದಿಷ್ಟ ಅವಧಿಯ ತನಕ ಕಾಲಾವಕಾಶ ಕೊಡುವ ನಿರ್ಧಾರವಾಗದೆ ಇದ್ದಿದ್ದರೆ, ಅವರ ನಡುವೆ ತೀರ್ಪು ನೀಡಿ ಬಿಡಲಾಗುತ್ತಿತ್ತು. ಅವರ ಬಳಿಕ ಗ್ರಂಥದ ಉತ್ತರಾಧಿಕಾರಿಗಳಾದವರು ಖಂಡಿತ ಆ ಕುರಿತು ಗೊಂದಲಮಯ ಸಂದೇಹದಲ್ಲಿದ್ದಾರೆ.

15. (ದೂತರೇ,) ನೀವು ಇದರೆಡೆಗೆ (ಜನರನ್ನು) ಕರೆಯಿರಿ. ಮತ್ತು ನಿಮಗೆ ಆದೇಶಿಸಲಾಗಿರುವಂತೆ (ಸತ್ಯದಲ್ಲಿ) ಸ್ಥಿರರಾಗಿರಿ. ಮತ್ತು ನೀವು ಹೇಳಿರಿ; ಅಲ್ಲಾಹನು ಇಳಿಸಿರುವ ಎಲ್ಲ ಗ್ರಂಥಗಳಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ನಿಮ್ಮ ನಡುವೆ ನ್ಯಾಯ ಪಾಲಿಸಬೇಕೆಂದು ನನಗೆ ಆದೇಶಿಸಲಾಗಿದೆ. ಅಲ್ಲಾಹನು ನಮ್ಮೊಡೆಯನೂ ಹೌದು ನಿಮ್ಮೊಡೆಯನೂ ಹೌದು. ನಮ್ಮ ಕರ್ಮಗಳು ನಮಗೆ ಮತ್ತು ನಿಮ್ಮ ಕರ್ಮಗಳು ನಿಮಗೆ. ನಮ್ಮ ಹಾಗೂ ನಿಮ್ಮ ನಡುವೆ ಜಗಳವೇನಿಲ್ಲ. (ಎಲ್ಲರೂ) ಅವನೆಡೆಗೇ ಮರಳಬೇಕಾಗಿದೆ.

16. ಅಲ್ಲಾಹನ ಕರೆಗೆ ಓಗೊಟ್ಟ ಬಳಿಕ ಅವನ ವಿಷಯದಲ್ಲಿ ಜಗಳಾಡುವವರ ವಾದವು ಅವರ ಒಡೆಯನ ಬಳಿ ತೀರಾ ವ್ಯರ್ಥವಾಗಿದೆ. ಅವರ ಮೇಲೆ ಅಲ್ಲಾಹನ ಕ್ರೋಧವಿದೆ ಹಾಗೂ ಅವರಿಗೆ ಕಠಿಣ ಶಿಕ್ಷೆ ಸಿಗಲಿದೆ.

17. ಅಲ್ಲಾಹನೇ ಈ ಗ್ರಂಥವನ್ನು ಸತ್ಯದೊಂದಿಗೆ ಹಾಗೂ ನ್ಯಾಯದ ತಕ್ಕಡಿಯಾಗಿ ಇಳಿಸಿರುವನು. ನಿಮಗೇನು ಗೊತ್ತು? ಅಂತಿಮ ಕ್ಷಣವು ಹತ್ತಿರವೇ ಇರಬಹುದು.

18. ಅದರಲ್ಲಿ ನಂಬಿಕೆ ಇಲ್ಲದವರು ಅದಕ್ಕಾಗಿ ಆತುರಪಡುತ್ತಾರೆ ಮತ್ತು ಅದನ್ನು ನಂಬುವವರು, ಅದರ ಕುರಿತು ಅಂಜಿಕೊಂಡಿರುತ್ತಾರೆ ಹಾಗೂ ಅದು ಸತ್ಯ ಎಂಬುದನ್ನು ಅವರು ಅರಿತಿರುತ್ತಾರೆ. ತಿಳಿದಿರಲಿ! ಆ ಕ್ಷಣದ ಕುರಿತು ಜಗಳಾಡುವವರು ದಾರಿಗೇಡಿತನದಲ್ಲಿ ತುಂಬಾ ದೂರ ಸಾಗಿ ಬಿಟ್ಟಿದ್ದಾರೆ.

19. ಅಲ್ಲಾಹನು ತನ್ನ ದಾಸರ ಪಾಲಿಗೆ ಉದಾರಿಯಾಗಿದ್ದಾನೆ. ಅವನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅವನು ಬಲಿಷ್ಠನೂ ಪ್ರಬಲನೂ ಆಗಿದ್ದಾನೆ.

20. ಪರಲೋಕದ ಬೆಳೆಯನ್ನು ಬಯಸುವಾತನಿಗಾಗಿ ನಾವು ಅವನ ಬೆಳೆಯನ್ನು ಹೆಚ್ಚಿಸುತ್ತೇವೆ. ಮತ್ತು (ಕೇವಲ) ಇಹಲೋಕದ ಬೆಳೆಯನ್ನು ಬಯಸುವಾತನಿಗೆ ನಾವು ಇಲ್ಲಿಂದಲೇ ಕೊಟ್ಟು ಬಿಡುತ್ತೇವೆ. ಅವನಿಗೆ ಪರಲೋಕದಲ್ಲಿ ಯಾವ ಪಾಲೂ ಸಿಗದು.

21. ಅಲ್ಲಾಹನು ಅನುಮತಿಸಿಲ್ಲದ ಧರ್ಮವನ್ನು ಅವರಿಗೆ ವಿಧಿಸುವ ದೇವರುಗಳು ಅವರಿಗಿದ್ದಾರೆಯೇ? ನಿರ್ದಿಷ್ಟ ನಿರ್ಧಾರವೊಂದು ಇಲ್ಲದೆ ಇದ್ದಿದ್ದರೆ, ಈಗಾಗಲೇ ಅವರ ನಡುವೆ ತೀರ್ಪು ನೀಡಿ ಬಿಡಲಾಗುತ್ತಿತ್ತು. ಅಕ್ರಮಿಗಳಿಗೆ ಖಂಡಿತ ಕಠಿಣ ಶಿಕ್ಷೆ ಇದೆ.

22. (ಪುನರುತ್ಥಾನ ದಿನ) ಅಕ್ರಮಿಗಳು ತಮ್ಮ ಕೃತ್ಯಗಳ ಕಾರಣ ಭಯಭೀತರಾಗಿರುವುದನ್ನು ನೀವು ಕಾಣುವಿರಿ. ಆದರೆ ಅದು (ಅವರ ಕೃತ್ಯಗಳ ಫಲಿತಾಂಶವು) ಅವರ ಮುಂದೆ ಬಂದೇ ತೀರುವುದು. ಮತ್ತು ವಿಶ್ವಾಸಿಗಳು ಹಾಗೂ ಸತ್ಕರ್ಮಗಳನ್ನು ಮಾಡಿದವರು ಸ್ವರ್ಗದ ತೋಟಗಳಲ್ಲಿರುವರು. ಅವರಿಗೆ ಅವರ ಒಡೆಯನ ಬಳಿ, ಅವರು ಬಯಸಿದ್ದೆಲ್ಲವೂ ಸಿಗುವುದು. ಇದುವೇ ಮಹಾ ಅನುಗ್ರಹವಾಗಿದೆ.

23. ಅಲ್ಲಾಹನು ತನ್ನ ವಿಶ್ವಾಸಿ ಹಾಗೂ ಸತ್ಕರ್ಮಿ ದಾಸರಿಗೆ ನೀಡಿರುವ ಆಶ್ವಾಸನೆ ಇದು. ಹೇಳಿರಿ; ಬಂಧುತ್ವದ ಪ್ರೀತಿಯ ಹೊರತು ನಿಮ್ಮಿಂದ ಬೇರಾವ ಪ್ರತಿಫಲವನ್ನೂ ನಾನು ಬಯಸುವುದಿಲ್ಲ. ಒಳಿತನ್ನು ಸಂಪಾದಿಸಿದವನಿಗೆ ನಾವು ಇನ್ನಷ್ಟು ಒಳಿತನ್ನು ಹೆಚ್ಚಿಸಿ ಕೊಡುವೆವು. ಅಲ್ಲಾಹನು ಖಂಡಿತ ಕ್ಷಮಿಸುವವನು ಹಾಗೂ ಪುರಸ್ಕರಿಸುವವನಾಗಿದ್ದಾನೆ.

24. ಈತನು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಿದ್ದಾನೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲಾಹನು ಬಯಸಿದ್ದರೆ ನಿಮ್ಮ ಮನಸ್ಸಿಗೆ ಮುದ್ರೆಯೊತ್ತಿ ಬಿಡುತ್ತಿದ್ದನು. ಅಲ್ಲಾಹನು ಮಿಥ್ಯವನ್ನು ಅಳಿಸಿ ಬಿಡುತ್ತಾನೆ ಮತ್ತು ತನ್ನ ನುಡಿಗಳ ಮೂಲಕ ಸತ್ಯವನ್ನು ಸಾಬೀತು ಪಡಿಸುತ್ತಾನೆ. ಅವನು ಮನಸ್ಸುಗಳ ಒಳಗಿನ ವಿಚಾರಗಳನ್ನೂ ಬಲ್ಲವನಾಗಿದ್ದಾನೆ.

25. ಮತ್ತು ಅವನೇ (ಅಲ್ಲಾಹನೇ) ತನ್ನ ದಾಸರಿಂದ ಪಶ್ಚಾತ್ತಾಪ ಸ್ವೀಕರಿಸುವವನು ಹಾಗೂ ಪಾಪಗಳನ್ನು ಕ್ಷಮಿಸುವವನು ಮತ್ತು ನೀವು ಮಾಡುವ ಎಲ್ಲವನ್ನೂ ಬಲ್ಲವನಾಗಿದ್ದಾನೆ.

26. ವಿಶ್ವಾಸಿಗಳಾಗಿರುವವರು ಹಾಗೂ ಸತ್ಕರ್ಮಗಳನ್ನು ಮಾಡುವವರ ಪ್ರಾರ್ಥನೆಗಳನ್ನು ಅವನು ಸ್ವೀಕರಿಸುತ್ತಾನೆ ಮತ್ತು ತನ್ನ ಅನುಗ್ರಹದಿಂದ ಅವರಿಗೆ ಮತ್ತಷ್ಟನ್ನು ದಯಪಾಲಿಸುತ್ತಾನೆ. ಧಿಕ್ಕಾರಿಗಳಿಗೆ ಮಾತ್ರ ತೀವ್ರ ಶಿಕ್ಷೆ ಸಿಗಲಿದೆ.

27. ಒಂದು ವೇಳೆ ಅಲ್ಲಾಹನು ತನ್ನ ದಾಸರಿಗೆಲ್ಲಾ ಧಾರಾಳ ಸಂಪನ್ನತೆಯನ್ನು ನೀಡಿ ಬಿಟ್ಟಿದ್ದರೆ, ಅವರು ಭೂಮಿಯಲ್ಲಿ ಬಂಡಾಯವೇಳುತ್ತಿದ್ದರು. ಆದ್ದರಿಂದ ಅವನು, ತಾನಿಚ್ಛಿಸುವಷ್ಟನ್ನು ಮಾತ್ರ ಮಿತವಾಗಿ ಇಳಿಸಿಕೊಡುತ್ತಾನೆ. ಅವನು ಖಂಡಿತ ತನ್ನ ದಾಸರ ಕುರಿತು ಅರಿವು ಉಳ್ಳವನು ಹಾಗೂ ಎಲ್ಲವನ್ನೂ ನೋಡುವವನಾಗಿದ್ದಾನೆ.

 28. ಮತ್ತು ಅವರು ನಿರಾಶರಾಗಿ ಬಿಟ್ಟ ಬಳಿಕ ಮಳೆ ಸುರಿಸುವವನು ಹಾಗೂ ತನ್ನ ಅನುಗ್ರಹವನ್ನು ಎಲ್ಲೆಡೆಗೆ ತಲುಪಿಸುವವನು ಅವನೇ. ಅವನು ಪೋಷಕನೂ, ಪ್ರಶಂಸಾರ್ಹನೂ ಆಗಿದ್ದಾನೆ.

29. ಆಕಾಶಗಳ ಹಾಗೂ ಭೂಮಿಯ ಸೃಷ್ಟಿ ಮತ್ತು ಅವುಗಳಲ್ಲಿ ಅವನು ಹರಡಿರುವ ಜೀವಿಗಳೆಲ್ಲಾ ಅವನ ಪುರಾವೆಗಳ ಸಾಲಿಗೆ ಸೇರಿವೆ. ಮತ್ತು ತಾನಿಚ್ಛಿಸಿದಾಗ ಅವರನ್ನೆಲ್ಲಾ ಒಂದೆಡೆ ಸೇರಿಸಲು ಅವನು ಸಮರ್ಥನಾಗಿದ್ದಾನೆ.

30. ನಿಮಗೆ ಬಂದೆರಗುವ ಪ್ರತಿಯೊಂದು ವಿಪತ್ತು ಸ್ವತಃ ನಿಮ್ಮದೇ ಕೈಗಳ ಗಳಿಕೆಯಾಗಿರುತ್ತದೆ. ನಿಜವಾಗಿ ಹೆಚ್ಚಿನ ಪಾಪಗಳನ್ನು ಅವನು ಕ್ಷಮಿಸಿ ಬಿಡುತ್ತಾನೆ.

31. ಭೂಮಿಯಲ್ಲಿ (ಅವನನ್ನು) ಮಣಿಸಲು ನಿಮ್ಮಿಂದ ಸಾಧ್ಯವಿಲ್ಲ. ಅವನ ಹೊರತು ನಿಮಗೆ ಬೇರೆ ಪೋಷಕರಾಗಲಿ, ಸಹಾಯಕರಾಗಲಿ ಇಲ್ಲ.

32. ಸಮುದ್ರದಲ್ಲಿ ಚಲಿಸುವ ಬೆಟ್ಟದಂತಹ ಹಡಗುಗಳು ಅವನ ಪುರಾವೆಗಳ ಸಾಲಿಗೆ ಸೇರಿವೆ.

33. ಅವನು ಬಯಸಿದರೆ ಗಾಳಿಯನ್ನು ತಡೆದು ಅವುಗಳನ್ನು (ಹಡಗುಗಳನ್ನು) ಅದರ (ಸಮುದ್ರದ) ತಟದಲ್ಲೇ ನಿಲ್ಲಿಸಿಬಿಡಬಹುದು. ಸಹನಶೀಲರಾಗಿರುವ ಹಾಗೂ ಕೃತಜ್ಞರಾಗಿರುವ ಪ್ರತಿಯೊಬ್ಬರಿಗೆ ಇದರಲ್ಲಿ ಖಂಡಿತ ಪಾಠವಿದೆ.

34. ಅಥವಾ ಅವನು (ಬಯಸಿದರೆ) ಅವರ ಕರ್ಮಗಳ ಕಾರಣ ಅವರನ್ನು ನಾಶಮಾಡಿ ಬಿಡಬಹುದು. ಆದರೆ ಅವನು ಹೆಚ್ಚಿನವರನ್ನು ಕ್ಷಮಿಸಿ ಬಿಡುತ್ತಾನೆ.

35. ನಮ್ಮ ವಚನಗಳ ವಿಷಯದಲ್ಲಿ ಜಗಳಾಡುವವರು ತಿಳಿದಿರಲಿ, ಅವರಿಗೆ ಯಾವ ಆಶ್ರಯವೂ ಇಲ್ಲ.

36. (ಇಲ್ಲಿ) ನಿಮಗೆ ನೀಡಲಾಗುತ್ತಿರುವ ಪ್ರತಿಯೊಂದು ವಸ್ತುವೂ ಕೇವಲ ಇಹ ಜೀವನದ (ತಾತ್ಕಾಲಿಕ) ಸೊತ್ತಾಗಿದೆ. ನಿಜವಾಗಿ ಸತ್ಯವನ್ನು ನಂಬಿರುವವರ ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಇಟ್ಟಿರುವವರ ಪಾಲಿಗೆ, ಅಲ್ಲಾಹನ ಬಳಿ ಏನಿದೆಯೋ ಅದುವೇ ಶ್ರೇಷ್ಠ ಹಾಗೂ ಶಾಶ್ವತವಾಗಿದೆ.

37. ಅವರು ದೊಡ್ಡ ಪಾಪ ಕೃತ್ಯಗಳಿಂದ ಹಾಗೂ ಅಶ್ಲೀಲ ಕೃತ್ಯಗಳಿಂದ ದೂರ ಉಳಿಯುತ್ತಾರೆ ಮತ್ತು ತಮಗೆ ಕೋಪ ಬಂದಾಗ ಕ್ಷಮಿಸಿ ಬಿಡುತ್ತಾರೆ.

38. ಮತ್ತು ಅವರು, ತಮ್ಮ ಒಡೆಯನ ಕರೆಗೆ ಓಗೊಡುವವರು ಹಾಗೂ ನಮಾಝನ್ನು ಪಾಲಿಸುವವರಾಗಿರುತ್ತಾರೆ. ಅವರ ವ್ಯವಹಾರಗಳೆಲ್ಲಾ ಪರಸ್ಪರ ಸಮಾಲೋಚನೆಯಿಂದ ನಡೆಯುತ್ತವೆ ಮತ್ತು ನಾವು ಅವರಿಗೆ ನೀಡಿರುವುದನ್ನು ಅವರು ಖರ್ಚು ಮಾಡುತ್ತಾರೆ.

39. ಅವರ ಮೇಲೇನಾದರೂ ಅತಿರೇಕವಾದಾಗ ಅವರು ಪ್ರತೀಕಾರವೆಸಗುತ್ತಾರೆ.

40. ಕೆಡುಕಿಗೆ, ಅಷ್ಟು ಮಾತ್ರ ಕೆಡುಕು ಪ್ರತಿಕ್ರಮವಾಗಿರುತ್ತದೆ. ಇನ್ನು, ಕ್ಷಮಿಸಿಬಿಟ್ಟು (ಸಂಬಂಧ) ಸುಧಾರಣೆ ಮಾಡಿಕೊಂಡವನಿಗೆ ಪ್ರತಿಫಲ ನೀಡುವ ಹೊಣೆ ಅಲ್ಲಾಹನ ಮೇಲಿದೆ. ಅವನು ಅಕ್ರಮಿಗಳನ್ನು ಖಂಡಿತ ಪ್ರೀತಿಸುವುದಿಲ್ಲ.

41. ತನ್ನ ಮೇಲೆ ಅಕ್ರಮವಾದ ಬಳಿಕ ಪ್ರತೀಕಾರವೆಸಗಿದವರ ಮೇಲೆ ಯಾವುದೇ ಆರೋಪವಿಲ್ಲ.

42. ಆದರೆ ಜನರ ಮೇಲೆ ಅಕ್ರಮವೆಸಗುತ್ತಾ, ಅನ್ಯಾಯವಾಗಿ ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುತ್ತಿರುವವರ ವಿರುದ್ಧ ಪ್ರತಿಕ್ರಮಕ್ಕೆ ಅವಕಾಶವಿದೆ. ಅವರಿಗೆ ಭಾರೀ ಕಠಿಣ ಶಿಕ್ಷೆ ಕಾದಿದೆ.

43. ಸಹನಶೀಲನಾಗಿದ್ದು, ಕ್ಷಮಿಸಿ ಬಿಡುವವನು (ತಿಳಿದಿರಲಿ); ಅದು ಖಂಡಿತ ಮಹಾ ಸಾಹಸವಾಗಿದೆ.

44. ಅಲ್ಲಾಹನೇ ಯಾರನ್ನಾದರೂ ದಾರಿಗೆಡಿಸಿ ಬಿಟ್ಟರೆ, ಆ ಬಳಿಕ ಅವನಿಗೆ ಯಾರೂ ಪೋಷಕರಿಲ್ಲ. ನೀವು ಕಾಣುವಿರಿ; ಅಕ್ರಮಿಗಳು ಶಿಕ್ಷೆಯನ್ನು ಕಂಡಾಗ, (ಇಲ್ಲಿಂದ) ಮರಳಿಹೋಗಲು ದಾರಿ ಏನಾದರೂ ಇದೆಯೇ ಎಂದು ಕೇಳುವರು.

45. ಮತ್ತು ನೀವು ಕಾಣುವಿರಿ; ಅವರನ್ನು ಅದರ (ನರಕದ) ಮುಂದೆ ಹಾಜರು ಪಡಿಸಲಾದಾಗ ಅವರು ಅಪಮಾನದಿಂದ, ದೀನರಾಗಿ ಅರ್ಧ ತೆರೆದ ಕಣ್ಣುಗಳಿಂದ ನೋಡುತ್ತಿರುವರು. ಮತ್ತು ವಿಶ್ವಾಸಿಗಳು ಹೇಳುವರು; ಪುನರುತ್ಥಾನ ದಿನ ತಮ್ಮನ್ನು ಹಾಗೂ ತಮ್ಮ ಬಂಧುಗಳನ್ನು ನಷ್ಟಕ್ಕೊಳಪಡಿಸಿಕೊಂಡವರೇ ನಿಜವಾಗಿ ನಷ್ಟ ಅನುಭವಿಸಿದವರಾಗಿದ್ದಾರೆ. ನಿಮಗೆ ತಿಳಿದಿರಲಿ. ಅಕ್ರಮಿಗಳು ಖಂಡಿತ ಶಾಶ್ವತವಾದ ಶಿಕ್ಷೆಗೊಳಗಾಗುವರು.

46. ಅಲ್ಲಾಹನ ಹೊರತು, ಅವರಿಗೆ ನೆರವಾಗಲು ಯಾವ ಪೋಷಕರೂ ಇರಲಾರರು. ಅಲ್ಲಾಹನೇ ದಾರಿ ತಪ್ಪಿಸಿ ಬಿಟ್ಟವನಿಗೆ ಸರಿದಾರಿ ಸಿಗದು.

 47. ಯಾರಿಂದಲೂ ರದ್ದುಗೊಳಿಸಲಾಗದ ದಿನವೊಂದು ಅಲ್ಲಾಹನ ಕಡೆಯಿಂದ ಬರುವ ಮುನ್ನವೇ ನೀವು ನಿಮ್ಮ ಒಡೆಯನ ಕರೆಗೆ ಓಗೊಡಿರಿ. ಆ ದಿನ ನಿಮಗೆ ಯಾವ ಆಶ್ರಯವೂ ಸಿಗದು ಮತ್ತು ನಿಮಗೆ ನಿರಾಕರಣೆಯ ಅವಕಾಶವೂ ಇರದು.

48. ಅವರು ಕಡೆಗಣಿಸಿದರೆ (ನಿಮಗೆ ತಿಳಿದಿರಲಿ), ನಾವೇನೂ ನಿಮ್ಮನ್ನು ಅವರ ರಕ್ಷಕರಾಗಿ ನೇಮಿಸಿಲ್ಲ. ನಿಮ್ಮ ಮೇಲಿರುವುದು (ಸತ್ಯವನ್ನು) ತಲುಪಿಸಿ ಬಿಡುವ ಹೊಣೆ ಮಾತ್ರ. ನಾವು ಮನುಷ್ಯನಿಗೆ ನಮ್ಮ ಕಡೆಯಿಂದ ಏನಾದರೂ ಅನುಗ್ರಹವನ್ನು ದಯಪಾಲಿಸಿದರೆ ಅವನು ಆ ಕುರಿತು ಸಂಭ್ರಮಿಸ ತೊಡಗುತ್ತಾನೆ. ಆದರೆ, ಅವರದೇ ಕೈಗಳ ಗಳಿಕೆಯ ಕಾರಣ ಅವರಿಗೇನಾದರೂ ಅಹಿತ ಸಂಭವಿಸಿದರೆ – ಮಾನವನು ಖಂಡಿತ ಕೃತಘ್ನನಾಗಿ ಬಿಡುತ್ತಾನೆ.

49. ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವು ಅಲ್ಲಾಹನಿಗೇ ಸೇರಿದೆ. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಅವನು ತಾನಿಚ್ಛಿಸಿದವರಿಗೆ ಪುತ್ರಿಯರನ್ನು ಮತ್ತು ತಾನಿಚ್ಛಿಸಿದವರಿಗೆ ಪುತ್ರರನ್ನು ದಯ ಪಾಲಿಸುತ್ತಾನೆ.

50. ಅಥವಾ ಅವನು ಜೊತೆ ಜೊತೆಯಾಗಿ ಪುತ್ರರನ್ನೂ ಪುತ್ರಿಯರನ್ನೂ ನೀಡುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಸಂತಾನರಹಿತರಾಗಿಸುತ್ತಾನೆ. ಅವನು ಖಂಡಿತ ಬಲ್ಲವನು ಹಾಗೂ ಸರ್ವ ಶಕ್ತನಾಗಿದ್ದಾನೆ.

51. ಯಾವುದೇ ಮಾನವನೊಂದಿಗೆ ಅಲ್ಲಾಹನು ಮಾತನಾಡುವುದಿಲ್ಲ – ದಿವ್ಯವಾಣಿಯ ಮೂಲಕ ಅಥವಾ ತೆರೆಮರೆಯಿಂದ (ಮಾತನಾಡುವ) ಹೊರತು, ಅಥವಾ ಅವನು ಒಬ್ಬ (ಮಲಕ್) ದೂತನನ್ನು ಕಳಿಸುತ್ತಾನೆ ಮತ್ತು ಅವನು ಆತನ ಆದೇಶ ಪ್ರಕಾರ, ಆತನು ಬಯಸುವ ದಿವ್ಯವಾಣಿಯನ್ನು ತಲುಪಿಸುತ್ತಾನೆ. ಅವನು ಖಂಡಿತ ಉನ್ನತನೂ ಯುಕ್ತಿವಂತನೂ ಆಗಿದ್ದಾನೆ.

52. (ದೂತರೇ,) ಈ ರೀತಿ ನಾವು ನಮ್ಮ ಅಪ್ಪಣೆಯಂತೆ ನಿಮ್ಮ ಕಡೆಗೆ ದಿವ್ಯ ಸಂದೇಶವನ್ನು ಕಳಿಸಿರುವೆವು. ಈ ಹಿಂದೆ ನೀವು ಗ್ರಂಥವೆಂದರೇನು ಅಥವಾ ನಂಬಿಕೆ ಎಂದರೇನು ಎಂಬುದನ್ನು ಬಲ್ಲವರಾಗಿರಲಿಲ್ಲ. ಹೀಗಿರುತ್ತಾ ನಾವು ಇದನ್ನು (ಈ ಗ್ರಂಥವನ್ನು) ಬೆಳಕಾಗಿಸಿ ಕಳುಹಿಸಿದೆವು. ಈ ಮೂಲಕ ನಾವು ನಮ್ಮ ದಾಸರ ಪೈಕಿ ನಾವಿಚ್ಛಿಸುವವರಿಗೆ ಸರಿದಾರಿಯನ್ನು ತೋರಿಸುವೆವು. ನೀವು ಖಂಡಿತವಾಗಿಯೂ (ಜನರನ್ನು) ಸುಸ್ಥಿರವಾದ ಸನ್ಮಾರ್ಗದೆಡೆಗೇ ಮುನ್ನಡೆಸುವಿರಿ.

53. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಯಾರಿಗೆ ಸೇರಿವೆಯೋ ಆ ಅಲ್ಲಾಹನ ದಾರಿಯೆಡೆಗೆ. ತಿಳಿದಿರಲಿ! ಎಲ್ಲ ವಿಷಯಗಳು ಅಂತಿಮವಾಗಿ ಅಲ್ಲಾಹನೆಡೆಗೇ ತಲುಪುತ್ತವೆ.